Wednesday, February 6, 2008

ಏಕನಾಥೇಶ್ವರಿ ಜಾತ್ರಾ ಮಹೋತ್ಸವ ಭಕ್ತಿ ಭಾವದ ಸಂಕೇತ


ತಿಹಾಸಿಕ ಚಿತ್ರದುರ್ಗ ಕೋಟೆಯೂ ತನ್ನಲ್ಲಿ ಧರ್ಮ ಮತ್ತು ಸಂಸ್ಕೃತಿಯ ಖಜಾನೆಯನ್ನು ಅಂತರ್ಗತ ಮಾಡಿಕೊಂಡಿದೆ. ಏಳು ಸುತ್ತಿನ ಕೋಟೆಯಲ್ಲಿ ದೇವಾಲಯಗಳು, ಬುರುಜುಗಳು, ಹೊಂಡಗಳು, ಬತ್ತೇರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ತಮ್ಮ ಐತಿಹ್ಯವನ್ನು ಬಿಚ್ಚಿ ಹೇಳುತ್ತಿವೆ. ಅದರಲ್ಲಿಯೂ ದೇವಾಲಯಗಳು ಧರ್ಮ ಮತ್ತು ಸಂಸ್ಕೃತಿಯ ಪೋಷಣೆ ಮಾಡುವ ಕೇಂದ್ರಗಳಾಗಿ ರಾಜರಿಂದ ಪೋಷಿಸಲ್ಪಡುತ್ತಿದ್ದವು. ಮದಕರಿ ನಾಯಕರ ಆರಾಧ್ಯ ದೇವಿಯಾಗಿ ಇಂದು ಸರ್ವರಿಂದ ಪೊಜಿಸಲ್ಪಡುತ್ತಿರುವ ದೇವಿ ಶ್ರೀ ಏಕನಾಥೇಶ್ವರಿ ಅವುಗಳಲ್ಲಿ ಒಂದು. ಚಿತ್ರದುರ್ಗದ ಮೇಲುದುರ್ಗವು ಒಂದಾನೊಂದು ಕಾಲದಲ್ಲಿ ಕೈಲಾಸ ಪರ್ವತವಾಗಿತ್ತಂತೆ. ಪಾರ್ವತಿ ಪರಮೇಶ್ವರರು ಈ ಸ್ಥಳದಲ್ಲೆ ವಾಸಿಸುತ್ತಿದ್ದರಂತೆ ಎಂಬ ಪ್ರತೀತಿ ಇದೆ. ವಿಫ್ನೇಶ್ವರ ಗಜಾನನಾದುದು ಇಲ್ಲಿಯೇ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆ ಪುಷ್ಠಿ ನೀಡುವ ಸಂಪಿಗೆ ಸಿದ್ದೇಶ್ವರ ಮತ್ತು ಗಣಪತಿಯ ದೇವಸ್ಥಾನಗಳು ಮೇಲುದುರ್ಗದಲ್ಲಿವೆ.
ಈ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷ ವಸಂತ ಮಾಸದ ಆರಂಭದಲ್ಲಿ ನಡೆಯುತ್ತದೆ. ಹಿಂದೂಗಳ ಹೊಸ ವರ್ಷ ಯುಗಾದಿಯ ಚಂದ್ರ ದರ್ಶನವು ಮಂಗಳವಾರ ಬಂದರೆ ಆ ದಿನವೇ ಈ ದೇವಿಯ ಜಾತ್ರೆಯ 'ಸಾರು' ಹಾಕಲಾಗುತ್ತದೆ. (ಸಾರು ಎಂದರೆ ತಿಳಿಸು ಎಂದರ್ಥ) ಒಂದು ವೇಳೆ ಚಂದ್ರ ದರ್ಶನವು ಬೇರೆ ಇನ್ನಾವುದೇ ದಿನದಂದು ಬಂದರೆ ಮಂಗಳವಾರ ಬರುವವರೆಗೆ ಕಾಯಲಾಗುತ್ತದೆ. ಸಾರುವ ಸಮಯದಲ್ಲಿ ದೇವಿಯ ಜಾತ್ರೆಯನ್ನು ನೆರವೇರಿಸುವ ಕೈವಾಡದ ಹನ್ನೆರಡು ಜನಾಂಗಗಳ ಪ್ರಮುಖರಿರುತ್ತಾರೆ. ಈ ಹನ್ನೆರಡು ಜನ ಕೈವಾಡದವರಿಗೆ ಜಾತ್ರೆಯ ಸಮಯದಲ್ಲಿ ನಿರ್ದಿಷ್ಟ ಕರ್ತವ್ಯಗಳಿರುತ್ತವೆ.
ಈ ದೇವಿಯ ಸಾರಿನ ವಿಶೇಷತೆ ಎಂದರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಮಾರು 66 ದೇವತೆಗಳ ಜಾತ್ರಾ ಮಹೋತ್ಸವಗಳು ಈ ದೇವಿಯ ಜಾತ್ರೆಯ ಸಾರಿನಡಿಯಲ್ಲಿಯೇ ನಡೆಯುತ್ತವೆ. ಜಾತ್ರೆಯ ಸಾರು ಹಾಕಿದ ನಂತರ ಎರಡು ದಿನಗಳು ದೇವಸ್ಥಾನದ ಸ್ವಚ್ಚತೆಗೆ ಮೀಸಲು. ಮೂರನೆಯ ದಿನ ರಾತ್ರಿ ಅಂದರೆ ಶುಕ್ರವಾರ ದೇವಿಗೆ ಭಂಡಾರ ಪೂಜೆ ಮಾಡುತ್ತಾರೆ. (ಭಂಡಾರ ಪೂಜೆ ಎಂದರೆ ಆರಿಶಿನ ಕೊಂಬನ್ನು ಬಹಳ ಶ್ರದ್ದೆ ಮತ್ತು ಭಕ್ತಿಗಳಿಂದ ಕುಟ್ಟಿ ದೇವಿಯ ಮುಖಕ್ಕೆ ಲೇಪನ ಮಾಡುತ್ತಾರೆ.) ಜಾತ್ರೆಯಲ್ಲಿ ಭಂಢಾರ ಪೂಜೆಯನ್ನು ಮೂರು ಬಾರಿ ನೆರವೇರಿಸಲಾಗುವುದು. ಮೊದಲ ಭಂಢಾರ ಪೂಜೆಯಲ್ಲಿ ದೇವಿಯೂ ಶಾಂತ ಸ್ವರೂಪಿಣಿಯಾಗಿರುತ್ತಾಳೆಂಬ ನಂಬಿಕೆ. ಈ ಪೂಜೆಯ ವಿಸರ್ಜನೆಯ ನಂತರ ಅದನ್ನು ಕಟ್ಲೆ ಭಂಢಾರವೆಂದು ಸೇವನೆಗೆ ಬಳಸುತ್ತಾರೆ. ಹಾಗೆಯೇ ಬಿತ್ತನೆಯ ಸಮಯದಲ್ಲಿ ಬೆಳೆಯೂ ಹುಲುಸಾಗಿ ಬೆಳೆದು ಅಧಿಕ ಉತ್ಪಾದನೆ ನೀಡಲು ಇದನ್ನು ಬಳಸುತ್ತಾರೆ.
ಮಾರನೆಯ ದಿನ ಶನಿವಾರದಂದು ದೇವಿಗೆ 'ಮದುವಣ ಗಿತ್ತಿ' ಪೂಜೆಯನ್ನು ಮಾಡಲಾಗುವುದು. ಅಂದು ಉದ್ಭವ ಮೂರ್ತಿ ಮತ್ತು ಉತ್ಸವ ಮೂರ್ತಿಗಳೆರಡನ್ನು ಶೃಂಗರಿಸಿ ಕಂಕಣಧಾರಣೆ ಮಾಡುತ್ತಾರೆ. ಅಂದು ದೇವಿಯೂ 'ಸಿಂಹವಾಹಿನಿ'ಯಾಗಿರುತ್ತಾಳೆ. ಮರುದಿನ ಭಾನುವಾರ ರಾತ್ರಿ ದೇವಿಯೂ 'ಸರ್ಪ ವಾಹಿನಿ'ಯಾಗಿಯೂ ಮತ್ತು ಸೋಮವಾರ ರಾತ್ರಿ 'ಮಯೂರವಾಹಿನಿ'ಯಾಗಿರುತ್ತಾಳೆ. ಈ ಮೂರು ದಿನಗಳ ಸೇವೆಯನ್ನು ಚಿತ್ರದುರ್ಗ ನಗರದ ಬುರುಜನ ಹಟ್ಟಿ ಭಕ್ತಾಧಿಗಳು ನೆರವೇರಿಸುತ್ತಾರೆ.
ಪ್ರತಿದಿನ ದೇವಿಗೆ ಬುರುಜನ ಹಟ್ಟಿಯಲ್ಲಿರುವ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಲಾಗುವುದು. ಭಕ್ತಾಧಿಗಳು ದೇವಿಯನ್ನು ಹೊತ್ತ ಸೇವಾಕರ್ತರಿಗೆ ಪಾನಕ-ಫಲಹಾರದ ಏರ್ಪಾಡು ಮಾಡುವರು.
ಮಂಗಳವಾರ ಅಶ್ವವನ್ನೊಳಗೊಂಡ ಉಚ್ಚಾಯವನ್ನು ಕಟ್ಟಲಾಗುವುದು. ಬುಧವಾರ ದೇವಿಯ ಜಾತ್ರೆಯ ಪ್ರಮುಖ ಫಟ್ಟ. ಅಂದು ದೇವಿಗೆ ಮತ್ತೊಮ್ಮೆ ಭಂಢಾರ ಪೂಜೆಯನ್ನು ನೆರವೇರಿಸಲಾಗುವುದು. ಅಂದು ದೇವಿಯೂ ಭಂಢಾರ ಪೂಜೆಯಲ್ಲಿ ರೌದ್ರವತಾರದಲ್ಲಿ ಕಾಣುತ್ತಾಳೆ ಎಂಬ ನಂಬಿಕೆ. ಅರುಣೆ-ಕುಂಭಗಳನ್ನು ಹೂಡಿ ದೇವಿಯನ್ನು ವಿಜೃಂಭಣೆಯಿಂದ ಶೃಂಗಾರಿಸಲಾಗುವುದು. ಎಲ್ಲಿ ನೋಡಿದರಲ್ಲಿ ಸಡಗರವೋ ಸಡಗರ. ಅಂದು ದೇವಿಯೂ ತನ್ನ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಬರುವಳೆಂಬ ವಾಡಿಕೆ. ಗರ್ಭಗುಡಿಯಿಂದ ದೇವಿಯನ್ನು ಅಶ್ವದಿಂದ ಸುಸಜ್ಜಿತವಾದ ಉಚ್ಚಾಯದಲ್ಲಿ ಕುಳ್ಳಿರಿಸಲು ಮಡಿ ಹಾಸಿನ ಮೇಲೆ ಮಂಗಳ ವಾದ್ಯಗಳ ಫೋಷಣೆಯೊಂದಿಗೆ ಕರೆತರಲಾಗುವುದು.
ಅಂದು ಪೋತೆದಾರ ಚಾಟಿಯಿಂದ ತನ್ನ ಮೈಗೆ ಸೆಳೆದುಕೊಳ್ಳತ್ತಾನೆ. 'ಫಟಬಾಯಿ' ಪೂಜೆಯನ್ನು ನೆರವೇರಿಸಲಾಗುವುದು. ಈ ದೇವಿಯೂ ಶಕ್ತಿ ದೇವಿಯಾಗಿರುವುದರಿಂದ ಸುರಪಾನವನ್ನು ಹೋಲುವ ಈ ರೀತಿಯ ಪೂಜೆಯನ್ನು ನೆರವೇರಿಸಲಾಗುವುದು. ಮೇಲುದುರ್ಗದ ದೇವಸ್ಥಾನದಿಂದ ದೇವಿಯೂ ಕೆಳಗಿಳಿದು ಬರುವ ದಾರಿಯಲ್ಲಿ ನೀರನ್ನು ಹಾಕಿ ತಳಿರು ತೋರಣ ಕಟ್ಟಿ ಸ್ವಾಗತಿಸುತ್ತಾರೆ. ದೇವಿಯನ್ನು ಚಂದ್ರಮಾಸ್ತಮ್ಮನ ಹೊಂಡದ ಹತ್ತಿರ ಕರೆದುಕೊಂಡು ಹೋಗಿ ಗಂಗಾ ಪೂಜೆಯನ್ನು ಮಾಡುತ್ತಾರೆ. ದೊಡ್ಡಗರಡಿ, ಕರುವಿನ ಕಟ್ಟೆ, ಸುಣ್ಣಗಾರ ಬೀದಿ ಮತ್ತು ಜೋಗಿಮಟ್ಟಿ ರಸ್ತೆಯಲ್ಲಿರುವ ಭಕ್ತಾಧಿಗಳು ವಿಜೃಂಭಣೆಯಿಂದ ದೇವಿಯನ್ನು ಸ್ವಾಗತಿಸಿ ದೇವಿಯನ್ನು ಹೊತ್ತು ತಂದವರಿಗೆ ಪಾನಕ-ಫಲಹಾರಗಳನ್ನು ನೀಡುತ್ತಾರೆ. ಎಲ್ಲೆಲ್ಲೂ ಲವಲವಿಕೆ, ಉತ್ಸಾಹ. ಪ್ರಮುಖ ಬೀದಿಗಳ ಮೆರಗಣಿಗೆಯ ನಂತರ ದೇವಿಯನ್ನು ಫಿಲ್ಟರ್ ಹೌಸ್ ಎದುರಿನಲ್ಲಿರುವ ಪಾದಗುಡಿಯಲ್ಲಿ ಕುಳ್ಳಿರಿಸಲಾಗುವುದು.
ದೇವಿಯ ಜಾತ್ರೆಯ ಪ್ರಮುಖ ಆಕರ್ಷಣೀಯ ದಿನಗಳೆಂದರೆ ಶುಕ್ರವಾರ ಮತ್ತು ಶನಿವಾರ. ಶುಕ್ರವಾರ ದಿನವನ್ನು ಬೇವು-ಬೇಟೆಯ ದಿನವೆಂದು ಕರೆಯುವರು. ಶನಿವಾರ 'ಸಿಡಿ' ಉತ್ಸವ. ಶಕ್ತಿ ದೇವತೆಗಳಿಗೆ ಭಕ್ತಾಧಿಗಳು ಸಲ್ಲಿಸುವ ಹರಕೆಗಳಲ್ಲಿ ಸಿಡಿ ಆಡುವ ಹರಕೆಯೂ ಒಂದು. ಹರಕೆ ಹೊತ್ತ ಭಕ್ತಾಧಿಗಳು ಅಂದು ಉಪವಾಸವಿದ್ದು, ಎಣ್ಣೆ ನೀರಿನ ಸ್ನಾನ ಮಾಡಿ ದೇಹಕ್ಕೆಲ್ಲ ಗಂಧ ಲೇಪನ ಮಾಡಿಕೊಂಡು ಕಚ್ಚೆ ಪಂಚೆ, ಪೇಟ ಧರಿಸಿ ನಿಂಬೆ ಹಣ್ಣನ್ನು ಸಿಕ್ಕಿಸಿಕೊಂಡ ಕತ್ತಿಯನ್ನಿಡಿದು ಯುದ್ದಕ್ಕೆ ಹೊರಡುವ ಯೋಧರಂತೆ ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳತ್ತಾರೆ. ನೆಲಗಂಬದ ಮೇಲೆ ನಿಲ್ಲಿಸಿದ ಸುಮಾರು 40 ಅಡಿ ಉದ್ದದ ಮರದ ಮುಂಭಾಗಕ್ಕೆ ಸಿಡಿ ಆಡುವವರನ್ನು ಕಟ್ಟಿ ಮೂರು ಸುತ್ತು ಸುತ್ತಿಸಲಾಗುವುದು. ಮೊದಲು ಕೈವಾಡದವರಲ್ಲಿ ಒಬ್ಬರಾದ 'ಮಾತಂಗಿ' ಸಿಡಿ ಆಡುವರು. ನಂತರ ಇತರರು. ಈ ಕಾರ್ಯವನ್ನು ಕೊಂಡಿಕಾರ ನೆರವೇರಿಸುತ್ತಾನೆ. ಹಿಂದೆ ಸಿಡಿ ಆಡುವವರಿಗೆ ಕಬ್ಬಿಣದ ಕೊಕ್ಕೆಯನ್ನು ಬೆನ್ನು ಮೂಳೆಗೆ ಸಿಕ್ಕಿಸಿ ತಿರುಗಿ ಸುತ್ತಿಸುತ್ತಿದ್ದರಂತೆ ಸ್ವಲ್ಪವೂ ರಕ್ತ ಬರುತ್ತಿರಲಿಲ್ಲವಂತೆ.
- ಸಿ.ಎಲ್.ಏಕನಾಥ್.
(ಏಕನಾಥ್ ಚಿತ್ರದುರ್ಗ ಸಮೀಪದ ಐನಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಬೋಧಿಸುತ್ತಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರು.)

No comments: