Wednesday, February 6, 2008

ಮನಮೋಹಕ ಮರಗಾಲು ಕುಣಿತ-ಮಟ್ಟಿ ಪೂಜೆ



ಒಂದೊಂದು ಭೂಪ್ರದೇಶದಲ್ಲಿ ಒಂದೊಂದು ಕಲಾಪ್ರಕಾರ ಜನಪ್ರಿಯವಾಗಿರುತ್ತದೆ. ನಮ್ಮ ಜನಪದೊಂದಿಗೆ ಬೆರೆತ ಈ ಕಲಾ ಪ್ರಕಾರಗಳು ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿವೆ ಅನ್ನು ಮಾತುಗಳಂತು ಕೇಳಿ ಬರುತ್ತಲೇ ಇವೆ. ಹಾಗೆ ನಮ್ಮ ಜಿಲ್ಲೆಯನ್ನ ಪ್ರತಿನಿಧಿಸುವ, ಈಗ ಕಣ್ಮರೆಯಾಗುತ್ತಿದೆ ಎನ್ನುವಂಥ ಒಂದು ಕಲಾ ಪ್ರಕಾರ ಮರಗಾಲು ಕುಣಿತ... ವಿಶಿಷ್ಟ ಕುಣಿತದ ಬಗ್ಗೆ ಸಿ.ಎಲ್. ಏಕನಾಥ್ ಒಂದು ಲೇಖನ ನಮಗೆ ಕಳಿಸಿದ್ದಾರೆ.....
ಶ್ರಾವಣ ಮಾಸದಲ್ಲಿ ಭೂತಾಯಿ ಹಸಿರುಟ್ಟು ಹಸನ್ಮುಖಿಯಾಗಿರುತ್ತಾಳೆ. ಜಿನುಗುಟ್ಟುವ ಜಡಿ ಮಳೆ, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತ. ಮನೆಮನೆಗಳಲ್ಲಿ ಪುರಾಣ. ಕಥೆಗಳ ಪಠಣ ನಡೆಯುತ್ತಿರುತ್ತದೆ. ನೂಲಿನುಣ್ಣಿಮೆಯ ಸಮಯದಲ್ಲಿ ಹೆಂಗಳೆಯರಿಗೆ ತಮ್ಮ ಸಹೋದರರಿಗೆ ರಾಕಿ ಕಟ್ಟುವ ಸಂಭ್ರಮ ಇಂತಹ ಸಂವೃದ್ದಿಯ ಸುಸಂದರ್ಭದಲ್ಲಿ ಚಿತ್ರದುರ್ಗ ನಗರದ ಪ್ರಮುಖ ಗರಡಿಗಳಾದ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿ ಗರಡಿ ಮತ್ತು ಹಗಲು ದಿವಟಿಗೆ ಗರಡಿಗಳಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮರಗಾಲು ಕುಣಿತ ಮತ್ತು ಮಟ್ಟಿ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಮರಗಾಲು ಕುಣಿತದ ಹಿನ್ನಲೆ: ಮರಗಾಲು ಕುಣಿತ ಅನಾದಿಕಾಲದಿಂದಲೂ ಬಂದಂತಹ ಜನಪದ ಕಲೆ. ದೇಶದ ವಿವಿಧ ಭಾಗಗಳಲ್ಲಿ ಈ ಮರಗಾಲು ಕುಣಿತ ಆಯಾಯ ಪ್ರದೇಶಗಳಿಗೆ ತಕ್ಕಂತೆ ವಿಭಿನ್ನವಾಗಿದೆ. ರಾಜರ ಕಾಲದಲ್ಲಿ ಜಟ್ಟಿಗಳಿಗೆ ಪ್ರಮುಖ ಪ್ರಾತಿನಿಧ್ಯವಿತ್ತು. ವಿಶೇಷವಾಗಿ ಯುದ್ದ ಸಮಯದಲ್ಲಿ ಕೋಟೆ ಕೊತ್ತಲಗಳ ಬಳಿ ಹೋದಾಗ ಹಂದರಗಳನ್ನು ದಾಟಿ ಶತ್ರುಕೋಟೆಯನ್ನೇರಲು ಮರಗಾಲುಗಳನ್ನು ಬಳಸುತ್ತಿದ್ದರು. ಹಾಗೆಯೇ ಮರಗಾಲು ಕಟ್ಟಿ ಕುಣಿಯುವುದರಿಂದ ಊರಿಗೆ ಉತ್ತಮ ಮಳೆಬೆಳೆಯಾಗುತ್ತದೆ ಎಂಬ ನಂಬಿಕೆಯು ಉಂಟು. ಹಿಂದೆ ಪೈಲ್ವಾನರು ಮಾತ್ರ ಮರಗಾಲು ಕಟ್ಟುತ್ತಿದ್ದರು. ಆದರೆ ಇಂದು ಪೈಲ್ವಾನರೊಂದಿಗೆ ಯುವಕರು ಈ ಕಲೆಯನ್ನು ಪ್ರೋತ್ಸಾಹಿಸಲು ಮರಗಾಲನ್ನು ಕಟ್ಟುತ್ತಾರೆ.
ಮರಗಾಲು ಕುಣಿತದ ಪ್ರಾರಂಭದ ವಿಧಾನ: ಶ್ರಾವಣ ಮಾಸದಲ್ಲಿ ನಡೆಯುವ ಈ ಮರಗಾಲು ಕುಣಿತಕ್ಕೆ ವಿಶೇಷತೆ ಇದೆ. ಗರಡಿಯ ಚೌಕಾಕೃತಿಯ ಕಣದಲ್ಲಿನ ಕೆಮ್ಮಣ್ಣಿಗೆ ಹತ್ತು ಮೂಟೆ ಜೇಕಿನ ಗಡ್ಡೆ ಹಿಟ್ಟು, ಸುಮಾರು 9 ಕೆ.ಜಿ. ಕಪರ್ೂರ ಮತ್ತು ಕುಂಕುಮ, 21ಕೆ.ಜಿ ಟಿಂಚರ್, 9ಕೆ.ಜಿ ದೇವದಾರು ಎಣ್ಣೆ, 9ಕೆ.ಜಿ. ಶ್ರೀಗಂಧದ ಪುಡಿ, 230 ಗ್ರಾಂ ಸುಗಂಧ ದ್ರವ್ಯ ಪ್ರತಿ ನೂರು ಮೂಟೆ ಮಣ್ಣಿಗೆ 20ಕೆ.ಜಿ ಎಳ್ಳೆಣ್ಣೆ ಮತ್ತು ಬೇವಿನ ಎಣ್ಣೆ ಮಿಶ್ರಣ ಮಾಡಿ ಕಣಕ್ಕೆ ತುಂಬುತ್ತಾರೆ. ಈ ಸಾಮಗ್ರಿಗಳ ಮಣ್ಣು ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ ಮತ್ತು ರೋಗಾಣು ನಾಶಕ ಗುಣವನ್ನು ಹೊಂದಿರುತ್ತದೆ. ಇಂತಹ ಮಣ್ಣನ್ನು ಐದು ಅಡಿಗೆ ಏರಿಸುತ್ತಾರೆ. ಮಟ್ಟಿ ಏರಿಸುವಾಗ ನೀರನ್ನು ಚಿಮುಕಿಸುತ್ತಾ ಮರದ ದಿಮ್ಮೆಯಿಂದ ಬಡಿದು ಗಟ್ಟಿ ಮಾಡುತ್ತಾರೆ. ಉಸ್ತಾದರು(ಪೈಲ್ವಾನರ ಗುರು) ಮಟ್ಟಿಯೊಳಗೆ ಗೌಪ್ಯವಾಗಿ ಒಣ ತೆಂಗಿನಕಾಯಿ ಮುಚ್ಚಿಡುತ್ತಾರೆ. ಮುಂದೆ ಮಟ್ಟಿಯನ್ನು ಇಳಿಸುವಾಗ ಆ ಕಾಯಿಯನ್ನು ಪೈಲ್ವಾನರು ಹುಡುಕಬೇಕು. ಮಟ್ಟಿಯನ್ನು ಏರಿಸಿದ ಮೇಲೆ ಅದರ ಮೇಲೆ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ತಂದ ಬೀಟೆ ಸೊಪ್ಪಿನಿಂದ ಅಲಂಕರಿಸುತ್ತಾರೆ. ಈ ವಿಧಿ-ವಿಧಾನಗಳನ್ನು ಶುಕ್ರವಾರದಂದು ಮಾಡುತ್ತಾರೆ.
ಶನಿವಾರ ಬೆಳಗ್ಗೆ ಗಂಗಾ ಪೂಜೆಯನ್ನು ಮಾಡಿಸಿಕೊಂಡು ಬಂದು ಏರಿಸಿರುವ ಮಟ್ಟಿಗೆ ಪೂಜೆ ಸಲ್ಲಿಸಿ ಮಟ್ಟಿಯ ಮೇಲೆ ಕಳಶ ಸ್ಥಾಪಿಸುತ್ತಾರೆ. ನಂತರ ಮರಗಾಲನ್ನು ಪೂಜೆಗೆ ಇಡುತ್ತಾರೆ. ಮಧ್ಯಾಹ್ನ 2-30ರ ಸಮಯದಲ್ಲಿ ಪಲ್ಲಕ್ಕಿಯನ್ನು ಅಲಂಕರಿಸಿ ಅದರಲ್ಲಿ ಶಕ್ತಿ ಸಂಕೇತಗಳಾದ ಮಾರುತಿ ಮತ್ತು ಆದಿ ಶಕ್ತಿಯ ಪೋಟೋಗಳನ್ನು ಇಡುತ್ತಾರೆ. ಆ ಪಲ್ಲಕ್ಕಿಯ ಮುಂದೆ ಯುವಕರಿಂದ ಹಿರಿಯರವರೆಗೆ ನಾಲ್ಕು ಅಡಿಯಿಂದ ಹನ್ನೆರಡು ಅಡಿಯವರೆಗಿನ ಮರಗಾಲನ್ನು ಕಟ್ಟುತ್ತಾರೆ. ಮರಗಾಲುಗಳನ್ನು ಪಾಲಾವಣ, ಎಸಳಿ ಮುಂತಾದ ಹಗುರವಾಗಿದ್ದು ಗಟ್ಟಿಯಾಗಿರುವ ಮರದಿಂದ ಮಾಡಿರುತ್ತಾರೆ. ಅವು ಐದಾರು ಇಂಚು ಸುತ್ತಳತೆಯನ್ನು ಹೊಂದಿರುತ್ತವೆ. ಪಾದವನ್ನು ಊರಲು ಅನುಕೂಲವಾಗುವಂತೆ ಮೆಟ್ಟಿಲಿನ ಆಕಾರದಲ್ಲಿ 'ಕಂಡು'ಮಾಡಿ ಮರವನ್ನು ನಯಗೊಳಿಸಿರುತ್ತಾರೆ.
ಮರಗಾಲನ್ನು ಕಟ್ಟಿದವರು ವಿಶೇಷವಾದ ವೇಷಭೂಷಣಗಳಿಂದ ಅಲಂಕೃತರಾಗಿರುತ್ತಾರೆ. ಕಚ್ಚೆ ಪಂಚೆ, ಜುಬ್ಬ, ಜುಬ್ಬದ ಮೇಲೆ ವ್ಯಾಸ್ ಕೋಟ್, ತಲೆಗೆ ಮಹಾರಾಜರ ಪೇಟ ಅಥವಾ ರುಮಾಲು ಕೈಯಲ್ಲಿ ಗರಡಿಯ ನಿಶಾನಿಯಾದ ಕಲ್ಕಿ ತುರಾಯಿ ಹಿಡಿದಿರುತ್ತಾರೆ. ವಾದ್ಯಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ 'ರಾಮ್, ರಾಮ್ ಗೋವಿಂದ' ಎಂದು ದೇವರ ನಾಮ ಸ್ಮರಿಸುತ್ತಿರುತ್ತಾರೆ. ಅವರ ಮುಂದೆ ಗರಡಿಯ ಪೈಲ್ವಾನರಲ್ಲಿ ದಷ್ಠಪುಷ್ಠನಾದ ಜಟ್ಟಿಗೆ ಕೆಂಪು ಮಣ್ಣನ್ನು ಬಳಿದಿರುತ್ತಾರೆ. ಅವನು ಕೈ, ಕೊರಳು ಮತ್ತು ರಟ್ಟಿಗಳಿಗೆ ಕುರಿಯ ಉಣ್ಣೆಯಿಂದ ಮಾಡಿದ ದಂಡೆಯನ್ನು ಕಟ್ಟಿರುತ್ತಾನೆ. ಬಾಯಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂದು 40-50 ಕೆ.ಜಿ. ತೂಕದದುಂಡು ಮರದ, ಗದೆಯ ರೂಪದ ದಿಂಡನ್ನು ಹೆಗಲ ಮೇಲೇರಿಸಿ ವಾದ್ಯಗಳ ಮೇಳಕ್ಕೆ ತಕ್ಕಂತೆ ನತರ್ಿಸುತ್ತಾನೆ. ಈ ಮರಗಾಲು ಮೆರವಣಿಗೆಯೂ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ.
ಮಟ್ಟಿ ಪೂಜೆ ಕಾರ್ಯಕ್ರಮ: ಮರಗಾಲು ಮೆರವಣಿಗೆ ಮುಗಿದು ನಂತರ ಬರುವ ಶನಿವಾರ ಗರಡಿ ಮನೆಯಲ್ಲಿ 'ಮಟ್ಟಿಪೂಜೆ'. ಇದನ್ನು 'ಹೂಗಂಧ' ಪೂಜೆಯಂತಲೂ ಕರೆಯುತ್ತಾರೆ. ಅಂದು ಮಟ್ಟಿಯ ಮೇಲೆ ಆದಿಶಕ್ತಿ ಮತ್ತು ಮಾರುತಿಯ ಪೋಟೋ ಇಟ್ಟು ಹೂವಿನಿಂದ ಅಲಂಕರಿಸಿರುತ್ತಾರೆ. ಪೈಲ್ವಾನರು ವ್ಯಾಯಾಮಕ್ಕೆ ಬಳಸುವ ಎಲ್ಲ ಸಾಮಾಗ್ರಿಗಳನ್ನು ಶೃಂಗರಿಸುತ್ತಾರೆ. ಈ ಪೂಜೆಯ ಸಮಯದಲ್ಲಿ ಪೂಜೆ ನೆರವೇರಿಸುವ ಗರಡಿಯವರು ಇತರೆ ಗರಡಿಯ ಕುಸ್ತಿಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಕುಸ್ತಿಯಲ್ಲಿ ಸಂಫರ್ಷ ಸಹಜ ಅಂತಹ ಸಂಘದಿಂದುಂಟಾದ ವೈಷಮ್ಯ ಮರೆತು ಸಹೋದರತೆಯನ್ನು ಸಾರಲು ಇದೊಂದು ಸುಸಂದರ್ಭ. ಈ ಪೂಜಾ ಕಾರ್ಯಕ್ರಮಕ್ಕೆ ನಾಡಿನ ಹಿರಿಯರು ಮತ್ತು ಗಣ್ಯರನ್ನು ಸ್ವಾಗತಿಸಲಾಗುತ್ತದೆ. ಆ ಸಮಾರಂಭದಲ್ಲಿ ಆ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಪೈಲ್ವಾನರಿಗೆ ಬಹುಮಾನ ನೀಡಿ ಸನ್ಮಾನಿಸಲಾಗುವುದು. ಪೈಲ್ವಾನರಿಗೆ ಇದೊಂದು ಶಾಲಾ ವಾಪರ್ಿಕೋತ್ಸವ ಇದ್ದ ಹಾಗೆ.
ಮರುದಿನ ಗರಡಿ ಮನೆಗೆ ಮಹಿಳೆಯರಿಗೆ ಪ್ರವೇಶ. ರೈತರಿಗೆ ಭೂಮಿತಾಯಿ ಹೇಗೋ ಹಾಗೇ ಮಟ್ಟಿ ಪೈಲ್ವಾನರಿಗೆ ಭೂಮಿತಾಯಿ. ಈ ಮಟ್ಟಿ ಪೂಜೆಯ ಸಮಯದಲ್ಲಿ ಮಹಿಳೆಯರಿಗೆ ವರ್ಷಕ್ಕೊಂದು ಬಾರಿ ಮಾತ್ರ ಪ್ರವೇಶ. ಅಂದು ಮಹಿಳೆಯರಿಗೆ ಆರಿಶಿನ ಕುಂಕುಮ ಫಲಪುಷ್ಪ ನೀಡಿ ಸತ್ಕರಿಸುತ್ತಾರೆ. ಮಹಿಳೆಯರು ಗರಡಿ ಮನೆಗೆ ಬಂದು ಹೋದರೆ ಶಾಂತಿ ನೆಮ್ಮದಿಯಿರುತ್ತದೆಂಬ ನಂಬಿಕೆ.
ಮಟ್ಟಿ ಪೂಜೆಯ ನಂತರ ಬರುವ ಶನಿವಾರದಂದು ಮಟ್ಟಿಯೊಡೆಯುವ ದಿನ ಪೈಲ್ವಾನರು ತಮ್ಮ ಮುಷ್ಠಿ, ಮೊಣಕೈ ಮತ್ತು ಭುಜದಿಂದ ಮಟಿಯನ್ನು ಅಗೆದು ಮಟ್ಟಿಯಲ್ಲಿ ಗೌಪ್ಯವಾಗಿಟ್ಟ ಕಾಯಿ ಹುಡುಕುತ್ತಾರೆ. ಯಾವ ಪೈಲ್ವಾನನಿಗೆ ಕಾಯಿ ಸಿಗುತ್ತದೋ ಆ ಪೈಲ್ವಾನನಿಗೆ ಆ ವರ್ಷ ಕುಸ್ತಿಯಲ್ಲಿ ವಿಜಯಮಾಲೆ ಖಂಡಿತ ಎಂಬ ಭಾವನೆಯಿದೆ. ನಂತರ ಪೂಜೆ ಮಾಡಿ, ಮೊಸರನ್ನ ನೈವೇದ್ಯ ಮಾಡುತ್ತಾರೆ. ಚಿತ್ರದುರ್ಗದ ಗರಡಿಯವರು ವಿಶೇಷವಾಗಿ ದೊಡ್ಡ ಗರಡಿ ಯುವಕ ಸಂಘದವರು ಆಗಾಗ ಕಾರ್ಯಕ್ರಮ ನೀಡುತ್ತಿರುತ್ತಾರೆ. ಈ ಕಲೆಯ ರಕ್ಷಣೆ ನಮ್ಮೆಲ್ಲರದಲ್ಲವೇ?

No comments: