Friday, February 29, 2008

ಲಾವಣಿಗಳಲ್ಲಿ ಚಿತ್ರದುರ್ಗ...

ಚಿತ್ರದುರ್ಗ ಎಂದರೆ ನೆನಪಾಗುವ ಅನೇಕ ಸಂಗತಿಗಳಲ್ಲಿ ಇಲ್ಲಿನ ಜಾನಪದವೂ ಒಂದು. ಸಿರಿಯಜ್ಜಿಯಂಥ ಅಚ್ಚರಿಗಳಿರುವ ಈ ಜಿಲ್ಲೆಯಲ್ಲಿ ನಿಮಗೆ ಅವರು ಹಾಡುವ ಲಾವಣಿಗಳಲ್ಲಿ ನೆಲದ ಸಂಸ್ಕೃತಿ ಮುಖಗಳು ಪರಿಚಯವಾಗುತ್ತವೆ. ಅಂಥವುಗಳಲ್ಲಿ ಲಾವಣಿಯೂ ಒಂದು.

ಲಾವಣಿ ವ್ಯಕ್ತಿಯೊಬ್ಬ ಬದುಕು, ಸಾಧನೆಯನ್ನು ಫ್ಯಾಂಟಸಿ ಮತ್ತು ಫ್ಯಾಕ್ಟ್ ಗಳಿಟ್ಟುಕೊಂಡು ಕಾವ್ಯ ಪ್ರಕಾರ ಎನ್ನಬಹುದು. ಲಾವಣಿ ಕಥನಾತ್ಮಕವಾದುದು. ಲಾವಣಿ ಹಾಡಿನ ರೂಪದಲ್ಲಿರುತ್ತದೆ. ವಸ್ತು, ಶೈಲಿ ಮತ್ತು ಸ್ವರೂಪಗಳಲ್ಲಿ ಲಾವಣಿ ಜನಪದ ಮೂಲಕ್ಕೆ ಸೇರಿದುದು. ಲಾವಣಿ ವಸ್ತು ನಿಷ್ಠವಾದುದು. ಕ್ರಿಯೆ, ಸಂಭಾಷಣೆ ಹಾಗೂ ಘಟನೆಗಳ ಮೂಲಕ ಅಂತ್ಯವನ್ನು ತೀವ್ರಗತಿಯಲ್ಲಿ ತಲುಪುವಂಥದು.

ಚಿತ್ರದುರ್ಗದಲ್ಲಿ ಇಂಥ ಲಾವಣಿಗಳಿಗೇನು ಕೊರತೆಯಿಲ್ಲ. ಸ್ಯಾಂಪಲ್ಲಿಗೆ

ಚಿತ್ರದುರ್ಗದ ಲಾವಣಿಗಳಲ್ಲಿ ಸಾಕಷ್ಟು ದೀರ್ಘವಾಗಿ ಮೂಡಿ ಬಂದಿರುವುದು ನಿಂಗಣ್ಣನ ಕಥೆ. ಇದನ್ನು ಖಂಡಕಾವ್ಯವೆಂದೇ ಕರೆಯಬಹುದು. ಸುಮಾರು ಏಳುನೂರು ತ್ರಿಪದಿಗಳಲ್ಲಿ ಈ ಕಾವ್ಯ ಅನಾವರಣಗೊಂಡಿದೆ. ಚಳ್ಳಕೆರೆ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಲಾವಣಿ ಪ್ರಸಿದ್ಧವಾಗಿದೆ. ನಿಂಗಣ್ಣ ಗೊಲ್ಲರದೇವತೆ, ಬೊಮ್ಮಣ್ಣನೆಂಬುವನು ಅತ್ತಿಗೆಯಾಡಿದ ಮಾತಿಗೆ ಸಿಟ್ಟು ಮಾಡಿಕೊಂಡು ಹೋಗಿ ಹೇಮರೆಡ್ಡಿಗಳ ಪಟ್ಟಣ ಸೇರಿದ. ಅಲ್ಲಿ ಬಾವಿ ನೀರಿಗೆಂದು ಬಂದ ಅತ್ತೆಮನೆ ಸೊಸೆಯರು ಊರ ಹೊರಗೆ ಅವನ್ನು ನೆಡಿ ಕೂಲಿಗೆ ಕರೆದರು. ಇದಕ್ಕೆ ಒಪ್ಪಿ ಬೊಮ್ಮಣ್ಣ ದನಕರುಗಳನ್ನು ಕಾಯಲು ನಿಂತ. ಅಲ್ಲಿ ನಿಂಗಣ್ಣ ದೇವರು ಬೊಮ್ಮಣ್ಣನ ಹತ್ತಿರ ಬಂದು ನಿನ್ನ ಹಿಂದೆ ನಾನೂ ಬರುತ್ತೇನೆ ಎಂದನು. ಅವನನ್ನು ಹೊತ್ತುಕೊಡು ಊರು ಸೇರಬೇಕೆಂದುಕೊಂಡಾಗ ನಿಂಗಣ್ಣ ದಾರಿಯೊಳಗೆ ಬಾವಿ ಪಾಲಾದನು. ಸಿರಿಯಮ್ಮ ಎಂಬುವಳು ನೀರಿಗಾಗಿ ಬಾವಿಗೆ ಬಂದಾಗ ನಿಂಗಣ್ಣ ಕೊಡದಲ್ಲಿ ಸೇರಿಕೊಂಡ. ಹಾಗೆ ಬಂದ ನಿಂಗಣ್ಣನನ್ನು ಸಿರಿಯಣ್ಣ ಎಂಬವನು ತನ್ನ ಊರಿಗೆ ಒಯ್ದು ಕಂಬಳಿ ಗದ್ದಿಗೆ ಹಾಸಿ ಕೂರಿಸಿದನು. ಹೀಗೆ ನಿಂಗಣ್ಣ ದೇವರಾದನು.

ದುರ್ಗದ ಕಡೆಯಿಂದ ಭರಮಣ್ಣನಾಯಕನ ದಂಡು ಗೊಲ್ಲರ ಹಟ್ಟಿಗೆ ಬಂದಿತು. ನಿಂಗಣ್ಣ ಗೊಲ್ಲರ ಹಿರಿಯರಿಗೆಲ್ಲ ಕನಸಿನಲ್ಲಿ ಬಂದು ಧೈರ್ಯ ಕೊಟ್ಟ. ಕರಿಯಣ್ಣ ಯುದ್ಧಕ್ಕೆ ಹೋದ ದಾರಿಯಲ್ಲಿ ಬೇಡರು, ತುರುಕರು ಇದಿರಾದರು. ಕರಿಯಣ್ಣ ಯುದ್ಧದಲ್ಲಿ ತೀರಿಕೊಂಡ. ಮುಸಲ್ಮಾನರು ನಿಂಗಣ್ಣನನ್ನು ಹೊತ್ತುಕೊಂಡು ದುರ್ಗದ ಕಡೆಗೆ ಹೊರಟರು. ಈಶ್ವರನ ಮಗಳಾದ ಗೌರಸಂದ್ರದ ಮಾರಮ್ಮ ಉರಿಗಣ್ಣು ಬಿಟ್ಟು ಮೇಲುದುರ್ಗಕ್ಕೆ ಬಂದಳು. ಮತ್ತೆ ನಿಂಗಣ್ಣನನ್ನು ಸಕಲ ಮರ್ಯಾದೆಗಳಿಂದ ಹೊತ್ತು ತಂದರು.

ಈ ಕಾವ್ಯದಲ್ಲಿ ಐತಿಹ್ಯಾಂಶಗಳಿಗಿಂತ, ಪೌರಾಣಿಕಾಂಶಗಳೇ ಹೆಚ್ಚಾಗಿದ್ದರೂ, ಐತಿಹಾಸಿಕ ಅಂಶಗಳು ಕೂಡ ಸೂಚ್ಯವಾಗಿವೆ. ಮುಸ್ಲಿಮರು ಗೊಲ್ಲರ ಹಟ್ಟಿಯನ್ನು ಲೂಟಿ ಮಾಡಿದ ಸನ್ನಿವೇಶವಿದೆ. ಚಿತ್ರದುರ್ಗ ಪಟ್ಟಣವನ್ನು ವಶಪಡಿಸಿಕೊಳ್ಳಲು ಹೈದರಾಲಿ ತನ್ನ ಸೈನ್ಯ ಸಮೇತ ಬಂದು ದುರ್ಗದ ಕೋಟೆಯ ಮುಂದೆ ಆರು ತಿಂಗಳು ಬೀಡು ಬಿಟ್ಟನೆಂದೂ ಆಗ ಸಿಪಾಯಿಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಮೇಲೆ ದಾಳಿಮಾಡಿದರೆಂದೂ ಊಹಿಸಲಾಗಿದೆ. ಚಿತ್ರದುರ್ಗದ ಪಾಳೆಯಗಾರ ಭರಮಣ್ಣನಾಯಕ ಮುಸ್ಲಿಮರ ದೊರೆಯೆಂದು ಕಾವ್ಯದಲ್ಲಿ ಹೇಳಿದೆ. ದುರ್ಗದ ಕಡೆಯಿಂದ ಬಂದ ಮುಸ್ಲಿಮರನ್ನು ಭರಮಣ್ಣನ ಕಡೆಯವರೇ ಎಂದು ತಿಳಿದಿದ್ದರಿಂದ ಹೀಗೆ ಲಾವಣಿಕಾರ ಭಾವಿಸಿರಬಹುದು

ರಣಸಾಗರ ಗೌಡ:

ಸುಮಾರು ತೊಂಬತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮದಲ್ಲಿ ನಡೆದ ಘಟನೆ ಜನಪದ ಗೀತರೂಪ ಪಡೆದಿದೆ. ಅದನ್ನು ಕೋಲುಪದದ ಧಾಟಿಯಲ್ಲಿ ಜನ ಹಾಡುತ್ತಾರೆ. ಪಾಪನಾಯಕನೆಂಬುವನು ಕೋನಸಾಗರದ ಪಟೇಲನಾಗಿದ್ದ. ಯಾರ ಮನೆಯಲ್ಲಿ ಲಗ್ನವಾದರೂ ಗೌಡನ ಮನೆಗೆ ಎಡೆಕೊಟ್ಟು ಮುಂದಿನ ಕಾರ್ಯ ನೆರವೇರಿಸಬೇಕಿತ್ತು. ಒಮ್ಮೆ ಊರಿನ ಇತರ ಪಂಗಡದವರು ಎಡೆಕೊಡದೆ ಲಗ್ನದ ದಿಬ್ಬಣವನ್ನು ಬೀದಿಯಲ್ಲಿ ತೆಗೆದುಕೊಂಡು ಬರುತ್ತಿದ್ದರು. ಪಟೇಲ ದಿಬ್ಬಣದ ಮುಂದೆ ಬಂದು ಅಗಸರಿಂದ ಪಂಜು ಕಿತ್ತುಕೊಂಡು ನೆಲಕ್ಕೆ ಹಾಕಿ ಮೆಟ್ಟಿನಿಂದ ಉಜ್ಜಿಬಿಟ್ಟ. ಈ ಅವಮಾನ ಸಹಿಸಲಾರದೆ ದಿಬ್ಬಣದ ಹಿರಿಯರು ಪಟೇಲನನ್ನು ಕೋರ್ಟಿಗೆ ಎಳೆದರು. ಚಿತ್ರದುರ್ಗದ ಕೋರ್ಟಿನಲ್ಲಿ ಮೊಕದ್ದಮೆ ಗೆದ್ದ ಪಾಪನಾಯಕ ಕೊರಳಿಗೆ ಹಾರ ಹಾಕಿಸಿಕೊಂಡು ಊರಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡ. ಅವನ ದಬ್ಬಾಳಿಕೆಯನ್ನು ಸಹಿಸಲಾರದ ಕೆಲವರು ಅವನನ್ನು ಕೊಲ್ಲಲು ಸಂಚು ಹೂಡಿದರು.
ಒಂದು ದಿನ ಗೌಡ ಕೋನಸಾಗರಕ್ಕೆ ಬರುತ್ತಿದ್ದಾಗ ಆಳೊಬ್ಬ ಬಂದು ಆತನನ್ನು ನಾಟಕದ ಮನೆಗೆ ಬರುವಂತೆ ಕರೆದ. ನಾಯಕನ ಹೆಂಡತಿ ಹಾಗೂ ಮಕ್ಕಳು ಹೋಗಬೇಡವೆಂದು, ಉಂಡು ಮಲಗು ಎಂದು ಬೇಡಿಕೊಂಡರು. ಆದರೆ ಪಾಪನಾಯಕ ಅವರ ಮಾತನ್ನು ಲೆಕ್ಕಿಸಲಿಲ್ಲ. ನಾಟಕ ಶಾಲೆಯಲ್ಲಿ ಯಾರೂ ಇರಲಿಲ್ಲ. ಕತ್ತಲೆಯೊಳಗೆ ಆವಿತಿದ್ದವನೊಬ್ಬ ನಾಯಕನ ಮೇಲೆ ಕತ್ತಿ ಬೀಸಿದ. ನಾಯಕ ಕೈ ಒಡ್ಡಿದಾಗ ಕೈಬೆರಳು ಕತ್ತರಿಸಿಕೊಂಡು ಹೋಯಿತು. ಗೌಡ ಸರ್ಪದಂತೆ ಬುಸುಗುಟ್ಟಿದ. ಸಂಚು ಹೂಡಿದವರಿಗೆ ಹಾವನ್ನು ಅರ್ಧಕೆಣಕಿ ಬಿಟ್ಟಂತೆ ಭಯವಾಯಿತು. ಮತ್ತೆ ಸೇರಿ ಉಪಾಯ ಮಾಡಿದರು. ಆಸ್ಪತ್ರೆಯ ವೈದ್ಯರ ಹೆಂಡತಿಗೆ ಆಸೆ ತೋರಿಸಿದರು. ಪರಿಣಾಮವಾಗಿ ಪಾಪನಾಯಕನ ಕೈಯ ಗಾಯಕ್ಕೆ ಹಚ್ಚುತ್ತಿದ್ದ ಮುಲಾಮಿಗೆ ವಿಷ ಸೇರಿಸಲಾಯಿತು. ವಿಷ ದೇಹಕ್ಕೆಲ್ಲಾ ವ್ಯಾಪಿಸಿತು. ಗೌಡನನ್ನು ಚಿತ್ರದುರ್ಗಕ್ಕೆ ಕರೆತಂದರು. ಆದರೂ ಗುಣಮುಖವಾಗದೆ ಗೌಡ ತೀರಿಕೊಂಡ. ಗೀತೆಯಲ್ಲಿ ಬರುವಂತೆ ನಾಯಕನ ಕೊಲೆಗೆ, ಮದುವೆ ದಿಬ್ಬಣದ ಪಂಜು ತುಳಿದದ್ದೊಂದೇ ಕಾರಣವಲ್ಲವೆಂದೂ, ಇನ್ನೂ ಬೇರೆ ಬೇರೆ ಕಾರಣಗಳಿದ್ದುವೆಂದೂ ಊರಿನವರು ಹೇಳುತ್ತಾರೆ.

ಮತ್ತಿ ತಿಮ್ಮಣ್ಣ: ಚಿತ್ರದುರ್ಗ ಸಂಸ್ಥಾನದ ನಾಯಕರಲ್ಲಿ ಮೊದಲನೆಯವನಾದ ಮತ್ತಿ ತಿಮ್ಮಣ್ಮ ನಾಯಕನನ್ನು ಕುರಿತ ಅನೇಕ ಲಾವಣಿಗಳಿವೆ. ತಿಮ್ಮಣ್ಣ ಕಲ್ಬುರ್ಗಿಯ ಮೇಲೆ ಏರಿ ಹೋಗಿ ಅಲ್ಲಿಯ ನವಾಬನನ್ನು ಗೆದ್ದು ವಿಜಯನಗರದ ಪತಾಕೆಯನ್ನು ಅಲ್ಲಿಯ ಕೋಟೆಯ ಮೇಲೆ ಹಾರಿಸಿದನೆಂದು ಹೇಳಲಾದ ಸಂದರ್ಭವನ್ನು ಜನಪದ ಕವಿಗಳು ಹಾಡಿನಲ್ಲಿ ಸೆರೆಹಿಡಿದಿದ್ದಾರೆ. ‘ಗಾದ್ರಿಮಲೆ ಹೆಬ್ಬುಲಿ’ ಹಾಡನ್ನು ಇಲ್ಲಿ ಹೆಸರಿಸಬಹುದು.

‘ಕಲ್ಬುರ್ಗಿ ಕೋಟೆಯ ಹತ್ತಿ

ಮೆದಕೇರಿ ಕಿತ್ತಾನು ಫೀರಂಗಿ ಕತ್ತಿ

ಸುತ್ತಾಲು ಹತ್ತಾವು ಬತ್ತಿ

ಮೆದಕೇರಿ ಕಿತ್ತೀದ ವಿಜಯಾದ ಕತ್ತಿ.’

ಮುಂತಾದವುಗಳಲ್ಲಿ ಮದಕರಿನಾಯಕ ಎಂದು ಮಾತ್ರ ಬರುತ್ತದೆ. ವಿಜಯನಗರದ ಅರಸರು ತಿಮ್ಮಣ್ಣನಾಯಕನಿಗೆ ನೀಡಿದರೆನ್ನಲಾದ ‘ಹಗಲು ಕಗ್ಗೊಲೆಯ ಮಾನ್ಯ’ ಎಂಬ ಬಿರುದಿನ ವಿಷಯ ಈ ನಾಯಕನನ್ನು ಕುರಿತ ‘ವಂಶಾವಳಿ’ಯಲ್ಲಿ ಉಲ್ಲೇಖಗೊಂಡಿದೆಯೇ ಹೊರತು ಶಾಸನಗಳಲ್ಲಿ ಕಂಡುಬರುವುದಿಲ್ಲ. ಕ್ರಿ.ಶ.1653ರಲ್ಲಿ ‘ಯಿಂದಡಿ ಮದಕರಿ ನಾಯಕನು’ ನೀಡಿರುವ ಹಾಗೂ ಕ್ಯಾಸಾಪುರದಲ್ಲಿ ದೊರೆತ ತಾಮ್ರ ಪಟದಲ್ಲಿ ಈ ಬಿರುದು ಮೊತ್ತ ಮೊದಲ ಬಾರಿಗೆ ಉಲ್ಲೇಖಗೊಂಡಿರುವಂತೆ ಕಾಣುತ್ತದೆ. ಆದ್ದರಿಂದ ತಿಮ್ಮಣ್ಣನಾಯಕನನ್ನು ಕುರಿತ ಗೀತೆಗಳು “ಅವನಿಗೇ ನೇರವಾಗಿ ಸಂಬಂಧಿಸಿದುವೆಂದು ತಿಳಿಯುವಲ್ಲಿ ಪುನರಾಲೋಚಿಸುವುದು ಸೂಕ್ತ” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.


ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಗೀತೆಗಳು ಪ್ರಚಲಿತದಲ್ಲಿವೆ. ಚಿತ್ರದುರ್ಗದ ಮದಕರಿನಾಯಕನ ಬಗ್ಗೆ ದೀರ್ಘಕಾವ್ಯಗಳೇ ಇರುವುದರಿಂದ ಅವುಗಳನ್ನು ವಿಶೇಷವಾಗಿ ಪರಿಶೀಲಿಸಬೇಕಾಗಿದೆ. ಇತರ ಗೀತೆಗಳಲ್ಲಿ ಜನಪದ ಗೀತೆಗಳಿಂದ ಹಿಡಿದು ಲಾವಣಿಗಳವರೆಗೆ ಅನೇಕ ತರಹದ ಸಾಹಿತ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಲಭಿಸುತ್ತದೆ. “ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಚಾರದಲ್ಲಿರುವಷ್ಟು ಚಾರಿತ್ರಿಕ ಗೀತೆಗಳು ಬೇರೆ ಯಾವ ಜಿಲ್ಲೆಯಲ್ಲೂ ಕಂಡುಬರುತ್ತಿಲ್ಲ. ಚಿತ್ರದುರ್ಗ ಪಾಳೆಯಗಾರರಿಗೆ ಸಂಬಂಧಿಸಿದ ಹಲವು ಗೀತೆಗಳನ್ನು ಆ ಜಿಲ್ಲೆಯ ಕೋಲಾಟಗಾರರು ಇಂದಿಗೂ ಉಳಿಸಿಕೊಂಡು ಬಂದಿರುವುದು ಒಂದು ಭಾಗ್ಯ. ಹಳೆಯ ಮೈಸೂರು ಪ್ರದೇಶದಲ್ಲಿ ಚಾರಿತ್ರಿಕ ಜನಪದ ಗೀತೆಗಳಿಗೆ ಚಿತ್ರದುರ್ಗ ಜಿಲ್ಲೆ ಪ್ರಖ್ಯಾತವಾಗಿದೆ” ಎಂಬ ಮಾತುಗಳಿಂದ ಈ ಜಿಲ್ಲೆಯ ವೀರ ಸಾಹಿತ್ಯದ ಸಮೃದ್ಧಿ ತಿಳಿಯುತ್ತದೆ. ‘ಜನಪದ ಸಾಹಿತ್ಯದಲ್ಲಿ ಚಿತ್ರದುರ್ಗ’ ಎಂಬ ತಮ್ಮ ಲೇಖನದ ಮೂಲಕ ಕೃಷ್ಣಮೂರ್ತಿ ಹನೂರು ಚಿತ್ರದುರ್ಗದ ಐತಿಹಾಸಿಕ ಕಡೆ ಗಮನ ಸೆಳೆದಿದ್ದಾರೆ .
(ಈ ಮಾಹಿತಿಯನ್ನು ಜಯಲಕ್ಷ್ಮಿ ಅವರ ಕನ್ನಡದಲ್ಲಿ ಐತಿಹಾಸಿಕ ಜನಪದ ಕಾವ್ಯಗಳು ಪ್ರಬಂಧದಿಂದ ತೆಗೆದುಕೊಂಡಿದ್ದೇವೆ.)

No comments: