Sunday, March 23, 2008

ತಿಪ್ಪೇರುದ್ರನ ತೇರು ಎಳೆದರು...

ಸುರಿವ ಮಳೆ ನಡುವೆಯೂ ನಡೆಯಿತು ಸಂಭ್ರಮದ ನಾಯಕನಹಟ್ಟಿ ಜಾತ್ರೆ..

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಗುರುತಿಪ್ಪೇರುದ್ರ ಸ್ವಾಮಿಗಳ ರಥೋತ್ಸವ ಭಾನುವಾರ ಸುರಿವ ಮಳೆಯ ನಡುವೆ ವಿಜೃಂಭಣೆಯಿಂದ ನಡೆಯಿತು. ಸುಮಾರು ಮೂರು ಲಕ್ಷಕ್ಕೂ ಸೇರಿದ ಅಧಿಕ ಭಕ್ತಸಾಗರ ಸಂಭ್ರಮದ ವಾರ್ಷಿಕ ಸಂಪ್ರದಾಯಕ್ಕೆ ಸಾಕ್ಷಿಯಾದರು.
ಮಧ್ಯಾಹ್ನ ೩-೨೦ ನಿಮಿಷಕ್ಕೆ ಸರಿಯಾಗಿ ರಥದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಸ್ವಾಮಿಗೆ ಉಪವಿಭಾಗಾಧಿಕಾರಿ ರಾಜಮ್ಮ ಚೌಡರೆಡ್ಡಿ, ವಿಧಾನಸಭಾ ಮಾಜಿ ಉಪಾಧ್ಯಕ್ಷ ಎನ್.ವೈ. ಗೋಪಾಲಕೃಷ್ಣ, ತಹಸೀಲ್ದಾರ್ ಹೆಚ್. ಜ್ಞಾನೇಶ್ ಸಾಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಬಾರಿ ಆರಂಭ ಸ್ಥಳದಿಂದ ರಥ ಚಲಿಸಿ ಕೇವಲ ೨೫ ನಿಮಿಷದಲ್ಲಿ ಗಮ್ಯಸ್ಥಾನವಾದ ಪಾದಗಟ್ಟೆ ತಲುಪಿತು. ಬೃಹತ್ ರಥ ಪ್ರತಿ ವರ್ಷ ಪಾದಗಟ್ಟೆ ತಲುಪಲು ಕನಿಷ್ಟ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಈ ವರ್ಷ ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ರಥ ಚಲಿಸಿ ಪಾದಗಟ್ಟೆ ತಲುಪಿತು. ರಥ ಬೇಗನೆ ಸೇರಿದ್ದರಿಂದ ಪಾದಗಟ್ಟೆ ಬಳಿ ತುಂಬ ಹೊತ್ತು ನಿಲ್ಲಿಸಲಾಗಿತ್ತು.
ಶನಿವಾರದಿಂದಲೇ ಮಳೆಯ ಆರ್ಭಟ ಆರಂಭವಾಗಿ ಭಾನುವಾರವೂ ಮುಂದುವರಿಯಿತು. ಮಳೆ ಸುರಿಯುವುದು, ನಿಲ್ಲುವುದು ದಿನಪೂರ್ತಿ ನಡೆದೇ ಇತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆ ರಭಸವಾಗಿ ಸುರಿಯತೊಡಗಿದ ಮಳೆ ಸುಮಾರು ಮುಕ್ಕಾಲು ಗಂಟೆ ನಿಲ್ಲಲೇ ಇಲ್ಲ. ಮಳೆಯಲ್ಲಿ ತೊಯುತ್ತಲೇ ಭಕ್ತಾಧಿಗಳು ರಥವನ್ನು ಜಯಘೋಷದೊಂದಿಗೆ ಎಳೆದರು. ಕಾಲಿಡಲೂ ಜಾಗವಿಲ್ಲದಷ್ಟು ಭಕ್ತಸಾಗರ ಜಮಾವಣೆಯಾಗುತ್ತಿದ್ದ ರಥ ಬೀದಿ ಮಳೆಯ ಕಾರಣದಿಂದ ಬೀಕೋ ಎನ್ನುತ್ತಿತ್ತು.
ರಥೋತ್ಸವ ಆರಂಭವಾಗುತ್ತಿದ್ದಂತೆ ಒಂದಷ್ಟು ಭಕ್ತಸಾಗರ ರಥವನ್ನು ಎಳೆಯಲು ನಿರತರಾದರೆ ಒಂದಷ್ಟು ಭಕ್ತರು ದೇವಸ್ಥಾನದತ್ತ ಪಾದಬೆಳೆಸಿ ದೇವರ ದರ್ಶನಕ್ಕ ಸರದಿಸಾಲಿಲ್ಲಿ ನಿಲ್ಲತೊಡಗಿದರು. ಕೆಲವೇ ಭಕ್ತರು ಮಾತ್ರ ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಬಳಸಿದರೆ ಬುಹುತೇಕ ಭಕ್ತರು ಮಳೆಯಲ್ಲಿ ತೋಯ್ದು ತೊಪ್ಪೆಯಾದರು.
ಪ್ರತಿವರ್ಷ ಜಾತ್ರೆ ಬಿಸಿಲ ಧಗೆ, ದೂಳಿನಿಂದ ಕೂಡಿದ ವಾತಾವರಣ ಸಾಮಾನ್ಯವಾಗಿರುತ್ತಿತ್ತು. ಈ ಬಾರಿ ಮಳೆ ಸುರಿದಿದ್ದರಿಂದ ವಾತಾವರಣ ಸಂಪೂರ್ಣ ತಂಪಾಗಿ ಊರೆಲ್ಲ ಕೆಸರುಮಯವಾಯಿತು. ಕಳೆದ ೪೦ ವರ್ಷದಿಂದ ಇಂತಹ ವಾತಾವರಣ ಕಂಡಿರಲಿಲ್ಲ ಎಂಬುದು ಸ್ಥಳೀಯ ನಾಗರೀಕರ ಅಭಿಪ್ರಾಯ. ಜಾತ್ರೆ ಹಿಂದೆ -ಮುಂದೆ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರಾಗಿ ಮಳೆಹನಿ ಉದುರಿ ಶುಭ ಸೂಚನೆ ನೀಡುವ ಪರಂಪರೆಯಿತ್ತು. ಈ ವರ್ಷ ಎಲ್ಲರ ನಿರೀಕ್ಷೆ ಮೀರಿ ಅಕಾಲ ಮಳೆ ಸುರಿದು ಭಕ್ತರ ಸಂಭ್ರಮಕ್ಕೆ ತುಸು ಅಡ್ಡಿಯುಂಟು ಮಾಡಿತು.
ಬರುವ ಲಕ್ಷಾಂತರ ಭಕ್ತರು ಬಯಲಲ್ಲಿ, ತೋಟದಲ್ಲಿ ಗುಡಾರ ಹಾಕಿ ಬಿಡಾರ ಹೂಡುತ್ತಿದ್ದರಿಂದ ಈ ಅಕಾಲ ಮಳೆ ಬಾರಿ ಅಡಚಣೆ ಉಂಟುಮಾಡಿತು. ಬಯಲಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುವವರಿಗೆ ಬಾರಿ ತೊಂದರೆಯಾಯಿತು. ಆದರೆ ಜಾತ್ರೆಯಲ್ಲಿ ಸುತ್ತುಹಾಕುವ ಭಕ್ತರಿಗೆ ನಿರಾಶೆಯಾದಂತೆ ಕಾಣಲಿಲ್ಲ. ಸುರಿವ ಮಳೆಯಲ್ಲಿ ತೊಯ್ಯುತ್ತಲೆ ಜಾತ್ರೆಯ ಸೊಬಗು ಸವಿದರು.
ಜಾತ್ರೆಯ ವ್ಯಾಪಾರಕ್ಕೆ ಮಳೆ ಕೆಲವು ಅಡ್ಡಿಗನ್ನು ಉಂಟು ಮಾಡಿತು. ಗ್ರಾಮೀಣ ಜನರ ಜಾತ್ರೆಯ ವಿಶೇಷ ತಿಂಡಿಯಾದ ಕಾರ ಮಂಡಕ್ಕಿ ವ್ಯಾಪಾರದಲ್ಲಿ ಅಷ್ಟೇನು ವ್ಯತ್ಯಯ ಉಂಟಾಗದಿದ್ದರೂ, ಬಿಸಿಲಿನ ಧಗೆಯಿಂದ ಜೋರಾಗಿ ನಡೆಯುತ್ತಿದ್ದ ತಂಪು ಪಾನೀಯಗಳ ವ್ಯಾಪಾರ ನೆಲಕಚ್ಚಿತು. ತಂಪು ಪಾನೀಯ ವ್ಯಾಪಾರಿಯೊಬ್ಬರ ಪ್ರಕಾರ ರಥೋತ್ಸವದಂದು ಕನಿಷ್ಟ ೩೦ ಸಾವಿರ ವ್ಯಾಪಾರವಾಗುತ್ತಿದ್ದರೆ, ಈ ಬಾರಿ ೧ ಸಾವಿರ ಕೂಡಾ ವ್ಯಾಪಾರವಾಗಿಲ್ಲ ಎಂದು ಬೇಸರದಿಂದ ತಿಳಿಸಿದರು.
ಭಕ್ತರು ಸ್ವಾಮಿಯ ಜೀವೈಕ್ಯ ಸಮಾಧಿಯಾದ ಹೊರಮಠ ಮತ್ತು ಒಳಮಠಗಳೆರಡಕ್ಕೂ ಭೇಟಿನೀಡಿ ನಮನ ಸಲ್ಲಿಸಿ ತಮ್ಮ ಹರಕೆಗಳನ್ನು ತೀರಿಸಿದರು. ಜಾತ್ರೆಯ ಮಾಮೂಲಿ ಪದ್ಧತಿಯಂತೆ ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸಿದರು. ಮಳೆ ಈ ಸಂಪ್ರದಾಯಕ್ಕೆ ಅಷ್ಟಾಗಿ ಅಡ್ಡಿಯಾಗಲಿಲ್ಲ.

Friday, March 21, 2008

ಒಂದು ಹಿಡಿ ಕ್ಷಮೆ ನಮಗಾಗಿ ಇಟ್ಟಿರಿ...

ಆಪ್ತರು ವಾಚಾಮಗೋಚರವಾಗಿ ಬೈದರು. ಆರಂಭ ಶೂರತ್ವ ಅಂತಾ ಅಣಕಿಸಿದರು. ಏನು ಮಾಡುವುದು ಸ್ವಾಮಿ. ಕೆಲಸದ ಒತ್ತಡ ಅಂದರೆ ನಂಬುವ ಮಾತೆ ಅಂತೀರಾ. ಯಾವುದೋ ತಾಂತ್ರಿಕ ತೊಂದರೆ ಅಂದರೆ ನಗುತ್ತೀರ. ಇರಲಿ. ನಿಜ ಹೇಳಬೇಕೆಂದರೆ ನಾವು ಮಾಡುತ್ತಿರುವ ಕೆಲಸಗಳ ನಡುವೆ ಏನನ್ನಾದರೂ ಬರೆಯಬೇಕು ಎನ್ನುವುದಕ್ಕೆ ಪ್ರಯತ್ನಿಸಿ ವಿಫಲರಾಗಿದ್ದೇವೆ. ಕೆಲಸದ ಒತ್ತಡ ಹಾಗಿತ್ತು. ಆದರೆ ನಿಮಗೆ ಹಿಸಿ ಹೋಳಿಗೆ ಬಡಿಸುವುದಕ್ಕೆ ಬೇಳೆ, ಬೆಲ್ಲ ಹೊಂಚು ಕೆಲಸವನ್ನಂತು ಕೈಬಿಟ್ಟಿಲ್ಲ. ಜಿಲ್ಲೆಯ ಮಿತ್ರರನ್ನು ಪರಿಚಯಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಜಿಲ್ಲೆಯ ಕಾವ್ಯ ಪರಂಪರೆ ಕುರಿತ ಒಳನೋಟದ ಲೇಖನವೊಂದು ನಿಮ್ಮ ಮುಂದೆ ಬರಲಿದೆ... ನಿರೀಕ್ಷೆಯಲ್ಲಿರಿ...
ಆದರೆ ಒಂದು ಮನವಿ.. ಇಂಥ ಗ್ಯಾಪ್ ಗಳು ಆಗಾಗ ಸೃಷ್ಟಿಯಾಗುತ್ತಿರುತ್ತವೆ. ಅದಕ್ಕಾಗಿ ಒಂದು ಹಿಡಿ ಕ್ಷಮೆ ನಮಗಾಗಿ ಎತ್ತಿಟ್ಟಿರಿ...
ದುರ್ಗದ ಹುಡುಗರು...

ಇವರು ಅಪಾರ ನಮ್ಮ ಜಿಲ್ಲೆಯವರು...

ನಮಗೆ ಅಪಾರ ಭಾವನದ ಕಥೆಯೊಂದರ ಮೂಲಕ ಪರಿಚಯ. ಇವರ ನಿಜ ಹೆಸರು ಪಿ. ರಘು. ಆದರೆ ಅವರು ಹೆಚ್ಚು ಚಿರಪರಿಚಿತರಾಗಿರುವುದು ಅಪಾರ ಎಂಬ ಹೆಸರಿನಿಂದ. ಭಾವನದ ಕಥೆಯಲ್ಲಿ ಇವರು ಹಿರಿಯೂರು ಚಿತ್ರಣವನ್ನು ಕೊಟ್ಟಿದ್ದರು. ಹಾಗಾಗಿ ಅಪಾರ ಎನ್ನುವವರು ನಮ್ಮ ಜಿಲ್ಲೆಯವರೇ ಎಂದುಕೊಂಡಿದ್ದೆವು. ಅದಾದ ಮೇಲೆ ಅಲ್ಲಿ ಇಲ್ಲಿ ಕೇಳಲ್ಪಟ್ಟ ಸಂಗತಿಗಳ ಪ್ರಕಾರ ಇವರು ಹಿರಿಯೂರಿನವರು, ಸದ್ಯ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಅದೂ ಅಲ್ಲದೆ ನಮ್ಮ ಬ್ಲಾಗ್ ಆರಂಭವಾದ ಮೇಲೆ ಅವರು ಕೂಡ ಕಮೆಂಟ್ ಮಾಡಿ ನಾನು ನಿಮ್ಮ ಜಿಲ್ಲೆಯವನು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅಪಾರ ಮೊದಲೇ ಹೇಳಿದಂತೆ ಕಥೆ ಬರೆಯುತ್ತಾರೆ. ಕವಿತೆಗಳನ್ನು ಬರೆಯುತ್ತಾರೆ. ಜೊತೆಗೆ ಕಲಾವಿದರೂ ಹೌದು. ಇವರು ಕನ್ನಡದ ಹತ್ತಾರು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಸದ್ಯ ಅವರು ಹೆಚ್ಚು ಸುದ್ದಿಯಲ್ಲಿರುವುದು ಅವರ ಮದ್ಯಸಾರ ನಾಲ್ಕು ಸಾಲುಗಳ ಪದ್ಯಗಳ ಮೂಲಕ. ರತ್ನನ ಪದಗಳನ್ನು ನೆನಪಿಸುವ ಈ ಸಾಲುಗಳು ತುಂಬಾ ಖುಷಿ ಕೊಡುವ ಸಾಲುಗಳು. ಸ್ಯಾಂಪಲ್ಲಿಗೆ ಮೂರು ಮದ್ಯಸಾ(ಲು)ರಗಳನ್ನು ಅವರ ಬ್ಲಾಗಿನಿಂದ ಭಟ್ಟಿ ಇಳಿಸಿದ್ದೇವೆ. ಓದಿ ಆನಂದಿಸಿ....

ಮದ್ಯಸಾರ
1

ಮಧುಪಾತ್ರೆ ಕಣ್ಣಿನಂತೆ ಗೆಳೆಯಾ

ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ

ಕುಡಿತ ಸಾವಿದ್ದಂತೆ ಗೆಳೆಯಾ

ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ.

2

ಎಲ್ಲ ಗೆಳತಿಯರೂ ನೆನಪಾಗುತಿಹರೀಗ

ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು

ತಿಳಿಯುತಿಲ್ಲ ಯಾರ ವಿರಹ ಯಾವ ತರಹ

ಕುಡುಕನದು ಎಂದೂ ಇದೇ ಹಣೆಬರಹ.

3

ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ

ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ

ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ

ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ.