Friday, December 26, 2008

ವೈದ್ಯರಿಗೆ ಅಭಿನಂದನೆಗಳು..

ಸಮ್ಮೇಳನದ ಅಮೃತ ಮಹೋತ್ಸವದ ಸಿದ್ಧತೆಯ ವೇಳೆಯೇ ಸಂತಸದ ಸುದ್ದಿಯೊಂದು ಬಂದಿದೆ. ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ ಅವರ "ಹಳ್ಳ ಬಂತು ಹಳ್ಳ" ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಶ್ರೀನಿವಾಸ ವೈದ್ಯರು ಕನ್ನಡದ ಅಪರಂಜಿ ಹಾಸ್ಯ ಪತ್ರಿಕೆಯ ಬರಹಗಾರರು. ತಮ್ಮ ಹಾಸ್ಯ ಬರಹಗಳ ಮೂಲಕ ಚಿರಪರಿಚಿತರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಇವರು , "ಸಂವಾದ" ಎನ್ನುವ ಸಾಂಸ್ಕೃತಿಕ ಸಂಘಟನೆಯನ್ನು ನಡೆಯಿಸಿಕೊಂಡು ಬಂದಿದ್ದಾರೆ. ಇವರ ಕೆಲವು ಕೃತಿಗಳೆಂದರೆ ತಲೆಗೊಂದು ತರತರ, ಮನಸುಖರಾಯನ ಮನಸು, ರುಚಿಗೆ ಹುಳಿಯೊಗರು. ಇವುಗಳ ಜತೆಗೆ ಈ ಪ್ರಶಸ್ತಿಗೆ ಪಾತ್ರವಾಗಿರುವ ಕಾದಂಬರಿ "ಹಳ್ಳ ಬಂತು ಹಳ್ಳ".ಗಂಭೀರ ವಿಷಯದ ಕಾದಂಬರಿ. ಸುಮಾರು ೧೫೦ ವರ್ಷದ ಹರಹುಳ್ಳ ಒಂದು ಮನೆತನದ ಕಥೆ. ೧೮೫೭ರ ಸುಮಾರಿನ ಬ್ರಿಟಿಷರ ವಿರುದ್ಧದ ಬಂಡಾಯದ ಸಮಯದಲ್ಲಿ ಉತ್ತರದಿಂದ ನರಗುಂದದ ಬಾಬಾಸಾಹೇಬನಿಗೊಂದು ರಾಜಕೀಯ ಸಂದೇಶ ತಂದ ತರುಣ ನವಲಗುಂದದಲ್ಲಿಯೇ ನೆಲೆಯಾಗಬೇಕಾಗುತ್ತಾನೆ. ಅಲ್ಲಿಂದ ಆ ಮನೆಯ ಜನರ ಜೀವನದ ಏರಿಳಿತಗಳು ಸುತ್ತಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ತೊರೆಯ ನೀರಿನ ಹರಿವಿನ ಹಾಗೆ ಚಿತ್ರಿತವಾಗಿವೆ. ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಇನ್ನೊಂದು ವಿಶೇಷವೇನೆಂದರೆ ಧಾರವಾಡ ಜಿಲ್ಲೆಯ ನರಗುಂದ , ನವಲಗುಂದ ಪ್ರದೇಶದ ಆಡುಮಾತು ಹಾಗೂ ಸಂಸ್ಕೃತಿಯನ್ನು ಬಳಸಿಕೊಂಡಿದೆ.ವೈದ್ಯರಿಗೆ ಅಭಿನಂದನೆಗಳು..

No comments: