Thursday, January 10, 2008

ವರ್ಷದ ಮೊದಲ ಕೃತಿ ಬಿಡುಗಡೆಯಾಗುತ್ತಿದೆ....



ಪವಿತ್ರ ಅವರ ಚೊಚ್ಚಲ ಕವನ ಸಂಕಲನ.


ಜೋಗಿ ಅವರ ಕಾದಂಬರಿ

ವಿತ್ರ ಪ್ರಿಯಭಾಷಿಣಿ ಅವರ ಪುಸ್ತಕ ಬಿಡುಗಡೆಯಾಗುತ್ತಿದೆ ಎಂಬ ವರ್ತಮಾನವನ್ನು ತಂದಿದ್ದೇವೆ. ಬಹುಶಃ ಇದು ದುರ್ಗದಲ್ಲಿ ಬಿಡುಗಡೆಯಾಗುತ್ತಿರುವ ಈ ವರ್ಷದ ಮೊದಲ ಕೃತಿ. ಉಪನ್ಯಾಸಕಿಯಾಗಿ ಕೆಲ ಕಾಲ ಕೆಲಸ ಮಾಡಿ, ಸದ್ಯ ತುಮಕೂರು ಸಮೀಪದ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಪವಿತ್ರ ಅವರ ಚೊಚ್ಚಲ ಮಗವಿನ ಸಂತೋಷದಲ್ಲಿರುವಾಗಲೇ ಮತ್ತೊಂದು ಸಂತೋಷ ಅವರ ಮಡಿಲಿನಲ್ಲಿದೆ. ಯಾಕೆಂದರೆ ಇದು ಅವರ ಚೊಚ್ಚಲ ಕೃತಿ- ‘ನಕ್ಷತ್ರಕೆ ಪಾತಿ’.
ಆರ್ ಪವಿತ್ರ ಪ್ರಿಯ ಭಾಷಿಣಿ ಚಿತ್ರದುರ್ಗದ ಪ್ರಮುಖ ಕತೆಗಾರರಾದ ಟಿ.ಆರ್.ರಾಧಾಕೃಷ್ಣ ಅವರ ದ್ವಿತೀಯ ಪುತ್ರಿ. ತಾಯಿ ಸಾವಿತ್ರಿ ನಿವೃತ್ತ ಅಧ್ಯಾಪಕಿ. ಪವಿತ್ರ ಅವರ ಹಿರಿಯ ಸಹೋದರಿ ತಾರಿಣಿ ಶುಭದಾಯಿನಿ ಕೂಡ ಕಾವ್ಯದೊಂದಿಗೆ ನಂಟುಳ್ಳವರು. ಇತ್ತೀಚೆಗೆ ಅವರು ‘ತೋಡಿ ರಾಗ’ ಕವನ ಸಂಕಲನ ಪ್ರಕಟಿಸಿದ್ದಾರೆ. ಸಾಹಿತ್ಯಿಕ ವಾತಾವರಣವಿರುವ ಕುಟುಂಬದಲ್ಲಿ ಬೆಳೆದವರು ಪವಿತ್ರ ಪ್ರಿಯಭಾಷಿಣಿ. ಇಂಗ್ಲಿಷ್‌ನಲ್ಲಿ ಎಂ.ಎ. ಮಾಡಿ, ಬಿ.ಇಡಿ ಮುಗಿಸಿದ್ದಾರೆ.
ವಿದ್ಯಾರ್ಥಿಯಾಗಿದ್ದಾಗಲೇ ಕಾವ್ಯವನ್ನು ಕೂಸಿನಂತೆ ಮಡಿಲಿನಲ್ಲಿಟ್ಟುಕೊಂಡು, ತಟ್ಟಿ, ತಡವಿ ತಮ್ಮದಾಗಿಸಿಕೊಳ್ಳುತ್ತಾ ಬಂದಿರುವವರು ಪವಿತ್ರ. ಮನೆಯ ಸಾಹಿತ್ಯಕ ವಾತಾವರಣ, ಅವರ ಅಧ್ಯಯನ ಎಲ್ಲವೂ ಅವರನ್ನು ಕಾವ್ಯ ವ್ಯಾಮೋಹಿಯನ್ನಾಗಿಸಿದೆ.
ಇವರ ಕಾವ್ಯದಲ್ಲಿ ಯಾವುದೇ ಇಸಮ್ಮಿನ ಪ್ರಭಾವ ಕಾಣದು. ಇದೇ ಮಾತನ್ನು ಬೆನ್ನುಡಿ ಬರೆದಿರುವ ಲೋಕೇಶ್ ಅಗಸನಕಟ್ಟೆಯವರು ಹೇಳಿದ್ದಾರೆ. ಇಲ್ಲಿನ ಪ್ರತಿ ಸಾಲು ಚಿತ್ರವನ್ನು ಕಟ್ಟಿಕೊಡುವಂಥವು.
ಈಗಾಗಲೇ ಕನ್ನಡದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಇವರ ಹತ್ತಾರು ಕವನಗಳು ಪ್ರಕಟವಾಗಿವೆ. ಮೆಚ್ಚುಗೆ ಪಡೆದಿವೆ. ಹಾಗೆ ಮೆಚ್ಚುಗೆಗಳಿಸಿದ ಕವಿತೆಗಳು ಸೇರಿದಂತೆ ಒಟ್ಟು ೩೨ ಕವನಗಳಿರುವ ನಕ್ಷತ್ರಕೆ ಪಾತಿ ಜನವರಿ ೨೬ರಂದು ಬಿಡುಗಡೆಯಾಗುತ್ತಿದೆ.
’ ಅಂದು ಕಥೆಗಾರ ಜೋಗಿ ಕೃತಿ ಬಿಡುಗಡೆ ಮಾಡುತ್ತಿದ್ದಾರೆ. ಪವಿತ್ರ ಅವರ ಮಿತ್ರ ಶಶಿಸಂಪಳ್ಳಿ ಕೂಡ ಭಾಗಿಯಾಗಲಿದ್ದಾರೆ.
ಪವಿತ್ರ ಅವರ ಬರಲಿರುವ ಕವನ ಸಂಕಲನದ ಆಯ್ದ ಎರಡು ಪದ್ಯಗಳನ್ನು ಇಲ್ಲಿ ನಿಮಗಾಗಿ ಇಟ್ಟಿದ್ದೇವೆ. ಅದಕ್ಕೂ ಮೊದಲು ಕೃತಿ ಬಿಡುಗಡೆ ಮಾಡುತ್ತಿರುವ ಜೋಗಿ ಕುರಿತು ನಾಲ್ಕು ಮಾತು..
ಜೋಗಿ ಕನ್ನಡ ಪ್ರಭದಲ್ಲಿ ಅಸಿಸ್ಟೆಂಟ್ ಫೀಚರ್ ಎಡಿಟರ್ ಕೆಲಸ. ಅವರು ಅಪ್ಪಟ ಕಾವ್ಯ ಪ್ರೇಮಿ. ಕಾವ್ಯವನ್ನು ಧ್ಯಾನಿಸುವವರು. ಹೊಸ ತಲೆಮಾರಿನ ಕವಿಗಳನ್ನು ಯಾವಾಗಲೂ ಕೆಣಕುತ್ತಾ, ಅವರ ಕಾವ್ಯಪ್ರಿಯತೆಯನ್ನು, ಸೂಕ್ಷ್ಮತೆಯನ್ನು ತೀವ್ರಗೊಳಿಸುತ್ತಿರುವವರು.
ಬರೆಯದೇ ಬದುಕುವುದಿಲ್ಲ ಎನ್ನುವ ಹಾಗೆ ಸದಾ ಬರೆಯುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಅಂಕಣ ಸಂಗ್ರಹ, ಒಂದು ಕಥಾ ಸಂಕಲವನ್ನು ಹೊರತಂದಿರುವ ಜೋಗಿ, ಮಕರ ಸಂಕ್ರಾಂತಿಯಂದು ಮೊದಲ ಕಾದಂಬರಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೆಸರು ‘ನದಿಯ ನೆನಪಿನ ಹಂಗು.’

ನಕ್ಷತ್ರಕೆ ಪಾತಿ
‘ಶಿವನು ಭಿಕ್ಷಕೆ
ಬಂದ-ನೀಡು ಬಾರೆ ತಂಗಿ
ಇವನಂಥ ಚೆಲ್ವರಿಲ್ಲ
ನೋಡು ಬಾರೆ’

ಈ ಮಣ್ಣ ಹುಡಿಯ ಶಿವನ
ನಾಲಿಗೆ ತುದಿ ಮೇಲಿವೆ-
ವಿರಹ ಒಳಿತು ಕೆಡುಕು
ನೆಮ್ಮದಿ ಪುರಾಣ ಮಸಣ
ನರರಂತೆ ಬುವಿಯ ಎಲ್ಲ
ಸೌಭಾಗ್ಯ ಪಡೆದ ದೇವನ
ಒಳಕಥೆಗಳ ನಾಕಾರು ತತ್ತ್ವ ಪದಗಳು.

ಇವನ ದಿಟ್ಟಿಗೆ ನಿಲುಕಲಾರರು:
ನವರತ್ನ ನನ ಮನೆಯ
ರಾಗಿಯ ಕಾಳು
ಮುತ್ತು ನನ ಮನೆಯ
ಜೋಳದ ಕಾಳು
ಎನುವ ಹೇಮಕೂಟದ ಹಂಪಾದೇವಿ
ಮೊರ ಮೊರ ಅಕ್ಕಿ ಸುರುವಲು
ಕದದ ಹಿಂದೆ ಇಣುಕುವ
ಕಂಕಣವಿಲ್ಲದ ಕನ್ಯಾಮಣಿ.

ಸುಂದರಾಂಗನ ಪಾದ ಒಲಿವ
ಮಟಮಟ ಮಧ್ಯಾಹ್ನದ ಹಾದಿಯಲಿ
ಕೊಳೆತ ಹೂಕೋಸು
ಸೌತೇಕಾಯಿ ರಾಶಿ
ಸೋನೆ ಅವರೆ ಮೆಲ್ಲುವ ಹಸುಗಳು
ಬೈಕು ಗಾಡಿಗಳ ಚಕ್ರದ ಅಡಿ
ಕಲ್ಲಂಗಡಿ ಸಿಪ್ಪೆ, ಸೋರೆಕಾಯಿ,
ಮಣಿಸರ, ವಸ್ತ್ರ ಮಂಗಳ ಗೌರಿ ಬಳೆಯ
ಸಾಲು ಗೂಡಂಗಡಿಗಳು

ಕಲೆಕ್ಷನ್ ಏನಾದರೇನಂತೆ?
ಚೆಲ್ಲಾಪಿಲ್ಲಿ ಸೊಪ್ಪು ಸೆದೆ ನಡುವೆ
ಉಸ್ಸೆನುವ ಸೊಲ್ಲು, ಅದ ಮೀರಿಸಿ
ಕವಯತ್ರಿಯರ ನವಿಲುಗರಿಯಂತೆ ನಗುವ
ಬಟ್ಟಲು ಕಂಗಳಿಗೇನು ಬರವಿಲ್ಲ
ಆಸಾಮಿ, ಒಂಥಾರ ಸ್ಥಿತಪ್ರಜ್ಞ!
ಜನಜಂಗುಳಿಯಲ್ಲಿ ಕಂಡೂ ಕಾಣದಾತ...

ಅಂಜಲೀ ಬದ್ಧ
ನಿತ್ರಾಣ...
ಮೂಟೆಕಟ್ಟಿ ಸುರುಟಿ ಸುರುಳಿ ಸುತ್ತಿ
ಕುಸಿದಿತ್ತು ಗೌತಮನ ತನುವ ತಡಿಕೆ
ಕಣ್ ಕತ್ತಲಿಟ್ಟು ತಟರಿಸಿ
ದೇಹ ದಂಡನೆ ಪರಂಪರೆಗೆ
ಚೀಂವ್‌ಗುಟ್ಟಿತ್ತು ಜೀವ ಇಲಿಯಂತೆ

ನಾಯಿಯಂತ ಬಡಕಲು ಶರೀರ
ಚುಂಗು ಹಿಡಿದ ಅಂಗಿ ತೂರಿದ ಗಾಳಿ
ಚುಚ್ಚಿತ್ತು ಉರುಟು ಮಣ್ಣು
ದುಮುಗುಟ್ಟಿತ್ತು ಹುಯ್ಯುವ ಮೌನ.
ಹೆಂಡತಿ-ಮಗುವ ಮರುಭೂಮಿ-ಬದುಕತ್ತ
ಹೆಜ್ಜೆಯ ಇಡಿಸಿದ ತಾನೆ
ಜೀವ-ಧ್ಯಾನ-ಪ್ರೇಮ-ಮನುಷ್ಯತ್ವ
ತಿದಿ ಊದುವುದು ಹೇಗೆ?

ಕ್ಷಣಕ್ಕೊಮ್ಮೆ ಮೀನಂತೆ ಪುಳಕ್
ಬದಲಾಗುವ ಮನ-ಧ್ಯಾಸ.
ತಡೆಯಲಾಗದಷ್ಟು ಹಸಿವೆ, ನೀರಡಿಕೆ
ತಲ್ಲಣದ ದೇಹ ಒಣಗಿ ವಾಟೆಗರಿ.
ಪಶ್ಚಾತ್ತಾಪದೊಂದು ಹನಿ
ಸಾವ ಜಿಗಣೆ ಯಾತನೆ,
ಒಂಟಿ ಕಾಯಿ ಸುಂಟರಗಾಯಿ-
ಧ್ಯಾನದ ಮಗ್ಗುಲ ಅಮರಿಕೊಂಡರೂ
ಸೋಲುತ್ತಿರುವ ಜೀವ
ಅಂತರಾತ್ಮಕೆ ಓಗೊಟ್ಟು.

ಮುಳುಗಿದ ಸೂರ್‍ಯ
ಮೇಲೆದ್ದು ಮೂಡಣದಲಿ.
ಬರೆದ ಕಾವ್ಯ ಇಳೆಯ ಪದರದಲಿ.
ಏನಾದರೂ ಆಗಲಿ,
ಸುಸ್ತು ಯಾರಪ್ಪನ ಮನೆ ಗಂಟು?

ಪಡೆದಿದ್ದು ಸುಗತನಾಗಿ

ಬೊಗಸೆ ಹಿಡಿದಿದ್ದೆ-
ಸುಜಾತೆ ಹಾಲು-ಖೀರು:
ಬಾದಾಮಿ, ಪಚ್ಚಕರ್ಪೂರ, ಕೊಬ್ಬರಿ ಪರಿಕರ-
ಆಟಕ್ಕುಂಟು ಲೆಕ್ಕಕ್ಕಿಲ್ಲ
ಮಬ್ಬಾಯ್ತು ಸಾವಿನ ಹೊಸ್ತಿಲು.

ಅಂತರಾಳದಿ ದ್ರವಿಸಿದ ಅದಮ್ಯ ಚೈತನ್ಯ
ಪೂರ್ಣಿಮೆಗೆ ಕದ ತೆರೆದಿದ್ದೆ ತಡ
ಸೆಳಕಾಯ್ತು-ನಿರ್ಲಿಪ್ತತೆ ಅನಿತ್ಯತೆ
ಜೀವಿ-ಅಕ್ಕರೆ ನಲು ಹಾರೈಕೆ
ಇದೆ ಅಲ್ಲವೇ-ಬದುಕು ಸಾವಿನ
ವಿಸ್ಮಯ ಗೂಡು..
ನಿಲುದಾಣ...

1 comment:

Anonymous said...

durgada hudugaru have done a commendable job by writing on the first book from Chitradurga. i am sure the blog will be a source for many if events of literary world that take place in chitradurga are recorded regularly..