Monday, July 28, 2008

ಕಸಾಪ ಜಿಲ್ಲಾಧ್ಯಕ್ಷರಾಗಿ ವೀರೇಶ್ ಪುನಾ ಆಯ್ಕೆ..




ಇನ್ನೂ ಸಾಹಿತ್ಯ ಪರಿಷತ್ ಚುನಾವಣೆ ನಡೆದಿಲ್ಲ. ಆಗಲೇ ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷರ ಘೋಷಣೆಯಾಗಿದೆ. ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಂಟು ಮಂದಿ ನಾಮಪತ್ರ ವಾಪಸು ಪಡೆಯುವ ಕಡೇ ದಿನವಾದ ಶನಿವಾರ ವೀರೇಶ್ ಎರಡನೆ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಹಿಂದಿನ ಪೋಸ್ಟ್ನಲ್ಲಿ ಹೇಳಿದ ಮಾತುಗಳು ಇಲ್ಲಿ ಸ್ಪಷ್ಟವಾದಂತಿವೆ. ಸಮ್ಮೇಳನ ಒಪ್ಪಿಕೊಂಡವರ ಮೇಲೆ ಸಮ್ಮೇಳನ ನಡೆಸುವ ಹೊಣೆ ಹೊರಿಸಲಾಗಿದೆ. ಇದರ ಹಿಂದೆ ಯಾರದೋ ಕೈವಾಡ ಎನ್ನುವ ಮೂಲಕ ವೀರೇಶ್ ಅವರ ಆಯ್ಕೆ ಸಂಶಯಿಸುವ ಅಗತ್ಯವಿಲ್ಲ. ಅದರ ಔಚಿತ್ಯ ನಮಗಿಲ್ಲಿ ಕಾಣುತ್ತಿಲ್ಲ.


ವೀರೇಶ್ ಅಲ್ಲದೆ ಬೇರಾರೆ ಸಮ್ಮೇಳನ ಒಪ್ಪಿಕೊಂಡು ಬಂದು, ಅವರೇ ಆಯ್ಕೆ ಯಾಗಿದ್ದರೂ ಈ ಮಾತುಗಳೇ ವ್ಯಕ್ತವಾಗುತ್ತಿದ್ದವೇನೋ? ಇರಲಿ.. ವೀರೇಶ್ ಈಗ ಏನು ಮಾಡುತ್ತಾರೆಂಬುದೇ ಕುತೂಹಲ...ವೀರೇಶ್ ವಿಸ್ತೃತ ಅವಧಿ ಸೇರಿ ಮೂರೂವರೆ ವರ್ಷಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಜಿಲ್ಲಾ ಕಸಾಪದ ಮೂಲಕ ಮಾಡಿದ ಚಟುವಟಿಕೆಗಳೆಷ್ಟು? ಜಿಲ್ಲೆಯಲ್ಲಿ ಕಸಾಪವನ್ನು ಬೆಳೆಸಲು ಅವರು ಮಾಡಿದ ಕೆಲಸಗಳೇನು? (ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆದಿದ್ದವು, ಅಷ್ಟೇ ಅಲ್ಲ ದತ್ತಿ ನಿಧಿಗಳ ಸ್ಥಾಪನೆಯೂ ಆಗಿದ್ದವು.) ಹೀಗೆ ಪ್ರಶ್ನೆಗಳನ್ನು ಕೇಳಿದರೆ ಸ್ವತಃ ವೀರೇಶ್ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಾರೆನೋ? ಮೂರೂವರೆ ವರ್ಷಗಳ ಅವಧಿಯಲ್ಲಿ ಕೆಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದೇ ಅವರ ಸಾಧನೆ.ಇದನ್ನೇ ಜಿಲ್ಲಾ ಸಾಹಿತ್ಯ ವಲಯ ಮಾತಾಡಿಕೊಳ್ಳುತ್ತದೆ. ಹೀಗಾಗಿ ಯಾವುದೇ ನಿರೀಕ್ಷೆಗಳೇ ಇಲ್ಲದ ನಿರುತ್ಸಾಹದ ಮಾತುಗಳನ್ನಾಡುತ್ತಾರೆ.



ಹಾಗಾಗಿ ವೀರೇಶ್ ಮುಂದೆ ದೊಡ್ಡ ಸವಾಲುಗಳೇ ಇವೆ. ಸಮ್ಮೇಳನ ಅಂಥ ಸವಾಲುಗಳಲ್ಲಿ ದೊಡ್ಡದು. ಆದರೆ ಅವರು ಇದಕ್ಕೂ ಮೊದಲು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಡೀ ಜಿಲ್ಲಾ ಸಾಹಿತ್ಯ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಮುಂದಿರುವ ಸವಾಲುಗಳಲ್ಲಿ ಒಂದು. ಇದುವರೆಗೂ ಏನೂ ಮಾಡಿಲ್ಲ ಎಂದೇ ಹೇಳುವ ಮಂದಿ ಮುಂದೆ ವೀರೇಶ್ ಬೆಂಬಲ, ನೆರವು, ಸಹಕಾರ ಕೇಳಬೇಕಾಗಿದೆ. ಇದನ್ನು ಯಾವುದೇ ಬಿಗುಮಾನವಿಲ್ಲದೆ ವೀರೇಶ್ ಮಾಡುತ್ತಾರಾ? ಮಾಡಲೇಬೇಕು, ಕಸಾಪ ಚುನಾವಣೆ ಮುಗಿಯಲು ಇನ್ನೊಂದು ತಿಂಗಳಾದರೂ ಬೇಕು, ಅಷ್ಟರೊಳಗೆ ಜಿಲ್ಲೆ ಸಾಹಿತಿಗಳು, ಹಿರಿಯರು, ವಿವಿಧ ಮುಖಂಡರಗಳ ಸಭೆ ಕರೆದು ಚರ್ಚೆ ಮಾಡಬಹುದು. ಈ ಸಮ್ಮೇಳನದ ಮಹತ್ವ, ಅದಕ್ಕಾಗಿ ಏನೆಲ್ಲಾ ಆಗಬೇಕಿದೆ ಎಂಬುದನ್ನೆಲ್ಲಾ ಚರ್ಚಿಸಬಹುದು. ಅವರಿಂದ ಸಲಹೆಗಳನ್ನು ಸ್ವೀಕರಿಸುವ ಮೂಲಕ ಅವರೆಲ್ಲಾ ವಿಶ್ವಾಸ ಪಡೆಯಬಹುದು. ವೀರೇಶ್ ಏನು ಮಾಡುತ್ತಾರೆ? ಕಾದು ನೋಡೋಣ.

ದೂರದ ಊರಿಂದ ಪತ್ರ ಬಂದಿದೆ...

(ದೂರದ ದಿಲ್ಲಿಯಲ್ಲಿ ಟೀವಿ ಪತ್ರಕರ್ತರಾಗಿರುವ ಶಿವಪ್ರಸಾದ್ ನಮ್ಮ ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಬರೆದಿರುವ ಪತ್ರವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ..ಹಾಂ ಅವರು ಬರೆಯುತ್ತಿರುವ ಬ್ಲಾಗಿನಲ್ಲಿ ನಮ್ಮ ಬ್ಲಾಗಿನ ಪರಿಚಯ ಮಾಡಿಕೊಟ್ಟಿದ್ದಾರೆ. )
ಓವರ್ ಟು ಲೆಟರ್...

ದುರ್ಗದ ಹುಡುಗರಿಗೆ ಜೈ!ನಿಜಕ್ಕೂ ಒಳ್ಳೆಯ ಪ್ರಯತ್ನ!
ನನಗೆ ತಿಳಿದ ಮಟ್ಟಿಗೆ ದುರ್ಗದ ಹುಡುಗರಲ್ಲಿ ಬಹುತೇಕರು ಈಗ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಆದರೂ ತಮ್ಮ ಊರಲ್ಲಿ ನಡೆಯಬೇಕಿರುವ ಸಾಹಿತ್ಯ ಸಮ್ಮೇಳನ ಕುರಿತು ಚರ್ಚೆ ನಡೆಸಲಿಕ್ಕೆ ಎಲ್ಲರೂ ಒಂದಾಗಿ ಬ್ಲಾಗ್ ಆರಂಭಿಸುವುದಿದೆಯಲ್ಲ... ಅದು ಗಮನಿಸಬೇಕಾದ್ದು. ನಿಮ್ಮ ಒಳಗೆ ಇರುವ ನಿಮ್ಮಊರಿನ ಬಗೆಗಿನ ಅಭಿಮಾನ ಗ್ರೇಟ್! ಆದರೆ ಇಲ್ಲಿ ಬ್ಲಾಗ್ ನಲ್ಲಿರುವ 'ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ' ಬರಹ ಕುರಿತ ನನ್ನ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.
1. ಸಾಹಿತ್ಯ ಯಾರಪ್ಪನ ಮನೆ ಸೊತ್ತೂ ಅಲ್ಲ. ಸಾಹಿತ್ಯದ ಬಗ್ಗೆ ತಿಳಿಯದವರು, ಬರೆಯದವರು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂಬುದು ಕನ್ನಡಕ್ಕೆ ಮಾಡುವ ಮೊದಲ ದ್ರೋಹ.
2. ದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಾಗ ಎಲ್ಲರೂ ಒಂದಾಗಿ ಕನ್ನಡದ ತೇರು ಎಳೆಯುವುದು ಬಿಟ್ಟು, ಅವರಿಗೆ ಬರೆಯೋಕೆ ಬರೋಲ್ಲ, ಇವರು ಇಂಥಹವರು, ಅವರುಒಪ್ಪಿಕೊಂಡು ಬಂದಿದ್ದಾರೆ, ಅವರೇ ಮಾಡಲಿ ಎಂದು ಯೂಸ್ಲೆಸ್ ಮಾತುಗಳನ್ನು ಹೇಳುವುದಿದೆಯಲ್ಲ, ಅದು ಕನ್ನಡಕ್ಕೆ ಮಾಡುವ ಎರಡನೇ ದ್ರೋಹ.
3. ಮೂರನೆಯದಾಗಿ ಗಣಿ ಧಣಿಗಳು ಪೂರ್ತಿ ಸಹಕಾರ ಕೊಡುವುದಿದ್ದರೆ ಅದನ್ನು ಖಂಡಿತಾ ಕನ್ನಡದ ಕೆಲಸಕ್ಕೆ ಬಳಸಿಕೊಳ್ಳಬೇಕು. ಕೇವಲ ಗಣಿಧಣಿಗಳು, ಶಾಸಕರನ್ನು ಖರೀದಿಸಿದರು, ಅಲ್ಲಿ ಹಾಗೆ ಅನ್ಯಾಯ ಮಾಡಿದರು, ಹೀಗೆ ಮಾಡಿದರು ಎಂದು ಹೀಗಳೆಯುವುದು ಕೇವಲ ಸಿನಿಕತನ. ಅವರಲ್ಲಿರುವ ಹಣ ಒಳ್ಳೆಯದಕ್ಕೆ, ಅದರಲ್ಲೂ ಕನ್ನಡದ ಕೆಲಸಕ್ಕೆ ಬಳಕೆಯಾಗುವುದಿದ್ದರೆ ಯಾಕೆ ಬೇಡ? ಸಮಾಜದಲ್ಲಿ ಹಣವುಳ್ಳವರು ಅನೇಕರಿದ್ದಾರೆ. ಅವರನ್ನು ಹಿಡಿದು ತಂದು ಇಂತಹ ಕೆಲಸಕ್ಕೆ, ಅವರನ್ನು ತೊಡಗಿಸುವುದು ನಿಜಕ್ಕೂ ಅರ್ಥಪೂರ್ಣ. ಇಂತಹ ಉತ್ತಮ ಕೆಲಸಕ್ಕೆಅಂಥಹವರನ್ನು ಎಳೆದು ತಂದು ಜೋಡಿಸದಿದ್ದರೆ, ಅವರು ಗಳಿಸಿದ ಹಣ ಸದ್ವಿನಿಯೋಗವಾಗುವುದಾದರೂ ಹೇಗೆ? ಗೋ ಅಹೆಡ್.
4. ಕೇವಲ ಸಾಹಿತ್ಯ ಬರೆಯುವವರಿಂದಲೇ ಸಮ್ಮೇಳನ ನಡೆಸಲು ಆಗುವುದಿಲ್ಲ. ಅದಕ್ಕೆ ಸಂಘಟಕರು ಬೇಕು. ವಿವಿಧ ರೀತಿಯ ಜನರನ್ನು ಒಗ್ಗೂಡಿಸಿ, ಅವರಿಂದ ಕೆಲಸ ತೆಗೆಸುವ ಕಲೆಗೊತ್ತಿರಬೇಕು. ಅಂತಹ ಸಂಘಟನಾ ಚಾತುರ್ಯ ಇದ್ದರೆ ಅನಕ್ಷರಸ್ಥ ಕೂಲಿ ಕೆಲಸದವನನ್ನು ಬಳಸಿದರೂ ನಾನು ಬೇಡ ಅನ್ನುವುದಿಲ್ಲ. ಅಂತಾದ್ದರಲ್ಲಿ ಒಂದು ಕ್ಷೇತ್ರದ ಶಾಸಕರಾದ ಬಸವರಾಜನ್ ಏಕೆ ಬೇಡ? ಅವರ ಇತರೆ ಅಂಶಗಳು ನಮಗೆ ಬೇಕಿಲ್ಲ. ಆದರೆ ಅವರ ಚಾತುರ್ಯ ಏಕೆ ಬಳಸಬಾರದು?? ಮೇಲಾಗಿ ಅವರಿಗೆ ಜನರು ನೀಡಿದ ಅಧಿಕಾರವಿದೆ. ಅವರು ಬೇಡ ಎನ್ನುವ ಹಕ್ಕುಯಾರಿಗೂ ಇಲ್ಲ.
5. ಕೇವಲ ಸಾಹಿತ್ಯವನ್ನೇ ಬರೆದುಕೊಂಡಿರುವ ಸಾತ್ವಿಕ ಸ್ವಭಾವದ ಸಾಹಿತಿಗಳನ್ನುಕಟ್ಟಿಕೊಂಡು ಸಾಹಿತ್ಯ ಸಮ್ಮೇಳನ ನಡೆಸುವುದು ಸಾಧ್ಯವೇ? ಸಾಹಿತಿಗಳಿಗೆ ಬರೆಯುವ ಕೆಲಸ. ಅವರದ್ದು ಸಂಕೋಚದ ಮನಸ್ಸು. ಯಾರ ಮುಂದೂ ಕೈಯೊಡ್ಡಲಾರದ ಸ್ವಾಭಿಮಾನ. ಅವರದ್ದೇನಿದ್ದರೂ, ಶಾಂತ ಸಾಹಿತ್ಯದ ಕೆಲಸ. ಆದರೆ ಅದನ್ನು ಜನರ ಬಳಿಗೆ ತಲುಪಿಸಲು ನೂರಾರು ಜನ ಸಾಹಿತ್ಯ ರಚಿಸಲಿಕ್ಕೆ ಬರದವರೂ ಕೈ ಜೋಡಿಸಬೇಕು. ಸಾಹಿತ್ಯ ಸಮ್ಮೇಳನದ ದಿನನೆರೆದ ಜನರಿಗೆ ಕಲ್ಲಂಗಡಿ ಹಣ್ಣು, ಸೌತೆಕಾಯಿ ಕುಯ್ದು ಕೊಡುವವ, ಮಂಡಕ್ಕಿ, ಮೆಣಸಿನಕಾಯಿ ತಯಾರಿಸಿ ಕೊಡುವವರದ್ದೂ ಸಹ ಸಾಹಿತ್ಯದ ಸೇವೆ, ಕನ್ನಡಮ್ಮನ ಸೇವೆ ಎಂಬುದು ನೆನಪಲ್ಲಿರಬೇಕು. ಎಲ್ಲರೂ ಸೇರಿಯೇ ಕೆಲಸವಾಗುವುದು.
6. ವೀರೇಶ್ ಅವರು ದುರ್ಗದ ಮೇಲಿನ ಅಭಿಮಾನಕ್ಕೆ, ಅದರಲ್ಲೂ 75 ನೇ ಸಾಹಿತ್ಯ ಸಮ್ಮೇಳನನಮ್ಮ ಊರಿನಲ್ಲೇ ಆಗಬೇಕು ಎಂದು ಬಯಸಿ ಒಪ್ಪಿ ಬಂದಿರುವಾಗ, ಅದು ಅವರ ನಿರ್ಧಾರ. ಒಪ್ಪಿಕೊಂಡು ಬಂದಿರುವ ಅವರೇ ಸಮ್ಮೇಳನ ಮಾಡಿಕೊಳ್ಳಲಿ ಎಂಬ ಧೋರಣೆ ಅಕ್ಷಮ್ಯ ಅಪರಾಧ.ಇದಕ್ಕಿಂತ ದೊಡ್ಡ ದ್ರೋಹ ಬೇರೊಂದಿಲ್ಲ. ವೀರೇಶ್ ಅವರ ಕಳಕಳಿ ಎಲ್ಲರೂ ಗಮನಿಸಬೇಕು.ಅವರ ಕಳಕಳಿಗೆ ಎಲ್ಲಾ ದುರ್ಗದ ಜನರೂ ಕೈ ಜೋಡಿಸಬೇಕು. ಕನ್ನಡ ಸಾಹಿತ್ಯ ಲೋಕದಲ್ಲಿಮೈಲುಗಲ್ಲಾಗಿರುವ 75 ನೇ ಸಮ್ಮೇಳನವನ್ನು ದುರ್ಗದಲ್ಲಿ ನಡೆಸಲು ಒಂದಾಗಿ ನಿಲ್ಲಬೇಕು.ಇಂತಹ ಅವಕಾಶ ಎಲ್ಲರಿಗೂ, ಯಾವಾಗಲೂ ಸಿಗದು ಎಂಬುದು ಗಮನದಲ್ಲಿರಲಿ.
7. ಇಂತಹ ಅಡ್ಡದಾರಿಯಲ್ಲಿ ಯೋಚಿಸುವನ್ನು ಬಿಟ್ಟು ದುಗದ ಜನ ಯಾವುದೇ ಕಾರಣಕ್ಕೂ 75 ನೇಸಮ್ಮೇಳನ ತಮ್ಮ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ರಾಜಕೀಯಪರಿಸ್ಥಿತಿಯಲ್ಲಿ ದುರ್ಗದ ಜನರ ನಿರ್ಲಕ್ಷ, ಒಡಕುತನ, ಆರೋಪ-ಪ್ರತ್ಯಾರೋಪ ನೋಡಿ, ಇವರಿಂದ ಏನೂ ಆಗೋಲ್ಲ ಎಂದು ಬೇರೆ ಜಿಲ್ಲೆಗೆ ಇದರ ಅವಕಾಶ ಜಾರದಿರಲಿ. ದುರ್ಗದ ಹುಡುಗರು ಹೇಳಿರುವಂತೆ ಇನ್ನಾದರೂ ಈ ಬಗ್ಗೆ ಪಾಸಿಟಿವ್ ಆಗಿ ಜನರು ಚಿಂತಿಸಲಿ. ದುರ್ಗದ ಜನರು ಒಂದಾಗಿ 75 ನೇ ಸಮ್ಮಳನದ ಬಗ್ಗೆ ಸಂಘಟಿತ ಪ್ರಯತ್ನ ಆರಂಭವಾಗಲಿ. ಜೈ ಕನ್ನಡ

Thursday, July 24, 2008

ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ...

ಅಂತು ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನದ ಸಂಚಲನ ಉಂಟಾಗಿದೆ. ಈಗ ಬಂದಿರುವ ವರ್ತಮಾನ ಕಳೆದೊಂದು ತಿಂಗಳಲ್ಲಿ ಸಮ್ಮೇಳನದ ಬಗ್ಗೆ ಆಗಿರುವ ಚರ್ಚೆಗಳ ಸುದ್ದಿ ಹೊತ್ತು ತಂದಿದೆ. ನಿಮಗೆ ನೆನಪಿರಬಹುದು. ಈ ಹಿಂದೆ ನಾವು ಸಮ್ಮೇಳನದ ಸೊಲ್ಲಿಲ್ಲ ಎಂದು ನಿರುತ್ಸಾಹದಿಂದ ಮಾತುಗಳನ್ನಾಡಿದ್ದೆವು.
ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಮ್ಮೇಳನದ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿವೆ. ಜಿಲ್ಲೆಯವರೇ ಆದ ಷಣ್ಮುಖಪ್ಪ ಎಂಬುವರು ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಗೊಂದು ಪತ್ರ ಬರೆದಿದ್ದರು.
ಬಹುಶಃ ಇದು ಸಾಹಿತ್ಯ ಸಮ್ಮೇಳನದ ಘೋಷಣೆಯಾದ ಮೇಲೆ ವಿದ್ಯುಕ್ತ ಚರ್ಚೆಗೆ ಚಾಲನೆ ನೀಡಿದ ಪತ್ರ. ಇದರಲ್ಲಿ ಷಣ್ಮುಖಪ್ಪನವರು ಸಾಹಿತ್ಯದ ಗಂಧವೇ ಇಲ್ಲದ ಶಾಸಕ ಎಸ್.ಕೆ.ಬಸವರಾಜನ್ ಅವರಿಂದ ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣದು ಎಂಬ ಅನುಮಾನದ ಮಾತುಗಳನ್ನಾಡಿದ್ದರು.
ಈ ಪತ್ರ ಪ್ರಕಟವಾಗುವ ಹೊತ್ತಿಗೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕರುಣಾಕರ ರೆಡ್ಡಿ ಸಮ್ಮೇಳನ ಅದ್ದೂರಿಯಾಗಿ ನಡೆಸುವ ಬಗ್ಗೆ ಧನಾತ್ಮಕವಾಗಿ ಹೇಳಿಕೆ ನೀಡಿದರು. ಇದಾದ ಮೇಲೂ ಸಮ್ಮೇಳನದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ. 75ರ ಸಮ್ಮೇಳನವನ್ನು ಕೈಬಿಟ್ಟು, ಮುಂದಿನ ಅಂದರೆ 76ನೆಯದೋ, 77ನೆಯದ್ದನ್ನೋ ಚಿತ್ರದುರ್ಗದಲ್ಲಿ ನಡೆಸೋಣ ಎಂಬಂಥ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮಿತ್ರರೇ, ಷಣ್ಮುಖಪ್ಪನವರಿಗೆ ಒಂದು ಮಾತು ಹೇಳಲೇಬೇಕು. ಸಮ್ಮೇಳನ ಘೋಷಣೆಯಾಗಿದೆ. ಇದರ ಮುಂದಾಳತ್ವದಲ್ಲಿ ಸ್ಥಳೀಯ ಶಾಸಕರು ಇದ್ದೇ ಇರುತ್ತಾರೆ. ಈ ವಿಷಯದಲ್ಲಿ ಅವರ ಹೊಣೆ ಹೆಚ್ಚೇ. ಅವರಿಗೆ ಸಾಹಿತ್ಯ ಗೊತ್ತಿದೆಯೋ ಇಲ್ಲವೋ. ಸಮ್ಮೇಳನದ ಯಶಸ್ಸಿಗೆ ಅದು ಮುಖ್ಯವೆ? ಕನ್ನಡದ ಕೈಂ ಕಾರ್ಯಮಾಡುವವರೆಲ್ಲಾ ಸಾಹಿತ್ಯ ಬಲ್ಲವರೇ ಆಗಬೇಕೆ? ಅವರು ಕನ್ನಡಿಗರು, ಕನ್ನಡದ ನೆಲದಲಿದ್ದಾರೆ. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅಷ್ಟು ಸಾಕಾಗದೆ? ಇಂಥ ವ್ಯಕ್ತಿಗೆ ಸಮ್ಮೇಳನದ ಮಹತ್ವ ಏನು?ಅದು ಹೇಗಾಗಬೇಕು? ಎಂಬ ಬಗ್ಗೆ ಅವರ ಗಮನಕ್ಕೆ ತರಬೇಕು. ಅವರಿಗೆ ಮನವರಿಕೆ ಮಾಡಬೇಕು. ಇಷ್ಟು ಮಾಡಿದರೆ ಸಾಕು. ಬಸವರಾಜನ್ ಅವರ ವಿಷಯದಲ್ಲಿ: ಅವರಿಗೆ ಸಾಹಿತ್ಯ ಸಮಾರಂಭಗಳು ಹೊಸದಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರುವ ಸಂಗತಿ. ಈಗಾಗಲೇ ಅವರು ಜಿಲ್ಲಾ ಸಾಹಿತ್ಯ ಪರಿಷತ್ ಸಮಿತಿಯಲ್ಲಿದ್ದರು ಎಂಬುದು ಒಂದು ಮಾಹಿತಿ. ಅಲ್ಲದೆ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ ಅನುಭವ ಅವರಿಗೆ ಇದೆ. ಹೀಗಿರುವಾಗ ಅವರಿಗೆ ನಾವಿದನ್ನೂ ನಿರೀಕ್ಷಿಸುತ್ತಿದ್ದೇವೆ ಎಂದು ಹುರಿದುಂಬಿಸುವುದನ್ನು ಬಿಟ್ಟು, ನಿಮ್ಮಿಂದೇನು ಆಗದು ಎಂದು ಕಾಲೇಳಿಯುತ್ತಿರುವುದೇಕೆ ಎಂಬುದು ಅರ್ಥವಾಗಿಲ್ಲ.
ಮಿತ್ರರೆ, ಸಮ್ಮೇಳನಕ್ಕೆ ಆರ್ಥಿಕ ಸಮಸ್ಯೆ ಎದುರಾಗುವ ಸಂದೇಹವಿತ್ತು. ಈಗ ಆ ಆತಂಕವೇ ಇಲ್ಲ. ಆ ವಿಶ್ವಾಸ ನೀಡಿದವರು, ನೀಡುವವರು ಕರುಣಾಕರ ರೆಡ್ಡಿ. ಅವರು ಗಣಿ ಧಣಿ. ಸಮ್ಮೇಳನದ ಸಂಪೂರ್ಣ ಹಣಕಾಸಿನ ಹೊಣೆ ಹೊರುವ ತಾಕತ್ತಿರುವವರು. ಹಾಗಾಗಿ ಹಣಕಾಸಿನ ತೊಂದರೆಯ ಮಾತೇ ಬರುವುದಿಲ್ಲ ಎಂಬುದು ನಮ್ಮ ನಂಬಿಕೆ.
ಇರುವುದೊಂದೆ ಸಮಸ್ಯೆ ಒಗ್ಗಟ್ಟಿನದು. ಹೌದು, 75ನೇ ಅಮೃತ ಮಹೋತ್ಸವದ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ಎಂದು ಘೋಷಣೆಯಾದಾಗಿನಿಂದ ಈ ಅಂಶವನ್ನು ನಾವು ಗಮನಿಸಿದ್ದೇವೆ. ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್ ಒಪ್ಪಿಕೊಂಡು ಬಂದಿದ್ದಾರೆ ಮಾಡಲಿ ಎಂದು ಎಲ್ಲರೂ ಹಿಂದೆ ಸರಿದಿದ್ದಾರೆ. ಬೃಹನ್ಮಠ, ಎಸ್.ಕೆ.ಬಸವರಾಜನ್, ಹೀಗೆ ಒಂದಿಷ್ಟು ಹೆಸರುಗಳ ನಡುವೆ ಸಮ್ಮೇಳನದ ಪರ ವಿರೋಧ ಮಾತುಗಳ ವಿನಿಮಯ ಆಗುತ್ತಲೇ ಇವೆ. ಜಿಲ್ಲೆಯವರೇ ಆದವರು ಏನಿರಬಹುದೆಂದು ಊಹಿಸಬಹುದು.
ಇರಲಿ.. ವಿಶೇಷವಾದ ಅವಕಾಶವೊಂದು ಒದಗಿ ಬಂದಿರುವ ವೇಳೆ ಇಂಥ ಸ್ವಪ್ರತಿಷ್ಠೆಯನ್ನು ಬಿಟ್ಟು ಎಲ್ಲರೂ ಕೈಜೋಡಿಸುವುದು ಮುಖ್ಯವಾಗಬೇಕಲ್ಲವೆ? ಜಿಲ್ಲೆಯ ಮಠಾಧೀಶರು ಈ ನಿಟ್ಟಿನಲ್ಲಿ ಒಂದಾಗಿ ಎಲ್ಲರ ಮನವೊಲಿಸಬೇಕು. ಒಗ್ಗಟ್ಟು ಉಂಟು.
ಬಾಗಲಕೋಟೆ, ಮುಧೋಳದಂತ ಜಿಲ್ಲೆಗಳಲ್ಲೇ ಸಮ್ಮೇಳನ ನಡೆಯುತ್ತದೆ. ಅಲ್ಲಿನ ಆ ಮಂದಿ ಅಂಥ ಧೈರ್ಯವನ್ನು ಹೊಂದಿದ್ದಾರೆಂದ ಮೇಲೆ ಚಿತ್ರದುರ್ಗ ಹಿಂದೆ ಬೀಳುವುದರ ಅರ್ಥವೇನು?
ಇನ್ನೇನು ಕಸಾಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಕೆ.ಎಂ. ವೀರೇಶ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಪಶು ವೈದ್ಯ ಇಲಾಖೆಯಲ್ಲೆ ಸೇವೆ ಸಲ್ಲಿಸುತ್ತಿರುವ, ಸಾಹಿತ್ಯ ಸಮಾರಂಭಗಳಲ್ಲಿ ಸದಾ ಕಾಣಿಸಿಕೊಳ್ಳುವ ದೊಡ್ಡಮಲ್ಲಯ್ಯ ಕೂಡ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿವೆ. ನಾಯಕನಹಟ್ಟಿಯ ಟಿ.ಎಂ.ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ ರಾಜ್ಯ ಮಟ್ಟದಲ್ಲಿ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ನಲ್ಲೂರು ಪ್ರಸಾದ್. ಆರ್.ಕೆ. ಕೃಷ್ಣ ಮಾ.ಚ, ಜಿ.ವಿ.ಪ್ರಭಾಕರ್ ರಾವ್, ಲಕ್ಷ್ಮಣ್ ರಾವ್ ಗೋಗಿ, ಡಾ.ಎಸ್.ವಿದ್ಯಾಶಂಕರ, ಡಾ.ಸಿ.ವೀರಣ್ಣ, ಸೋಸಲೆ ಜವರಯ್ಯ ಆ ಏಳು ಮಂದಿ. ಆಗಸ್ಟ್ 24ರಂದು ಮತದಾನ ನಡೆಯಲಿದೆ.

ಇನ್ನಾದರೂ ಸಮ್ಮೇಳನದ ವಿಷಯದಲ್ಲಿ ಜಿಲ್ಲೆಯ ಪಾಸಿಟಿವ್ ಆದ ಆಲೋಚನೆಗಳು ಹುಟ್ಟಲ್ಲಿ, ಕ್ರಿಯಾಶೀಲವಾಗಲಿ.

Wednesday, July 23, 2008

ಪ್ರೋತ್ಸಾಹದ ಸೆಲೆ ಎಂ.ವ್ಯಾಸ ಇನ್ನಿಲ್ಲ..

೬೯ರ ಅಂಚಿನಲ್ಲಿದ್ದೇನೆ... ಇನ್ನೆಷ್ಟು ದಿನ ಈ ಹಪಾಹಪಿ ಇರಬಹುದು? ಒಂದು ಆಗಾಧ ದೈಹಿಕ ನೋವು ಇಂಥ ಅಂಗಲಾಚುವಿಕೆಗಳನ್ನು ಹಿಮ್ಮೆಟ್ಟಿಸಿ... ‘ಜೀವ ಒಂದು ಉಳಿದರೆ ಸಾಕು’ ಎಂಬ ಪ್ರಾರ್ಥನೆಯೊಂದೇ ಉಳಿದಿರುತ್ತದೆ- ಕೊನೆಯ ಉಸಿರಿರುವವರೆಗೂ..
ವಾರದ ಕೆಳಗೆ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ ಕತೆಗಾರ ಎಂ. ವ್ಯಾಸ ಬರೆದ ಪತ್ರ ಅದು. ತಮ್ಮ ಕೊನೆಯ ದಿನಗಳ ಸುಳಿವು ತಮಗೆ ಸಿಕ್ಕಿದೆಯೇನೋ ಎಂಬ ಸೂಚನೆ ಅವರು, ಗೆಳೆಯರಿಗೆ ಕಿರಿಯ ಕತೆಗಾರರಿಗೆ ಬರೆದ ಪತ್ರದಲ್ಲಿತ್ತು.
ಕನ್ನಡ ಕಥಾಜಗತ್ತಿನಲ್ಲಿ ತಮ್ಮದೇ ವಿಶಿಷ್ಟ ಶೈಲಿಯಿಂದ ವಿಭಿನ್ನ ಸ್ಥಾನ ಸಂಪಾದಿಸಿಕೊಂಡಿದ್ದವರು ಎಂ. ವ್ಯಾಸ. ಅವರ ಕತೆಗಳ ಜಗತ್ತೂ ಮನೋಜಗತ್ತೂ ವಿಕ್ಷಿಪ್ತವಾಗಿರುತ್ತಿತ್ತು. ಸಂಭಾಷಣೆ ಧಾಟಿಯಲ್ಲಿ, ಪಾತ್ರಗಳ ಒಳಗುದಿ, ಒಳತೋಟಿ, ತಲ್ಲಣ ಮತ್ತು ಆತಂಕಗಳನ್ನು ಅವರು ಮನೋವಿಜ್ಞಾನಿಯ ನಿಖರತೆ ಹಾಗೂ ಕಥೆಗಾರನ ಕಸಬುದಾರಿಕೆಯ ಸಮ್ಮಿಶ್ರದಲ್ಲಿ ನಿಭಾಯಿಸುತ್ತಿದ್ದರು.
ಎರಡರಕ್ಷರದ ಕತೆಗಳಿಗೆ ಹೆಸರುವಾಸಿಯಾಗಿದ್ದವರು ವ್ಯಾಸ. ಆರಂಭದ ಮಿನಿ ಕಾದಂಬರಿ ‘ಕಂಬನಿ’ಯನ್ನು ಹೊರತುಪಡಿಸಿದರೆ, ಉಳಿದೆಲ್ಲ ಕತೆಗಳಿಗೆ ಎರಡೇ ಅಕ್ಷರದ ಆಕರ್ಷಕ ಶೀರ್ಷಿಕೆ. ಬೇರು, ಸ್ನಾನ, ಗೆಜ್ಜೆ, ರಥ, ವೃದ್ಧ, ದೋಣಿ, ಕೇಳಿ, ಯಕ್ಷಿ, ಹೆಣ, ಹದ್ದು.. ಹೀಗೆ. ಇಂಥ ಎರಡಕ್ಷರದ ಕತೆಗಾರನ್ನು ಇದೀಗ ಎರಡಕ್ಷರದ ಸಾವು ಕಥಾಲೋಕದಿಂದ ಕಣ್ಮರೆಯಾಗಿಸಿದೆ.
ನಗರ ಪರಿಸರದಿಂದ ದೂರ ಉಳಿದು, ತಮ್ಮದೇ ಕಲ್ಪನೆಯ ದುರ್ಗಾಪುರ, ಶಂಕರಿ ನದಿಗಳನ್ನು ಸೃಷ್ಟಿಸಿದರು, ಆ ನದೀತೀರದ ಊರಲ್ಲಿ ಮನೋಲೋಕದ ಸೂಕ್ಷ್ಮವ್ಯಾಪಾರಗಳನ್ನು ಚಿತ್ರಿಸುತ್ತಿದ್ದ ಎಂ. ವ್ಯಾಸ, ಸಾಹಿತ್ಯದ ಚಳವಳಿಗಳಿಂದ ದೂರ ಉಳಿದವರು. ಅವರು ಬರೆದ ಕತೆಗಳ ಸಂಖ್ಯೆ ಸುಮಾರು ಏಳುನೂರು. ಅವುಗಳ ಪೈಕಿ ಪ್ರಕಟಿತ ಕತೆಗಳು ಮುನ್ನೂರಕ್ಕೂ ಹೆಚ್ಚು. ಕಿರುಕಾದಂಬರಿಗಳು ಓದುಗರ ಮೆಚ್ಚುಗೆಗೆ ಪಾತ್ರವಾದದ್ದಷ್ಟೇ ಅಲ್ಲ ನಾಟಕರೂಪಕ್ಕೆ ಬಂದು ಅನೇಕ ಪ್ರದರ್ಶನಗಳನ್ನೂ ಕಂಡಿದ್ದವು.
ಕಿರಿಯ ಕತೆಗಾರರಿಗೆ ಸದಾ ಪ್ರೆತ್ಸಾಹದ ಸೆಲೆಯಾಗಿದ್ದವರು ವ್ಯಾಸ. ತಾವು ಒಂದು ಒಳ್ಳೆಯ ಕತೆ ಓದಿದರೆ ಸಾಕು, ತಕ್ಷಣವೇ ಪತ್ರ ಬರೆದು ಮೆಚ್ಚಿಕೊಳ್ಳುವ ಹವ್ಯಾಸ ಅವರಿಗಿತ್ತು. ನಾ ಡಿಸೋಜಾ ಸೇರಿದಂತೆ ಹಲವಾರು ಕತೆಗಾರರ ಆರಂಭದ ಕತೆಗಳು ಪ್ರಕಟವಾದದ್ದು ವ್ಯಾಸ ಅವರು ಹೊರತರುತ್ತಿದ್ದ ಅಜಂತಾ ಮಾಸಪತ್ರಿಕೆಯಲ್ಲಿ.
ತನ್ನ ವಿಶಿಷ್ಟ ಶೈಲಿ, ಹರಿತವಾದ ಮಾತುಗಾರಿಕೆ ಮತ್ತು ಅಂತರಂಗದ ಮಾತುಗಳಿಗೆ ದನಿಯಾಗುವ ಕತೆಗಳ ಮೂಲಕ ತಮ್ಮದೇ ಆದ ಓದುಗವಲಯದಿಂದ ವ್ಯಾಸರು ಹೊರನಡೆದಿದ್ದಾರೆ. ಅವರು ಇತ್ತೀಚೆಗಷ್ಟೇ ಅಂಕಣಬರಹಗಳ ಸಂಕಲನ ‘ವ್ಯಾಸಪಥ’ ಹೊರತಂದಿದ್ದರು.
ಇನ್ನು ವ್ಯಾಸರ ಹಳೆಯ ಕತೆಗಳ ಸಹವಾಸದಲ್ಲೇ ಅವರ ಅಭಿಮಾನಿ ಓದುಗರು ತೃಪ್ತರಾಗಬೇಕು. ಅವರು ಸೃಷ್ಟಿಸಿದ ದುರ್ಗಾಪುರದಲ್ಲಿ ಇನ್ನು ಬರೀ ಮೌನ.

( ಬುಧವಾರ ಸಾರಸ್ವತ ಲೋಕವನ್ನು ಅಗಲಿದ ವ್ಯಾಸರನ್ನು ಕುರಿತು ಜೋಗಿ ಬರೆದಿದ್ದು.)