Thursday, July 24, 2008

ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ...

ಅಂತು ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನದ ಸಂಚಲನ ಉಂಟಾಗಿದೆ. ಈಗ ಬಂದಿರುವ ವರ್ತಮಾನ ಕಳೆದೊಂದು ತಿಂಗಳಲ್ಲಿ ಸಮ್ಮೇಳನದ ಬಗ್ಗೆ ಆಗಿರುವ ಚರ್ಚೆಗಳ ಸುದ್ದಿ ಹೊತ್ತು ತಂದಿದೆ. ನಿಮಗೆ ನೆನಪಿರಬಹುದು. ಈ ಹಿಂದೆ ನಾವು ಸಮ್ಮೇಳನದ ಸೊಲ್ಲಿಲ್ಲ ಎಂದು ನಿರುತ್ಸಾಹದಿಂದ ಮಾತುಗಳನ್ನಾಡಿದ್ದೆವು.
ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಸಮ್ಮೇಳನದ ಬಗ್ಗೆ ಮಾತುಗಳು ಕೇಳಿಬರಲಾರಂಭಿಸಿವೆ. ಜಿಲ್ಲೆಯವರೇ ಆದ ಷಣ್ಮುಖಪ್ಪ ಎಂಬುವರು ಪ್ರಜಾವಾಣಿ ಪತ್ರಿಕೆಯ ವಾಚಕರ ವಾಣಿಗೊಂದು ಪತ್ರ ಬರೆದಿದ್ದರು.
ಬಹುಶಃ ಇದು ಸಾಹಿತ್ಯ ಸಮ್ಮೇಳನದ ಘೋಷಣೆಯಾದ ಮೇಲೆ ವಿದ್ಯುಕ್ತ ಚರ್ಚೆಗೆ ಚಾಲನೆ ನೀಡಿದ ಪತ್ರ. ಇದರಲ್ಲಿ ಷಣ್ಮುಖಪ್ಪನವರು ಸಾಹಿತ್ಯದ ಗಂಧವೇ ಇಲ್ಲದ ಶಾಸಕ ಎಸ್.ಕೆ.ಬಸವರಾಜನ್ ಅವರಿಂದ ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣದು ಎಂಬ ಅನುಮಾನದ ಮಾತುಗಳನ್ನಾಡಿದ್ದರು.
ಈ ಪತ್ರ ಪ್ರಕಟವಾಗುವ ಹೊತ್ತಿಗೆ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಕರುಣಾಕರ ರೆಡ್ಡಿ ಸಮ್ಮೇಳನ ಅದ್ದೂರಿಯಾಗಿ ನಡೆಸುವ ಬಗ್ಗೆ ಧನಾತ್ಮಕವಾಗಿ ಹೇಳಿಕೆ ನೀಡಿದರು. ಇದಾದ ಮೇಲೂ ಸಮ್ಮೇಳನದ ಬಗ್ಗೆ ಅಲ್ಲಲ್ಲಿ ಚರ್ಚೆಯಾಗಿದೆ. 75ರ ಸಮ್ಮೇಳನವನ್ನು ಕೈಬಿಟ್ಟು, ಮುಂದಿನ ಅಂದರೆ 76ನೆಯದೋ, 77ನೆಯದ್ದನ್ನೋ ಚಿತ್ರದುರ್ಗದಲ್ಲಿ ನಡೆಸೋಣ ಎಂಬಂಥ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮಿತ್ರರೇ, ಷಣ್ಮುಖಪ್ಪನವರಿಗೆ ಒಂದು ಮಾತು ಹೇಳಲೇಬೇಕು. ಸಮ್ಮೇಳನ ಘೋಷಣೆಯಾಗಿದೆ. ಇದರ ಮುಂದಾಳತ್ವದಲ್ಲಿ ಸ್ಥಳೀಯ ಶಾಸಕರು ಇದ್ದೇ ಇರುತ್ತಾರೆ. ಈ ವಿಷಯದಲ್ಲಿ ಅವರ ಹೊಣೆ ಹೆಚ್ಚೇ. ಅವರಿಗೆ ಸಾಹಿತ್ಯ ಗೊತ್ತಿದೆಯೋ ಇಲ್ಲವೋ. ಸಮ್ಮೇಳನದ ಯಶಸ್ಸಿಗೆ ಅದು ಮುಖ್ಯವೆ? ಕನ್ನಡದ ಕೈಂ ಕಾರ್ಯಮಾಡುವವರೆಲ್ಲಾ ಸಾಹಿತ್ಯ ಬಲ್ಲವರೇ ಆಗಬೇಕೆ? ಅವರು ಕನ್ನಡಿಗರು, ಕನ್ನಡದ ನೆಲದಲಿದ್ದಾರೆ. ಒಂದು ಜವಾಬ್ದಾರಿ ಸ್ಥಾನದಲ್ಲಿದ್ದಾರೆ ಅಷ್ಟು ಸಾಕಾಗದೆ? ಇಂಥ ವ್ಯಕ್ತಿಗೆ ಸಮ್ಮೇಳನದ ಮಹತ್ವ ಏನು?ಅದು ಹೇಗಾಗಬೇಕು? ಎಂಬ ಬಗ್ಗೆ ಅವರ ಗಮನಕ್ಕೆ ತರಬೇಕು. ಅವರಿಗೆ ಮನವರಿಕೆ ಮಾಡಬೇಕು. ಇಷ್ಟು ಮಾಡಿದರೆ ಸಾಕು. ಬಸವರಾಜನ್ ಅವರ ವಿಷಯದಲ್ಲಿ: ಅವರಿಗೆ ಸಾಹಿತ್ಯ ಸಮಾರಂಭಗಳು ಹೊಸದಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿರುವ ಸಂಗತಿ. ಈಗಾಗಲೇ ಅವರು ಜಿಲ್ಲಾ ಸಾಹಿತ್ಯ ಪರಿಷತ್ ಸಮಿತಿಯಲ್ಲಿದ್ದರು ಎಂಬುದು ಒಂದು ಮಾಹಿತಿ. ಅಲ್ಲದೆ ಬೃಹನ್ಮಠದ ಆಡಳಿತಾಧಿಕಾರಿಯಾಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ ಅನುಭವ ಅವರಿಗೆ ಇದೆ. ಹೀಗಿರುವಾಗ ಅವರಿಗೆ ನಾವಿದನ್ನೂ ನಿರೀಕ್ಷಿಸುತ್ತಿದ್ದೇವೆ ಎಂದು ಹುರಿದುಂಬಿಸುವುದನ್ನು ಬಿಟ್ಟು, ನಿಮ್ಮಿಂದೇನು ಆಗದು ಎಂದು ಕಾಲೇಳಿಯುತ್ತಿರುವುದೇಕೆ ಎಂಬುದು ಅರ್ಥವಾಗಿಲ್ಲ.
ಮಿತ್ರರೆ, ಸಮ್ಮೇಳನಕ್ಕೆ ಆರ್ಥಿಕ ಸಮಸ್ಯೆ ಎದುರಾಗುವ ಸಂದೇಹವಿತ್ತು. ಈಗ ಆ ಆತಂಕವೇ ಇಲ್ಲ. ಆ ವಿಶ್ವಾಸ ನೀಡಿದವರು, ನೀಡುವವರು ಕರುಣಾಕರ ರೆಡ್ಡಿ. ಅವರು ಗಣಿ ಧಣಿ. ಸಮ್ಮೇಳನದ ಸಂಪೂರ್ಣ ಹಣಕಾಸಿನ ಹೊಣೆ ಹೊರುವ ತಾಕತ್ತಿರುವವರು. ಹಾಗಾಗಿ ಹಣಕಾಸಿನ ತೊಂದರೆಯ ಮಾತೇ ಬರುವುದಿಲ್ಲ ಎಂಬುದು ನಮ್ಮ ನಂಬಿಕೆ.
ಇರುವುದೊಂದೆ ಸಮಸ್ಯೆ ಒಗ್ಗಟ್ಟಿನದು. ಹೌದು, 75ನೇ ಅಮೃತ ಮಹೋತ್ಸವದ ಸಾಹಿತ್ಯ ಸಮ್ಮೇಳನ ಚಿತ್ರದುರ್ಗದಲ್ಲಿ ಎಂದು ಘೋಷಣೆಯಾದಾಗಿನಿಂದ ಈ ಅಂಶವನ್ನು ನಾವು ಗಮನಿಸಿದ್ದೇವೆ. ಹಾಲಿ ಕಸಾಪ ಜಿಲ್ಲಾಧ್ಯಕ್ಷ ವೀರೇಶ್ ಒಪ್ಪಿಕೊಂಡು ಬಂದಿದ್ದಾರೆ ಮಾಡಲಿ ಎಂದು ಎಲ್ಲರೂ ಹಿಂದೆ ಸರಿದಿದ್ದಾರೆ. ಬೃಹನ್ಮಠ, ಎಸ್.ಕೆ.ಬಸವರಾಜನ್, ಹೀಗೆ ಒಂದಿಷ್ಟು ಹೆಸರುಗಳ ನಡುವೆ ಸಮ್ಮೇಳನದ ಪರ ವಿರೋಧ ಮಾತುಗಳ ವಿನಿಮಯ ಆಗುತ್ತಲೇ ಇವೆ. ಜಿಲ್ಲೆಯವರೇ ಆದವರು ಏನಿರಬಹುದೆಂದು ಊಹಿಸಬಹುದು.
ಇರಲಿ.. ವಿಶೇಷವಾದ ಅವಕಾಶವೊಂದು ಒದಗಿ ಬಂದಿರುವ ವೇಳೆ ಇಂಥ ಸ್ವಪ್ರತಿಷ್ಠೆಯನ್ನು ಬಿಟ್ಟು ಎಲ್ಲರೂ ಕೈಜೋಡಿಸುವುದು ಮುಖ್ಯವಾಗಬೇಕಲ್ಲವೆ? ಜಿಲ್ಲೆಯ ಮಠಾಧೀಶರು ಈ ನಿಟ್ಟಿನಲ್ಲಿ ಒಂದಾಗಿ ಎಲ್ಲರ ಮನವೊಲಿಸಬೇಕು. ಒಗ್ಗಟ್ಟು ಉಂಟು.
ಬಾಗಲಕೋಟೆ, ಮುಧೋಳದಂತ ಜಿಲ್ಲೆಗಳಲ್ಲೇ ಸಮ್ಮೇಳನ ನಡೆಯುತ್ತದೆ. ಅಲ್ಲಿನ ಆ ಮಂದಿ ಅಂಥ ಧೈರ್ಯವನ್ನು ಹೊಂದಿದ್ದಾರೆಂದ ಮೇಲೆ ಚಿತ್ರದುರ್ಗ ಹಿಂದೆ ಬೀಳುವುದರ ಅರ್ಥವೇನು?
ಇನ್ನೇನು ಕಸಾಪ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಕೆ.ಎಂ. ವೀರೇಶ್ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಜೊತೆಗೆ ಪಶು ವೈದ್ಯ ಇಲಾಖೆಯಲ್ಲೆ ಸೇವೆ ಸಲ್ಲಿಸುತ್ತಿರುವ, ಸಾಹಿತ್ಯ ಸಮಾರಂಭಗಳಲ್ಲಿ ಸದಾ ಕಾಣಿಸಿಕೊಳ್ಳುವ ದೊಡ್ಡಮಲ್ಲಯ್ಯ ಕೂಡ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿವೆ. ನಾಯಕನಹಟ್ಟಿಯ ಟಿ.ಎಂ.ತಿಪ್ಪೇಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.
ಇತ್ತ ರಾಜ್ಯ ಮಟ್ಟದಲ್ಲಿ ಏಳು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಾಗಿದೆ. ನಲ್ಲೂರು ಪ್ರಸಾದ್. ಆರ್.ಕೆ. ಕೃಷ್ಣ ಮಾ.ಚ, ಜಿ.ವಿ.ಪ್ರಭಾಕರ್ ರಾವ್, ಲಕ್ಷ್ಮಣ್ ರಾವ್ ಗೋಗಿ, ಡಾ.ಎಸ್.ವಿದ್ಯಾಶಂಕರ, ಡಾ.ಸಿ.ವೀರಣ್ಣ, ಸೋಸಲೆ ಜವರಯ್ಯ ಆ ಏಳು ಮಂದಿ. ಆಗಸ್ಟ್ 24ರಂದು ಮತದಾನ ನಡೆಯಲಿದೆ.

ಇನ್ನಾದರೂ ಸಮ್ಮೇಳನದ ವಿಷಯದಲ್ಲಿ ಜಿಲ್ಲೆಯ ಪಾಸಿಟಿವ್ ಆದ ಆಲೋಚನೆಗಳು ಹುಟ್ಟಲ್ಲಿ, ಕ್ರಿಯಾಶೀಲವಾಗಲಿ.

No comments: