Friday, January 30, 2009

ಸಮ್ಮೇಳನಾಧ್ಯಕ್ಷರ ಸಂದರ್ಶನ...

"ಬರಿಮಾತಿನ ಸಾಹಿತಿ, ಸ್ವಾಮೀಜಿ, ರಾಜಕಾರಣಿಗಳಿಂದ ದೇಶ ಹಾಳು"

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಲ್. ಬಸವರಾಜು ಅವರು ಆಯ್ಕೆಯಾದ ಕೂಡಲೇ ಅದುವರೆಗಿದ್ದ ವಿವಾದದ ಹೊಗೆಯೆಲ್ಲವೂ ಒಮ್ಮೆಗೇ ಮಾಯವಾಯಿತು. ಆ ಸ್ಥಾನಕ್ಕೆ ಪ್ರೊಫೆಸರ್ ಎಲ್‌ಬಿ ಅಷ್ಟು ಸೂಕ್ತರು ಹಾಗೂ ವಿವಾದಾತೀತರು. 90ರ ಹರೆಯದಲ್ಲೂ ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಸಾಹಿತ್ಯದ ಸಹವಾಸದಿಂದ ಅವರು ದೂರವಾಗಿಲ್ಲ. ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಎಲ್‌ಬಿ ಅವರೊಂದಿಗೆ ಬಿ.ಎಸ್. ನಾರಾಯಣಸ್ವಾಮಿ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೀವು ಬಹು ಹಿಂದೆಯೇ ಆಯ್ಕೆಯಾಗಬೇಕಿತ್ತು. ಇದೀಗ ನಾಡೋಜ ಪ್ರಶಸ್ತಿಯೂ ಸಂದಿದೆ. ಈ ಬಗ್ಗೆ...?
ಈ ಪ್ರಶಸ್ತಿಗಳೆಲ್ಲಾ ನಮ್ಮೊಳಗಿನ ಅಹಂಕಾರವನ್ನು ತೃಪ್ತಿಪಡಿಸುತ್ತವೆ ಅಷ್ಟೆ. ಪ್ರಶಸ್ತಿ, ಪದವಿಯನ್ನೆಲ್ಲಾ ನಾನು ಯಾವತ್ತೂ ನಿರೀಕ್ಷಿಸಿದವನಲ್ಲ; ಅದಕ್ಕಾಗಿ ಕೆಲಸ ಮಾಡಿದವನಲ್ಲ.
ಗ್ರಂಥ ಸಂಪಾದನೆ ಮತ್ತು ಸೃಜನಶೀಲ ಬರಹಗಳೆರಡರಲ್ಲೂ ತೊಡಗಿಸಿಕೊಂಡಿದ್ದೀರಿ. ನಿಮಗೆ ಖುಷಿ ಕೊಟ್ಟಿದ್ದು...
ಗ್ರಂಥ ಸಂಪಾದನೆ ಇರಲಿ, ಸೃಜನಶೀಲ ಬರವಣಿಗೆ ಇರಲಿ ಎರಡನ್ನೂ ಖುಷಿಯಿಂದಲೇ ಮಾಡಿದ್ದೀನಿ ಅಂತ ಹೇಳಬಲ್ಲೆ. ಈಗ ತಿರುಗಿ ನೋಡಿದರೆ ಇವನ್ನೆಲ್ಲಾ ಬರೆದದ್ದು ನಾನೇನಾ ಅನಿಸುತ್ತದೆ. ನಾನು ಬರೆದಿಲ್ಲ; ಯಾವುದೋ ಶಕ್ತಿ ನನ್ನ ಕೈಯಿಂದ ಬರೆಸಿತು ಅನ್ನುವುದೇ ನಿಜ. ಏನೇ ಮಾಡಿದರೂ ಆ ಒಂದು ಆವೇಶದಿಂದ, ಮನಃಪೂರ್ವಕವಾಗಿ ಮಾಡಬೇಕು. ಇಲ್ಲದೇ ಹೋದರೆ ಅದು ಕೂಲಿ ಕೆಲಸ ಆಗುತ್ತದೆ.
ಗ್ರಂಥ ಸಂಪಾದನೆಯತ್ತ ನಿಮ್ಮ ಒಲವು ಹರಿದಿದ್ದು ಹೇಗೆ?
ನಾನು ವಿದ್ಯಾರ್ಥಿ ದೆಸೆಯಲ್ಲಿ ನಮ್ಮ ಪ್ರಾಚೀನ ಪಠ್ಯಗಳನ್ನು ಓದುತ್ತಾ, ಅರ್ಥ ಮಾಡಿಕೊಳ್ಳುತ್ತಿದ್ದಾಗ ಕೆಲವು ಕಡೆ ಏನೋ ತಪ್ಪಿದೆ; ಅರ್ಥ ಸರಿ ಬರುತ್ತಿಲ್ಲಾ ಎನಿಸುತ್ತಿತ್ತು. ಇದನ್ನು ನಮ್ಮ ಗುರುಗಳಿಗೂ ಹೇಳುತ್ತಿದ್ದೆ. ಅವರೂ ಕೂಡಾ ನನ್ನ ಹಾಗೇ ಅಭಿಪ್ರಾಯಪಡುತ್ತಿದ್ದರು. ಆನಂತರ ಪ್ರಾಚೀನ ಕೃತಿಯೊಂದರ ಹಲವು ಪಠ್ಯಗಳನ್ನು ಓದಿ ಯಾವುದು ಸರಿ ಎಂದು ನಿರ್ಣಯಿಸುವುದೇ ನನಗೆ ಒಂದು ಹವ್ಯಾಸವಾಗಿ ಹೋಯಿತು. ಹೀಗಾಗಿ ಗ್ರಂಥ ಸಂಪಾದನೆಯತ್ತ ನನ್ನನ್ನು ತೊಡಗಿಸಿಕೊಂಡೆ. ಮೇಲಾಗಿ ನಮ್ಮ ಪ್ರಾಚೀನ ಕೃತಿಗಳಲ್ಲಿ ಸಾಕಷ್ಟು ಪ್ರಕ್ಷೇಪಗಳಿವೆ. ಕೃತಿಯ ಉದ್ದೇಶವೇ ಮರೆಯಾಗಿ ಹೋಗುವಂತಹ ಪ್ರಕ್ಷೇಪಗಳಾಗಿವೆ. ಬಸವಣ್ಣನವರದಲ್ಲದ ಹಲವು ವಚನಗಳು ಅವರ ಅಂಕಿತನಾಮದಿಂದ ಪ್ರಕಟವಾಗಿದ್ದವು. ನಾನು ಅವನ್ನೆಲ್ಲಾ ಸ್ಥೂಲವಾಗಿ ಅಧ್ಯಯನ ಮಾಡಿ ಇವು ಬಸವಣ್ಣ ಅವರದಲ್ಲ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಹಲವು ವಿರೋಧಗಳೂ ಬಂದವು. ಇನ್ನು 'ಶೂನ್ಯಸಂಪಾದನೆ'ಯಂತಹ ಕೃತಿಗಳು ಬಹಳಷ್ಟು ಕಾಲ ಕೃತಿಕಾರನ ಹೆಸರಿನ ಬದಲಿಗೆ ಯಾರ್‍ಯಾರದೋ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿತ್ತು. ಇಂತಹ 'ಕಳ್ಳತನ'ದಲ್ಲಿ ಹಲವು ಮಠಗಳು, ಸ್ವಾಮೀಜಿಗಳೂ ಪಾಲ್ಗೊಂಡಿದ್ದು ಬೇಸರ ತರುವ ವಿಷಯ.
ಪ್ರಾಚೀನ ಕೃತಿಗಳು ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?
ಪ್ರಾಚೀನ ಕೃತಿಗಳಲ್ಲಿ ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಗಟ್ಟಿ ಕೃತಿಗಳೇ ಈಗಲೂ ಉಳಿದಿರುವುದು. ಅವು ಇಂದಿಗೂ ಪ್ರಸ್ತುತ. ಪಂಪ, ರನ್ನ, ಬಸವಾದಿ ಶರಣರು... ಅವರೆಲ್ಲಾ ಎಂಥಾ ನೀತಿ ಹೇಳಿದ್ದಾರೆ? ಆದರೆ ಅವುಗಳನ್ನೆಲ್ಲಾ ಈಗಿನವರು ಓದಬೇಕಲ್ಲಾ... ಓದಿ ಅದರಂತೆ ನಡೆಯಬೇಕಲ್ಲಾ... ರನ್ನನ ಒಂದು ಕಂದ ಪದ್ಯ ಹೀಗಿದೆ: 'ಶ್ರೀಯುತನೊಳುದಾರತೆ, ವಾಕ್‌ಶ್ರೀಯುತನೊಳಮತ್ಸರತ್ವಂ ಆಗದು...' ಅಂದರೆ ಶ್ರೀಮಂತರಲ್ಲಿ ಉದಾರತೆಯೂ, ಕವಿ-ಸಾಹಿತಿಗಳಲ್ಲಿ ಅಮತ್ಸರವೂ (ಪ್ರೀತಿ) ಇರುವುದಿಲ್ಲ. ಅದರ ಬದಲು ಉದಾರವಂತನೇ ಶ್ರೀಮಂತನಾಗಿ, ಅಮತ್ಸರನು ಕವಿಯಾದರೆ ಎಷ್ಟು ಚೆನ್ನ ಎನ್ನುತ್ತಾನೆ ರನ್ನ. ಇದು ಈಗಲೂ ಎಷ್ಟು ನಿಜ ನೋಡಿ. ನಮ್ಮ ಸಾಹಿತ್ಯವಲಯದಲ್ಲಿ ಎಷ್ಟು ಮತ್ಸರ ಇದೆ ಗೊತ್ತಲ್ಲ! ಇಂದಿನವರು ಹಿರಿಯರ ನೀತಿಯನ್ನು ಪಾಲಿಸುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ವೈದಿಕ ಧರ್ಮಕ್ಕೆ ಪ್ರತಿಯಾಗಿ ಸಮಾಜ ಸುಧಾರಣೆಯಾಗುವಂತಹ ಕಾಯಕ ಧರ್ಮವನ್ನು ಬೋಧಿಸಿದ. ಅದು ಜಾತಿರಹಿತ ಧರ್ಮ. ಆದರೆ ಈಗ ಬಸವನ ಅನುಯಾಯಿ ಎಂದುಕೊಳ್ಳುವವರು 'ಬ್ರಾಹ್ಮಣ'ರಾಗಲು ಹೊರಟಿದ್ದಾರೆ; ಜಾತಿ ರಾಜಕೀಯದಲ್ಲೇ ತೊಡಗಿದ್ದಾರೆ.
ಹಾಗಿದ್ದರೆ ಈಗಿನ ಸಾಹಿತ್ಯದ ಜಾಡು ಎತ್ತ ಸಾಗುತ್ತಿದೆ?
ಈಗಿನ ಸಾಹಿತ್ಯವೇ? ಅದೇ ನೋಡಿ, ಯಾರಿಗೆ ಅಕಾಡೆಮಿ ಪ್ರಶಸ್ತಿ ಬಂತು, ಯಾರಿಗೆ ಪಂಪ ಪ್ರಶಸ್ತಿ ಬಂತು, ನಾಡೋಜ ಬಂತು; ತನಗೆ ಬರಲಿಲ್ಲ... ಎಂಬ ಮತ್ಸರದಲ್ಲಿ ತೊಡಗಿದೆ ಅಷ್ಟೇ. ನನಗೆ ಪ್ರಶಸ್ತಿ ಬಂತು ಅಂತ ನಾನು ಉಳಿದವರ ಬಗ್ಗೆ ತಿರಸ್ಕಾರದಿಂದ ಈ ಮಾತು ಹೇಳುತ್ತಿಲ್ಲ. ಆದರೆ ವಾಸ್ತವ ಹೀಗಿದೆ. ಸಾಹಿತ್ಯ ಎನ್ನುವುದು ಸತ್ಕ್ರಿಯೆಗೆ ಪ್ರೇರೇಪಣೆ ನೀಡಬೇಕು. ಅಂದರೆ ಒಂದು ರೀತಿಯಲ್ಲಿ ದೀಪದಿಂದ ದೀಪ ಹಚ್ಚುವ ಕೆಲಸ ಮಾಡಬೇಕು. ಆದರೆ ಇವತ್ತು ಸಾಹಿತಿಗಳು ಬರೀ ಮಾತನಾಡುತ್ತಿದ್ದಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾಹಿತ್ಯ ಸಾಗುತ್ತಿದೆ. ಜನರಲ್ಲಿ ಜಾಗೃತಿ ಮೂಡಿಸುವಂಥ ಕೃತಿಗಳು ಬರುತ್ತಿಲ್ಲ. ಸಾಮಾನ್ಯವಾಗಿ ಬರೆಯುವವರು, ಸಾಹಿತಿಗಳನ್ನು ಜನ ಮಹಾತ್ಮ ಎಂದೇ ತಿಳಿಯುತ್ತಾರೆ. ಆದರೆ ಆತ ಮಹಾತ್ಮನೇನೂ ಆಗಿರುವುದಿಲ್ಲ. ಅವನಲ್ಲೂ ಎಲ್ಲರಂತೆ ಓರೆ-ಕೋರೆಗಳು ಇರುತ್ತವೆ. ಯುರೋಪ್‌ನಲ್ಲಿ ಇಂಗ್ಲೆಂಡ್-ಫ್ರೆಂಚ್ ಯುದ್ಧದ ಸಂದರ್ಭದಲ್ಲಿ ವರ್ಡ್ಸ್‌ವರ್ತ್ ಕವಿ ತನ್ನ ದೇಶದ ಬಗ್ಗೆ ಬಹಳ ಅಭಿಮಾನದಿಂದ ಬರೆದ. ಆದರೆ ಅದೇ ವೇಳೆ ಅವನ ದೇಶದ ಜನ ಭಾರತದಲ್ಲಿ ಶೋಷಣೆ ಮಾಡುತ್ತಿದ್ದಾಗ ಅದರ ಬಗ್ಗೆ ಚಕಾರ ಎತ್ತಲಿಲ್ಲ. ಹೀಗಾಗಿ ಕವಿಗಳೆಲ್ಲಾ ಮಹಾತ್ಮರೇನಲ್ಲ. ಇಂದು ಎಲ್ಲಾ ಕ್ಷೇತ್ರ ಹೊಲಸಾದ ಹಾಗೆ ಸಾಹಿತ್ಯವಲಯ ಕೂಡಾ ಹೊಲಸಾಗಿಬಿಟ್ಟಿದೆ. ನನಗಂತೂ ಯಾವುದೇ ಆಶಾವಾದ ಕಾಣುತ್ತಿಲ್ಲ. ಇವತ್ತು ಸ್ವಾಮೀಜಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಬಹುದು.
ಸಾಹಿತ್ಯ ಸಮ್ಮೇಳನಗಳು ಕೂಡಾ ವಿವಾದಗಳಿಂದ ಹೊರತಾಗುತ್ತಿಲ್ಲ...
ಅದೇ ನಾನು ಹೇಳಿದೆನಲ್ಲಾ. ಇವತ್ತು ದುಡ್ಡು, ದುರಹಂಕಾರ, ದುರಾಡಳಿತ ಇವುಗಳಿಂದ ಎಲ್ಲಾ ಕ್ಷೇತ್ರಗಳೂ ಹೊಲಸಾಗುತ್ತಿವೆ. ಸಾಹಿತ್ಯ ವಲಯ ಕೂಡಾ ತಪ್ಪು ದಾರಿಯಲ್ಲಿ ಸಾಗುತ್ತಿದೆ. ನನಗೆ ಪರಮಾಶ್ಚರ್ಯ ಆಗುವಂಥ, ಆತಂಕಕಾರಿ ವಿಷಯ ಎಂದರೆ, ನಾವು ಪರಸ್ಪರ ಪ್ರೀತಿಸುತ್ತಲೇ ಇಲ್ಲ. ಬರೀ ದ್ವೇಷ ತುಂಬಿದೆ. ಪ್ರಾಯಶಃ ಯಾವ ದೇಶದಲ್ಲಿಯೂ ಇಷ್ಟೊಂದು ದ್ವೇಷ, ಕಚ್ಚಾಟ ಇಲ್ಲ ಎನಿಸುತ್ತೆ. ದ್ವೇಷ ಮಾಡುವುದೇ ನಮ್ಮ ಸಂಸ್ಕೃತಿಯಾ ಎಂಬ ಶಂಕೆ ಮೂಡಿಬಿಟ್ಟಿದೆ ನನಗೆ.
ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಕೂಡಾ ಕೇವಲ ನೆಪಮಾತ್ರಕ್ಕೆ ಎನಿಸಿಬಿಟ್ಟಿವೆ. ಅವುಗಳಿಗೆ ಏನಾದರೂ ಅರ್ಥ ಇದೆ ಎನ್ನುತ್ತೀರಾ?
ನಮ್ಮ ಭಾಷೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರ್ಕಾರ ನಿರ್ಣಯ ಕೈಗೊಳ್ಳಬೇಕು. ಆದರೆ ಅದು ಯಾವುದೇ ನಿರ್ಣಯ ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಕೈಗೊಳ್ಳಬೇಕಿದೆ. ಇದು ಒಂದು ರೀತಿ ಬಾಯಿ ಬಡಿದುಕೊಳ್ಳುವ ಕೆಲಸ, ಅಷ್ಟೇ.
ಶಾಸ್ತ್ರೀಯ ಸ್ಥಾನ-ಮಾನ ಸಿಕ್ಕ ಹಿನ್ನೆಲೆಯಲ್ಲಿ ಕನ್ನಡಕ್ಕೆ ಈಗ ಆಗಬೇಕಾದ ಕೆಲಸಗಳೇನು?
ಪ್ರಾಚೀನ ಸಾಹಿತ್ಯ ಮತ್ತು ಜನಪದ ಸಾಹಿತ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಂಶೋಧನಾ ಕ್ಷೇತ್ರಕ್ಕೆ ನೆರವು ನೀಡಬೇಕು. ಅದಿರಲಿ. ಈ ಶಾಸ್ತ್ರೀಯ ಸ್ಥಾನ-ಮಾನ ಗಳಿಸಿಕೊಳ್ಳೋದಕ್ಕೆ ಎಷ್ಟೆಲ್ಲಾ ಹೋರಾಡಬೇಕಾಯಿತು ನೋಡಿ. ಅದೂ 90ರ ಅಂಚಿನಲ್ಲಿರುವ ದೇಜಗೌ ಅವರಂತಹ ಹಿರಿಯರು ಉಪವಾಸ ಮಾಡಬೇಕಾಯಿತು. ಆದರೆ ಕೇಂದ್ರ ಸರ್ಕಾರ ಕೊಡೋ ದುಡ್ಡಿನಿಂದಲೇ ಕನ್ನಡ ಭಾಷೆ ಅಭಿವೃದ್ಧಿ ಆಗಬೇಕೆ? ಏಕೆ, ರಾಜ್ಯ ಸರ್ಕಾರದ ಬಳಿ ದುಡ್ಡು ಇರಲಿಲ್ಲವೇ? ನಮ್ಮ ಭಾಷೆಯನ್ನು ನಾವೇ ಪ್ರೀತಿಸುತ್ತಿಲ್ಲ; ಮನುಷ್ಯ ಸ್ವಭಾವ ಎಷ್ಟು ವಿಚಿತ್ರ ನೋಡಿ. ನಮ್ಮ ಭಾಷೆಯನ್ನು ಉದ್ಧಾರ ಮಾಡೋದಕ್ಕೆ ನಮಗೇ ಮನಸಿಲ್ಲ!
ಈಗಿನ ಭಯೋತ್ಪಾದನೆ ಜಾಗತಿಕ ಸಮುದಾಯದ ಮೇಲೆ ಒಡ್ಡಿರುವ ಸವಾಲಿಗೆ ಸಾಹಿತ್ಯ ಹೇಗೆ ಪ್ರತಿಕ್ರಿಯಿಸಬೇಕು?
ಎಲ್ಲಿ ಮಹಾಕವಿ ವಿಫಲನಾಗುತ್ತಾನೋ ಅಲ್ಲಿ ಭಯೋತ್ಪಾದನೆ ದೈತ್ಯ ಸ್ವರೂಪ ತಾಳುತ್ತದೆ. ಇವತ್ತು ಮಹಾಕವಿ ವಿಫಲನಾಗಿದ್ದಾನೆ. ಎಲ್ಲಕ್ಕೂ ದ್ವೇಷವೇ ಮೂಲ ಆಗಿದೆ. ತಾನು ಒಂದು ಧರ್ಮ ಅನುಸರಿಸುತ್ತಿದ್ದೇನೆಂದರೆ ಮತ್ತೊಂದು ಧರ್ಮವನ್ನು ವಿರೋಧಿಸಬೇಕು, ದ್ವೇಷಿಸಬೇಕು ಎಂದು ಅರ್ಥವಲ್ಲ. ಪರಸ್ಪರ ಪ್ರೀತಿ, ಸೌಹಾರ್ದವನ್ನು ನಮ್ಮ ಹಿಂದಿನವರು ಹೇಳುತ್ತಲೇ ಬಂದಿದ್ದಾರೆ. ಆದರೆ ಕೇಳುವವರಿಲ್ಲ ಅಷ್ಟೇ. ಧರ್ಮವನ್ನು ಹೊಡೆದಾಟಕ್ಕೆ ಬಳಸಿಕೊಳ್ಳಲಾಗ್ತಿದೆ. ಆಡಳಿತ ಕೂಡಾ ಇದಕ್ಕೆ ಕುಮ್ಮಕ್ಕು ಕೊಡ್ತಿದೆ. ಪಾಕಿಸ್ತಾನದಲ್ಲಿ ಆಗುತ್ತಿರುವುದು ಇದೇ. ಹಿಂದೆ ಜೈನ, ವೈಷ್ಣವ ಮತ್ತು ಶೈವರ ನಡುವೆ ಕಿತ್ತಾಟ, ಜಗಳಗಳು ನಡೆದಿವೆ. ಅಂದರೆ ಪರಸ್ಪರ ದ್ವೇಷವೇ ಮನುಷ್ಯನ ಸಂಸ್ಕೃತಿ ಎನಿಸಿಬಿಟ್ಟಿದೆ. ಇದಕ್ಕೆ ಸಣ್ಣ ನೆಪಗಳು ಸಿಕ್ಕರೂ ಸಾಕು. ಬೇಸರದ ವಿಷಯ ಅಂದರೆ ಎಳೆಯ ಮಕ್ಕಳ ಮನಸ್ಸನ್ನು ತಿದ್ದುವಂಥ ಶಿಕ್ಷಕರು, ಅಧ್ಯಾಪಕರು ಬಹುಮಂದಿ ಇಲ್ಲ. ಶಿಕ್ಷಣ ವ್ಯವಸ್ಥೆ ಕೂಡಾ ಹಾಳಾಗಿದೆ. ಮನುಷ್ಯನ ಮನಸ್ಸು ಸಾತ್ವಿಕತೆ ಕಡೆ ಸಾಗಲು ಬೇಕಾದ ತಯಾರಿ ಕೂಡಾ ಇಲ್ಲದಂತಾಗಿದೆ. ವಿದ್ಯಾಭ್ಯಾಸವನ್ನೇ ಖಾಸಗೀಕರಣ ಮಾಡಿಬಿಟ್ಟಿದ್ದಾರೆ. ಅಂದರೆ ವಿದ್ಯೆಯನ್ನು ಶ್ರಮಪಟ್ಟು ಗಳಿಸುವುದಲ್ಲ; ಬದಲಿಗೆ ದುಡ್ಡುಕೊಟ್ಟು ಖರೀದಿಸುವಂಥ ಪರಿಸ್ಥಿತಿ ಇದೆ. ಹೀಗಾಗಿ ಮುಂದಿನ ಪೀಳಿಗೆ ಬಗ್ಗೆ ಯಾವುದೇ ಆಶಾವಾದ ಇಟ್ಟುಕೊಳ್ಳದಂಥ ಪರಿಸ್ಥಿತಿ ಇದೆ. ಇದನ್ನು ಹೇಗೆ ಉತ್ತಮಪಡಿಸುವುದು, ನನಗಂತೂ ಗೊತ್ತಾಗುತ್ತಿಲ್ಲ.
ನಿಮ್ಮ ಮುಂದಿನ ಬರವಣಿಗೆ?
ಪಂಪನ 'ವಿಕ್ರಮಾರ್ಜುನ ವಿಜಯಂ' ಕಾವ್ಯವನ್ನು ಮೂಲ ಮಹಾಭಾರತದೊಡನೆ ತುಲನೆ ಮಾಡಿ ಬರೆದ ಕೃತಿ ಅಚ್ಚಿನಲ್ಲಿದೆ. ಬಸವಣ್ಣನವರ ವಚನಗಳು ಈ ಕಾಲಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಬಗೆಗಿನ ವಿಮರ್ಶಾ ಕೃತಿಯೂ ಸದ್ಯವೇ ಪ್ರಕಟಗೊಳ್ಳಲಿದೆ. ಸದ್ಯಕ್ಕೆ ಈ ಎರಡು ಕೃತಿಗಳು ಬರಲಿವೆ. ಈಗಿನ ದೇಹಪ್ರಕೃತಿಯಲ್ಲಿ ಮುಂಚಿನ ಹಾಗೆ ಬರೆಯಲು ಸಾಧ್ಯವಾಗುವುದಿಲ್ಲ.
ಯುವ ಜನಾಂಗಕ್ಕೆ, ಯುವ ಬರಹಗಾರರಿಗೆ ನಿಮ್ಮ ಕಿವಿಮಾತು ಏನು?
ನಾನು ಆಗಲೇ ಹೇಳಿದೆನಲ್ಲಾ, ಕಿವಿಮಾತು ಹೇಳಿದರೆ ಅದನ್ನು ಕೇಳುವವರು ಯಾರು? ನಮ್ಮ ಪ್ರಾಚೀನರೇ ಎಲ್ಲಾ ಹೇಳಿದ್ದಾರೆ. ಆದರೆ ಅನುಸರಿಸುವವರಿಲ್ಲ ಅಷ್ಟೇ. ನಮ್ಮ ದೇಶ, ಸಂಸ್ಕೃತಿಯನ್ನು ನಾನು ತುಂಬಾ ಬೈಯುತ್ತಿದ್ದೀನಿ ಅಂತ ನಿಮಗೆ ಅನಿಸುತ್ತಿದೆಯೇ? ಹಾಗೇನಾದರೂ ನಿಮಗೆ ಅನಿಸಿದ್ದರೆ ನಾನು ವಿವೇಕಸ್ಥ ಅಂತ ಅರ್ಥ!

(ಕೃಪೆ: ಸಂಡೇ ಇಂಡಿಯನ್)

No comments: