Friday, March 21, 2008

ಇವರು ಅಪಾರ ನಮ್ಮ ಜಿಲ್ಲೆಯವರು...

ನಮಗೆ ಅಪಾರ ಭಾವನದ ಕಥೆಯೊಂದರ ಮೂಲಕ ಪರಿಚಯ. ಇವರ ನಿಜ ಹೆಸರು ಪಿ. ರಘು. ಆದರೆ ಅವರು ಹೆಚ್ಚು ಚಿರಪರಿಚಿತರಾಗಿರುವುದು ಅಪಾರ ಎಂಬ ಹೆಸರಿನಿಂದ. ಭಾವನದ ಕಥೆಯಲ್ಲಿ ಇವರು ಹಿರಿಯೂರು ಚಿತ್ರಣವನ್ನು ಕೊಟ್ಟಿದ್ದರು. ಹಾಗಾಗಿ ಅಪಾರ ಎನ್ನುವವರು ನಮ್ಮ ಜಿಲ್ಲೆಯವರೇ ಎಂದುಕೊಂಡಿದ್ದೆವು. ಅದಾದ ಮೇಲೆ ಅಲ್ಲಿ ಇಲ್ಲಿ ಕೇಳಲ್ಪಟ್ಟ ಸಂಗತಿಗಳ ಪ್ರಕಾರ ಇವರು ಹಿರಿಯೂರಿನವರು, ಸದ್ಯ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರೆಯಿತು. ಅದೂ ಅಲ್ಲದೆ ನಮ್ಮ ಬ್ಲಾಗ್ ಆರಂಭವಾದ ಮೇಲೆ ಅವರು ಕೂಡ ಕಮೆಂಟ್ ಮಾಡಿ ನಾನು ನಿಮ್ಮ ಜಿಲ್ಲೆಯವನು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅಪಾರ ಮೊದಲೇ ಹೇಳಿದಂತೆ ಕಥೆ ಬರೆಯುತ್ತಾರೆ. ಕವಿತೆಗಳನ್ನು ಬರೆಯುತ್ತಾರೆ. ಜೊತೆಗೆ ಕಲಾವಿದರೂ ಹೌದು. ಇವರು ಕನ್ನಡದ ಹತ್ತಾರು ಪುಸ್ತಕಗಳಿಗೆ ಮುಖಪುಟ ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಸದ್ಯ ಅವರು ಹೆಚ್ಚು ಸುದ್ದಿಯಲ್ಲಿರುವುದು ಅವರ ಮದ್ಯಸಾರ ನಾಲ್ಕು ಸಾಲುಗಳ ಪದ್ಯಗಳ ಮೂಲಕ. ರತ್ನನ ಪದಗಳನ್ನು ನೆನಪಿಸುವ ಈ ಸಾಲುಗಳು ತುಂಬಾ ಖುಷಿ ಕೊಡುವ ಸಾಲುಗಳು. ಸ್ಯಾಂಪಲ್ಲಿಗೆ ಮೂರು ಮದ್ಯಸಾ(ಲು)ರಗಳನ್ನು ಅವರ ಬ್ಲಾಗಿನಿಂದ ಭಟ್ಟಿ ಇಳಿಸಿದ್ದೇವೆ. ಓದಿ ಆನಂದಿಸಿ....

ಮದ್ಯಸಾರ
1

ಮಧುಪಾತ್ರೆ ಕಣ್ಣಿನಂತೆ ಗೆಳೆಯಾ

ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ

ಕುಡಿತ ಸಾವಿದ್ದಂತೆ ಗೆಳೆಯಾ

ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ.

2

ಎಲ್ಲ ಗೆಳತಿಯರೂ ನೆನಪಾಗುತಿಹರೀಗ

ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು

ತಿಳಿಯುತಿಲ್ಲ ಯಾರ ವಿರಹ ಯಾವ ತರಹ

ಕುಡುಕನದು ಎಂದೂ ಇದೇ ಹಣೆಬರಹ.

3

ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ

ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ

ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ

ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ.

No comments: