Friday, December 19, 2008

ಸಮ್ಮೇಳನಾಧ್ಯಕ್ಷರು ಡಾ.ಎಲ್. ಬಸವರಾಜು

75ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯಾಗಿದೆ. ಹಿರಿಯ ಚಿಂತಕ ಡಾ.ಎಲ್.ಬಸವರಾಜು ಅವರು ಸಮ್ಮೇಳಾಧ್ಯಕ್ಷರ ಸ್ಥಾನ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಇವರು ಅಪ್ಪಟ ಮಾನವತವಾದಿ. ಜಾತಿ, ಕಂದಾಚಾರ, ಪುರೋಹಿತಷಾಹಿ ವ್ಯವಸ್ಥೆಯನ್ನು ಧಿಕ್ಕರಿಸುತ್ತಾ ಬಂದ ಬಸವಣ್ಣ ಮತ್ತು ಆತನ ಸಹೋದರ ಶರಣರ ಚಿಂತನೆಗಳನ್ನು ಅಧ್ಯಯನ ಮಾಡಿದವರು ಬಸವರಾಜು. ಈ ಹೊತ್ತಿನಲ್ಲಿ ಅಂಥ ಚಿಂತನೆಗಳ ಅಗತ್ಯವಿದೆ. ಜಾತಿ, ಧರ್ಮಗಳಿಗಿಂತ ಮಿಗಿಲಾದ ಮಾನವತೆಯನ್ನು ಪ್ರತಿಪಾದಿಸಬೇಕಿದೆ. ಈ ಸಂದರ್ಭಧಲ್ಲಿ ಎಲ್. ಬಸವರಾಜು ಅವರು ಆಯ್ಕೆಯಾಗಿರುವುದು ದುರ್ಗದ ಹುಡುಗರಿಗೂ, ದುರ್ಗದ ಜನತೆಗೆ ಸಂತೋಷ ತಂದಿದೆ.
ಬಸವರಾಜು ಅವರ ಸಣ್ಣ ಪರಿಚಯ:
ಡಾ ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಕೋಲಾರ ಜಿಲ್ಲೆಯ ಎಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವ ಸಾಹಿತ್ಯ-ಸಿದ್ಧಾಂತಗಳ ಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಅಪ್ಪಟ ಮಾನವತಾವಾದಿ.
ಇವರ ಕೆಲವು ಪ್ರಮುಖ ಕೃತಿಗಳು:
ಶೂನ್ಯ ಸಂಪಾದನೆ
ಕನ್ನಡ ಛಂದಸ್ಸು
ಶಿವದಾಸ ಗೀತಾಂಜಲಿ
ಭಾಸನ ಭಾರತ ರೂಪಕ
ನಾಟಕಾಮೃತ ಬಿಂದುಗಳು
ಅಲ್ಲಮನ ವಚನಗಳು
ದೇವರ ದಾಸೀಮಯ್ಯನ ವಚನಗಳು
ಭಾಸರಾಮಾಯಣ
ನಾಟಕ ತ್ರಿವೇಣಿ
ಇವರಿಗೆ 'ಪಂಪ ಪ್ರಶಸ್ತಿ','ಬಸವ ಪುರಸ್ಕಾರ' ವಲ್ಲದೆ ೧೯೯೪ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್' ಗೌರವ ದೊರಕಿದೆ.

Sunday, December 14, 2008

ಯಾರಾಗ್ತಾರೆ ಸಮ್ಮೇಳನಾಧ್ಯಕ್ಷರು?

ಸಮ್ಮೇಳನಕ್ಕೆ ಇನ್ನು 47 ದಿನ ಬಾಕಿ ಇದೆ. ಸಿದ್ಧತೆಗಳು ಭರದಿಂದ ಸಾಗಿವೆ. ಚಿತ್ರದುರ್ಗದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನವಿದು. ಜತೆಗೆ ಅಮೃತ ಮಹೋತ್ಸವದ ಸಮ್ಮೇಳನ.
ಈ ಸಮ್ಮೇಳನಕ್ಕೆ ಅಧ್ಯಕ್ಷರು ಯಾರಾಗ್ತಾರೆ?
ಇದು ಸದ್ಯದ ಕುತೂಹಲ.
ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿಟ್ಟಿನಲ್ಲಿ ಚಿತ್ರದುರ್ಗದಲ್ಲಿಂದು ಸ್ವಾಗತಸಮಿತಿಯ ಸಭೆ ನಡೆಯಿತು. ಈ ಬಾರಿ ಯಾರು ಅಧ್ಯಕ್ಷರಾಗಬೇಕೆಂಬ ಬಗ್ಗೆ ಒಮ್ಮತದ ಅಭಿಪ್ರಾಯದೊಂದಿಗೆ ಒಂದು ಹೆಸರನ್ನು ಕೇಂದ್ರ ಕಾರ್ಯಕಾರಿ ಸಮಿತಿಗೆ ಶಿಫಾರಸು ಮಾಡುವ ಉದ್ದೇಶದೊಂದಿಗೆ ಸಭೆ ಆರಂಭವಾಗಿತ್ತು.
ಬಹುಮತದ ಮೇರೆಗೆ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರು ಸಮ್ಮೇಳನಾಧ್ಯಕ್ಷರಾಗಲು ಸೂಕ್ತ ವ್ಯಕ್ತಿ. ಕೇಂದ್ರ ಸಮಿತಿಗೆ ಶಿಫಾರಸು ಮಾಡುವುದಾಗಿ ಹೇಳಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಸಭೆ ಮುಗಿಸಿದರು.
ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಚಿಮೂ ಹೆಸರು ಬಿಟ್ಟರೆ ಡಾ.ಎಲ್. ಬಸವರಾಜು, ಬರಗೂರು ರಾಮಚಂದ್ರಪ್ಪನವರ ಹೆಸರು ಪ್ರಸ್ತಾಪವಾಯಿತು.
ಸಂಶೋಧಕರಾದ ಬಿ.ರಾಜಶೇಖರಪ್ಪ, ಶ್ರೀಶೈಲಾರಾಧ್ಯ ಸೇರಿದಂತೆ ಅನೇಕರು ಚಿಮೂ ಅವರನ್ನೇ ಪ್ರಸ್ತಾಪಿಸಿದರು. ಅನುಮೋದಿಸುವಂತೆ ಅನೇಕರನ್ನು ಪ್ರೇರೇಪಿಸಿದರು. ಬಂಡಾಯ ನೆಲೆಗಟ್ಟಿನಲ್ಲಿ ಗುರುತಿಸಿಕೊಂಡು ಬಂದ ಸಿ.ಶಿವಲಿಂಗಪ್ಪ, ಮೀರಾಸಾಬಿಹಳ್ಳಿ ಶಿವಣ್ಣನಂಥವರು ಕೂಡ ಚಿಮೂ ಆಯ್ಕೆಯನ್ನು ಅನುಮೋದಿಸಿದ್ದು ಅಚ್ಚರಿ, ಬೇಸರಕ್ಕೆ ಕಾರಣವಾಯಿತು. ಇವರ ಬಂಡಾಯದ ನಿಲುವಿನ ಬಗ್ಗೆಯೇ ಸಂಶಯ ಹುಟ್ಟಿಸಿತು. ಜಾತಿ ಕಾರಣಕ್ಕೆ ಇವರು ಚಿಮೂ ಬೆಂಬಿಲಿಸಿದ್ದಾರೆಂದಾದ್ದಲ್ಲಿ ಸಾಮಾಜಿಕ ಬದ್ಧತೆ, ಸಾಹಿತ್ಯಕ ನಿಲುವು ಇತ್ಯಾದಿ ಮಾತುಗಳೆಲ್ಲ ಬೊಗಳೆ ಎಂದಷ್ಟೆ ಹೇಳಬೇಕಾಗುತ್ತದೆ. ನಿಷ್ಠುರವಾದಿ ಎನಿಸಿಕೊಂಡು ಇಂಥ ಸಾಹಿತಿಗಳಿಂದ ದೂರವೇ ಉಳಿಯುತ್ತಿದ್ದ ಬಿ.ಎಲ್. ವೇಣು ಕೂಡ ಈ ನಿಲುವಿನಿಂದ ಹೊರತಾಗಿರಲಿಲ್ಲ.
ಇವರೇ ಎಂಟು ಹತ್ತು ಮಂದಿ ಬಿಟ್ಟರೆ ಮತ್ತೊಬ್ಬ ಜಿಲ್ಲೆಯ ಹಿರಿಯ ಸಾಹಿತಿಗಳು ಕಾಣಿಸಲಿಲ್ಲ. ಕೆ.ಆರ್.ಸಂಧ್ಯಾರೆಡ್ಡಿ, ಬಿ.ವಿ.ವೈಕುಂಠರಾಜು ರಂಥ ಹಿರಿಯರು ಸಭೆಯಲ್ಲಿ ಕಾಣಿಸಲಿಲ್ಲ. 150 ಮಂದಿ ಸೇರುವ ಕೊಠಡಿಯೊಂದರಲ್ಲಿ ಹೀಗೊಂದು ಅಭಿಪ್ರಾಯ ಮೂಡಿಸುವ ಸಭೆ ಇಟ್ಟುಕೊಂಡು ಪೂರ್ವ ನಿರ್ಧರಿತ ಅಭಿಪ್ರಾಯವನ್ನು ಹೇಳುವುದಕ್ಕೆ ಸಭೆ ನಡೆಸಿದ ಹಾಗಿತ್ತು.
ಕನ್ನಡ-ಕರ್ನಾಟಕ-ಕನ್ನಡಿಗ, ಈ ನಿಟ್ಟಿನಲ್ಲಿ ಚಿಮೂ ಕೆಲಸ ಅದ್ಭುತವಾದದ್ದು. ಅವರು ಈ ಗೌರವಕ್ಕೆ ಅರ್ಹರು ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಲೇ ಹೋದರು.
ಇದೇ ಚಿಮೂ ಕಳೆದ ವರ್ಷ-ಎರಡು ವರ್ಷಗಳಿಂದ ಸಾಮಾಜಿ ಬದ್ಧತೆಯನ್ನು, ಸಾಮರಸ್ಯವನ್ನು ಕಿಂಚಿತ್ತೂ ಕಾಳಜಿ ಮಾಡದೆ ಇತಿಹಾಸದ ದಾಖಲೆಗಳನ್ನು ಉಲ್ಲೇಖಿಸುತ್ತಾ ಕೋಮುವಾದಿಯ ಹಾಗೇ ಮಾತನಾಡುತ್ತಾ ಅಲೆಯುತ್ತಿದ್ದಾರೆ. ಇಂಥವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತಿರುವುದು ಎಷ್ಟು ಸರಿ ಎಂಬುದು ನಮ್ಮ ಪ್ರಶ್ನೆ.
ಸಮ್ಮೇಳನವನ್ನು ರಾಜಕೀಯದಿಂದ, ಜಾತಿ ಮತಗಳಿಂದ ದೂರವಿಟ್ಟು, ಕನ್ನಡ, ಕರ್ನಾಟಕದ ಹಿನ್ನೆಲೆಯಲ್ಲಿ ಮಾಡಬೇಕೆಂದು ಭಾಷಣ ಬಿಗಿಯುತ್ತಾರೆ ಸಾಹಿತಿಗಳು. ಕೋಮುದಳ್ಳುರಿ ಹಚ್ಚುವ ಮಾತುಗಳನ್ನು ಆಡುತ್ತಿರುವ ವ್ಯಕ್ತಿಯೊಬ್ಬರನ್ನು ಯಾವ ಸಾಮಾಜಿಕ ಬದ್ಧತೆಯನ್ನು ಮಾನ್ಯ ಮಾಡಿ ಈ ಸ್ಥಾನವನ್ನು ಅಲಂಕರಿಸುವ ಅವಕಾಶ ಮಾಡಬೇಕು ಹೇಳಿ?
ನಾವು ಅಂದುಕೊಂಡದ್ದೆಲ್ಲ ಸುಳ್ಳಾಗುತ್ತಲೇ ಇದೆ. ಹಿಂದುಳಿದ ಜಿಲ್ಲೆ, ಶರಣರಂಥವರು ಇರುವ ಈ ಜಿಲ್ಲೆಯಲ್ಲಿ ನಡೆವ ಸಮ್ಮೇಳನ, ಕೋಮು ಸಾಮರಸ್ಯಕ್ಕೆ, ವರ್ಗಗಳ ತರತಮಕ್ಕೆ ಉತ್ತರವಾಗುವಂಥ, ಈ ನಿಟ್ಟಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವಂಥ ಸಮ್ಮೇಳನವಾಗುತ್ತದೆ ಎಂದು ದೊಡ್ಡ ನಿರೀಕ್ಷೆ ಹುಸಿಯಾಗುತ್ತಲೇ ಇದೆ.
ಹಿಂದುಳಿದ ವರ್ಗವನ್ನು ಪ್ರತಿಬಿಂಬಿಸುವ, ದಮನಿತ ವರ್ಗದ ದನಿಯಾಗುವಂಥ, ಪ್ರಸ್ತುತ ಸಮಾಜದ ಚಿತ್ರಣಗಳ ನಿಕಷವಾಗಿ ವಿಮರ್ಶಿಸುವ ಮನಸ್ಸಿನ ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪನವರು ಸಮ್ಮೇಳನಾಧ್ಯಕ್ಷರಾಗುವುದು ಇಂದಿನ ಅಗತ್ಯ.
ಚಿಮೂ ಸಮ್ಮೇಳಾಧ್ಯಕ್ಷ ಸ್ಥಾನದಲ್ಲಿ ದ್ವೇಷ ಕಾರುವ ಮಾತನಾಡಿ ಬಿಟ್ಟರೆ ಸಮ್ಮೇಳನದ ಗೋಷ್ಠಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಮಾನವೀಯತೆ ಬಗ್ಗೆ ಎಷ್ಟು ಚರ್ಚೆಯಾಗಿ ಏನು ಪ್ರಯೋಜನ? ನಮಗಿದು ಆತಂಕದ ಸಂಗತಿಯೂ ಆಗಿದೆ.
ಡಿಸೆಂಬರ್ 19ರಂದು ಕೇಂದ್ರ ಕಾರ್ಯಸಮಿತಿ ಸಮ್ಮೇಳನಾಧ್ಯಕ್ಷರನ್ನು ಘೋಷಿಸಲಿದೆ. ಈ ಸಮಿತಿಯಲ್ಲಿರುವ ಜವಾಬ್ದಾರಿಯುತ ವ್ಯಕ್ತಿಗಳಾದರೂ ಸಮ್ಮೇಳಾನಾಧ್ಯಕ್ಷರನ್ನು ಆರಿಸುವ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ನಿರ್ಧರಿಸಲಿ.
ಚಿಮೂರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆಂದು ಚಿತ್ರದುರ್ಗದ ಪ್ರಖಾಂಡ ಪಂಡಿತರು ಪಣತೊಟ್ಟಿದ್ದಾರೆ. ಹಾಗೇನಾದರೂ ಆದಲ್ಲಿ ಪ್ರಜ್ಞಾವಂತ ಮಂದಿ ಸಮ್ಮೇಳನದಿಂದ ದೂರ ಉಳಿಯಲಿದ್ದಾರೆ ಎಂಬುದು ಬರೀ ಮಾತಲ್ಲ.
ಚಿಮೂ ಆಯ್ಕೆಯಾದರೆಂಬ ಸುದ್ದಿ ಪ್ರಕಟವಾದ ದಿನ ನಾವೂ ಈ ಬ್ಲಾಗ್ ಗೆ ಬರೆಯುವುದನ್ನು ನಿಲ್ಲಿಸಲಿದ್ದೇವೆ.

Sunday, December 7, 2008

ನಾಚಿಕೆಯಾಗಿದೆ... ಬೇಸರವಾಗಿದೆ..

ಎರಡು ತಿಂಗಳ ಮೇಲಾಯ್ತು. ದಿಢೀರನೆ ಒಂದು ಪೋಸ್ಟ್ ಅಪ್ ಡೇಟ್ ಆಗಿದೆ. ಒಂದು ಸಮಜಾಯಿಷಿ ಇಲ್ಲ. ಕ್ಷಮೆ ಕೇಳಲಿಲ್ಲ. ದೊಡ್ಡ ದೊಡ್ಡ ಮಾತಿನಿಂದ ಆರಂಭವಾಗಿ ಹೀಗೆ ಅನಾಥವಾಗಿ ಬಿಟ್ಟು ಹೋದರೆಂದು ಕಡೆಯ ಪಕ್ಷ ಒಂದಿಬ್ಬರಾದರೂ ಬೈದುಕೊಂಡಿರಬಹುದು.
ಅದೆಲಕ್ಕೂ ನಾವೂ ಭಾಜನರು. ನಮ್ಮಿಂದ ಆದ ಲೋಪಕ್ಕೆ ನಾವು ಮತ್ತೊಮ್ಮೆ ಕ್ಷಮೆ ಕೇಳುತ್ತೇವೆ.
ಕ್ಷಮೆ ಕೇಳಲೇ ಬೇಕಾದ ಮತ್ತೊಂದು ಕಾರಣವೂ ಇದೆ. 75ನೇ ಅಮೃತ ಮಹೋತ್ಸದ ಸಾಹಿತ್ಯ ಸಮ್ಮೇಳನವನ್ನು ನೆರವೇರಿಸುವುದಕ್ಕೆ ನಮ್ಮ ಜಿಲ್ಲೆ ಜನಪ್ರತಿ ನಿಧಿಗಳು, ಮುಖಂಡರು, ಮಠಾಧೀಶರು ಹಿಂದೇಟು ಹಾಕಿದ್ದು, ಮುಂದೂಡಿ ಕೇಳಿಕೊಂಡಿದ್ದು, ಕಡೆಗೆ ನೀವು ಮಾಡದಿದ್ದರೆ ಇನ್ನೊಬ್ಬರಿಗೆ ಕೊಡುತ್ತೇವೆಂಬ ಧಮಕಿಗೆ ಹೆಸರಿ ನಿಗದಿತ ದಿನಕ್ಕೆ ಸಮ್ಮೇಳನ ಮಾಡುತ್ತೇವೆಂದು ಘೋಷಿಸಿದ್ದು ಇದೆಲ್ಲಕ್ಕೂ ಕ್ಷಮೆ ಕೇಳುತ್ತೇವೆ.
ಸಾಹಿತ್ಯ ಸೇವೆ ಮಾಡುತ್ತೇವೆ ನಾ ಮುಂದು ತಾಮುಂದು ತುದಿಗಾಲಲ್ಲಿ ನಿಲ್ಲುವ ಜಿಲ್ಲೆಗಳಿವೆ. ಸಾಂಸ್ಕೃತಿಕವಾಗಿ ಗುರುತಿಸಿಕೊಂಡ ಚಿತ್ರದುರ್ಗ ಜಿಲ್ಲೆ ಈ ವಿಷಯದಲ್ಲಿ ತೀರ ಸಣ್ಣದಾಗಿ ನಡೆದುಕೊಂಡಿತು ನಮ್ಮ ಅಭಿಪ್ರಾಯ. ಸಮ್ಮೇಳನದಲ್ಲಿ ಪ್ರಮುಖ ಪಾತ್ರವಹಿಸಬಹುದಾದರು ತಮ್ಮ ಒಣ ಪ್ರತಿಷ್ಠೆಗಾಗಿ ಸಮ್ಮೇಳನವನ್ನು ಮುಂದೂಡುವ, ಬೇರೊಂದು ಜಿಲ್ಲೆಗೆ ಸ್ಥಳಾಂತರಿಸುವುದಕ್ಕೆ ಅವಕಾಶವಾಗುವುದಕ್ಕೆ ಪ್ರೇರಣೆಯಾದರು ಎಂಬುದು ನಮಗೆ ನೋವುಂಟು ಮಾಡಿದ ಸಂಗತಿ.
ಇಂಥ ಬೆಳವಣಿಗೆಗಳು ನಮ್ಮ ಉತ್ಸಾಹಕ್ಕೆ ತಣ್ಣೀರು ಹಾಕಿ ಸುಮ್ಮನಿರಿಸಿದವು.
ಈಗ ದಿನಗಣನೆ ಆರಂಭವಾಗಿದೆ. 2009ರ ಜನವರಿ 29ರಿಂದ ಫೆಬ್ರವರಿ 1ರವರೆಗೆ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಸಿದ್ಧತೆ ಆರಂಭವಾಗಿದೆ. ಹೆಚ್ಚು ದಿನಗಳಿಲ್ಲ. ಸಮ್ಮೇಳನಕ್ಕೆ ಅಗತ್ಯವಾಗಿರುವ ಮೂಲಭೂತ ವ್ಯವಸ್ಥೆಗಳನ್ನು ಮಾಡಬೇಕಿದೆ.ಈ ಪ್ರಕ್ರಿಯೆಗಳು ನಿಧಾನವಾಗಿ ಚುರುಕಾಗುತ್ತಿವೆ!
ಆಗಲಿ...
ಸಮಾಧಾನದ ಸಂಗತಿಯೊಂದಿದೆ:
ಚಿತ್ರದುರ್ಗದಲ್ಲಿ ನಡೆಯದೇ ಹೋಗಿದ್ದರೆ, ಸಮ್ಮೇಳನ ಬಳ್ಳಾರಿಗೆ ಹೋಗುತ್ತಿತ್ತು. ಬಳ್ಳಾರಿಯವರು ನಿಗದಿತ ದಿನದಂದೇ ಸಮ್ಮೇಳನ ನೆರವೇರಿಸುವ ಭರವಸೆ ನೀಡಿ ಅವಕಾಶ ಮಾಡಿಕೊಡಲು ಕೇಳಿಕೊಂಡಿದ್ದರು. ಗಣಿಧಣಿಗಳ ಊರಿನಲ್ಲಿ ಸಮ್ಮೇಳನ ಅದ್ದೂರಿಯಾಗಿ ಆಗುತ್ತದೆ, ಅಲ್ಲೇ ಆಗಲಿ ಎಂದು ಕೆಲವರು ತಾಳ ಹಾಕಿದರು.
ಹಾಗೇನಾದರೂ ಆಗಿದ್ದರೆ, ಸಮ್ಮೇಳನ, ಮೊನ್ನೆ ಮೊನ್ನೆ ನಡೆದ ಹಂಪಿ ಉತ್ಸವದ ಹಾಗೇ ಆಗಿ ಹೋಗುತ್ತಿತ್ತು. ಸಾಹಿತ್ಯದ ಜತೆಗೆ ಸಮಾಜ,ಸಂಸ್ಕೃತಿಗಳ ಚರ್ಚೆಯಾಗಬೇಕಾದ ವೇದಿಕೆಯಲ್ಲಿ ಒಂದು ಕವಿಗಳ ಪದ್ಯಗಳನ್ನು ಹಾಡಿಸಿಯೇ ಸಮ್ಮೇಳನ ಮುಗಿಸಿ ಬಿಡುತ್ತಿದ್ದರೇನೋ ಗಣಿಧಣಿಗಳು.
ಹಂಪಿ ಉತ್ಸವದಲ್ಲಿ ಇವರು ಮಾಡಿದ್ದೇನು? ಸೋನು ನಿಗಮ್, ಆಶಾರನ್ನು ಕರೆಸಿ ಹಾಡಿಸಿದರು. ಸದ್ಯದ ಅಂಥದ್ದಕ್ಕೆ ಅವಕಾಶವಾಗಿಲ್ಲ.
ಬೇಸರದ ಸಂಗತಿ ಇದೆ:
ರಾಜ್ಯ ಸರ್ಕಾರ ಸಮ್ಮೇಳನಕ್ಕೆ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿದೆ. ಕನ್ನಡದ ಕಾರ್ಯವೆಂದು ಬಾಯ್ತುಂಬು ಹೇಳಿಕೊಳ್ಳುವ ಸರ್ಕಾರದ ಮಂದಿ ಬೆಂಗಳೂರು ಹಬ್ಬದಂಥ ಮನರಂಜನೆಯೇ ಕೇಂದ್ರವಾಗಿರುವಂಥ ಕಾರ್ಯಕ್ರಮಕ್ಕೆ 2.5 ಕೋಟಿ ಮಂಜೂರು ಮಾಡಿತ್ತು.
ಯಾಕೆ ಹೀಗೆ..?

ಮರಡಿಹಳ್ಳಿಯಲ್ಲಿ ಪಿಲ್ಲೋ ಲಾವಾ!!







ಪಿಲ್ಲೋ ಅಂದರೆ ದಿಂಬು. ಲಾವಾ ಜ್ವಾಲಾಮುಖಿಯಿಂದ ಹೊರಬೀಳುವ ರಸ. ದಿಂಬಿಗೂ, ಈ ಬೆಂಕಿಯಂಥ ರಸಕ್ಕೂ, ಚಿತ್ರದುರ್ಗಕ್ಕೂ ಏನು ಸಂಬಂಧ?
ಸಮುದ್ರದಲ್ಲಿ ಉಂಟಾದ ಜ್ವಾಲಾಮುಖಿಯಿಂದ ಹೊರ ಬಿದ್ದ ಶಿಲಾರಸ ನೀರಿನ ಮೇಲೆ ತಣಿದಾಗ ದಿಂಬಿನಾಕಾರದ ರೂಪ ಪಡೆದುಕೊಂಡವು. ಈ ಅವಶೇಷವನ್ನು ಪಿಲ್ಲೋಲಾವಾ ರಚನೆಗಳೆಂದು ಕರೆಯುತ್ತಾರೆ.
ಚಿತ್ರದುರ್ಗದಿಂದ ಸುಮಾರು 16 ಕಿ.ಮೀ (ಬೆಂಗಳೂರಿನಿಂದ ಸುಮಾರು 180 ಕಿ.ಮೀ.)ದೂರದಲ್ಲಿರುವ ಮರಡಿಹಳ್ಳಿಯಲ್ಲಿ ಈ ಪಿಲ್ಲೋ ಲಾವಾ ಶಿಲೆಗಳಿವೆ. ಈಗ ಆರಂಭದ ಪ್ರಶ್ನೆಗೆ ಉತ್ತರ ಸಿಕ್ಕಿರಬಹುದು.
ಭೂಗರ್ಭಶಾಸ್ತ್ರದ ಪ್ರಕಾರ ಚಿತ್ರದುರ್ಗದ ಬಹುಭಾಗ ಸುಮಾರು 2500 ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಿಂದ ಬಹುಭಾಗ ಆವೃತ್ತವಾಗಿತ್ತು. ಈ ಅವಧಿಯಲ್ಲಿ ಸಂಭವಿಸಿದ ಜ್ವಾಲಾಮುಖಿಯೊಂದರಿಂದ ದಿಂಬಿನಾಕಾರದ ರಚನೆಗಳು ರೂಪ ಪಡೆದವು.
ಭಾರತದಲ್ಲಿ ಒರಿಸ್ಸಾದ ಕಿಯೋಂಜರ್ ಜಿಲ್ಲೆಯ ನೊಮಿರಾದಲ್ಲಿ ಶಿಲಾ ರಚನೆಗಳನ್ನು ಕಾಣಬಹುದು.
ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಬಹುಭಾಗ ಇತಿಹಾಸದ ಬಗ್ಗೆ ಈ ಶಿಲೆಗಳು ಬೆಳಕು ಚೆಲ್ಲಿವೆ. ದುರಾದೃಷ್ಟವೆಂದರೆ ಈ ಶಿಲಾರಚನೆಗಳು ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಇಲ್ಲಿನ ಶಿಲೆಗಳು ಮರಡಿಹಳ್ಳಿಯ ಮನೆಗಳ ಮುಂದೆ ಬಿದ್ದಿವೆ. ಕಟ್ಟೆ, ಮನೆ ನಿರ್ಮಾಣಕ್ಕೆ ಬಳಕೆಯಾಗಿವೆ. ಗುಡ್ಡದ ಮೇಲಿರುವ ದೊಡ್ಡ ಗಾತ್ರದ ಶಿಲೆಗಳ ಮೇಲೆ ಪ್ರೇಮಿಗಳ ಹೆಸರುಗಳು ರಾರಾಜಿಸುತ್ತಿವೆ.
ಪ್ರಪಂಚದ ಕೆಲವೇ ದೇಶಗಳಲ್ಲಿ ಇಂಥ ಶಿಲಾರಚನೆಗಳು ನೋಡಲು ಸಿಗುತ್ತವೆ ಎನ್ನುತ್ತಾರೆ ಭೂಗರ್ಭಶಾಸ್ತ್ರ ವಿಜ್ಞಾನಿಗಳು. ಇತ್ತೀಚೆಗೆ ಕಾಂಗೋದ ವಿಜ್ಞಾನಿಗಳೂ ಇಲ್ಲಿನ ಶಿಲೆಗಳ ಮಾದರಿ ಸಂಗ್ರಹಿಸಿ ಒಯ್ದಿದ್ದಾರೆ. ಇದರ ಕೆಲ ಸ್ಯಾಂಪಲ್ ಇಂಗ್ಲೆಂಡ್ ವಸ್ತು ಸಂಗ್ರಹಾಲಯದಲ್ಲೂ ಇಡಲಾಗಿದೆ. ಇಂಥ ವಿಶೇಷವಿರುವ ಈ ಸ್ಥಳ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
(ಈ ಮಾಹಿತಿ ಹಾಗೂ ಚಿತ್ರಗಳನ್ನು ಎಸ್.ಜೆ.ಎಂ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಸುಷ್ಮಾರಾಣಿ ಕಳಿಸಿಕೊಟ್ಟಿದ್ದಾರೆ. )

Monday, September 8, 2008

ಕೆಮೆರಾ ಕಣ್ಣಲ್ಲಿ ದುರ್ಗದ ಕೋಟೆ..

ಚಿತ್ರದುರ್ಗದವರೇ ಆದ ಮಂಜುನಾಥ ಸ್ವಾಮಿ ಅವರ ಹಳ್ಳಿ ಕನ್ನಡ ಬ್ಲಾಗಿನಲ್ಲಿ ಚಿತ್ರದುರ್ಗದ ಕೋಟೆ ಚಿತ್ರಗಳು ರಾರಾಜಿಸುತ್ತಿವೆ. ದುರ್ಗದ ಕೋಟೆಗೆ ಇಂಥ ಸೊಬಗಿದೆಯೇ ಎಂದು ನೋಡಿದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆ ಚಿತ್ರಗಳು ಹೇಗಿವೆ ನೀವು ಹಳ್ಳಿಕನ್ನಡ ನೋಡಬಹುದು. ಸ್ಯಾಂಪಲ್ಲಿಗೆ ಈ ಚಿತ್ರ...

Monday, July 28, 2008

ಕಸಾಪ ಜಿಲ್ಲಾಧ್ಯಕ್ಷರಾಗಿ ವೀರೇಶ್ ಪುನಾ ಆಯ್ಕೆ..




ಇನ್ನೂ ಸಾಹಿತ್ಯ ಪರಿಷತ್ ಚುನಾವಣೆ ನಡೆದಿಲ್ಲ. ಆಗಲೇ ಚಿತ್ರದುರ್ಗ ಜಿಲ್ಲಾ ಕಸಾಪ ಅಧ್ಯಕ್ಷರ ಘೋಷಣೆಯಾಗಿದೆ. ಅಧ್ಯಕ್ಷ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಎಂಟು ಮಂದಿ ನಾಮಪತ್ರ ವಾಪಸು ಪಡೆಯುವ ಕಡೇ ದಿನವಾದ ಶನಿವಾರ ವೀರೇಶ್ ಎರಡನೆ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಹಿಂದಿನ ಪೋಸ್ಟ್ನಲ್ಲಿ ಹೇಳಿದ ಮಾತುಗಳು ಇಲ್ಲಿ ಸ್ಪಷ್ಟವಾದಂತಿವೆ. ಸಮ್ಮೇಳನ ಒಪ್ಪಿಕೊಂಡವರ ಮೇಲೆ ಸಮ್ಮೇಳನ ನಡೆಸುವ ಹೊಣೆ ಹೊರಿಸಲಾಗಿದೆ. ಇದರ ಹಿಂದೆ ಯಾರದೋ ಕೈವಾಡ ಎನ್ನುವ ಮೂಲಕ ವೀರೇಶ್ ಅವರ ಆಯ್ಕೆ ಸಂಶಯಿಸುವ ಅಗತ್ಯವಿಲ್ಲ. ಅದರ ಔಚಿತ್ಯ ನಮಗಿಲ್ಲಿ ಕಾಣುತ್ತಿಲ್ಲ.


ವೀರೇಶ್ ಅಲ್ಲದೆ ಬೇರಾರೆ ಸಮ್ಮೇಳನ ಒಪ್ಪಿಕೊಂಡು ಬಂದು, ಅವರೇ ಆಯ್ಕೆ ಯಾಗಿದ್ದರೂ ಈ ಮಾತುಗಳೇ ವ್ಯಕ್ತವಾಗುತ್ತಿದ್ದವೇನೋ? ಇರಲಿ.. ವೀರೇಶ್ ಈಗ ಏನು ಮಾಡುತ್ತಾರೆಂಬುದೇ ಕುತೂಹಲ...ವೀರೇಶ್ ವಿಸ್ತೃತ ಅವಧಿ ಸೇರಿ ಮೂರೂವರೆ ವರ್ಷಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಜಿಲ್ಲಾ ಕಸಾಪದ ಮೂಲಕ ಮಾಡಿದ ಚಟುವಟಿಕೆಗಳೆಷ್ಟು? ಜಿಲ್ಲೆಯಲ್ಲಿ ಕಸಾಪವನ್ನು ಬೆಳೆಸಲು ಅವರು ಮಾಡಿದ ಕೆಲಸಗಳೇನು? (ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಒಂದಿಷ್ಟು ಕಾರ್ಯಕ್ರಮಗಳು ನಡೆದಿದ್ದವು, ಅಷ್ಟೇ ಅಲ್ಲ ದತ್ತಿ ನಿಧಿಗಳ ಸ್ಥಾಪನೆಯೂ ಆಗಿದ್ದವು.) ಹೀಗೆ ಪ್ರಶ್ನೆಗಳನ್ನು ಕೇಳಿದರೆ ಸ್ವತಃ ವೀರೇಶ್ ಉತ್ತರಿಸಲು ಸಮಯ ತೆಗೆದುಕೊಳ್ಳುತ್ತಾರೆನೋ? ಮೂರೂವರೆ ವರ್ಷಗಳ ಅವಧಿಯಲ್ಲಿ ಕೆಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೆಲವೇ ಕೆಲವು ಕಾರ್ಯಕ್ರಮಗಳನ್ನು ಮಾಡಿದ್ದೇ ಅವರ ಸಾಧನೆ.ಇದನ್ನೇ ಜಿಲ್ಲಾ ಸಾಹಿತ್ಯ ವಲಯ ಮಾತಾಡಿಕೊಳ್ಳುತ್ತದೆ. ಹೀಗಾಗಿ ಯಾವುದೇ ನಿರೀಕ್ಷೆಗಳೇ ಇಲ್ಲದ ನಿರುತ್ಸಾಹದ ಮಾತುಗಳನ್ನಾಡುತ್ತಾರೆ.



ಹಾಗಾಗಿ ವೀರೇಶ್ ಮುಂದೆ ದೊಡ್ಡ ಸವಾಲುಗಳೇ ಇವೆ. ಸಮ್ಮೇಳನ ಅಂಥ ಸವಾಲುಗಳಲ್ಲಿ ದೊಡ್ಡದು. ಆದರೆ ಅವರು ಇದಕ್ಕೂ ಮೊದಲು ಕೆಲವು ಸಣ್ಣ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಡೀ ಜಿಲ್ಲಾ ಸಾಹಿತ್ಯ ವಲಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಮುಂದಿರುವ ಸವಾಲುಗಳಲ್ಲಿ ಒಂದು. ಇದುವರೆಗೂ ಏನೂ ಮಾಡಿಲ್ಲ ಎಂದೇ ಹೇಳುವ ಮಂದಿ ಮುಂದೆ ವೀರೇಶ್ ಬೆಂಬಲ, ನೆರವು, ಸಹಕಾರ ಕೇಳಬೇಕಾಗಿದೆ. ಇದನ್ನು ಯಾವುದೇ ಬಿಗುಮಾನವಿಲ್ಲದೆ ವೀರೇಶ್ ಮಾಡುತ್ತಾರಾ? ಮಾಡಲೇಬೇಕು, ಕಸಾಪ ಚುನಾವಣೆ ಮುಗಿಯಲು ಇನ್ನೊಂದು ತಿಂಗಳಾದರೂ ಬೇಕು, ಅಷ್ಟರೊಳಗೆ ಜಿಲ್ಲೆ ಸಾಹಿತಿಗಳು, ಹಿರಿಯರು, ವಿವಿಧ ಮುಖಂಡರಗಳ ಸಭೆ ಕರೆದು ಚರ್ಚೆ ಮಾಡಬಹುದು. ಈ ಸಮ್ಮೇಳನದ ಮಹತ್ವ, ಅದಕ್ಕಾಗಿ ಏನೆಲ್ಲಾ ಆಗಬೇಕಿದೆ ಎಂಬುದನ್ನೆಲ್ಲಾ ಚರ್ಚಿಸಬಹುದು. ಅವರಿಂದ ಸಲಹೆಗಳನ್ನು ಸ್ವೀಕರಿಸುವ ಮೂಲಕ ಅವರೆಲ್ಲಾ ವಿಶ್ವಾಸ ಪಡೆಯಬಹುದು. ವೀರೇಶ್ ಏನು ಮಾಡುತ್ತಾರೆ? ಕಾದು ನೋಡೋಣ.

ದೂರದ ಊರಿಂದ ಪತ್ರ ಬಂದಿದೆ...

(ದೂರದ ದಿಲ್ಲಿಯಲ್ಲಿ ಟೀವಿ ಪತ್ರಕರ್ತರಾಗಿರುವ ಶಿವಪ್ರಸಾದ್ ನಮ್ಮ ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಬರೆದಿರುವ ಪತ್ರವನ್ನು ನಿಮ್ಮ ಮುಂದೆ ಇಟ್ಟಿದ್ದೇವೆ..ಹಾಂ ಅವರು ಬರೆಯುತ್ತಿರುವ ಬ್ಲಾಗಿನಲ್ಲಿ ನಮ್ಮ ಬ್ಲಾಗಿನ ಪರಿಚಯ ಮಾಡಿಕೊಟ್ಟಿದ್ದಾರೆ. )
ಓವರ್ ಟು ಲೆಟರ್...

ದುರ್ಗದ ಹುಡುಗರಿಗೆ ಜೈ!ನಿಜಕ್ಕೂ ಒಳ್ಳೆಯ ಪ್ರಯತ್ನ!
ನನಗೆ ತಿಳಿದ ಮಟ್ಟಿಗೆ ದುರ್ಗದ ಹುಡುಗರಲ್ಲಿ ಬಹುತೇಕರು ಈಗ ಪತ್ರಕರ್ತರಾಗಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಆದರೂ ತಮ್ಮ ಊರಲ್ಲಿ ನಡೆಯಬೇಕಿರುವ ಸಾಹಿತ್ಯ ಸಮ್ಮೇಳನ ಕುರಿತು ಚರ್ಚೆ ನಡೆಸಲಿಕ್ಕೆ ಎಲ್ಲರೂ ಒಂದಾಗಿ ಬ್ಲಾಗ್ ಆರಂಭಿಸುವುದಿದೆಯಲ್ಲ... ಅದು ಗಮನಿಸಬೇಕಾದ್ದು. ನಿಮ್ಮ ಒಳಗೆ ಇರುವ ನಿಮ್ಮಊರಿನ ಬಗೆಗಿನ ಅಭಿಮಾನ ಗ್ರೇಟ್! ಆದರೆ ಇಲ್ಲಿ ಬ್ಲಾಗ್ ನಲ್ಲಿರುವ 'ಜಿಲ್ಲೆಯಲ್ಲಿ ಈಗ ಸಮ್ಮೇಳನದ ಸಂಚಲನ' ಬರಹ ಕುರಿತ ನನ್ನ ಅನಿಸಿಕೆ ಹಂಚಿಕೊಳ್ಳಲು ಬಯಸುತ್ತೇನೆ.
1. ಸಾಹಿತ್ಯ ಯಾರಪ್ಪನ ಮನೆ ಸೊತ್ತೂ ಅಲ್ಲ. ಸಾಹಿತ್ಯದ ಬಗ್ಗೆ ತಿಳಿಯದವರು, ಬರೆಯದವರು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂಬುದು ಕನ್ನಡಕ್ಕೆ ಮಾಡುವ ಮೊದಲ ದ್ರೋಹ.
2. ದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವಾಗ ಎಲ್ಲರೂ ಒಂದಾಗಿ ಕನ್ನಡದ ತೇರು ಎಳೆಯುವುದು ಬಿಟ್ಟು, ಅವರಿಗೆ ಬರೆಯೋಕೆ ಬರೋಲ್ಲ, ಇವರು ಇಂಥಹವರು, ಅವರುಒಪ್ಪಿಕೊಂಡು ಬಂದಿದ್ದಾರೆ, ಅವರೇ ಮಾಡಲಿ ಎಂದು ಯೂಸ್ಲೆಸ್ ಮಾತುಗಳನ್ನು ಹೇಳುವುದಿದೆಯಲ್ಲ, ಅದು ಕನ್ನಡಕ್ಕೆ ಮಾಡುವ ಎರಡನೇ ದ್ರೋಹ.
3. ಮೂರನೆಯದಾಗಿ ಗಣಿ ಧಣಿಗಳು ಪೂರ್ತಿ ಸಹಕಾರ ಕೊಡುವುದಿದ್ದರೆ ಅದನ್ನು ಖಂಡಿತಾ ಕನ್ನಡದ ಕೆಲಸಕ್ಕೆ ಬಳಸಿಕೊಳ್ಳಬೇಕು. ಕೇವಲ ಗಣಿಧಣಿಗಳು, ಶಾಸಕರನ್ನು ಖರೀದಿಸಿದರು, ಅಲ್ಲಿ ಹಾಗೆ ಅನ್ಯಾಯ ಮಾಡಿದರು, ಹೀಗೆ ಮಾಡಿದರು ಎಂದು ಹೀಗಳೆಯುವುದು ಕೇವಲ ಸಿನಿಕತನ. ಅವರಲ್ಲಿರುವ ಹಣ ಒಳ್ಳೆಯದಕ್ಕೆ, ಅದರಲ್ಲೂ ಕನ್ನಡದ ಕೆಲಸಕ್ಕೆ ಬಳಕೆಯಾಗುವುದಿದ್ದರೆ ಯಾಕೆ ಬೇಡ? ಸಮಾಜದಲ್ಲಿ ಹಣವುಳ್ಳವರು ಅನೇಕರಿದ್ದಾರೆ. ಅವರನ್ನು ಹಿಡಿದು ತಂದು ಇಂತಹ ಕೆಲಸಕ್ಕೆ, ಅವರನ್ನು ತೊಡಗಿಸುವುದು ನಿಜಕ್ಕೂ ಅರ್ಥಪೂರ್ಣ. ಇಂತಹ ಉತ್ತಮ ಕೆಲಸಕ್ಕೆಅಂಥಹವರನ್ನು ಎಳೆದು ತಂದು ಜೋಡಿಸದಿದ್ದರೆ, ಅವರು ಗಳಿಸಿದ ಹಣ ಸದ್ವಿನಿಯೋಗವಾಗುವುದಾದರೂ ಹೇಗೆ? ಗೋ ಅಹೆಡ್.
4. ಕೇವಲ ಸಾಹಿತ್ಯ ಬರೆಯುವವರಿಂದಲೇ ಸಮ್ಮೇಳನ ನಡೆಸಲು ಆಗುವುದಿಲ್ಲ. ಅದಕ್ಕೆ ಸಂಘಟಕರು ಬೇಕು. ವಿವಿಧ ರೀತಿಯ ಜನರನ್ನು ಒಗ್ಗೂಡಿಸಿ, ಅವರಿಂದ ಕೆಲಸ ತೆಗೆಸುವ ಕಲೆಗೊತ್ತಿರಬೇಕು. ಅಂತಹ ಸಂಘಟನಾ ಚಾತುರ್ಯ ಇದ್ದರೆ ಅನಕ್ಷರಸ್ಥ ಕೂಲಿ ಕೆಲಸದವನನ್ನು ಬಳಸಿದರೂ ನಾನು ಬೇಡ ಅನ್ನುವುದಿಲ್ಲ. ಅಂತಾದ್ದರಲ್ಲಿ ಒಂದು ಕ್ಷೇತ್ರದ ಶಾಸಕರಾದ ಬಸವರಾಜನ್ ಏಕೆ ಬೇಡ? ಅವರ ಇತರೆ ಅಂಶಗಳು ನಮಗೆ ಬೇಕಿಲ್ಲ. ಆದರೆ ಅವರ ಚಾತುರ್ಯ ಏಕೆ ಬಳಸಬಾರದು?? ಮೇಲಾಗಿ ಅವರಿಗೆ ಜನರು ನೀಡಿದ ಅಧಿಕಾರವಿದೆ. ಅವರು ಬೇಡ ಎನ್ನುವ ಹಕ್ಕುಯಾರಿಗೂ ಇಲ್ಲ.
5. ಕೇವಲ ಸಾಹಿತ್ಯವನ್ನೇ ಬರೆದುಕೊಂಡಿರುವ ಸಾತ್ವಿಕ ಸ್ವಭಾವದ ಸಾಹಿತಿಗಳನ್ನುಕಟ್ಟಿಕೊಂಡು ಸಾಹಿತ್ಯ ಸಮ್ಮೇಳನ ನಡೆಸುವುದು ಸಾಧ್ಯವೇ? ಸಾಹಿತಿಗಳಿಗೆ ಬರೆಯುವ ಕೆಲಸ. ಅವರದ್ದು ಸಂಕೋಚದ ಮನಸ್ಸು. ಯಾರ ಮುಂದೂ ಕೈಯೊಡ್ಡಲಾರದ ಸ್ವಾಭಿಮಾನ. ಅವರದ್ದೇನಿದ್ದರೂ, ಶಾಂತ ಸಾಹಿತ್ಯದ ಕೆಲಸ. ಆದರೆ ಅದನ್ನು ಜನರ ಬಳಿಗೆ ತಲುಪಿಸಲು ನೂರಾರು ಜನ ಸಾಹಿತ್ಯ ರಚಿಸಲಿಕ್ಕೆ ಬರದವರೂ ಕೈ ಜೋಡಿಸಬೇಕು. ಸಾಹಿತ್ಯ ಸಮ್ಮೇಳನದ ದಿನನೆರೆದ ಜನರಿಗೆ ಕಲ್ಲಂಗಡಿ ಹಣ್ಣು, ಸೌತೆಕಾಯಿ ಕುಯ್ದು ಕೊಡುವವ, ಮಂಡಕ್ಕಿ, ಮೆಣಸಿನಕಾಯಿ ತಯಾರಿಸಿ ಕೊಡುವವರದ್ದೂ ಸಹ ಸಾಹಿತ್ಯದ ಸೇವೆ, ಕನ್ನಡಮ್ಮನ ಸೇವೆ ಎಂಬುದು ನೆನಪಲ್ಲಿರಬೇಕು. ಎಲ್ಲರೂ ಸೇರಿಯೇ ಕೆಲಸವಾಗುವುದು.
6. ವೀರೇಶ್ ಅವರು ದುರ್ಗದ ಮೇಲಿನ ಅಭಿಮಾನಕ್ಕೆ, ಅದರಲ್ಲೂ 75 ನೇ ಸಾಹಿತ್ಯ ಸಮ್ಮೇಳನನಮ್ಮ ಊರಿನಲ್ಲೇ ಆಗಬೇಕು ಎಂದು ಬಯಸಿ ಒಪ್ಪಿ ಬಂದಿರುವಾಗ, ಅದು ಅವರ ನಿರ್ಧಾರ. ಒಪ್ಪಿಕೊಂಡು ಬಂದಿರುವ ಅವರೇ ಸಮ್ಮೇಳನ ಮಾಡಿಕೊಳ್ಳಲಿ ಎಂಬ ಧೋರಣೆ ಅಕ್ಷಮ್ಯ ಅಪರಾಧ.ಇದಕ್ಕಿಂತ ದೊಡ್ಡ ದ್ರೋಹ ಬೇರೊಂದಿಲ್ಲ. ವೀರೇಶ್ ಅವರ ಕಳಕಳಿ ಎಲ್ಲರೂ ಗಮನಿಸಬೇಕು.ಅವರ ಕಳಕಳಿಗೆ ಎಲ್ಲಾ ದುರ್ಗದ ಜನರೂ ಕೈ ಜೋಡಿಸಬೇಕು. ಕನ್ನಡ ಸಾಹಿತ್ಯ ಲೋಕದಲ್ಲಿಮೈಲುಗಲ್ಲಾಗಿರುವ 75 ನೇ ಸಮ್ಮೇಳನವನ್ನು ದುರ್ಗದಲ್ಲಿ ನಡೆಸಲು ಒಂದಾಗಿ ನಿಲ್ಲಬೇಕು.ಇಂತಹ ಅವಕಾಶ ಎಲ್ಲರಿಗೂ, ಯಾವಾಗಲೂ ಸಿಗದು ಎಂಬುದು ಗಮನದಲ್ಲಿರಲಿ.
7. ಇಂತಹ ಅಡ್ಡದಾರಿಯಲ್ಲಿ ಯೋಚಿಸುವನ್ನು ಬಿಟ್ಟು ದುಗದ ಜನ ಯಾವುದೇ ಕಾರಣಕ್ಕೂ 75 ನೇಸಮ್ಮೇಳನ ತಮ್ಮ ಕೈ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ರಾಜಕೀಯಪರಿಸ್ಥಿತಿಯಲ್ಲಿ ದುರ್ಗದ ಜನರ ನಿರ್ಲಕ್ಷ, ಒಡಕುತನ, ಆರೋಪ-ಪ್ರತ್ಯಾರೋಪ ನೋಡಿ, ಇವರಿಂದ ಏನೂ ಆಗೋಲ್ಲ ಎಂದು ಬೇರೆ ಜಿಲ್ಲೆಗೆ ಇದರ ಅವಕಾಶ ಜಾರದಿರಲಿ. ದುರ್ಗದ ಹುಡುಗರು ಹೇಳಿರುವಂತೆ ಇನ್ನಾದರೂ ಈ ಬಗ್ಗೆ ಪಾಸಿಟಿವ್ ಆಗಿ ಜನರು ಚಿಂತಿಸಲಿ. ದುರ್ಗದ ಜನರು ಒಂದಾಗಿ 75 ನೇ ಸಮ್ಮಳನದ ಬಗ್ಗೆ ಸಂಘಟಿತ ಪ್ರಯತ್ನ ಆರಂಭವಾಗಲಿ. ಜೈ ಕನ್ನಡ