Tuesday, January 20, 2009

ಮಳಿಗೆ ಮಳಿಗೆ ಎಲ್ಲಿ ನೋಡಿದರೂ ಮಳಿಗೆ..

ಚಿತ್ರದುರ್ಗ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಧಾನ ವೇದಿಕೆ ಬಳಿ ನಿರ್ಮಿಸಲಾದ ವ್ಯಾಪಾರಿ ಹಾಗೂ ಪುಸ್ತಕ ಮಳಿಗೆಗಳಿಗೆ ಭಾರೀ ಪ್ರಮಾಣದ ಬೇಡಿಕೆ ಬಂದಿದ್ದು ಹೆಚ್ಚುವರಿ ೫೦ ಮಳಿಗೆ ನಿರ್ಮಾಣ ಮಾಡಲು ಸಮ್ಮೇಳನ ಸಮಿತಿ ತೀರ್ಮಾನ ಕೈಗೊಂಡಿದೆ.ಈ ಮೊದಲು ೫೦೦ ಮಳಿಗೆ ನಿರ್ಮಾಣಕ್ಕೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಇದರಲ್ಲಿ ೩೦೦ ಪುಸ್ತಕ ಮಳಿಗೆ ಹಾಗೂ ೨೦೦ ವಾಣಿಜ್ಯ ಮಳಿಗೆಗಳಿಗೆ ಮೀಸಲಿಡಲಾಗಿತ್ತು. ಮಳಿಗೆಗೆ ಅರ್ಜಿ ಸಲ್ಲಿಸಲು ಜ.೧೫ ರಂದು ಕಡೆ ದಿನವಾಗಿದ್ದ ನಿಗದಿತ ಸಮಯದ ಒಳಗೆ ಎಲ್ಲ ಮಳಿಗೆಗಳು ಬುಕ್ ಆಗಿವೆ. ಬೇಡಿಕೆ ಹೆಚ್ಚಿದ ಕಾರಣ ಮತ್ತೆ ೫೦ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು.ಟಿ ವಸತಿ ಪೂರ್ಣ: ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳು ಹಾಗೂ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು ೭೫ ಕಡೆ ವಸತಿ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಇದರ ಉಸ್ತುವಾರಿಗೆ ೯೬೦ ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಅತಿಥಿಗಳು ಹಾಗೂ ಪ್ರತಿನಿಧಿಗಳನ್ನು ಕರೆದೊಯ್ಯಲು ೪೩ ವಾಹನಗಳನ್ನು ಓಡಿಸಲಾಗುವುದು. ವಸತಿ ವ್ಯವಸ್ಥೆ ಪಟ್ಟಿಗೆ ಜಿಲ್ಲಾಧಿಕಾರಿಗಳ ನಿವಾಸದ ಪಕ್ಕದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಗಳ ನೂತನ ಬಂಗಲೆ ಸೇರ್ಪಡೆಯಾಗಿದೆ. ಗಣ್ಯ ಅತಿಥಿಗಳಿಗೆ ಅಲ್ಲಿ ಜಾಗ ಕಾಯ್ದಿರಿಸಲಾಗಿದೆ. ಎಸ್ಸೆನ್ ನಿವಾಸಕ್ಕೆ ಮೆರುಗು:
ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ವೀಕ್ಷಣೆಗೆ ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ನಿವಾಸವನ್ನು ಮುಕ್ತಗೊಳಿಸಿರುವ ಜಿಲ್ಲಾಡಳಿತ ಈ ಸಂಬಂಧ ಮನೆಯನ್ನು ವಸ್ತು ಸಂಗ್ರಹಾಲಯವಾಗಿ ರೂಪಾಂತರ ಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ನಿವಾಸಕ್ಕೆ ಸುಣ್ಣ ಬಣ್ಣ ಬಳಿಯಲಾಗುತ್ತಿದ್ದು ಆವರಣದಲ್ಲಿದ್ದ ಕಸತೆಗೆದು ಸ್ವಚ್ಚಗೊಳಿಸಲಾಗಿದೆ.ತಿರುಗಿ ನೋಡದ ಶಾಸಕರು:
ಸಾಹಿತ್ಯ ಸಮ್ಮೇಳನದ ಪೂರ್ವಸಿದ್ಧತೆ ಚಟುವಟಿಕೆಗಳಲ್ಲಿ ಜಿಲ್ಲೆಯ ಯಾರೊಬ್ಬ ಶಾಸಕರು ಕಾಣಿಸಿಕೊಳ್ಳುತ್ತಿಲ್ಲ. ಚಿತ್ರದುರ್ಗದ ಶಾಸಕ ಎಸ್.ಕೆ. ಬಸವರಾಜನ್ ಆರಂಭದಲ್ಲಿಯೇ ಅಪಸ್ವರವೆತ್ತಿ ದೂರ ಸರಿದಿದ್ದರು. ನಗರದೆಲ್ಲೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿದರೂ ಅವುಗಳ ಕಡೆ ಕಣ್ಣೆತ್ತಿ ಕೂಡಾ ನೋಡುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ. ಉಳಿದಂತೆ ತಿಪ್ಪೇಸ್ವಾಮಿ, ಚಂದ್ರಪ್ಪ ಮಾತ್ರ ಏನಾದರೂ ಉದ್ಘಾಟನೆಯಿದ್ದಲ್ಲಿ ಮಾತ್ರ ಪ್ರತ್ಯಕ್ಷರಾಗುತ್ತಿದ್ದಾರೆ. ಶಾಸಕ ಎನ್.ವೈ. ಗೋಪಾಲಕೃಷ್ಣ ದೂರದಲ್ಲಿಯೇ ನಿಂತು ವೀಕ್ಷಿಸುತ್ತಿದ್ದಾರೆ.
(ವರದಿ ಕೃಪೆ: ಕನ್ನಡ ಪ್ರಭ)

No comments: