Wednesday, January 30, 2008

'ಕನ್ನಡದ ಕೆಲ್ಸಕ್ಕೆ ಎಲ್ರೂ ಒಂದಾಗ್ತಾರೆ ಅನ್ನೋ ಭರವಸೆ ಇದೆ'

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಕುರಿತು ಹಿರಿಯ ಸಾಹಿತಿಯಾದ ಬಿ.ಎಲ್.ವೇಣು ಅವರು ದುರ್ಗದ ಹುಡುಗರೊಂದಿಗೆ ಹಂಚಿಕೊಂಡ ಮಾತುಗಳು...

ಸಮ್ಮೇಳನ ನಡೆಯುವುದು ಸಂತೋಷದ ಸಂಗತಿ. ಆದರೆ ಜಿಲ್ಲಾ ಸಮ್ಮೇಳನವನ್ನೂ ಮಾಡಲಾಗದಿರುವವರು ಇಷ್ಟು ದೊಡ್ಡ ಸಮ್ಮೇಳನ ಹೇಗೆ ಮಾಡ್ತಾರೆ ಅನ್ನೋದು ನಮ್ಮ ಮುಂದಿನ ಸವಾಲು. ನಮ್ಮಲ್ಲಿ ಸಂಘಟನೆ ಕಡಮೆ. ಜಿಲ್ಲೆಯಲ್ಲಿ ಹೃದಯವಂತರಿದ್ದಾರೆ. ಆದರೆ ಹಣವಂತರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ಎರಡು ದೊಡ್ಡ ಮಠಗಳು ಕೈಜೋಡಿಸಬೇಕು. ಅವರಿಬ್ಬರು ಜೊತೆಯಾಗುವುದರ ಮೇಲೆ ಸಮ್ಮೇಳನದ ಯಶಸ್ಸು ನಿಂತಿದೆ. ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮಗಳಾದ ತರಳಬಾಳು ಹುಣ್ಣಿಮೆ, ಶರಣ ಸಂಸ್ಕೃತಿ ಉತ್ಸವಗಳು ನಡೆಯುತ್ತವೆ. ಆದರೆ ಅಲ್ಲಿ ಸೇರುವ ಜನ ೨೫-೩೦ ಸಾವಿರ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಕ್ಕೂ ಹೆಚ್ಚು ಜನಸೇರ್‍ತಾರೆ. ಅದಕ್ಕೆ ತಕ್ಕ ಸಿದ್ಧತೆಯಾಗಬೇಕು. ಸಮರ್ಥ ಸಂಘಟನೆಯಾಗಬೇಕು. ಇದು ಕನ್ನಡದ ಕೆಲಸವಾದ್ದರಿಂದ ಎಲ್ಲೂ ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಇದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿಯಾದ್ದರಿಂದ ಎಲ್ಲರೂ ಒಂದಾಗುತ್ತಾರೆ ಎಂಬ ವಿಶ್ವಾಸವೂ ಇದೆ.

ಮತ್ತೊಂದು ವಿಷಯ

ಬಿಎಲ್ ವೇಣು ಅವರ ಜನಪ್ರಿಯತೆ ರಾಜ್ಯದೆಲ್ಲೆಡೆ ಹಬ್ಬಿದ. ತಮ್ಮ ಕಾದಂಬರಿಗಳ ಮೂಲಕ ಓದುಗ ವರ್ಗವನ್ನು ಮುಟ್ಟಿದ ಇವರು ಅವುಗಳಲ್ಲಿ ಕೆಲವನ್ನು ಚಲನಚಿತ್ರವಾಗುವ ಮೂಲಕ ಮತ್ತೊಂದು ವರ್ಗವನ್ನು ತಲುಪಿದವರು ವೇಣು.
ವೇಣು ಎಂದರೆ ನೆನಪಾಗುವುದೇ ನೇರ, ನಿಷ್ಠುರ ಮಾತುಗಳು. ನಿಜ ಪ್ರತಿಪಾದನೆಯಲ್ಲದೇ ಮತ್ತಾವುದೋ ಓಲೈಕೆಗೆ ಅವಕಾಶವಾಗುವುದನ್ನು ವೇಣು ಯಾವತ್ತೂ ಇಷ್ಟಪಟ್ಟವರಲ್ಲ. ಕಂಡು ಸಹಿಸಿಕೊಂಡವರೂ ಅಲ್ಲ. ಹಾದಿ ತಪ್ಪಿದ ರಾಜಕಾರಣಿಗಳನ್ನು, ಮಠಾಧೀಶರು ಎಲ್ಲರನ್ನೂ ಟೀಕಿಸಿದವರು. ಇದು ವೇಣು ವ್ಯಕ್ತಿತ್ವದ ಒಂದು ಝಲಕ್ ಅಷ್ಟೇ.
ಅವರ ಕಥೆ, ಕಾದಂಬರಿ, ಬಿಡಿ ಬರಹಗಳಲ್ಲೂ ನಿರ್ದಾಕ್ಷಿಣ್ಯವಾದ, ನೇರವಾದ ಟೀಕೆ ಎದ್ದು ಕಾಣುತ್ತದೆ. ಬಂಡಾಯದ ಸ್ವರೂಪ, ಅಸಹನೆಯೊಂದು ಆಕ್ರೋಶವಾಗಿ ಸಿಡಿಯುವ ಗುಣಗಳು ಅವರ ಬರಹದಲ್ಲಿ ವ್ಯಕ್ತವಾಗಿದೆ.
ಮೂರು ಕಥಾಸಂಕಲನಗಳನ್ನು, ೧೫ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ವೇಣು ಫೆಬ್ರವರಿ ೩ರಂದು ಇನ್ನೂ ಎರಡು ಕೃತಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಒಂದು ೧೫ ಕತೆಗಳಿರುವ ‘ಬಣ್ಣದ ಬೊಂಬಿ’ ಕಥಾಸಂಕಲನ. ಇನ್ನೊಂದು ‘ಚುನಾವಣೆಗೆ ನಿಂತ ಮಠಾಧೀಶರು ಮತ್ತು ಇತರ ಅಣಕಗಳು’ಅಂಕಣ ಬರಹಗಳ ಸಂಗ್ರಹ. ಇದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಅಣಕಗಳ ಅಂಕಣಗಳ ಸಂಕಲನ.
ನೇರ ನಿಷ್ಠುರಿಯಾಗಿರುವ ವೇಣು ಜಿಲ್ಲೆಯ ಸಾಹಿತ್ಯಕ ವಲಯದಲ್ಲಿ ಐಸೋಲೇಟ್ ಆಗಿದ್ದರೂ ತಮ್ಮ ಮತ್ತು ಓದುಗನ ನಡುವಿನ ಸೇತುವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.


No comments: