Wednesday, January 30, 2008

ಬಂಡಾಯದ ಬಲ್ಲಾಳರು ಇನ್ನಿಲ್ಲ...


'ಕನ್ನಡದ ಕೆಲ್ಸಕ್ಕೆ ಎಲ್ರೂ ಒಂದಾಗ್ತಾರೆ ಅನ್ನೋ ಭರವಸೆ ಇದೆ'

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಕುರಿತು ಹಿರಿಯ ಸಾಹಿತಿಯಾದ ಬಿ.ಎಲ್.ವೇಣು ಅವರು ದುರ್ಗದ ಹುಡುಗರೊಂದಿಗೆ ಹಂಚಿಕೊಂಡ ಮಾತುಗಳು...

ಸಮ್ಮೇಳನ ನಡೆಯುವುದು ಸಂತೋಷದ ಸಂಗತಿ. ಆದರೆ ಜಿಲ್ಲಾ ಸಮ್ಮೇಳನವನ್ನೂ ಮಾಡಲಾಗದಿರುವವರು ಇಷ್ಟು ದೊಡ್ಡ ಸಮ್ಮೇಳನ ಹೇಗೆ ಮಾಡ್ತಾರೆ ಅನ್ನೋದು ನಮ್ಮ ಮುಂದಿನ ಸವಾಲು. ನಮ್ಮಲ್ಲಿ ಸಂಘಟನೆ ಕಡಮೆ. ಜಿಲ್ಲೆಯಲ್ಲಿ ಹೃದಯವಂತರಿದ್ದಾರೆ. ಆದರೆ ಹಣವಂತರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ಎರಡು ದೊಡ್ಡ ಮಠಗಳು ಕೈಜೋಡಿಸಬೇಕು. ಅವರಿಬ್ಬರು ಜೊತೆಯಾಗುವುದರ ಮೇಲೆ ಸಮ್ಮೇಳನದ ಯಶಸ್ಸು ನಿಂತಿದೆ. ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮಗಳಾದ ತರಳಬಾಳು ಹುಣ್ಣಿಮೆ, ಶರಣ ಸಂಸ್ಕೃತಿ ಉತ್ಸವಗಳು ನಡೆಯುತ್ತವೆ. ಆದರೆ ಅಲ್ಲಿ ಸೇರುವ ಜನ ೨೫-೩೦ ಸಾವಿರ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಕ್ಕೂ ಹೆಚ್ಚು ಜನಸೇರ್‍ತಾರೆ. ಅದಕ್ಕೆ ತಕ್ಕ ಸಿದ್ಧತೆಯಾಗಬೇಕು. ಸಮರ್ಥ ಸಂಘಟನೆಯಾಗಬೇಕು. ಇದು ಕನ್ನಡದ ಕೆಲಸವಾದ್ದರಿಂದ ಎಲ್ಲೂ ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಇದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿಯಾದ್ದರಿಂದ ಎಲ್ಲರೂ ಒಂದಾಗುತ್ತಾರೆ ಎಂಬ ವಿಶ್ವಾಸವೂ ಇದೆ.

ಮತ್ತೊಂದು ವಿಷಯ

ಬಿಎಲ್ ವೇಣು ಅವರ ಜನಪ್ರಿಯತೆ ರಾಜ್ಯದೆಲ್ಲೆಡೆ ಹಬ್ಬಿದ. ತಮ್ಮ ಕಾದಂಬರಿಗಳ ಮೂಲಕ ಓದುಗ ವರ್ಗವನ್ನು ಮುಟ್ಟಿದ ಇವರು ಅವುಗಳಲ್ಲಿ ಕೆಲವನ್ನು ಚಲನಚಿತ್ರವಾಗುವ ಮೂಲಕ ಮತ್ತೊಂದು ವರ್ಗವನ್ನು ತಲುಪಿದವರು ವೇಣು.
ವೇಣು ಎಂದರೆ ನೆನಪಾಗುವುದೇ ನೇರ, ನಿಷ್ಠುರ ಮಾತುಗಳು. ನಿಜ ಪ್ರತಿಪಾದನೆಯಲ್ಲದೇ ಮತ್ತಾವುದೋ ಓಲೈಕೆಗೆ ಅವಕಾಶವಾಗುವುದನ್ನು ವೇಣು ಯಾವತ್ತೂ ಇಷ್ಟಪಟ್ಟವರಲ್ಲ. ಕಂಡು ಸಹಿಸಿಕೊಂಡವರೂ ಅಲ್ಲ. ಹಾದಿ ತಪ್ಪಿದ ರಾಜಕಾರಣಿಗಳನ್ನು, ಮಠಾಧೀಶರು ಎಲ್ಲರನ್ನೂ ಟೀಕಿಸಿದವರು. ಇದು ವೇಣು ವ್ಯಕ್ತಿತ್ವದ ಒಂದು ಝಲಕ್ ಅಷ್ಟೇ.
ಅವರ ಕಥೆ, ಕಾದಂಬರಿ, ಬಿಡಿ ಬರಹಗಳಲ್ಲೂ ನಿರ್ದಾಕ್ಷಿಣ್ಯವಾದ, ನೇರವಾದ ಟೀಕೆ ಎದ್ದು ಕಾಣುತ್ತದೆ. ಬಂಡಾಯದ ಸ್ವರೂಪ, ಅಸಹನೆಯೊಂದು ಆಕ್ರೋಶವಾಗಿ ಸಿಡಿಯುವ ಗುಣಗಳು ಅವರ ಬರಹದಲ್ಲಿ ವ್ಯಕ್ತವಾಗಿದೆ.
ಮೂರು ಕಥಾಸಂಕಲನಗಳನ್ನು, ೧೫ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ವೇಣು ಫೆಬ್ರವರಿ ೩ರಂದು ಇನ್ನೂ ಎರಡು ಕೃತಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಒಂದು ೧೫ ಕತೆಗಳಿರುವ ‘ಬಣ್ಣದ ಬೊಂಬಿ’ ಕಥಾಸಂಕಲನ. ಇನ್ನೊಂದು ‘ಚುನಾವಣೆಗೆ ನಿಂತ ಮಠಾಧೀಶರು ಮತ್ತು ಇತರ ಅಣಕಗಳು’ಅಂಕಣ ಬರಹಗಳ ಸಂಗ್ರಹ. ಇದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಅಣಕಗಳ ಅಂಕಣಗಳ ಸಂಕಲನ.
ನೇರ ನಿಷ್ಠುರಿಯಾಗಿರುವ ವೇಣು ಜಿಲ್ಲೆಯ ಸಾಹಿತ್ಯಕ ವಲಯದಲ್ಲಿ ಐಸೋಲೇಟ್ ಆಗಿದ್ದರೂ ತಮ್ಮ ಮತ್ತು ಓದುಗನ ನಡುವಿನ ಸೇತುವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.


Tuesday, January 29, 2008

ಒಂದು ಪ್ರತಿಕ್ರಿಯೆ..

ದು ಬೇಸರದ ಸಂಗತಿ. 2008 ಡಿಸೆಂಬರ್ ಹೊತ್ತಿಗಾದರೂ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆಡಯಬೇಕಿದೆ. ಆದರೆ ಇನ್ನೂ ತಯಾರಿಯ ಮಾತಿಲ್ಲ. ತಯಾರಿ ಮಾತಿರಲಿ, ನಡೆಯುತ್ತದಾ ಎಂಬುದರ ಬಗ್ಗೆ ಸಂಶಯದ ಮಾತುಗಳು ದುರ್ಗದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿರುವುದು ಬೇಸರದ ಸಂಗತಿ. ಚಿತ್ರದುರ್ಗದ ಜನತೆಗೆ ನೆನಪಿರಬಹುದು. ಕೇವಲ ಎರಡು ವರ್ಷಗಳ ಹಿಂದೆ ಚಿತ್ರದುರ್ಗ ಸಿರಿಗೆರೆ ಶ್ರೀಗಳ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆದಿತ್ತು. ಅದ್ಧೂರಿ ಕಾರ್ಯಕ್ರಮ. ನೂರಾರು ಗಣ್ಯರು ದೂರದ ಊರುಗಳಿಂದ ಭಾಗವಹಿಸಿದರು.
ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆದಾಗ ಭೀಮಸಮುದ್ರದ ಮೂವರು 'ರಾಜಕಾರಣಿ ಕಂ ಅಡಿಕೆ ಧಣಿಗಳು' ತಲಾ ಒಂದೊಂದು ಕೋಟಿ ರೂಗಳನ್ನು ಹುಣ್ಣಿಮೆ ಕಾರ್ಯಕ್ರಮಕ್ಕಾಗಿ ಹೊಂದಿಸುವ ಆಶ್ವಾಸನೆಯನ್ನು ಸಿರಿಗೆರೆ ಶ್ರೀಗಳಿಗೆ ನೀಡಿದ್ದರು. ಅಂತೆಯೇ ನಡೆದುಕೊಂಡರು. ಆದರೆ ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವುದು ಖಾತ್ರಿಯಾಗಿ ತಿಂಗಳಾದರೂ ಯಾವ ರಾಜಕಾರಣಿಯೂ, ಹಣ ಹೊಂದಿಸುವುದಿರಲಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಉತ್ಸಾಹ ತೋರುತ್ತಿಲ್ಲ.ಇದು ದೌರ್ಭಾಗ್ಯದ ಸಂಗತಿ. ಮಠದ ಕಾರ್ಯಕ್ರಮಕ್ಕೆ ಹಣ ಹೊಂದಿಸಿದರೆ ಶ್ರೀಗಳ ಆಶೀರ್ವಾದ ಆ ಮೂಲಕ ಜನರ ಮತ ಕಟ್ಟಿಟ್ಟಬುತ್ತಿ. ಸಾಹಿತ್ಯ ಸಮ್ಮೇಳನದಿಂದ ತಮಗೇನೂ ದಕ್ಕುವುದಿಲ್ಲ ಎಂಬ ಅಭಿಪ್ರಾಯ ಅವರದಿರಬಹುದು.
ಸಾಹಿತ್ಯ ಸಮ್ಮೇಳನದಿಂದ ಚಿತ್ರದುರ್ಗ ಪ್ರವಾಸೋದ್ಯಮ ತಾಣವಾಗಿ ಗಮನ ಸೆಳೆಯುತ್ತದೆ. ಪ್ರವಾಸಿಗಳು ಹೆಚ್ಚಾದರೆ ದುರ್ಗದ ಸಣ್ಣ ವ್ಯಾಪಾರಿಗಳಿಗೆ ಆದಾಯ ದೊರಕುತ್ತೆ. ಆದರೆ ಇದಾವುದೂ ಇವರಿಗೇಕೆ ಅರ್ಥವಾಗುತ್ತಿಲ್ಲ.ರಾಜಕಾರಣಿಗಳು ಸಮ್ಮೇಳನಕ್ಕಾಗಿ ತಮ್ಮ ಕಿಸೆಯಿಂದ ರೊಕ್ಕ ನೀಡಬೇಕಿಲ್ಲ. ರಾಜ್ಯ ಸರಕಾರ, ಜಿಲ್ಲಾ ಪಂಚಾಯತ್, ನೌಕರರ ಸಂಘ ಹಾಗೂ ಇತರೆ ಸಂಥ ಸಂಸ್ಥೆಗಳಿಂದ ಹಣ ಹೊಂದಿಸುವ ಕೆಲಸ ಮಾಡಬೇಕಿದೆ. ಹಣಕ್ಕಿಂತ ಮುಖ್ಯವಾಗಿ ಸಮರ್ಥ ನೇತೃತ್ವ ವಹಿಸಿ ಸಮ್ಮೇಳನ ಯಶಸ್ವಿ ಮಾಡಬೇಕಾಗಿದೆ.
ಈಗ ಎಂಎಲ್ಎಗಳೆಲ್ಲ ಮಾಜಿ. ಹಾಲಿ ಇದ್ದಾಗಲೂ ಮಾಡಿದ್ದೆಷ್ಟು ಎನ್ನುವುದು ಚರ್ಚೆ ಮಾಡಬೇಕಾದ್ದೇ. ಅದಿರಲಿ, ಇನ್ನೂ ತಮ್ಮ ಸ್ಥಾನ ಭದ್ರವಾಗಿಟ್ಟುಕೊಂಡಿರುವ ಎಂಪಿ ಹಾಗೂ ಎಂಎಲ್ಸಿಗಳು ಮಾಡುತ್ತಿರುವುದೇನು?-
ಸತ್ಯ, ಬಾಪುದೇವರ ಹಟಿ

Monday, January 28, 2008

ಸದ್ಯ ಚಿತ್ರದುರ್ಗ ನಿರ್ಲಿಪ್ತವಾಗಿದೆ...

ಸಮ್ಮೇಳನದ ಸದ್ದಿಲ್ಲ... ಎಲ್ಲೂ ಮಾತಿಲ್ಲ...
ಳೆದ ೧೫ ದಿನಗಳಲ್ಲಿ ನಮ್ಮ ಕೆಲಸಗಳ ನಡುವೆ ನಾವೊಂದಿಷ್ಟು ಸಂಗತಿಗಳನ್ನು ಚರ್ಚಿಸುತ್ತಾ ಕೂತಿದ್ದೆವು. ಅದರ ಜೊತೆಗೆ ನಿಮ್ಮ ಓದಿಗೆ ಹೊಸ ಹೊಸ ಲೇಖನಗಳನ್ನು ಹೊಂಚುವುದಕ್ಕಾಗಿ ಸ್ನೇಹಿತರು, ಹಿರಿಯರನ್ನು ಭೇಟಿ ಮಾಡಿ ಅವರಿಗೊಂದು ಪ್ರೀತಿ ಪೂರ್ವಕ ವಿನಂತಿಯನ್ನು ಸಲ್ಲಿಸಿದೆವು.ಈ ನಡುವೆ ನಾವು ಗಮನಿಸಿದ ಅಂಶಗಳು ಕೊಂಚ ಮಟ್ಟಿಗೆ ನಿರಾಶೆ ಹುಟ್ಟಿಸಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸಮ್ಮೇಳನದ ಬಗ್ಗೆ ಚಿತ್ರದುರ್ಗದಲ್ಲಿ ಸದ್ಯ ಯಾವುದೇ ಸುದ್ದಿಯಿಲ್ಲ. ಲೇಖಕರು, ಸಾಹಿತಿಗಳು ನೆಮ್ಮದಿಯಿಂದಿದ್ದಾರೆ. ಸಾಹಿತ್ಯಕ ಸಂಘಟನೆಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆಯಾಗಿ ಸಮ್ಮೇಳನಕ್ಕೂ ಚಿತ್ರದುರ್ಗಕ್ಕೂ ಸಂಬಂಧವಿಲ್ಲ ಎನ್ನುವ ಹಾಗೇ ಇದೆ.ಇದು ತೀರಾ ಅಸಹನೆಯ ಮಾತು ಎನಿಸಬಹುದು. ಆದರೆ ಇದು ನಿಜ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯೊಬ್ಬರು ಸಾಹಿತ್ಯ ಸಮ್ಮೇಳನ ಘೋಷಣೆಯಾದ ಕೆಲ ದಿನಗಳಲ್ಲೇ ನೇತ್ಯಾತ್ಮಕವಾಗಿಯೇ ಮಾತನಾಡಿದ್ದರು.ಅಷ್ಟಾದರೂ ಆಯಿತು. ಆಮೇಲೆ ಮತ್ತೇನು ಸುದ್ದಿಯಾಗಲಿಲ್ಲ. ಈ ಮಟ್ಟಿನ ನಿರ್ಲಿಪ್ತತೆ ಯಾಕಿರಬಹುದು? ಚಿತ್ರದುರ್ಗ ನೆಲದ ಗುಣವೂ ಕಾರವೆನ್ನಿಸುತ್ತದೆ. ಇಲ್ಲಿ ಅನಗತ್ಯ ಭಾವೋದ್ವೇಗ ಕಾಣಸಿಗುವುದಿಲ್ಲ. ಉತ್ಸಾಹವಿರುತ್ತದೆ. ಅತಿರೇಕದ ಉತ್ಸಾಹ ಕಾಣಿಸುವುದಿಲ್ಲ. ಇದೇ ಕಾರಣವೇ ಸಮ್ಮೇಳನದ ಬಗ್ಗೆ ಸುಮ್ಮನಿರುವುದಕ್ಕೆ?ಇರಲಿಕ್ಕಿಲ್ಲ. ಇನ್ನೂ ಕೆಲವೊಂದು ಅಂಶಗಳು ಇವೆ. ಈಗ ಅಸ್ತಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ತನ್ನ ಅವಧಿ ಪೂರ್ಣಗೊಳಿಸಿದೆ. ಸದ್ಯ ಅದರದ್ದು ಎಕ್ಸ್ ಟೆಂಡೆಡ್ ಅವಧಿ. ಬಹುಶಃ ಇನ್ನೂ ಮೂರ್‍ನಾಲ್ಕು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಏಪ್ರಿಲ್ -ಮೇ ಹೊತ್ತಿಗೆ ಮುಗಿದು ಕೇಂದ್ರ ಸಮಿತಿ ರಚನೆಯಾಗಬಹುದು. ನಂತರ ಜಿಲ್ಲಾವಾರು ಸಮಿತಿಗಳ ರಚನೆಯಾಗಬೇಕು. ಆ ಹೊತ್ತಿಗಾಗಲೇ ಅರ್ಧವರ್ಷವೇ ಕಳೆದು ಹೋಗಿರುತ್ತದೆ. ನವೆಂಬರ್ ಹೊತ್ತಿಗೆ ಸಮ್ಮೇಳನ ನಡೆಸುವುದು ತೀರಾ ಆತುರದ ಕೆಲಸವಾಗುತ್ತದೆ. ಹಾಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಪತ್ರಕರ್ತರು, ಜಿಲ್ಲೆ ಕೆಲ ಹಿರಿಯರು. ಹೌದು ಎನ್ನಿಸುತ್ತದೆ. ಮತ್ತೆರಡು ಅಂಶ ಜಿಲ್ಲೆಯಲ್ಲಿ ಸದ್ಯದ ಅವಧಿಯಲ್ಲಿ ಆದ ಸಾಹಿತ್ಯ ಚಟುವಟಿಕೆಗಳು ಮತ್ತು ಮುಂದೆ ಆಯ್ಕೆಯಾಗಿ ಬರಲಿರುವ ಅಭ್ಯರ್ಥಿ ನಿಭಾಯಿಸಬಲ್ಲ ಜವಾಬ್ದಾರಿ. ಹಾಲಿ ಅಧ್ಯಕ್ಷ ಕೆ.ಎಂ.ವೀರೇಶ್ ಅವರ ಅವಧಿಯಲ್ಲಿ ಆದ ಸಾಹಿತ್ಯಕ ಕಾರ್‍ಯಕ್ರಮಗಳು ಅತ್ಯಲ್ಪ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ತಾಲೂಕಿನ ಗಡಿ ಭಾಗಗಳಲ್ಲೂ ಕಾರ್‍ಯಕ್ರಮಗಳು ಆಗಿದ್ದವು. ಆದರೆ ವೀರೇಶ್ ಅವರ ಕಾರ್‍ಯಕ್ರಮಗಳೆಲ್ಲಾ ಸಹಯೋಗದಲ್ಲೇ ಮುಗಿದವು ಎಂಬ ಆರೋಪವಿದೆ.ತೀರಾ ಅಚ್ಚರಿ ಉಂಟು ಮಾಡುವ ಸಂಗತಿಯೆಂದರೆ ಇಲ್ಲಿಯವರೆಗೆ ಜಿಲ್ಲಾಮಟ್ಟದ ಸಮಿತಿ ರಚನೆಯಾಗಿಲ್ಲ ಎನ್ನುವುದು!!ಸಾಹಿತ್ಯಕವಾಗಿ ಹೆಚ್ಚೇನು ಆಸ್ಥೆಯಿಂದ ಕ್ರಿಯಾಶೀಲರಾಗದೇ ಇರುವ ವೀರೇಶ್ ಅವರೇ ಮುಂದಿನ ಚುನಾವಣೆಯ ಅಭ್ಯರ್ಥಿ. ಇವರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ಅಭ್ಯರ್ಥಿಗಳ ಸಂಖ್ಯೆ ತೀರಾ ವಿರಳ. ಕಳೆದ ಬಾರಿ ಸೋತ ಪತ್ರಕರ್ತ, ಮಾಜಿ ಅಧ್ಯಕ್ಷ ಶ. ಮಂಜುನಾಥ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.ಮತ್ತೊಂದೆಡೆ ಕವಿ, ವಿಮರ್ಶಕ ಹಾಗೂ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆಯವರಿಗೆ ಮಠಾಧೀಶರು, ಗಣ್ಯರು ಬೆಂಬಲ ವ್ಯಕ್ತಪಡಿಸಿ ಸ್ಪರ್ಧಿಸುವುದಕ್ಕೆ ಹೇಳಿದ್ದರೂ ಎಂಬ ಸಂಗತಿಯೂ ತಿಳಿದು ಬಂದಿದೆ. ಬೆನ್ನ ಹಿಂದೆಯೇ ಸಮ್ಮೇಳನದಂಥ ಜವಾಬ್ದಾರಿ ಎದುರುಗಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಯೇ ಸ್ಪರ್ಧಿಸುವುದು ಸರಿ ಎನ್ನುವ ಕಾರಣ ನೀಡಿ ಅವರ ಸಲಹೆಯನ್ನು ನಮ್ರರಾಗಿಯೇ ತಳ್ಳಿ ಹಾಕಿದ್ದಾರೆಂಬ ವರ್ತಮಾನವೂ ದೊರೆತಿದೆ.ಇವರನ್ನು ಬಿಟ್ಟರೆ, ಆಸಕ್ತಿಯಿಂದ ಮಾಡಬಲ್ಲ, ಮತ್ತೊಬ್ಬ ವ್ಯಕ್ತಿ ಚಳ್ಳಕೆರೆ ಪ್ರಾಧ್ಯಾಪಕರಾಗಿರುವ, ಅಭಿರುಚಿ ಸಾಹಿತ್ಯಕ ವೇದಿಕೆ ನಡೆಸಿಕೊಂಡು ಬರುತ್ತಿರುವ ಬಿ.ಪಿ.ವೀರೇಂದ್ರಕುಮಾರ್. ಇವರ ಹೆಸರು ಅಲ್ಲಲ್ಲೇ ಪ್ರಸ್ತಾಪವಾಗಿದೆಯಾದರೂ ವೀರೇಂದ್ರಕುಮಾರ್ ಅವರ ನಿಲುವು ಎಲ್ಲೂ ಪ್ರಕಟವಾಗಿಲ್ಲ.ಚಿತ್ರದುರ್ಗದಲ್ಲಿ ಸಮ್ಮೇಳನವಾಗುವುದು ಎಷ್ಟು ವಿಶಿಷ್ಟವೋ ಅಷ್ಟೇ, ಸಂಕಷ್ಟ, ಸಂದಿಗ್ದ ಸಂಗತಿಗಳಿವೆ.ದುರ್ಗದಲ್ಲಿ ಉದ್ಯಮಿಗಳಿಲ್ಲ. ಆದರೆ ಅಂಥ ಆರ್ಥಿಕವಾಗಿ ಸಬಲರಾಗಿರುವವರನ್ನು ಮುಂದೆ ನಿಲ್ಲಿಸುವ ನಾಲ್ಕು ಮಠಗಳಿವೆ. ಮುರುಘರಾಜೇಂದ್ರ ಮಠ, ಸಿರಿಗೆರೆ ಮಠ, ಸಾಣೆಹಳ್ಳಿ ಮಠ ಮತ್ತು ಕಬೀರಾನಂದ ಮಠ.ಏನೇ ಭಿನ್ನಾಭಿಪ್ರಾಯವಿದ್ದರೂ ಈ ನಾಲ್ಕು ಮಠಾಧೀಶರನ್ನು ವಿಶ್ವಾಸದೊಂದಿಗೆ ಅವರನ್ನು ಒಳಗೊಂಡಂತೆ ಸಮ್ಮೇಳನದ ರೂಪುರೇಷೆಗಳನ್ನು, ಈ ಕುರಿತ ಚರ್ಚೆಗಳನ್ನು ನಡೆಸುತ್ತಾ ಹೋಗುವ, ಆರ್ಥಿಕವಾಗಿ ಸಮ್ಮೇಳನದ ಅಗತ್ಯತೆಗಳನ್ನು ಪೂರೈಸುವ, ಸಂಘಟನೆಯ ಜವಾಬ್ದಾರಿಯನ್ನು ಹೊರಬಲ್ಲ ಸಮರ್ಥ ವ್ಯಕ್ತಿಯ ಅಗತ್ಯವಿದೆ.ಇದೆಲ್ಲಾ ಹೇಗೆ ಸರಿಹೋಗುತ್ತದೆ? ಎಂಬ ಆತಂಕದ ಪ್ರಶ್ನೆ ನಮ್ಮ ಮುಂದೆ. ಅದನ್ನುನಿಮ್ಮಮುಂದಿಟ್ಟಿದ್ದೇವೆ.
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳಂತೆ..ಮುಂದಿನ ಬೆಳವಣಿಗೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ.

ಚಳ್ಳಕೆರೆ ತಾಲೂಕಲ್ಲಿ ಕೇತೇದೇವರ ಜಾತ್ರೆ...

ಅಪ್ಪಟ ಜಾನಪದ ಶೈಲಿಯ ಜಾತ್ರೆ
ಕೇತೇದೇವರ ಮುಳ್ಳಿನ ಜಾತ್ರೆಯು...ಕೇದಾರಲಿಂಗೇಶ್ವರನೂ....ಕಾರ್ತ್ಯಾಯನಿ ವ್ರತವೂ....
ಹಾಲುಕಲ್ಲಿನಲಿ ದೇಗುಲ ಕಟ್ಟಿ, ಆಕಾಶದೆತ್ತರ ಗೋಪುರ ನಿರ್ಮಿಸಿ, ಭಂಡಾರ ಕರಗಿಸುತ್ತಾ ಭಕ್ತಿ ಪ್ರದರ್ಶಿಸುವ ಆಧುನಿಕ ಕಾಲದಲ್ಲೂ ಪರಿಶಿಷ್ಟ ಜನಾಂಗವೊಂದು ಅಪ್ಪಟ ಜಾನಪದ ಶೈಲಿಯ ಜಾತ್ರೆಯನ್ನು ಎಲ್ಲಾ ಪ್ರಾಚೀನ ಸಂಪ್ರದಾಯಗಳನ್ನೂ ಉಳಿಸಿಕೊಂಡು ಮೂಲ ಸೊಗಸಿನೊಂದಿಗೆ ಆಚರಿಸುವ ಪರಿಪಾಠ ಇಂದಿಗೂ ಚಳ್ಳಕೆರೆ ತಾಲೂಕಲ್ಲಿ ಅಸ್ತಿತ್ವದಲ್ಲಿದೆ.
ಚಳ್ಳಕೆರೆ ತಾಲೂಕಿನ ಪುರ್‍ಲಹಳ್ಲಿ ಗ್ರಾಮಕ್ಕೆ ೧ ಕಿ. ಮೀ. ದೂರವಿರುವ ವಸಲು ದಿಬ್ಬ ಎಂಬ ೭೦ ಎಕರೆ ಬಯಲು ಪ್ರದೇಶದಲ್ಲಿ ನಡೆಯುವ ಗೊಲ್ಲಜನಾಂಗದ ಆರಾಧ್ಯ ದೈವ ಕೇತೇದೇವರ ಜಾತ್ರಗೆ ಸೋಮವಾರ ಸುಮಾರು ೧ ಲಕ್ಷಕ್ಕೂ ಹೆಚ್ಚು ಜನ ಸಾಕ್ಷಿಯಾಗಲಿದ್ದಾರೆ.
ಮೂಲತಃ ತಾಲೂಕಿನ ಚನ್ನಮ್ಮನಾಗ್ತಿಹಳ್ಳಿ ಗ್ರಾಮದ ಕೇತೇದೇವರನ್ನು ಪುರ್‍ಲಹಳ್ಳಿ ಗ್ರಾಮದ ರಿ.ಸ.ನಂ. ೫೬,೫೭ ನೇ ಜಮೀನಿನಲ್ಲಿರುವ ವಸಲು ದಿಬ್ಬ ಎಂಬ ವಿಶಾಲ ಬಯಲು ಪ್ರದೇಶಕ್ಕೆ ತಂದು ವಿಶೇಷವಾದ ಮುಳ್ಳಿನ ದೇವಸ್ಥಾನ ನಿರ್ಮಿಸಿ ಪೂಜೆ ಸಲ್ಲಿಸುವುದು ಜಾತ್ರೆಯ ವಿಶೇಷ.
ಜನವರಿ ೩ ರಿಂದ ಆರಂಭವಾಗಿ ಫೆ. ೨ ರವರೆಗೆ ಪೂರಾ ೧ ತಿಂಗಳ ಕಾಲ ನಿಯಮ-ನಿಷ್ಟೆಯಿಂದ ನಡೆಯುವ ಈ ಜಾತ್ರಯಲ್ಲಿ ಅಪ್ಪಿ ತಪ್ಪಿ ಕೂಡಾ ಈ ಜನ ಕಟ್ಟಳೆ ಮೀರುವುದಿಲ್ಲ. ೧೩ ಬುಡಕಟ್ಟುಗಳಿಗೆ ಸೇರಿದ ಈ ಗೊಲ್ಲ ಜನಾಂಗ ದೇವರಿಗೆ ಹುರುಳಿಯಿಂದ ಕೈತೊಳೆಸಿ ಪೂಜೆ ಆರಂಭಿಸಿದರೆಂದರೆ ತಿಂಗಳ ನಂತರ ಮತ್ತೆ ದೇವರಿಗೆ ಹುರುಳಿ ನೈವೇದ್ಯ ಮಾಡಿದ ನಂತರವೇ ಹುರುಳಿ ಸೇವನೆ. ಅಲ್ಲಿಯವರೆಗೂ ಸಂಪೂರ್ಣ ನಿಷಿಧ್ಧ.
ಸುಮಾರು ೭೦ ಎಕರೆ ವಿಶಾಲವಾದ ಪ್ರದೇಶದಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಸುಮಾರು ೬ ಸಾವಿರ ಹಳ್ಳಿಗಳಲ್ಲಿರುವ ಗೊಲ್ಲ ಜನಾಂಗದ ಭಕ್ತರು ಜಮಾವಣೆಗೊಂಡು ಕುಲ ದೈವ ಕೇತೇದೇವರಿಗೆ ಹಣ್ಣು ಕಾಯಿ ನೈವೇದ್ಯ ಮಾಡಿ ತಮ್ಮ ಹರೆಕೆ ತೀರಿಸಿ ಪುನೀತರಾಗಿ ನವಣೆ, ಹುರುಳಿ ತಿಂದು ವ್ರತ ಬಿಡುವುದು ಜಾತ್ರೆಯ ಮುಖ್ಯ ಭಾಗ.
ಟಿ ಬಾರೆಕಳ್ಳೆಯ ಗುಡಿಯೇ ಇಲ್ಲಿ ಆಲಯ: ಗೊಲ್ಲ ಜನಾಂಗದ ೧೩ ಗುಡಿಕಟ್ಟಿನಲ್ಲಿ ಕೋಣನ ಗೌಡರು, ಬೊಮ್ಮನ ಗೌಡರು ಅಣ್ಣ ತಮ್ಮಂದಿರು ಸೇರಿಕೊಂಡು ೧ ತಿಂಗಳು ಮೊದಲೇ ಜಾತ್ರಗೆ ಸಿದ್ಧತೆ ಆರಂಭಿಸುತ್ತಾರೆ. ಹತ್ತಿ ಮರದ ಕಟ್ಟಿಗೆ ತಂದು ನೆಲಕ್ಕೆ ತಾಗಿಸದಂತೆ ಗುಡಿನಿರ್ಮಿಸುವ ವಸಲು ದಿಬ್ಬಕ್ಕೆ ತರುತ್ತಾರೆ. ಮೂಲ ದೇವಸ್ಥಾನದ ಸುತ್ತ ಕಳ್ಳೆ ಕಟ್ಟುವುದು, ಬಾರೆ ಕಳ್ಳೆ, ತುಗ್ಗಲಿ ಕಟ್ಟಿಗೆ ಕಡಿದು ವಸಲು ದಿಬ್ಬಕ್ಕೆ ತರುವುದು, ನಂತರ ಬಾರೆ ಮತ್ತು ತುಗ್ಗಲಿ ಕಟ್ಟಿಗೆಯಿಂದ ಗುಡಿ ಕಟ್ಟಿ ಕಳಶ ಪ್ರತಿಷ್ಟಾಪನೆ ಮಾಡುವುದು, ಬಂಜಗೆರೆ ಗ್ರಾಮದಿಂದ ವೀರಣ್ಣ ದೇವರನ್ನು, ಬತವಿನ ದೇವರನ್ನು (ವ್ರತದ ದೇವರು) ತರುವುದು, ಆಂಧ್ರದ ಐಗಾರ್‍ಲಹಳ್ಳಿ ಗ್ರಾಮದಿಂದ ತಾಳಿ ದೇವರು (ಎಲ್ಲಾ ಪೆಟ್ಟಿಗೆ ದೇವರು) ತಂದು, ಗುಡಿ ತುಂಬಿಸುವುದು.
ಸುಮಾರು ೨೦ ಅಡಿ ಎತ್ತರಕ್ಕೆ ಮದ್ಯದಲ್ಲಿ ಒಂದು ಕಂಬ ನೆಟ್ಟು ಸುಮಾರು ೧೫ಅಡಿ ಸತ್ತಳತೆಯಲ್ಲಿ ಸುತ್ತ ತುಗ್ಗಲಿ ಕಟ್ಟಿಗೆ ಆಧಾರವಾಗಿ ಕಟ್ಟಿ ಅದರ ಮೇಲೆ ಬಾರೆ ಮುಳ್ಳಿನ ಕಳ್ಳೆ ಹೊದಿಸುತ್ತಾರೆ. ನಂತರ ೧೩ ಬುಡಕಟ್ಟಿನ ಗೌಡರು ೫ ಕಳಶಗಳನ್ನು ೨೦ ಅಡಿ ಎತ್ತರದಲ್ಲಿ ಪ್ರತಿಷ್ಟಾಪಿಸುತ್ತಾರೆ. ಜಾತ್ರಯ ದಿನ ೧೩ ಬುಡಕಟ್ಟಿನ ಪೂಜಾರರು ನೇಮಿಸಿದ ೫ ಈರಗಾರರನ್ನು ಕಳಶ ಕೀಳಲು ಕಳಿಸುತ್ತಾರೆ. ಬರಿ ಮೈಯಲ್ಲಿ, ಬರಿಗಾಲಲ್ಲಿ ಇಳಿಜಾರಾದ ಗುಡಿಯನ್ನು ರಭಸವಾಗಿ ಹತ್ತುವುದೇ ರೋಚಕ. ೫ ಜನರಲ್ಲಿ ಯಾರಾದರು ಕಳಸ ಕೀಳಲು ಅಸಮರ್ಥರಾದರೆ ಅವರಲ್ಲೇ ಯಾರಾದರು ಕಿತ್ತು ತರಬಹುದು. ಬೇರೆ ಯಾರೂ ಗುಡಿ ಹತ್ತುವಂತಿಲ್ಲ. ಇದು ಜಾತ್ರೆಯ ಅಂತಿಮ ಹಂತ.
ಕಳಶ ಕೀಳುವುದಕ್ಕೆ ಮೊದಲು ಗಲಾಟೆಗಳಾಗುತ್ತಿದ್ದವು. ಯಾರು ಕೀಳಬೇಕೆಂಬ ವಿಚಾರದಲ್ಲಿ ಸಮಸ್ಯೆ ತಲೆದೋರಿ ವಿಚಾರ ನ್ಯಾಯಾಲಯದ ಮೆಟ್ಟಿಲು ಸಹ ಹತ್ತಿತ್ತು, ಗುಡಿಕಟ್ಟಿನ ಮಖಂಡರ ತೀರ್ಮಾನಕ್ಕೇ ಕೋರ್ಟ್ ಒಪ್ಪಿಸಿದ ನಂತರ ಜಾತ್ರೆ ಸಾಂಗವಾಗಿ ನಡೆಯುತ್ತಿದೆ ಎನ್ನುತ್ತಾರೆ ಜನಾಂಗದ ಮುಖಂಡರು..
ಟಿ ಏನಿದು ಕೇತೇದೇವರು: ಚನ್ನಮ್ಮನಾಗ್ತಿಹಳ್ಳಿ ಕೇತೇದೇವರ ಪೂಜಾರಿ ಚಂದ್ರಣ್ಣ ಅವರ ಪ್ರಕಾರ ಕೇತೇದೇವರೆಂಬುದು ಕೇದಾರೇಶ್ವರನಾಗಿದ್ದು ಬುಡಕಟ್ಟು ಜನರ ಬಾಯಲ್ಲಿ ಕೇತೇದೇವರಾಗಿದ್ದಾನೆ. ಬಂಜಗೆರೆ ಈರಣ್ಣ ದೇವರು ಸಹ ಈಶ್ವರನೇ. ಕಳಸ ಕೀಳುವುದಕ್ಕೆ ಎರಡು ದಿನ ಮೊದಲು ಐದು ಪೆಟ್ಟಿಗೆ ದೇವರುಗಳನ್ನು ಸೆರೆಯಲ್ಲಿಡುತ್ತೇವೆ. (ಮರೆಮಾಚಿ ಇಡುವುದು.) ನಂತರ ಎಲ್ಲಾ ಪಂಚ ಪೀಠದ ದೇವರುಗಳನ್ನು ಪೂಜೆಗೆ ಸಜ್ಜುಗೊಳಿಸುತ್ತೇವೆ. ಪಂಚಪೀಠದ ದೇವರೆಂದರೆ ಕೇದಾರೇಶ್ವರ, ಬಾಳೆಹೊನ್ನೂರು, ಉಜ್ಜಿನಿ, ಶ್ರೀಶೈಲ, ಕಾಶಿ ಪೀಠದ ದೇವರುಗಳು. ಬತದ ದೇವರು ಎಂದರೆ ವ್ರತದ ದೇವರು. ಈ ಜಾತ್ರೆಯ ಒಟ್ಟು ಆರಾಧನೆ “ಕಾರ್ತ್ಯಾಯನಿ ವ್ರತ" ಎಂಬುದು ಚಂದ್ರಣ್ಣನವರ ವಿಶ್ಲೇಷಣೆ.
ಒಂದು ತಿಂಗಳ ಕಾಲ ಈ ಜನಾಂಗ ಬೇರೆ ಕುಲಸ್ಥರ ಮನೆಗೆ ಹೋಗುವುದಿಲ್ಲ. ಬೇರೆಯವರನ್ನು ತಮ್ಮ ಮನೆಗೆ ಬಿಟ್ಟುಕೊಳ್ಳುವುದಿಲ್ಲ. ಹೊರಗಡೆ ಏನನ್ನೂ ತಿನ್ನುವುದಿಲ್ಲ. ಕಠೋರ ವ್ರತದಾರಿಗಳಿವರು. ಎಲ್ಲಾ ವಿಚಾರಗಳಲ್ಲೂ ರಾಜಿ ಮಾಡಿಕೊಂಡು ಕಾನೂನು ಕಟ್ಟಳೆಗಳನ್ನು ಗಾಳಿಗೆ ತೂರುವ ಇಂದಿನ ದಿನ ಮಾನದಲ್ಲಿ ಈ ಬುಡಕಟ್ಟು ಜನಾಂಗ ಇಂದಿಗೂ ಕಟ್ಟುನಿಟ್ಟಿನ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಮಾತ್ರ ಅನುಕರಣೀಯ.

Sunday, January 27, 2008

ಮಲ್ಲರನ್ನು ಕಟ್ಟಿ ಬೆಳೆಸಿದ ದುರ್ಗದ ಗರಡಿಗಳು...

ಮುಂದುವರೆದ ಭಾಗ...
ರಾಯರಹಟ್ಟಿ ಗರಡಿ
ಕೆಳಗೋಟೆಯೆಂದು ಸ್ಥೂಲವಾಗಿ ಕರೆಯುವಲ್ಲಿ ಇರುವ ಒಂದೆರಡು ಭಾಗಗಳಲ್ಲಿ ‘ಚೆನ್ನಕೇಶವಪುರ’ ಅಥವಾ ‘ಸಿ.ಕೆ.ಪುರ’ ಎಂದು ಈಗ ಕರೆಯುವ ಭಾಗವನ್ನು ಹಿಂದೆ ‘ಚೆನ್ನಯ್ಯನ ಹಟ್ಟಿ’ ಎಂದು ಕರೆಯುತ್ತಿದ್ದರು. ಚೆನ್ನಕೇಶವಸ್ವಾಮಿ ದೇವಾಲಯದ ಭಾಗವನ್ನು ‘ರಾಯರಹಟ್ಟಿ’ ಎಂದೇ ಕರೆಯುತ್ತಿದ್ದರು. ಈ ರಾಯರಹಟ್ಟಿಯ ಗರಡಿಯನ್ನು ಚೆನ್ನಕೇಶವಸ್ವಾಮಿ ದೇವಾಲಯದಲ್ಲಿ ಮಾಡಿಕೊಂಡಿದ್ದಂತೆ, ಕೆಳಗೋಟೆ ನಿಂಗಪ್ಪನವರು ಉಸ್ತಾದಿಯ ತರಹ ನಿಂತು ಈ ಗರಡಿಯನ್ನು ಮುನ್ನಡೆಸಿದಂತೆ ಕಾಣುತ್ತದೆ. ದೊಡ್ಡ ಗರಡಿಯ ಪೈಲ್ವಾನ್ ನಂಜನವರು ಜೊತೆ ಕುಸ್ತಿ ಮಾಡಿದ ನಾಗಪುರದ ದಿವಾನ ಮತ್ತು ಅಣ್ಣಪ್ಪ ಎಂಬುವವರು ಇಲ್ಲಿನ ಪೈಲ್ವಾನರ ಕರೆಯ ಮೇರೆಗೆ ನಿಂತು ಈ ಚೆನ್ನಕೇಶವಸ್ವಾಮಿ ದೇಗುಲದ ಆವರಣದಲ್ಲಿದ್ದ ಗರಡಿ ಹಾಗೂ ದೊಡ್ಡ ಗರಡಿಯ ಪೈಲ್ವಾನರುಗಳಿಗೆ ನಾಗಪುರದ ಪೈಲ್ವಾನರ ಕೆಲಸಗಳನ್ನು ಕಲಿಸಿಕೊಟ್ಟರಂತೆ. ಆದರೆ ಇಂಥ ಕೆಲಸಗಳು ಪೈಲ್ವಾನರಗಳ ಗುಟ್ಟು. ಇದು ಉಸ್ತಾದ್ಥ ಪೈಲ್ವಾನರ ಸಂಬಂಧದಿಂದ ಹುಷಾರಾಗಿ ಕಲಿಯುವಂಥದ್ದು, ಆದ್ದರಿಂದ ಕೆಲಸ ಕಲಿಸಿದ್ದನ್ನು ದೊಡ್ಡ ಗರಡಿಯ ಗಣೇಶರಾವ್ ಮುಜಮ್‌ದಾರ್ ಅಲ್ಲಗಳೆಯುತ್ತಾರೆ. ಆದರೆ ಆ ಗರಡಿಯ ಲಕ್ಷಣವೇ ಈಗ ಕಾಣುತ್ತಿಲ್ಲ. ಅಂದರೆ ಈ ದೇವಾಲಯದ ಆವರಣದಲ್ಲಿ ಗರಡಿಯಾಗಲಿ, ಪೈಲ್ವಾನರುಗಳಾಗಲಿ ಈಗ ಕಂಡುಬರುವುದಿಲ್ಲ.
ಆಂಜನೇಯಸ್ವಾಮಿ ಗರಡಿ
ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗಕ್ಕೆ ಭೂತನಗುಡಿ ಎಂದು ಜನಸಾಮಾನ್ಯರ ಬಾಯಲ್ಲಿ ಪ್ರಚಲಿತವಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಈಗ ಗರಡಿಯಿದ್ದಿತು. ಪ್ರೆ.ಕೆ.ಬಿ.ಪಾಲಯ್ಯನವರು ಹಾಗೂ ದೇವಸ್ಥಾನದ ಆರ್ಚಕ ಪೆನ್ನಪ್ಪ ಹೇಳುವ ಪ್ರಕಾರ ೧೯೨೦ರ ನಂತರದ ದಿನಗಳಲ್ಲಿ ಈ ಗರಡಿ ಕೊಟ್ಟ ಕೆಲವು ಪೈಲ್ವಾನರುಗಳ ದೆಸೆಯಿಂದ ಅದು ಸಾಕಷ್ಟು ಹೆಸರು ಮಾಡಿತ್ತು. ಕೆ.ಬಿ.ಪಾಲಯ್ಯನವರ ಸೋದರಮಾವನವರಾದ ನೆಡ್ಡಿ ಪಾಲಜ್ಜನವರು ಉಸ್ತಾದಿಯಲ್ಲಿ ಜಿಲ್ಲೆಯಾದ್ಯಂತ ಕುಸ್ತಿ ಮಾಡಿದ್ದ ಅನೇಕ ಪೈಲ್ವಾನರನ್ನು ಸೃಷ್ಟಿಸಿದ್ದ ಈ ಗರಡಿ ಈಗ ಯಾವ ಕುರುಹನ್ನೂ ಉಳಿಸದೆ ಕಣ್ಮರೆಯಾಗಿದೆ. ಕುತೂಹಲಕ್ಕಾಗಿ ‘ಈ ಗರಡಿಯಲ್ಲಿ ಯಾರೂ ಪೈಲ್ವಾನರು ಉಳಿಯಲಿಲ್ಲವೆ’ ಎಂದು ಕೇಳಿದ್ದಕ್ಕೆ ಪೂಜಾರ ಪೆನ್ನಪ್ಪ ಹೇಳುವುದು:‘ ಬೆಳಗ್ಗೆ ಅಚ್ಚೇರು ಹಾಲು, ಸಂಜೆ ಅಚ್ಚೇರು ಹಾಲು ಕುಡಿದು, ಉಂಡು ಚೆನ್ನಾಗಿ ತಯಾರಿ ಮಾಡಿಕೊಳ್ಳುತ್ತಿದ್ದೆವು ಆ ಕಾಲದಲ್ಲಿ. ಈಗೇನಿದೆ? ಬಡತನ. ಅದಕ್ಕಾಗಿ ಜನ ಕಡಮೆಯಾದರು’. ಇದು ಗರಡಿಯ ಅಳಿವು-ಉಳಿವಿನ ಕ್ರೂರ ಸತ್ಯವೇ ಆಗಿದೆ.
ಹೊರಪೇಟಿ ಅಂಜುಮನ್ ಗರಡಿ
ಕೇವಲ ಕೆಲವೇ ವರ್ಷಗಳ ಹಿಂದೆ ಹೊರಪೇಟೆಯ ಸುಂದರವಾದ ಮಸೀದಿಯ ಪಕ್ಕ ಈ ಅಂಜುಮನ್ ಗರಡಿಯಿತ್ತೆಂದು ಹೇಳುತ್ತಾರೆ. ‘ಸೈದಿ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪೈಲ್ವಾನ್ ಸೈಯದ್ ಖಾದರ್ ಹೇಳುವ ಪ್ರಕಾರ ಅವರ ತಂದೆ, ಅಜ್ಜ, ಎಲ್ಲಾ ಈ ಗರಡಿಯಲ್ಲಿ ಸಾಮು ತೆಗೆದವರು. ಆದರೆ ಅದು ವಿವಾದಗ್ರಸ್ಥವಾಗಿತ್ತೆಂಬುದಕ್ಕೆ ಈಗ ಸಾಕ್ಷಿಯೂ ಉಳಿದಿಲ್ಲ. ಗರಡಿಯೂ ಇಲ್ಲ.
(ಇನ್ನೂ ಇದೆ....)

Monday, January 21, 2008

ಮಲ್ಲರನ್ನು ಕಟ್ಟಿ ಬೆಳೆಸಿದ ದುರ್ಗದ ಗರಡಿಗಳು...

ಟಿ.ಆರ್.ರಾಧಾಕೃಷ್ಣ ಚಿತ್ರದುರ್ಗದ ಪ್ರಮುಖ ಕಥೆಗಾರರು. ಆದರೆ ಅತ್ಯಂತ ಕುತೂಹಲಹದಿಂದ ಕಾಡಿದ ಸಂಗತಿ ಕುಸ್ತಿ. ಮಧ್ಯಕರ್ನಾಟಕದ ಪ್ರಮುಖ ಕುಸ್ತಿ ಕೇಂದ್ರವಾದ ಚಿತ್ರದುರ್ಗದಲ್ಲಿ ಕುಸ್ತಿಪಟು, ಅವರನ್ನು ಪಳಗಿಸಿದ ಗರಡಿ ಮನೆಗಳ ಬಗ್ಗೆ ರಾಧಾಕೃಷ್ಣವರು ಲೇಖನಗಳು ಬರೆದಿದ್ದಾರೆ. ಚಿತ್ರದುರ್ಗದ ಪ್ರಖ್ಯಾತ ಕುಸ್ತಿ ಪಟು ಪೈಲ್ವಾನ್ ನಂಜಪ್ಪನನ್ನು ಕುರಿತು ಕೃತಿಯನ್ನು ಪ್ರಕಟಿಸಿದ್ದಾರೆ. ಚಿತ್ರದುರ್ಗದ ಗರಡಿ ಮನೆಗಳ ಕುರಿತು ಅವರು ಬರೆದಿರುವ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.


ಚಿತ್ರದುರ್ಗದ ಗರಡಿಗಳು:ಒಂದು ಸಾಂಸ್ಕೃತಿಕ ಇಣುಕುನೋಟ
ಮನುಷ್ಯನ ದೇಹ ಬಲಯುತವಾಗಿರುವುದು, ಜಟ್ಟಿಯಾಗಿರುವುದೇ ಒಂದ ಕಾಲದಲ್ಲಿ ಮುಖ್ಯವಾಗಿತ್ತು. ಪಾಳೆಯಗಾರರು ಆಳಿದ ಚಿತ್ರದುರ್ಗದ ಜನಜೀವನದಲ್ಲಿ ಗರಡಿಗಳ ಮಹತ್ವವನ್ನು ಕಡೆಗಣಿಸುವಂತಿಲ್ಲ. ಜಗತ್ತಿನಾದ್ಯಂತ ಇತಿಹಾಸದಲ್ಲಿ, ಪೌರಾಣಿಕ ಕಥಾಲೋಕಗಳಲ್ಲಿ ಅನೇಕ ವೀರರು ಜಟ್ಟಿಗಳಾಗಿ, ಮಲ್ಲಯುದ್ಧದಲ್ಲಿ ತಮ್ಮ ಪ್ರಾವೀಣ್ಯತೆ ಮೆರೆದ ಸಂಗತಿಗಳನ್ನು ನಾವು ತಿಳಿದಿದ್ದೇವೆ. ‘ಭರ್ಜಿಯನ್ನು ಚುಚ್ಚಿದರೆ ಭರ್ಜಿಯೇ ಬಾಗುತ್ತದೆ’ ಎನ್ನುವಂಥ ದೇಹದಾರ್ಢ್ಯ ಹೊಂದಿದ್ದ ಮಲ್ಲರು ರಾಜನ ಬೆಂಗಾವಲಿನವರಾಗಿರುತ್ತಿದ್ದರು. ಅವರು ಅದಕ್ಕಾಗಿ ಸಂಪಾದಿಸಿದ ಕೀರ್ತಿ ಗೌರವಗಳನ್ನು ನೋಡಿದರೆ ಮತ್ಸರ ಹುಟ್ಟುತ್ತದೆ. ಅನಾರೋಗ್ಯದಿಂದ ಪಾರಾದ ಸುಂದರ ಹಾಗೂ ಗುಟ್ಟಿಮುಟ್ಟಾದ ದೇಹವುಳ್ಳ ವೀರರನ್ನು ತಯಾರು ಮಾಡಿ ಕಳುಹಿಸುತ್ತಿದ್ದ ಗರಡಿಗಳ ಬಗ್ಗೆ ಸಮಾಜದಲ್ಲಿ ಗೌರವ-ಆದರ ಸ್ಥಾನಮಾನಗಳು ಇದ್ದುದು ಸಹಜ ಎನಿಸುತ್ತದೆ.
ಪಾಳೆಗಾರರ ಕಾಲದ ಅನೇಕ ಜಟ್ಟಿಗಳು ಕುಸ್ತಿಯಲ್ಲಿ ಪರಿಣತರಾಗಿದ್ದವಂತೆ, ವೈದ್ಯಕೀಯದಲ್ಲೂ ಪರಿಣತಿ ಹೊಂದಿದ್ದರಂತೆ. ತುಂಡಾಗಿದ್ದ ಕೈ, ಕಾಲುಗಳನ್ನು ತಕ್ಷಣ ಕೂಡಿಸುವ, ವಾಸಿ ಮಾಡುವ ಕ್ರಮಗಳು, ಔಷಧಗಳು ಅವರಿಗೆ ಗೊತ್ತಿದ್ದವು. ಅವರು ಕಲಾವಿದರೂ ಆಗಿದ್ದಂತೆ ಕಾಣುತ್ತದೆ. ಆನೆಗೊಂದಿಯಿಂದ ವೆಂಕಟಗಿರಿ ಜಟ್ಟಿ ಎಂಬುವವನು ಬಂದು ಭರಮಣ್ಣನಾಯಕನಿಗೆ ಮತ್ತು ಮುಂದಿನ ಪಾಳೆಯರಾಗಿರರಿಗೆ ವಿಜಯನಗರದ ಅರಸರ ರೀತಿಯಲ್ಲಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದನಂತೆ. ಇಲ್ಲಿನ ಹಗಲು ದೀವಟಿಗೆ ಗರಡಿಯ ಗೊಂಡೆಯ ಸಂಕೇತ, ದೊಡ್ಡ ಗರಡಿಯ ಕಲಿ ಸಂಕೇತ, ಸಣ್ಣಗರಡಿಯ ತುರಾ ಸಂಕೇತಗಳನ್ನು ಭರಮಣ್ಣನಾಯಕನ ಕಿರೀಟದಲ್ಲಿ ಅಳವಡಿಸಿಲಾಗಿತ್ತಂತೆ. ಅಂದರೆ ಭರಮಣ್ಣ ನಾಯಕನು ಮೂರೂ ಗರಡಿಗಳ ಒಡೆಯ ಎಂಬುದನ್ನು ಸಾರುವಂತೆ ಆ ಕಿರೀಟ ಇತ್ತಂತೆ. ಇಲ್ಲಿನ ಕೊನೆಯ ಪಾಳೆಯಗಾರನಾದ ಮದಕರಿನಾಯಕ ಜಾನಕಲ್ಲಿನಿಂದ ಬರುವಾಗ ರಮಣರಾಮಜಟ್ಟಿ ಎನ್ನುವನನ್ನು ತನ್ನ ಜೊತೆಗೆ ಚಿತ್ರದುರ್ಗಕ್ಕೆ ಕರೆತಂದನಂತೆ. ಹೇಮಾಜಟ್ಟಿ ಎಂಬಾತನ ವಜ್ರಋಷಿ, ಕತ್ತಿವರಸೆಗಳಲ್ಲಿ ಪ್ರವೀಣನಾಗಿದ್ದನಂತೆ. ಈತ ಎರಡು ಕೈಗಳಲ್ಲಿ ಕತ್ತಿ ತಿರುಗಿಸುತ್ತ, ಇಪ್ಪತ್ತು ಜನ ನಿಂಬೆ ಹಣ್ಣುಗಳನ್ನು ಆತನ ಮೇಲೆ ಎಸೆದರೂ ಅವು ತುಂಡಾಗಿ ಬೀಳುವಂಥ ಕೌಶಲವ್ಯವನ್ನು ಸಂಪಾದಿಸಿ, ಅಂದಿನ ಜಿಲ್ಲಾಧಿಕಾರಿಗಳ ಮುಂದೆ ಪ್ರದರ್ಶಿಸಿ ಇನಾಂ ಪಡೆದಿದ್ದನಂತೆ. ಇಂಥ ಚಮತ್ಕಾರವನ್ನು ಈಗ ನಾವು ಆಕಸ್ಮಾತ್ ನೋಡಬೇಕೆಂದರೆ ಪ್ರಖ್ಯಾತ ಐಂದ್ರಜಾಲಿಕ ಪಿ.ಸಿ.ಸರ್ಕಾರ್ ನೆನಪಾಗುತ್ತಾನೆಯೇ ಹೊರತು ಜಟ್ಟಿಗಳಲ್ಲ! ಆದರೆ ಇತಿಹಾಸದಲ್ಲಿ ಜನ ಜೀವನದಲ್ಲಿ, ಗರಡಿಮಲ್ಲರ ಜೀವನದಲ್ಲಿ ಇಂಥ ರಂಜನೆಯೂ ಸಹಜ ವಿಷಯವಾಗಿದ್ದವು. ಹಿಂದಿನ ಕಾಲದಲ್ಲಿ ಹೀಗೆ ಪ್ರಖ್ಯಾತರಾಗಿದ್ದ ಜಟ್ಟಿಗಳು ಬರುಬರುತ್ತ ಈಗ ಕಾಣದಂತಾಗಿದ್ದಾರೆ.
ಇಂಥವರ ಕಾಲದಲ್ಲಿ ಚಿತ್ರದುರ್ಗದಲ್ಲಿ ನಿರ್ಮಾಣವಾದ ಗರಡಿಗಳು ಇಂದು ಕಣ್ಮರೆಯಾಗುತ್ತಿವೆ. ಇದ್ದ ಹಾಗೂ ಸದ್ಯ ಉಳಿದಿರುವ ಚಿತ್ರದುರ್ಗದ ಗರಡಿಗಳ ಮೇಲೆ ಒಂದು ನೋಟ..
ಪೆರೆನಾಕನ ಮಗ ಗೋಪೆನಾಕ ಆಯಗಳ ಗರಡಿ:
ಚಿತ್ರದುರ್ಗದ ಕೋಟೆ ಕೊತ್ತಲಗಳ ಪ್ರದೇಶದಲ್ಲಿ ಗಣೇಶನ ಗುಡಿಯ ಪಕ್ಕದಲ್ಲಿರುವ ಕಲ್ಲಿನ ಮನೆಯೊಂದನ್ನು ತೋರಿಸಿ ಅದನ್ನು ಗರಡಿ ಎನ್ನುತ್ತಾರೆ. ರಹಸ್ಯವಾಗಿ ಜಟ್ಟಿಗಳು ಪಟ್ಟು, ವರಸೆಗಳನ್ನು ಕಲಿಸಲು, ಸಣ್ಣ ಬಾಗಿಲು ಗರಡಿಗೆ ಇರುತ್ತಿತ್ತು ಎನ್ನುವ ಕಾರಣದಿಂದ ನೋಡಿದರೆ, ಇದು ಗರಡಿಯಂತೆ ಕಾಣುತ್ತದೆ. ಆದರೆ ಇದು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಿದ ಕಣಜ ಎಂದು ಇತಿಹಾಸ ಸಂಶೋಧಕರ ಪ್ರೆ.ಬಿ. ರಾಜಶೇಖರಪ್ಪ ಹೇಳುತ್ತಾರೆ. ಅವರು ಮುಂದುವರಿದು ಏಕನಾಥೇಶ್ವರಿ ದೇವಾಲಯದ ಹಿಂಭಾಗಕ್ಕೆ, ವಾಯುವ್ಯ ದಿಕ್ಕಿನಲ್ಲಿರುವ ಗವಿಯೊಂದು ಗರಡಿಯಾಗಿದ್ದುದನ್ನೂ ಅದರ ಶಿಲಾಲೇಖವನ್ನೂ ಕುರಿತು ಹೇಳುತ್ತಾರೆ. ಈ ಗರಡಿಯನ್ನು ಈಗ ಕೆಲವರು ಕರೆಯುವುದು ‘ಪೀಕನಾಯಕನ ಗರಡಿ’ ಎಂದು. ಆದರೆ ಶಿಲಾಲೇಖದಲ್ಲಿ ಉಲ್ಲೇಖಿತವಾಗಿರುವಂತೆ ಇದು ‘ಪೆರೆನಾಕನ ಮಗ ಗೋಪೆನಾಕ ಆಯ(ಅಯ್ಯಗಳ)ಗರಡಿ’. ಇದು ವಿಜಯನಗರ ಸಾಮ್ರಾಜ್ಯದ ಮಧ್ಯಕಾಲದ ಅಂದರೆ ಕ್ರಿ.ಶ. ೧೫ನೇ ಶತಮಾನದ ಪೂರ್ವಾರ್ಧದಲ್ಲಿ ಆದದ್ದಿರಬಹುದೆಂದು ಅವರು ತಿಳಿಸುತ್ತಾರೆ. ಅವರ ಪ್ರಕಾರ ಈಗ ‘ಅರಮನೆಯ ಬಯಲು’ ಎಂದು ಗುರುತಿಸುವ ಪ್ರದೇಶದಲ್ಲಿಯೂ ಕೆಲವು ಗರಡಿಗಳಿದ್ದಿರಬಹುದು. ಈ ಗರಡಿಗಳಲ್ಲಿ ಅಂಗ ಸಾಧನೆ ನಡೆಯುತ್ತಿತ್ತು. ಇಲ್ಲಿ ಜಟ್ಟಿಗಳು ತಯಾರಾಗುತ್ತಿದ್ದರು ಎಂದು ಊಹಿಸಬಹುದೇ ಹೊರತು ಹೆಚ್ಚಿನ ಸಂಗತಿ ತಿಳಿಯುವುದಿಲ್ಲ.
ದೊಡ್ಡ ಗರಡಿ:
ಇದು ಕರುವಿನ ಕಟ್ಟೆಯಲ್ಲಿರುವ ಪಾದದೇವರ ಹಳೆಯ ತಿಪ್ಪಿನಗಟ್ಟಮ್ಮನ ಗುಡಿಯಿಂದ ಕೊಂಚ ಮೇಲಕ್ಕೆ ಹೋದರೆ ಸಿಕ್ಕುತ್ತದೆ. ದೊಡ್ಡ ಗರಡಿಯ ಇರವನ್ನು ದೂರಕ್ಕೇ ಸಾರುವಂತೆ ದೊಡ್ಡ ಅರಳಿಯ ಮರವೊಂದು ಗರಡಿಯ ಪ್ರಾಕಾರದಲ್ಲಿ ಬೆಳೆದು ನಿಂತಿದೆ. ಇದು ಸಾಕಷ್ಟು ಪ್ರಾಚೀನ ಪ್ರಖ್ಯಾತ ಗರಡಿಯಾದರೂ ಎಷ್ಟು ಪ್ರಾಚೀನ ಎಂಬುದು ತಿಳಿದು ಬಂದಿಲ್ಲ. ಸಾಮಾಜಿಕವಾಗಿ ಪ್ರತಿಷ್ಠೆಯ ಸ್ಥಾನ ಪಡೆದುಕೊಂಡಿರುವ ಚಿತ್ರದುರ್ಗಕ್ಕೆ, ಹಾಗೇ ನಾಡಿಗೇ ಲಾಡರ ನಂಜಪ್ಪನಂಥ ಒಬ್ಬ ಪೈಲ್ವಾನನನ್ನು ಕೊಟ್ಟ ಕೀರ್ತಿ ಇರುವ ಈ ದೊಡ್ಡ ಗರಡಿಯು ಇತಿಹಾಸಕ್ಕೆ ಸೇರಿಸಬೇಕಾದಷ್ಟು ರಸವತ್ತಾದ ಶೌರ್‍ಯ, ಧೈರ್ಯದ ಕಥೆಗಳನ್ನು ಹೇರಳವಾಗಿ ಹೊಂದಿದೆ.
ಸಣ್ಣ ಗರಡಿ:
ಇದು ಕೂಡಿಲಿ ಶೃಂಗೇರಿ ಮಠಕ್ಕೆ ಸಮೀಪದಲ್ಲಿ ಇದೆ. ಸುಮಾರು ಅರವತ್ತೈದು ಎಪ್ಪತ್ತು ವರ್ಷಗಳ ಹಿಂದೆ ಅಂದರೆ ೧೯೨೬ರಲ್ಲಿ ಸ್ಥಾಪನೆಯಾಗಿದೆ ಎನ್ನಲಾಗಿದೆ. ಆದರೆ ಇದು ಸ್ಥಾಪನೆಯಲ್ಲಿ ಜೀರ್ಣೋದ್ಧಾರ. ಕುರಿ ತಿಮ್ಮಜ್ಜ. ಉಪ್ಪಾರ ಮಲ್ಲಜ್ಜ, ತಿಪ್ಪೇರುದ್ರಪ್ಪ, ಸಾಬ್ಜಾನ್ ಸಾಬ್, ಖಾಸೀಮ್ ಸಾಬ್ ಮೊದಲಾದವರು ಇದರ ಸ್ಥಾಪನೆ ಅಥವಾ ಪುನರುತ್ಧಾನಕ್ಕೆ ಮುಂದಾಗಿ ದುಡಿದರೆಂದು ಹೇಳುತ್ತಾರೆ. ಚಿತ್ರದುರ್ಗದ ಕಾಶಿ ಮನೆತನದ ಶೆಟ್ಟರು ಕೊಟ್ಟ ಶ್ರೀಕೃಷ್ಣ ವಿಗ್ರಹದ ಬಗ್ಗೆ ಈ ಗರಡಿಯ ಜನಕ್ಕೆ ಎಲ್ಲಿಲ್ಲದ ಅಭಿಮಾನ.
ಬುರುಜಿನ ಹಟ್ಟಿಯ ಗರಡಿ:
ಬುರುಜಿನ ಹಟ್ಟಿಯಲ್ಲಿ ಮುಖ್ಯ ಸರ್ಕಲ್ಲಿನಿಂದ ದಕ್ಷಿಣಕ್ಕೆ ಕೊಂಚ ದೂರ ಹೋದರೆ ಇನ್ನೊಂದು ಸರ್ಕಲ್ ಬಳಿ ಈ ಗರಡಿ ಇದೆ. ಹಿರಿಯ ಉಸ್ತಾದ್ ಗಿಡಿದಿಮ್ಮಪ್ಪನವರ ಕೈಕೆಳಗೆ ಅನೇಕ ಕುಸ್ತಿಪಟುಗಳನ್ನು ತಯಾರಿಸಿದ ಈ ಗರಡಿಯೂ ಪುರಾತನ ಗರಡಿಗಳಲ್ಲೊಂದು.
ಹಗಲು ದೀವಟಿಗೆ ಗರಡಿ:
ಹಗಲು ದೀವಟಿಗೆ ಗರಡಿಯು ಬುರುಜಿನ ಹಟ್ಟಿಯ ಶ್ರೀರಾಘವೇಂದ್ರ ಮಠದಿಂದ ಆಚೆಗೆ ೨೦-೩೦ ಹೆಜ್ಜೆಗಳ ದೂರದಲ್ಲಿದೆ. ಈ ಗರಡಿಯು ಕೆಲ ಕಾಲದ ಹಿಂದೆ ಕುಸಿದಿತ್ತು. ಈಚೆಗೆ ಅಸ್‌ಬೆಸ್ಟಾಸ್ ಹೊದಿಕೆಯಿಂದ ನವೀಕರಣಗೊಂಡಿದೆ. ಈ ಗರಡಿಯ ಮೂಲವು ಸರಿಯಾಗಿ ತಿಳಿದು ಬಂದಿಲ್ಲ. ‘ಹಗಲು ದೀವಟಿಗೆ ಗರಡಿ’ ಎಂದು ಯಾಕೆ ಕರೆಯುತ್ತಾರೆ ಎಂದರೆ ಒಬ್ಬರು ತಿಳಿಸುವಂತೆ ಈ ಗರಡಿಯು ಹಗಲಿನಲ್ಲಿ ಮಾತ್ರ ತರೆಯುತ್ತಿದ್ದಿರಬೇಕು. ಅದಕ್ಕೆ, ಹಾಗೆಯೇ ಹಗಲಿನಲ್ಲಿ ದೀವಟಿಗೆ ಹಿಡಿದು ಮೆರವಣಿಗೆ ಹೋಗುವ ವಿಶೇಷ ಹಕ್ಕು ಮತ್ತು ಮಾನ್ಯತೆ ಇದಕ್ಕಿತ್ತು. ಅದು ಇದರ ಹೆಚ್ಚಳ ಎನ್ನುವವರೂ ಇದ್ದಾರೆ. ನೂರಾ ಹತ್ತನೆ ವಯಸ್ಸಿನಲ್ಲಿ ತೀರಿಕೊಂಡ ಖಾಸಿಂಸಾಬರು ಉಸ್ತಾದರಾಗಿ ಅನೇಕ ಪೈಲ್ವಾನರನ್ನು ಕೊಟ್ಟ ಕೀರ್ತಿ ಈ ಗರಡಿಯದು. ಪೈಲ್ವಾನ್ ಸಂಗಪ್ಪ, ಚಮ್ಮಿ ಬೋರಯ್ಯ, ಅಬ್ದುಲ್ ಖಾದರ್ ಮೊದಲಾದವರು ಇಲ್ಲಿನ ಹೆಸರಿಸಬೇಕಾದ ಪೈಲ್ವಾನರು.
(ಇನ್ನೂ ಇದೆ...)

Sunday, January 20, 2008

ಹೊಳಲ್ಕೆರೆಯ ತೂಗುತಲೆ ಗಣೇಶ- ದೇವಸ್ಥಾನ ಕಟ್ಟುವ ಮೊದಲು !



ಹೊಳಲ್ಕೆರೆ ತೂಗ್ತಲೆ ಗಣೇಶ" ನ ಚಿತ್ರ ಮನದಲ್ಲಿ ಮೂಡುತ್ತಿದ್ದಂತೆಯೇ, ಚಿತ್ರದುರ್ಗದ ಕಾಮಗೇತಿ ವಂಶದ ಪಾಳೆಯಗಾರರು ನಮ್ಮ ಮನಸ್ಸಿನಲ್ಲಿ ಹೊರಹೊಮ್ಮುತ್ತಾರೆ. ಅವರು ಹೊಳಲ್ಕೆರೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿದ ದಿನಗಳಲ್ಲಿ ಇದನ್ನು ಕಟ್ಟಿಸಿ ಕೃತಾರ್ಥರಾಗಿರಬಹುದು. ಎಲ್ಲಾ ಪಾಳೆಯಗಾರರೂ ದೈವಭಕ್ತರಾಗಿದ್ದರು. ಪ್ರಜೆಗಳ ಹಿತಾಸಕ್ತಿಯಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರೆಲ್ಲಾ ಗಂಡುಗಲಿಗಳು. ಆ ಸಂತತಿಯಲ್ಲಿ ಬಂದ ಹಲವಾರು ಮದಕರಿನಾಯಕರುಗಳ ಹೆಸರುಗಳು ಇದನ್ನು ಖಚಿತಪಡಿಸುತ್ತವೆ.
ಮೇಲಿನ ಚಿತ್ರ , ನಮ್ಮ ಮನೆಯ ಫೋಟೊ ಆಲ್ಬಮ್ ನಿಂದ ಪ್ರಸ್ತುತ ಪಡಿಸಿದ್ದು. ಆಗಿನ ದಿನಗಳಲ್ಲಿ ಗಣೇಶ ಬಟ್ಟ ಬಯಲಿನಲ್ಲಿ ಸರ್ವರಿಗೂ ದರ್ಶನಕೊಟ್ಟು ನಮ್ಮ ಮನೋಕಾಮನೆಗಳನ್ನು ಈಡೇರಿಸುವ ದೇವನಾಗಿದ್ದ. ಈಗಲೂ ಮತ್ತು ಮುಂದಿನ ಅನಂತಾನಂತ ವರ್ಷಗಳಲ್ಲೂ ಅವನ ಕೃಪಾದೃಷ್ಟಿ ನಮ್ಮೆಲ್ಲರ ಮೇಲೆ ಇರುವುದರಲ್ಲಿ ಸಂಶಯವಿಲ್ಲ. ಗಣೇಶನಿಗೆ ಉದ್ದವಾದ ಜಡೆಯಿದೆ. ಅದಕ್ಕೆ ಭಕ್ತಾದಿಗಳು ಬೆಣ್ಣೆಹಚ್ಚಿ, ಪ್ರಸಾದವನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ. ಡಾ. ಬಾತ್ರ ರವರ ಭಾರಿಬಿಲ್ಲು ತೆತ್ತು ಬುದ್ಧಿಕಲಿತವರಿಗೆ, ಗಣೇಶನ ಸನ್ನಿಧಿ ಮನಸ್ಸಿಗೆ ಮುದನೀಡುತ್ತದೆ. ನಂಬಿಕೆ, ಭಕ್ತಿ, ಶ್ರದ್ಧೆ ಎಲ್ಲಾ ಒಳಿತಿಗೂ ಮೂಲ ಮಂತ್ರ. ಪ್ರಯತ್ನಿಸಬಹುದು. ಆ ಮಂಗಳಮೂರ್ತಿ ಗಣರಾಯನ ಅನುಗ್ರಹ ನಿಮ್ಮ ಮೇಲೆ ಇರಲಿ.
ಈಗ ಸುಮಾರು ೧೦ ವರ್ಷಗಳಿಂದೀಚೆಗೆ ಭಕ್ತರ ಮನೋಕಾಮನೆಯ ಮೇರೆಗೆ ಒಂದು ಗುಡಿಯನ್ನು ಕಟ್ಟಿದ್ದಾರೆ. ಇದಕ್ಕೆ ಬೀಗ ಇರುವುದಿಲ್ಲ. ದಿನವಿಡೀ ಅರ್ಚಕರು ಅಲ್ಲಿರುತ್ತಾರೆ. ಭಕ್ತರಿಗೆ ಹಣ್ಣು ಕಾಯಿ ಮಾಡಿಸಲು ಅನುವುಮಾಡಿಕೊಡುತ್ತಾರೆ.
ಪೌಳಿ ನಾಲ್ಕುಕಡೆಗೂ ಇದ್ದು, ಅಲ್ಲಿ ಪಕ್ಕದಲ್ಲೇ ಹಾಕಿರುವ ಕಲ್ಲು ಮಂಚಗಳ ಮೇಲೆ ಹುಣಸೇಮರದ ತಂಪು ಛಾಯೆಯಡಿಯಲ್ಲಿ ಬಂದವರು ದಣಿವಾರಿಸಿಕೊಳ್ಳಬಹುದು. ಈಗ ಭಕ್ತಾದಿಗಳಿಗಾಗಿ ಗಣಪತಿ ದೇವರ ಸನ್ನಿಧಾನದಲ್ಲಿ ಮದುವೆ ಮಾಡಲು ಒಂದು ಛತ್ರವನ್ನೂ ಕಟ್ಟಿಸುತ್ತಿದ್ದಾರೆ. ಅದು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಈಗ ನಮ್ಮ ಕಾಲದ ಬಯಲು ಗಣಪತಿ ಹೋಗಿ, ಗಣಪತಿ ದೇಗುಲ ಎಲ್ಲರನ್ನೂ ಆಕರ್ಶಿಸುತ್ತಿದೆ. ಬನ್ನಿ, ಗಣೇಶನ ಅನುಗ್ರಹಕ್ಕೆ ಪಾತ್ರರಾಗಿ. ನಿಮಗೆ ಮಂಗಳವಾಗಲಿ. ನಮ್ಮೆಲ್ಲರ, ನಿಮ್ಮೆಲ್ಲರ ಇಷ್ಟ ಕಾಮನೆಗಳು ನೆರವೇರಲಿ.
(ಇದು ಮುಂಬೈನಲ್ಲಿ ನೆಲೆಸಿರುವ ವೆಂಕಟೇಶ್ ಅವರು ಸಂಪದ.ನೆಟ್ ನ ತಮ್ಮ ಬ್ಲಾಗಿಗೆ ಬರೆದ ಲೇಖನ. ನಿಮ್ಮ ಓದಿದೆ..)

Thursday, January 10, 2008

ವರ್ಷದ ಮೊದಲ ಕೃತಿ ಬಿಡುಗಡೆಯಾಗುತ್ತಿದೆ....



ಪವಿತ್ರ ಅವರ ಚೊಚ್ಚಲ ಕವನ ಸಂಕಲನ.


ಜೋಗಿ ಅವರ ಕಾದಂಬರಿ

ವಿತ್ರ ಪ್ರಿಯಭಾಷಿಣಿ ಅವರ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವರ್ತಮಾನವನ್ನು ತಂದಿದ್ದೇವೆ. ಬಹುಶಃ ಇದು ದುರ್ಗದಲ್ಲಿ ಬಿಡುಗಡೆಯಾಗುತ್ತಿರುವ ಈ ವರ್ಷದ ಮೊದಲ ಕೃತಿ. ಉಪನ್ಯಾಸಕಿಯಾಗಿ ಕೆಲ ಕಾಲ ಕೆಲಸ ಮಾಡಿ, ಸದ್ಯ ತುಮಕೂರು ಸಮೀಪದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಪವಿತ್ರ ಅವರ ಚೊಚ್ಚಲ ಮಗವಿನ ಸಂತೋಷದಲ್ಲಿರುವಾಗಲೇ ಮತ್ತೊಂದು ಸಂತೋಷ ಅವರ ಮಡಿಲಿನಲ್ಲಿದೆ. ಯಾಕೆಂದರೆ ಇದು ಅವರ ಚೊಚ್ಚಲ ಕೃತಿ- ‘ನಕ್ಷತ್ರಕೆ ಪಾತಿ’.
ಆರ್ ಪವಿತ್ರ ಪ್ರಿಯ ಭಾಷಿಣಿ ಚಿತ್ರದುರ್ಗದ ಪ್ರಮುಖ ಕತೆಗಾರರಾದ ಟಿ.ಆರ್.ರಾಧಾಕೃಷ್ಣ ಅವರ ದ್ವಿತೀಯ ಪುತ್ರಿ. ತಾಯಿ ಸಾವಿತ್ರಿ ನಿವೃತ್ತ ಅಧ್ಯಾಪಕಿ. ಪವಿತ್ರ ಅವರ ಹಿರಿಯ ಸಹೋದರಿ ತಾರಿಣಿ ಶುಭದಾಯಿನಿ ಕೂಡ ಕಾವ್ಯದೊಂದಿಗೆ ನಂಟುಳ್ಳವರು. ಇತ್ತೀಚೆಗೆ ಅವರು ‘ತೋಡಿ ರಾಗ’ ಕವನ ಸಂಕಲನ ಪ್ರಕಟಿಸಿದ್ದಾರೆ. ಸಾಹಿತ್ಯಿಕ ವಾತಾವರಣವಿರುವ ಕುಟುಂಬದಲ್ಲಿ ಬೆಳೆದವರು ಪವಿತ್ರ ಪ್ರಿಯಭಾಷಿಣಿ. ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿ, ಬಿ.ಇಡಿ ಮುಗಿಸಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಕಾವ್ಯವನ್ನು ಕೂಸಿನಂತೆ ಮಡಿಲಿನಲ್ಲಿಟ್ಟುಕೊಂಡು, ತಟ್ಟಿ, ತಡವಿ ತಮ್ಮದಾಗಿಸಿಕೊಳ್ಳುತ್ತಾ ಬಂದಿರುವವರು ಪವಿತ್ರ. ಮನೆಯ ಸಾಹಿತ್ಯಕ ವಾತಾವರಣ, ಅವರ ಅಧ್ಯಯನ ಎಲ್ಲವೂ ಅವರನ್ನು ಕಾವ್ಯ ವ್ಯಾಮೋಹಿಯನ್ನಾಗಿಸಿದೆ.
ಇವರ ಕಾವ್ಯದಲ್ಲಿ ಯಾವುದೇ ಇಸಮ್ಮಿನ ಪ್ರಭಾವ ಕಾಣದು. ಇದೇ ಮಾತನ್ನು ಬೆನ್ನುಡಿ ಬರೆದಿರುವ ಲೋಕೇಶ್ ಅಗಸನಕಟ್ಟೆಯವರು ಹೇಳಿದ್ದಾರೆ. ಇಲ್ಲಿನ ಪ್ರತಿ ಸಾಲು ಚಿತ್ರವನ್ನು ಕಟ್ಟಿಕೊಡುವಂಥವು.
ಈಗಾಗಲೇ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಹತ್ತಾರು ಕವನಗಳು ಪ್ರಕಟವಾಗಿವೆ. ಮೆಚ್ಚುಗೆ ಪಡೆದಿವೆ. ಹಾಗೆ ಮೆಚ್ಚುಗೆಗಳಿಸಿದ ಕವಿತೆಗಳು ಸೇರಿದಂತೆ ಒಟ್ಟು ೩೨ ಕವನಗಳಿರುವ ನಕ್ಷತ್ರಕೆ ಪಾತಿ ಜನವರಿ ೨೬ರಂದು ಬಿಡುಗಡೆಯಾಗುತ್ತಿದೆ.
’ ಅಂದು ಕಥೆಗಾರ ಜೋಗಿ ಕೃತಿ ಬಿಡುಗಡೆ ಮಾಡುತ್ತಿದ್ದಾರೆ. ಪವಿತ್ರ ಅವರ ಮಿತ್ರ ಶಶಿಸಂಪಳ್ಳಿ ಕೂಡ ಭಾಗಿಯಾಗಲಿದ್ದಾರೆ.
ಪವಿತ್ರ ಅವರ ಬರಲಿರುವ ಕವನ ಸಂಕಲನದ ಆಯ್ದ ಎರಡು ಪದ್ಯಗಳನ್ನು ಇಲ್ಲಿ ನಿಮಗಾಗಿ ಇಟ್ಟಿದ್ದೇವೆ. ಅದಕ್ಕೂ ಮೊದಲು ಕೃತಿ ಬಿಡುಗಡೆ ಮಾಡುತ್ತಿರುವ ಜೋಗಿ ಕುರಿತು ನಾಲ್ಕು ಮಾತು..
ಜೋಗಿ ಕನ್ನಡ ಪ್ರಭದಲ್ಲಿ ಅಸಿಸ್ಟೆಂಟ್ ಫೀಚರ್ ಎಡಿಟರ್ ಕೆಲಸ. ಅವರು ಅಪ್ಪಟ ಕಾವ್ಯ ಪ್ರೇಮಿ. ಕಾವ್ಯವನ್ನು ಧ್ಯಾನಿಸುವವರು. ಹೊಸ ತಲೆಮಾರಿನ ಕವಿಗಳನ್ನು ಯಾವಾಗಲೂ ಕೆಣಕುತ್ತಾ, ಅವರ ಕಾವ್ಯಪ್ರಿಯತೆಯನ್ನು, ಸೂಕ್ಷ್ಮತೆಯನ್ನು ತೀವ್ರಗೊಳಿಸುತ್ತಿರುವವರು.
ಬರೆಯದೇ ಬದುಕುವುದಿಲ್ಲ ಎನ್ನುವ ಹಾಗೆ ಸದಾ ಬರೆಯುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅಂಕಣ ಸಂಗ್ರಹ, ಒಂದು ಕಥಾ ಸಂಕಲವನ್ನು ಹೊರತಂದಿರುವ ಜೋಗಿ, ಮಕರ ಸಂಕ್ರಾಂತಿಯಂದು ಮೊದಲ ಕಾದಂಬರಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೆಸರು ‘ನದಿಯ ನೆನಪಿನ ಹಂಗು.’

ನಕ್ಷತ್ರಕೆ ಪಾತಿ
‘ಶಿವನು ಭಿಕ್ಷಕೆ
ಬಂದ-ನೀಡು ಬಾರೆ ತಂಗಿ
ಇವನಂಥ ಚೆಲ್ವರಿಲ್ಲ
ನೋಡು ಬಾರೆ’

ಈ ಮಣ್ಣ ಹುಡಿಯ ಶಿವನ
ನಾಲಿಗೆ ತುದಿ ಮೇಲಿವೆ-
ವಿರಹ ಒಳಿತು ಕೆಡುಕು
ನೆಮ್ಮದಿ ಪುರಾಣ ಮಸಣ
ನರರಂತೆ ಬುವಿಯ ಎಲ್ಲ
ಸೌಭಾಗ್ಯ ಪಡೆದ ದೇವನ
ಒಳಕಥೆಗಳ ನಾಕಾರು ತತ್ತ್ವ ಪದಗಳು.

ಇವನ ದಿಟ್ಟಿಗೆ ನಿಲುಕಲಾರರು:
ನವರತ್ನ ನನ ಮನೆಯ
ರಾಗಿಯ ಕಾಳು
ಮುತ್ತು ನನ ಮನೆಯ
ಜೋಳದ ಕಾಳು
ಎನುವ ಹೇಮಕೂಟದ ಹಂಪಾದೇವಿ
ಮೊರ ಮೊರ ಅಕ್ಕಿ ಸುರುವಲು
ಕದದ ಹಿಂದೆ ಇಣುಕುವ
ಕಂಕಣವಿಲ್ಲದ ಕನ್ಯಾಮಣಿ.

ಸುಂದರಾಂಗನ ಪಾದ ಒಲಿವ
ಮಟಮಟ ಮಧ್ಯಾಹ್ನದ ಹಾದಿಯಲಿ
ಕೊಳೆತ ಹೂಕೋಸು
ಸೌತೇಕಾಯಿ ರಾಶಿ
ಸೋನೆ ಅವರೆ ಮೆಲ್ಲುವ ಹಸುಗಳು
ಬೈಕು ಗಾಡಿಗಳ ಚಕ್ರದ ಅಡಿ
ಕಲ್ಲಂಗಡಿ ಸಿಪ್ಪೆ, ಸೋರೆಕಾಯಿ,
ಮಣಿಸರ, ವಸ್ತ್ರ ಮಂಗಳ ಗೌರಿ ಬಳೆಯ
ಸಾಲು ಗೂಡಂಗಡಿಗಳು

ಕಲೆಕ್ಷನ್ ಏನಾದರೇನಂತೆ?
ಚೆಲ್ಲಾಪಿಲ್ಲಿ ಸೊಪ್ಪು ಸೆದೆ ನಡುವೆ
ಉಸ್ಸೆನುವ ಸೊಲ್ಲು, ಅದ ಮೀರಿಸಿ
ಕವಯತ್ರಿಯರ ನವಿಲುಗರಿಯಂತೆ ನಗುವ
ಬಟ್ಟಲು ಕಂಗಳಿಗೇನು ಬರವಿಲ್ಲ
ಆಸಾಮಿ, ಒಂಥಾರ ಸ್ಥಿತಪ್ರಜ್ಞ!
ಜನಜಂಗುಳಿಯಲ್ಲಿ ಕಂಡೂ ಕಾಣದಾತ...

ಅಂಜಲೀ ಬದ್ಧ
ನಿತ್ರಾಣ...
ಮೂಟೆಕಟ್ಟಿ ಸುರುಟಿ ಸುರುಳಿ ಸುತ್ತಿ
ಕುಸಿದಿತ್ತು ಗೌತಮನ ತನುವ ತಡಿಕೆ
ಕಣ್ ಕತ್ತಲಿಟ್ಟು ತಟರಿಸಿ
ದೇಹ ದಂಡನೆ ಪರಂಪರೆಗೆ
ಚೀಂವ್‌ಗುಟ್ಟಿತ್ತು ಜೀವ ಇಲಿಯಂತೆ

ನಾಯಿಯಂತ ಬಡಕಲು ಶರೀರ
ಚುಂಗು ಹಿಡಿದ ಅಂಗಿ ತೂರಿದ ಗಾಳಿ
ಚುಚ್ಚಿತ್ತು ಉರುಟು ಮಣ್ಣು
ದುಮುಗುಟ್ಟಿತ್ತು ಹುಯ್ಯುವ ಮೌನ.
ಹೆಂಡತಿ-ಮಗುವ ಮರುಭೂಮಿ-ಬದುಕತ್ತ
ಹೆಜ್ಜೆಯ ಇಡಿಸಿದ ತಾನೆ
ಜೀವ-ಧ್ಯಾನ-ಪ್ರೇಮ-ಮನುಷ್ಯತ್ವ
ತಿದಿ ಊದುವುದು ಹೇಗೆ?

ಕ್ಷಣಕ್ಕೊಮ್ಮೆ ಮೀನಂತೆ ಪುಳಕ್
ಬದಲಾಗುವ ಮನ-ಧ್ಯಾಸ.
ತಡೆಯಲಾಗದಷ್ಟು ಹಸಿವೆ, ನೀರಡಿಕೆ
ತಲ್ಲಣದ ದೇಹ ಒಣಗಿ ವಾಟೆಗರಿ.
ಪಶ್ಚಾತ್ತಾಪದೊಂದು ಹನಿ
ಸಾವ ಜಿಗಣೆ ಯಾತನೆ,
ಒಂಟಿ ಕಾಯಿ ಸುಂಟರಗಾಯಿ-
ಧ್ಯಾನದ ಮಗ್ಗುಲ ಅಮರಿಕೊಂಡರೂ
ಸೋಲುತ್ತಿರುವ ಜೀವ
ಅಂತರಾತ್ಮಕೆ ಓಗೊಟ್ಟು.

ಮುಳುಗಿದ ಸೂರ್‍ಯ
ಮೇಲೆದ್ದು ಮೂಡಣದಲಿ.
ಬರೆದ ಕಾವ್ಯ ಇಳೆಯ ಪದರದಲಿ.
ಏನಾದರೂ ಆಗಲಿ,
ಸುಸ್ತು ಯಾರಪ್ಪನ ಮನೆ ಗಂಟು?

ಪಡೆದಿದ್ದು ಸುಗತನಾಗಿ

ಬೊಗಸೆ ಹಿಡಿದಿದ್ದೆ-
ಸುಜಾತೆ ಹಾಲು-ಖೀರು:
ಬಾದಾಮಿ, ಪಚ್ಚಕರ್ಪೂರ, ಕೊಬ್ಬರಿ ಪರಿಕರ-
ಆಟಕ್ಕುಂಟು ಲೆಕ್ಕಕ್ಕಿಲ್ಲ
ಮಬ್ಬಾಯ್ತು ಸಾವಿನ ಹೊಸ್ತಿಲು.

ಅಂತರಾಳದಿ ದ್ರವಿಸಿದ ಅದಮ್ಯ ಚೈತನ್ಯ
ಪೂರ್ಣಿಮೆಗೆ ಕದ ತೆರೆದಿದ್ದೆ ತಡ
ಸೆಳಕಾಯ್ತು-ನಿರ್ಲಿಪ್ತತೆ ಅನಿತ್ಯತೆ
ಜೀವಿ-ಅಕ್ಕರೆ ನಲು ಹಾರೈಕೆ
ಇದೆ ಅಲ್ಲವೇ-ಬದುಕು ಸಾವಿನ
ವಿಸ್ಮಯ ಗೂಡು..
ನಿಲುದಾಣ...

Monday, January 7, 2008

'ಇವತ್ತಿಗೂ ಹಾಂಟ್ ಮಾಡುವ ಚಿತ್ರದುರ್ಗದ ಕೋಟೆ'



“ ಚಿತ್ರದುರ್ಗದ ಕೋಟೆಗೆ ಒಂದು ಅಪೂರ್ವವಾದ ಕಲಾತ್ಮಕತೆಯಿದೆ. "
ಹೀಗನ್ನುತ್ತಾರೆ ರೇಖಾ ಪ್ರವೀಣ ಪ.ಸ.ಕುಮಾರ್. ಕನ್ನಡದ ವಿಶಿಷ್ಟ ಕಲಾವಿದರಲ್ಲಿ ಒಬ್ಬರು. ಅವರ ಕಲಾಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಚಿರಪರಿಚಿತರೋ ಅದರ ಎರಡು ಪಟ್ಟು ಸಾಹಿತ್ಯದ ಒಡನಾಟದಲ್ಲಿರುವವ ಒಡನಾಡಿ. ಇವರು ಚಿತ್ರ ಬರೆಯುತ್ತಾರೆ ಎಂಬ ಕಾರಣಕ್ಕೆ ಕಥೆ, ಕವಿತೆಗಳನ್ನು ಇವರಲ್ಲಿಗೆ ಕಳುಹಿಸುವವರು ಅನೇಕರು. ಯಾಕಂದರೆ ಕುಮಾರ್ ರೇಖೆಗಳಿಗೆ, ಅವರ ಕುಂಚಕ್ಕೆ ಅಂಥದ್ದೊಂದು ಶಕ್ತಿ ಇದೆ. ಕತೆ, ಕವಿತೆ ಓದುಗನಿಗೆ ಚಿತ್ರವನ್ನು ಕಟ್ಟಿಕೊಡದಿದ್ದರೆ, ಕುಮಾರ್ ಬರೆಯುವ ಚಿತ್ರ ಅವರಿಗೆ ಕವಿತೆಯನ್ನು, ಕತೆಯನ್ನು ಬಿಡಿಸಿ ಹೇಳುತ್ತದೆ. ಇದು ಪ.ಸ.ಕುಮಾರ್ ವೈಶಿಷ್ಟ್ಯ!
ಅವರ ಕಲಾವಂತಿಕೆ, ಕಲಾಸಾಮರ್ಥ್ಯವೇ ಚಿತ್ರದುರ್ಗದ ನಂಟು ಬೆಳೆಸಿದ್ದು.
ದುರ್ಗದ ಹುಡುಗರೊಂದಿಗೆ ಅವರು ಚಿತ್ರದುರ್ಗಕ್ಕೆ ಭೇಟಿ ನೀಡಿದ ಎರಡು ಸಂದರ್ಭಗಳನ್ನು ಹಂಚಿಕೊಂಡಿದ್ದಾರೆ.. ಓವರ್ ಟು ಪ.ಸ.ಕುಮಾರ್.....
‘ನಾನು ಮೊದಲ ಬಾರಿ ಚಿತ್ರದುರ್ಗಕ್ಕೆ ಹೋಗಿದ್ದು ೧೯೮೫-೮೬ರ ಸುಮಾರಿನಲ್ಲಿ. ನಾ’ಡಿಸೋಜ ಅವರ ಧಾರಾವಾಹಿಗೆ ಚಿತ್ರ ಬರೆಯಬೇಕಿತ್ತು. ಅದು ಕೋಟೆ ಸುತ್ತಲ ವಾತಾವರಣದಲ್ಲಿ ನಡೆಯುವಂಥದ್ದು. ಅದಕ್ಕಾಗಿ ತರಂಗದ ಸಂಪಾದಕರಾಗಿದ್ದ ಚಿರಂಜೀವಿ, ನಾನು ಮತ್ತು ಫೋಟೋಗ್ರಾಫರ್ ಒಬ್ಬರನ್ನು ಕರೆದುಕೊಂಡು ಹೋಗಿದ್ದೆವು. ಕೋಟೆಯ ಬಹುಭಾಗ ಸುತ್ತಿ. ಫೋಟೋ ತೆಗೆದುಕೊಂಡೆವು. ಆ ಕೋಟೆಯದ್ದು ಎಂಥ ವೈಶಿಷ್ಟ್ಯ ಅಂತೀರಿ. ಯಾವ ಸ್ಥಳದಲ್ಲಿ ನಿಂತು ತೆಗೆದರು ಒಳ್ಳೆಯ ಫ್ರೇಮ್ ಸಿಗುತ್ತೆ. ಒಂದೇ ಸ್ಥಳದಲ್ಲಿ ೨೦ ಶಾಟ್‌ಗಳನ್ನು ತೆಗೆಯಬಹುದು. ಹೇಗೆ ತೆಗೆದರೂ ಭಿನ್ನ. ಅಂಥ ಕಲಾತ್ಮಕತೆ ಅದಕ್ಕಿದೆ.’
ಹೀಗೆ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡು ಬಂದು ನನ್ನ ಇಲ್ಲಸ್ಟ್ರೇಷನ್ ಜೊತೆಗೆ ಆ ಚಿತ್ರಗಳನ್ನು ಬಳಸಿಕೊಂಡು ಧಾರಾವಾಹಿಗೆ ಬಳಸಿಕೊಂಡೆವು. ಒಳ್ಳೆಯ ಪ್ರತಿಕ್ರಿಯೆ ಬಂತು.
ಇದು ಅವರ ಮೊದಲ ಭೇಟಿಯ ಬಗ್ಗೆ ಹೇಳಿದ್ದು.
ಎರಡನೆ ಬಾರಿ ಅವರು ಹೋಗಿದ್ದು, ಮತ್ತೊಂದು ಕೆಲಸದ ನಿಮಿತ್ತ. ಚಿತ್ರದುರ್ಗದ ರೇಲ್ವೆ ಸ್ಟೇಷನ್‌ನಲ್ಲಿ ಒಂದು ಮ್ಯೂರಲ್ ಮಾಡಿಕೊಡುವ ಆಹ್ವಾನ ಬಂದಿತ್ತು. ಒಪ್ಪಿಕೊಂಡಿದ್ದ ಪ.ಸ.ಕುಮಾರ್ ಮಿತ್ರರೊಂದಿಗೆ ದುರ್ಗಕ್ಕೆ ಬಂದಿದ್ದರು. ೧೫ ದಿನ ದುರ್ಗದಲ್ಲಿಯೇ ಉಳಿದು ಒಂದು ಸುಂದರವಾದ ಕಲಾಕೃತಿಯನ್ನು ಚಿತ್ರದುರ್ಗದ ರೈಲ್ವೆ ಸ್ಟೇಷನ್ನಿನಲ್ಲಿ ಸೃಷ್ಟಿಸಿದರು.
ಈ ಅವಧಿಯಲ್ಲಿ ಅವರು ಚಿತ್ರದುರ್ಗದ ಕೋಟೆಗೆ ಮತ್ತೆ ಹೋಗಿದ್ದರು. ಆಗ ಅದ ಅನುಭವ....
‘ತುಪ್ಪದ ಕೊಳವನ್ನು ಹತ್ತಿ ಇಳಿದಿದ್ದೀನಪ್ಪ.. ಸಣ್ಣ ಸಣ್ಣ ಗುಂಡಿಗಳ ಹಾಗಿರುವ ಮೆಟ್ಟಿಲುಗಳ ಮೇಲೆ ಕಾಲಿಟ್ಟು ಅರ್ಧ ದಾರಿ ಹೋಗಿ ತಿರುಗಿ ನೋಡಿದ್ದೆ. ಕಾಲು ತರತರ ನಡುಗಿ ಬಿಟ್ಟಿದ್ದವು. ಜೊತೆಗಿದ್ದವರು, ಮೇಲೆ ಬರ್‍ತಾನೋ.. ಕೆಳಗೇ ಹೋಗ್ತಾನೋ ಅಂದುಕೊಳ್ಳುತ್ತಿದ್ದರು. ಆದರೂ ಹತ್ತಿದ್ದೆ. ಅಂಥದ್ದೊಂದು ಥ್ರಿಲ್ ಕೊಟ್ಟಿದೆ ಕೋಟೆ.’
'ಒಳಕ್ಕೆ ಹೋದ ಹಾಗೆಲ್ಲಾ ಆವರಿಸಿಕೊಳ್ಳುತ್ತದೆ. ಬೆಳಗ್ಗೆ ಕಂಡ ಹಾಗೆ, ಸಂಜೆ ಕಾಣುವುದಿಲ್ಲ. ಹಾಗಂತ ಆ ಎರಡೂ ಕ್ಷಣಗಳಲ್ಲಿ ಕಾಣುವ ಕೋಟೆ ಇಷ್ಟವಾಗದೇ ಹೋಗುವುದಿಲ್ಲ. ಚಿತ್ರದುರ್ಗದ ಕೋಟೆಗೊಂದು ಆರ್ಟಿಸ್ಟಿಕ್ ಕ್ಯಾರೆಕ್ಟರ್ ಇದೆ. ಅಲ್ಲಿ ಕಲ್ಲು ಜೋಡಿಸಿರುವ ರೀತಿ. ತಿರುವುಗಳು ಎಲ್ಲದರಲ್ಲೂ ಆ ಕಲೆಯ ಅಂಶವನ್ನು ಕಾಣಬಹುದು.... ನನನ್ನು ಇವತ್ತಿಗೂ ಹಾಂಟ್ ಮಾಡುವ ಸ್ಥಳ ಚಿತ್ರದುರ್ಗದ ಕೋಟೆ’
'
ಹೀಗೆ ಹೇಳುವ ಪ.ಸ.ಕುಮಾರ್ ಅವರಿಗೆ ಚಿತ್ರದುರ್ಗ ಕೋಟೆಯ ಕಲ್ಲುಗಳನ್ನು ತಮ್ಮ ಬಣ್ಣದಲ್ಲಿ, ಕುಂಚದಲ್ಲಿ ಕರಗಿಸುವ, ಅರಳಿಸುವ ಆಸೆಯಂತೆ.
ಅವರನ್ನು ದುರ್ಗಕ್ಕೆ ಸ್ವಾಗತಿಸಲು ನಾವು ಸದಾ ಕಾತರರು...

Tuesday, January 1, 2008

ಹೊಸ ವರ್ಷ ತರಲಿ ಹರ್ಷ...



ಬ್ಲಾಗ್ ನೊಡುಗರಿಗೆಲ್ಲ ದುರ್ಗದ ಹುಡುಗರ ಶುಭಾಶಯಗಳು. 2008 ಚಿತ್ರದುರ್ಗದ ಮಟ್ಟಿಗೆ ಮಹತ್ವದ ವರ್ಷ. ಕಾರಣ ಸಾಹಿತ್ಯ ಸಮ್ಮೇಳನ. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ಗೆ ಚುನಾವಣೆ ನಡೆಯಲಿದೆ. ಅಂತೆಯೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ಗೂ ಚುನಾವಣೆ. ಚಿತ್ರದುರ್ಗದಿಂದ ಬಂದ ಮಾಹಿತಿ ಪ್ರಕಾರ ತೆರೆಮರೆಯಲ್ಲಿ ಪರಿಷತ್ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸಮ್ಮೇಳನದ ಜವಾಬ್ದಾರಿ ಹೊತ್ತಿರುವ ಕಾರಣ ಅಧ್ಯಕ್ಷಗಿರಿ ಭಾರೀ ಮಹತ್ವ. ಅದೇ ರೀತಿ ಚುನಾವಣೆಗೂ. ಹಾಲಿ ಅಧ್ಯಕ್ಷ ಕೆ.ಎಂ. ವೀರೇಶ್ ಚಿತ್ರದುರ್ಗಕ್ಕೆ ಸಮ್ಮೇಳನದ ಆತಿಥ್ಯ ದಕ್ಕಿಸಿಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಸಮ್ಮೇಳನ ನಡೆಸುವ ಜವಾಬ್ದಾರಿಯನ್ನು ಹೊರುವ ಉತ್ಸಾಹ ಇರುವ ಕಾರಣ ಎರಡನೇ ಅವಧಿಗೆ ಸ್ಪರ್ಧಿಸುವ ಉತ್ಸಾಹ ತೋರಿದ್ದಾರೆ. ಮಾಜಿ ಅಧ್ಯಕ್ಷರಲ್ಲಿ ಒಬ್ಬರಾದ ಪತ್ರಕರ್ತ ಶ ಮಂಜುನಾಥ್ ಕೂಡಾ ಚುನಾವಣೆಗೆ ತಮ್ಮ ಉಮೇದುವಾರಿಕೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಇವರೀರ್ವರ ನಡುವೆ ಸ್ಪಧರ್ೆ ಏರ್ಪಡುವ ಲಕ್ಷಣಗಳಿವೆ. ಯಾರೇ ಗೆದ್ದರೂ ಅವರ ಹೆಗಲಿಗೆ ದೊಡ್ಡ ಜವಾಬ್ದಾರಿ ಇರುವುದಂತೂ ಸತ್ಯ. ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಜತೆಗೆ ಜಿಲ್ಲಾ ಆಡಳಿತವೂ ಸಮ್ಮೇಳನಕ್ಕೆ ಸಿದ್ಧತೆ ಆರಂಭ ಮಾಡಬೇಕಿದೆ. ಜಿಲ್ಲಾ ಪಂಚಾಯತ್, ಚಿತ್ರದುರ್ಗ ತಾಲೂಕು ಪಂಚಾಯತ್ ಹಾಗೂ ನಗರಸಭೆಗಳು ಸಮ್ಮೇಳನ ಸಿದ್ಧತೆಗಾಗಿ ತಮ್ಮ ಮುಂದಿನ ವರ್ಷದ ಬಜೆಟ್ನಲ್ಲಿ ಒಂದಿಷ್ಟು ಹಣ ಮೀಸಲಿಡಬೇಕಿದೆ. ಸಾಹಿತ್ಯಕ ಜಾತ್ರೆ ನೆಪದಲ್ಲಾದರೂ ಒಂದಷ್ಟು ಸಮಸ್ಯೆಗಳಿಗೆ ಶಾಶ್ವತ ಪರಿಹರ ಕಂಡುಕೊಳ್ಳಲು ಸಾಧ್ಯವಾದರೆ, ಹೊಸ ವರ್ಷ ನಿಜ ಅರ್ಥದಲ್ಲಿ ದುರ್ಗದ ಜನತೆಗೆ ಹರ್ಷ ತರುತ್ತದೆ.