Monday, January 21, 2008

ಮಲ್ಲರನ್ನು ಕಟ್ಟಿ ಬೆಳೆಸಿದ ದುರ್ಗದ ಗರಡಿಗಳು...

ಟಿ.ಆರ್.ರಾಧಾಕೃಷ್ಣ ಚಿತ್ರದುರ್ಗದ ಪ್ರಮುಖ ಕಥೆಗಾರರು. ಆದರೆ ಅತ್ಯಂತ ಕುತೂಹಲಹದಿಂದ ಕಾಡಿದ ಸಂಗತಿ ಕುಸ್ತಿ. ಮಧ್ಯಕರ್ನಾಟಕದ ಪ್ರಮುಖ ಕುಸ್ತಿ ಕೇಂದ್ರವಾದ ಚಿತ್ರದುರ್ಗದಲ್ಲಿ ಕುಸ್ತಿಪಟು, ಅವರನ್ನು ಪಳಗಿಸಿದ ಗರಡಿ ಮನೆಗಳ ಬಗ್ಗೆ ರಾಧಾಕೃಷ್ಣವರು ಲೇಖನಗಳು ಬರೆದಿದ್ದಾರೆ. ಚಿತ್ರದುರ್ಗದ ಪ್ರಖ್ಯಾತ ಕುಸ್ತಿ ಪಟು ಪೈಲ್ವಾನ್ ನಂಜಪ್ಪನನ್ನು ಕುರಿತು ಕೃತಿಯನ್ನು ಪ್ರಕಟಿಸಿದ್ದಾರೆ. ಚಿತ್ರದುರ್ಗದ ಗರಡಿ ಮನೆಗಳ ಕುರಿತು ಅವರು ಬರೆದಿರುವ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.


ಚಿತ್ರದುರ್ಗದ ಗರಡಿಗಳು:ಒಂದು ಸಾಂಸ್ಕೃತಿಕ ಇಣುಕುನೋಟ
ಮನುಷ್ಯನ ದೇಹ ಬಲಯುತವಾಗಿರುವುದು, ಜಟ್ಟಿಯಾಗಿರುವುದೇ ಒಂದ ಕಾಲದಲ್ಲಿ ಮುಖ್ಯವಾಗಿತ್ತು. ಪಾಳೆಯಗಾರರು ಆಳಿದ ಚಿತ್ರದುರ್ಗದ ಜನಜೀವನದಲ್ಲಿ ಗರಡಿಗಳ ಮಹತ್ವವನ್ನು ಕಡೆಗಣಿಸುವಂತಿಲ್ಲ. ಜಗತ್ತಿನಾದ್ಯಂತ ಇತಿಹಾಸದಲ್ಲಿ, ಪೌರಾಣಿಕ ಕಥಾಲೋಕಗಳಲ್ಲಿ ಅನೇಕ ವೀರರು ಜಟ್ಟಿಗಳಾಗಿ, ಮಲ್ಲಯುದ್ಧದಲ್ಲಿ ತಮ್ಮ ಪ್ರಾವೀಣ್ಯತೆ ಮೆರೆದ ಸಂಗತಿಗಳನ್ನು ನಾವು ತಿಳಿದಿದ್ದೇವೆ. ‘ಭರ್ಜಿಯನ್ನು ಚುಚ್ಚಿದರೆ ಭರ್ಜಿಯೇ ಬಾಗುತ್ತದೆ’ ಎನ್ನುವಂಥ ದೇಹದಾರ್ಢ್ಯ ಹೊಂದಿದ್ದ ಮಲ್ಲರು ರಾಜನ ಬೆಂಗಾವಲಿನವರಾಗಿರುತ್ತಿದ್ದರು. ಅವರು ಅದಕ್ಕಾಗಿ ಸಂಪಾದಿಸಿದ ಕೀರ್ತಿ ಗೌರವಗಳನ್ನು ನೋಡಿದರೆ ಮತ್ಸರ ಹುಟ್ಟುತ್ತದೆ. ಅನಾರೋಗ್ಯದಿಂದ ಪಾರಾದ ಸುಂದರ ಹಾಗೂ ಗುಟ್ಟಿಮುಟ್ಟಾದ ದೇಹವುಳ್ಳ ವೀರರನ್ನು ತಯಾರು ಮಾಡಿ ಕಳುಹಿಸುತ್ತಿದ್ದ ಗರಡಿಗಳ ಬಗ್ಗೆ ಸಮಾಜದಲ್ಲಿ ಗೌರವ-ಆದರ ಸ್ಥಾನಮಾನಗಳು ಇದ್ದುದು ಸಹಜ ಎನಿಸುತ್ತದೆ.
ಪಾಳೆಗಾರರ ಕಾಲದ ಅನೇಕ ಜಟ್ಟಿಗಳು ಕುಸ್ತಿಯಲ್ಲಿ ಪರಿಣತರಾಗಿದ್ದವಂತೆ, ವೈದ್ಯಕೀಯದಲ್ಲೂ ಪರಿಣತಿ ಹೊಂದಿದ್ದರಂತೆ. ತುಂಡಾಗಿದ್ದ ಕೈ, ಕಾಲುಗಳನ್ನು ತಕ್ಷಣ ಕೂಡಿಸುವ, ವಾಸಿ ಮಾಡುವ ಕ್ರಮಗಳು, ಔಷಧಗಳು ಅವರಿಗೆ ಗೊತ್ತಿದ್ದವು. ಅವರು ಕಲಾವಿದರೂ ಆಗಿದ್ದಂತೆ ಕಾಣುತ್ತದೆ. ಆನೆಗೊಂದಿಯಿಂದ ವೆಂಕಟಗಿರಿ ಜಟ್ಟಿ ಎಂಬುವವನು ಬಂದು ಭರಮಣ್ಣನಾಯಕನಿಗೆ ಮತ್ತು ಮುಂದಿನ ಪಾಳೆಯರಾಗಿರರಿಗೆ ವಿಜಯನಗರದ ಅರಸರ ರೀತಿಯಲ್ಲಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದನಂತೆ. ಇಲ್ಲಿನ ಹಗಲು ದೀವಟಿಗೆ ಗರಡಿಯ ಗೊಂಡೆಯ ಸಂಕೇತ, ದೊಡ್ಡ ಗರಡಿಯ ಕಲಿ ಸಂಕೇತ, ಸಣ್ಣಗರಡಿಯ ತುರಾ ಸಂಕೇತಗಳನ್ನು ಭರಮಣ್ಣನಾಯಕನ ಕಿರೀಟದಲ್ಲಿ ಅಳವಡಿಸಿಲಾಗಿತ್ತಂತೆ. ಅಂದರೆ ಭರಮಣ್ಣ ನಾಯಕನು ಮೂರೂ ಗರಡಿಗಳ ಒಡೆಯ ಎಂಬುದನ್ನು ಸಾರುವಂತೆ ಆ ಕಿರೀಟ ಇತ್ತಂತೆ. ಇಲ್ಲಿನ ಕೊನೆಯ ಪಾಳೆಯಗಾರನಾದ ಮದಕರಿನಾಯಕ ಜಾನಕಲ್ಲಿನಿಂದ ಬರುವಾಗ ರಮಣರಾಮಜಟ್ಟಿ ಎನ್ನುವನನ್ನು ತನ್ನ ಜೊತೆಗೆ ಚಿತ್ರದುರ್ಗಕ್ಕೆ ಕರೆತಂದನಂತೆ. ಹೇಮಾಜಟ್ಟಿ ಎಂಬಾತನ ವಜ್ರಋಷಿ, ಕತ್ತಿವರಸೆಗಳಲ್ಲಿ ಪ್ರವೀಣನಾಗಿದ್ದನಂತೆ. ಈತ ಎರಡು ಕೈಗಳಲ್ಲಿ ಕತ್ತಿ ತಿರುಗಿಸುತ್ತ, ಇಪ್ಪತ್ತು ಜನ ನಿಂಬೆ ಹಣ್ಣುಗಳನ್ನು ಆತನ ಮೇಲೆ ಎಸೆದರೂ ಅವು ತುಂಡಾಗಿ ಬೀಳುವಂಥ ಕೌಶಲವ್ಯವನ್ನು ಸಂಪಾದಿಸಿ, ಅಂದಿನ ಜಿಲ್ಲಾಧಿಕಾರಿಗಳ ಮುಂದೆ ಪ್ರದರ್ಶಿಸಿ ಇನಾಂ ಪಡೆದಿದ್ದನಂತೆ. ಇಂಥ ಚಮತ್ಕಾರವನ್ನು ಈಗ ನಾವು ಆಕಸ್ಮಾತ್ ನೋಡಬೇಕೆಂದರೆ ಪ್ರಖ್ಯಾತ ಐಂದ್ರಜಾಲಿಕ ಪಿ.ಸಿ.ಸರ್ಕಾರ್ ನೆನಪಾಗುತ್ತಾನೆಯೇ ಹೊರತು ಜಟ್ಟಿಗಳಲ್ಲ! ಆದರೆ ಇತಿಹಾಸದಲ್ಲಿ ಜನ ಜೀವನದಲ್ಲಿ, ಗರಡಿಮಲ್ಲರ ಜೀವನದಲ್ಲಿ ಇಂಥ ರಂಜನೆಯೂ ಸಹಜ ವಿಷಯವಾಗಿದ್ದವು. ಹಿಂದಿನ ಕಾಲದಲ್ಲಿ ಹೀಗೆ ಪ್ರಖ್ಯಾತರಾಗಿದ್ದ ಜಟ್ಟಿಗಳು ಬರುಬರುತ್ತ ಈಗ ಕಾಣದಂತಾಗಿದ್ದಾರೆ.
ಇಂಥವರ ಕಾಲದಲ್ಲಿ ಚಿತ್ರದುರ್ಗದಲ್ಲಿ ನಿರ್ಮಾಣವಾದ ಗರಡಿಗಳು ಇಂದು ಕಣ್ಮರೆಯಾಗುತ್ತಿವೆ. ಇದ್ದ ಹಾಗೂ ಸದ್ಯ ಉಳಿದಿರುವ ಚಿತ್ರದುರ್ಗದ ಗರಡಿಗಳ ಮೇಲೆ ಒಂದು ನೋಟ..
ಪೆರೆನಾಕನ ಮಗ ಗೋಪೆನಾಕ ಆಯಗಳ ಗರಡಿ:
ಚಿತ್ರದುರ್ಗದ ಕೋಟೆ ಕೊತ್ತಲಗಳ ಪ್ರದೇಶದಲ್ಲಿ ಗಣೇಶನ ಗುಡಿಯ ಪಕ್ಕದಲ್ಲಿರುವ ಕಲ್ಲಿನ ಮನೆಯೊಂದನ್ನು ತೋರಿಸಿ ಅದನ್ನು ಗರಡಿ ಎನ್ನುತ್ತಾರೆ. ರಹಸ್ಯವಾಗಿ ಜಟ್ಟಿಗಳು ಪಟ್ಟು, ವರಸೆಗಳನ್ನು ಕಲಿಸಲು, ಸಣ್ಣ ಬಾಗಿಲು ಗರಡಿಗೆ ಇರುತ್ತಿತ್ತು ಎನ್ನುವ ಕಾರಣದಿಂದ ನೋಡಿದರೆ, ಇದು ಗರಡಿಯಂತೆ ಕಾಣುತ್ತದೆ. ಆದರೆ ಇದು ಪಾಳೆಯಗಾರರ ಕಾಲದಲ್ಲಿ ನಿರ್ಮಿಸಿದ ಕಣಜ ಎಂದು ಇತಿಹಾಸ ಸಂಶೋಧಕರ ಪ್ರೆ.ಬಿ. ರಾಜಶೇಖರಪ್ಪ ಹೇಳುತ್ತಾರೆ. ಅವರು ಮುಂದುವರಿದು ಏಕನಾಥೇಶ್ವರಿ ದೇವಾಲಯದ ಹಿಂಭಾಗಕ್ಕೆ, ವಾಯುವ್ಯ ದಿಕ್ಕಿನಲ್ಲಿರುವ ಗವಿಯೊಂದು ಗರಡಿಯಾಗಿದ್ದುದನ್ನೂ ಅದರ ಶಿಲಾಲೇಖವನ್ನೂ ಕುರಿತು ಹೇಳುತ್ತಾರೆ. ಈ ಗರಡಿಯನ್ನು ಈಗ ಕೆಲವರು ಕರೆಯುವುದು ‘ಪೀಕನಾಯಕನ ಗರಡಿ’ ಎಂದು. ಆದರೆ ಶಿಲಾಲೇಖದಲ್ಲಿ ಉಲ್ಲೇಖಿತವಾಗಿರುವಂತೆ ಇದು ‘ಪೆರೆನಾಕನ ಮಗ ಗೋಪೆನಾಕ ಆಯ(ಅಯ್ಯಗಳ)ಗರಡಿ’. ಇದು ವಿಜಯನಗರ ಸಾಮ್ರಾಜ್ಯದ ಮಧ್ಯಕಾಲದ ಅಂದರೆ ಕ್ರಿ.ಶ. ೧೫ನೇ ಶತಮಾನದ ಪೂರ್ವಾರ್ಧದಲ್ಲಿ ಆದದ್ದಿರಬಹುದೆಂದು ಅವರು ತಿಳಿಸುತ್ತಾರೆ. ಅವರ ಪ್ರಕಾರ ಈಗ ‘ಅರಮನೆಯ ಬಯಲು’ ಎಂದು ಗುರುತಿಸುವ ಪ್ರದೇಶದಲ್ಲಿಯೂ ಕೆಲವು ಗರಡಿಗಳಿದ್ದಿರಬಹುದು. ಈ ಗರಡಿಗಳಲ್ಲಿ ಅಂಗ ಸಾಧನೆ ನಡೆಯುತ್ತಿತ್ತು. ಇಲ್ಲಿ ಜಟ್ಟಿಗಳು ತಯಾರಾಗುತ್ತಿದ್ದರು ಎಂದು ಊಹಿಸಬಹುದೇ ಹೊರತು ಹೆಚ್ಚಿನ ಸಂಗತಿ ತಿಳಿಯುವುದಿಲ್ಲ.
ದೊಡ್ಡ ಗರಡಿ:
ಇದು ಕರುವಿನ ಕಟ್ಟೆಯಲ್ಲಿರುವ ಪಾದದೇವರ ಹಳೆಯ ತಿಪ್ಪಿನಗಟ್ಟಮ್ಮನ ಗುಡಿಯಿಂದ ಕೊಂಚ ಮೇಲಕ್ಕೆ ಹೋದರೆ ಸಿಕ್ಕುತ್ತದೆ. ದೊಡ್ಡ ಗರಡಿಯ ಇರವನ್ನು ದೂರಕ್ಕೇ ಸಾರುವಂತೆ ದೊಡ್ಡ ಅರಳಿಯ ಮರವೊಂದು ಗರಡಿಯ ಪ್ರಾಕಾರದಲ್ಲಿ ಬೆಳೆದು ನಿಂತಿದೆ. ಇದು ಸಾಕಷ್ಟು ಪ್ರಾಚೀನ ಪ್ರಖ್ಯಾತ ಗರಡಿಯಾದರೂ ಎಷ್ಟು ಪ್ರಾಚೀನ ಎಂಬುದು ತಿಳಿದು ಬಂದಿಲ್ಲ. ಸಾಮಾಜಿಕವಾಗಿ ಪ್ರತಿಷ್ಠೆಯ ಸ್ಥಾನ ಪಡೆದುಕೊಂಡಿರುವ ಚಿತ್ರದುರ್ಗಕ್ಕೆ, ಹಾಗೇ ನಾಡಿಗೇ ಲಾಡರ ನಂಜಪ್ಪನಂಥ ಒಬ್ಬ ಪೈಲ್ವಾನನನ್ನು ಕೊಟ್ಟ ಕೀರ್ತಿ ಇರುವ ಈ ದೊಡ್ಡ ಗರಡಿಯು ಇತಿಹಾಸಕ್ಕೆ ಸೇರಿಸಬೇಕಾದಷ್ಟು ರಸವತ್ತಾದ ಶೌರ್‍ಯ, ಧೈರ್ಯದ ಕಥೆಗಳನ್ನು ಹೇರಳವಾಗಿ ಹೊಂದಿದೆ.
ಸಣ್ಣ ಗರಡಿ:
ಇದು ಕೂಡಿಲಿ ಶೃಂಗೇರಿ ಮಠಕ್ಕೆ ಸಮೀಪದಲ್ಲಿ ಇದೆ. ಸುಮಾರು ಅರವತ್ತೈದು ಎಪ್ಪತ್ತು ವರ್ಷಗಳ ಹಿಂದೆ ಅಂದರೆ ೧೯೨೬ರಲ್ಲಿ ಸ್ಥಾಪನೆಯಾಗಿದೆ ಎನ್ನಲಾಗಿದೆ. ಆದರೆ ಇದು ಸ್ಥಾಪನೆಯಲ್ಲಿ ಜೀರ್ಣೋದ್ಧಾರ. ಕುರಿ ತಿಮ್ಮಜ್ಜ. ಉಪ್ಪಾರ ಮಲ್ಲಜ್ಜ, ತಿಪ್ಪೇರುದ್ರಪ್ಪ, ಸಾಬ್ಜಾನ್ ಸಾಬ್, ಖಾಸೀಮ್ ಸಾಬ್ ಮೊದಲಾದವರು ಇದರ ಸ್ಥಾಪನೆ ಅಥವಾ ಪುನರುತ್ಧಾನಕ್ಕೆ ಮುಂದಾಗಿ ದುಡಿದರೆಂದು ಹೇಳುತ್ತಾರೆ. ಚಿತ್ರದುರ್ಗದ ಕಾಶಿ ಮನೆತನದ ಶೆಟ್ಟರು ಕೊಟ್ಟ ಶ್ರೀಕೃಷ್ಣ ವಿಗ್ರಹದ ಬಗ್ಗೆ ಈ ಗರಡಿಯ ಜನಕ್ಕೆ ಎಲ್ಲಿಲ್ಲದ ಅಭಿಮಾನ.
ಬುರುಜಿನ ಹಟ್ಟಿಯ ಗರಡಿ:
ಬುರುಜಿನ ಹಟ್ಟಿಯಲ್ಲಿ ಮುಖ್ಯ ಸರ್ಕಲ್ಲಿನಿಂದ ದಕ್ಷಿಣಕ್ಕೆ ಕೊಂಚ ದೂರ ಹೋದರೆ ಇನ್ನೊಂದು ಸರ್ಕಲ್ ಬಳಿ ಈ ಗರಡಿ ಇದೆ. ಹಿರಿಯ ಉಸ್ತಾದ್ ಗಿಡಿದಿಮ್ಮಪ್ಪನವರ ಕೈಕೆಳಗೆ ಅನೇಕ ಕುಸ್ತಿಪಟುಗಳನ್ನು ತಯಾರಿಸಿದ ಈ ಗರಡಿಯೂ ಪುರಾತನ ಗರಡಿಗಳಲ್ಲೊಂದು.
ಹಗಲು ದೀವಟಿಗೆ ಗರಡಿ:
ಹಗಲು ದೀವಟಿಗೆ ಗರಡಿಯು ಬುರುಜಿನ ಹಟ್ಟಿಯ ಶ್ರೀರಾಘವೇಂದ್ರ ಮಠದಿಂದ ಆಚೆಗೆ ೨೦-೩೦ ಹೆಜ್ಜೆಗಳ ದೂರದಲ್ಲಿದೆ. ಈ ಗರಡಿಯು ಕೆಲ ಕಾಲದ ಹಿಂದೆ ಕುಸಿದಿತ್ತು. ಈಚೆಗೆ ಅಸ್‌ಬೆಸ್ಟಾಸ್ ಹೊದಿಕೆಯಿಂದ ನವೀಕರಣಗೊಂಡಿದೆ. ಈ ಗರಡಿಯ ಮೂಲವು ಸರಿಯಾಗಿ ತಿಳಿದು ಬಂದಿಲ್ಲ. ‘ಹಗಲು ದೀವಟಿಗೆ ಗರಡಿ’ ಎಂದು ಯಾಕೆ ಕರೆಯುತ್ತಾರೆ ಎಂದರೆ ಒಬ್ಬರು ತಿಳಿಸುವಂತೆ ಈ ಗರಡಿಯು ಹಗಲಿನಲ್ಲಿ ಮಾತ್ರ ತರೆಯುತ್ತಿದ್ದಿರಬೇಕು. ಅದಕ್ಕೆ, ಹಾಗೆಯೇ ಹಗಲಿನಲ್ಲಿ ದೀವಟಿಗೆ ಹಿಡಿದು ಮೆರವಣಿಗೆ ಹೋಗುವ ವಿಶೇಷ ಹಕ್ಕು ಮತ್ತು ಮಾನ್ಯತೆ ಇದಕ್ಕಿತ್ತು. ಅದು ಇದರ ಹೆಚ್ಚಳ ಎನ್ನುವವರೂ ಇದ್ದಾರೆ. ನೂರಾ ಹತ್ತನೆ ವಯಸ್ಸಿನಲ್ಲಿ ತೀರಿಕೊಂಡ ಖಾಸಿಂಸಾಬರು ಉಸ್ತಾದರಾಗಿ ಅನೇಕ ಪೈಲ್ವಾನರನ್ನು ಕೊಟ್ಟ ಕೀರ್ತಿ ಈ ಗರಡಿಯದು. ಪೈಲ್ವಾನ್ ಸಂಗಪ್ಪ, ಚಮ್ಮಿ ಬೋರಯ್ಯ, ಅಬ್ದುಲ್ ಖಾದರ್ ಮೊದಲಾದವರು ಇಲ್ಲಿನ ಹೆಸರಿಸಬೇಕಾದ ಪೈಲ್ವಾನರು.
(ಇನ್ನೂ ಇದೆ...)

1 comment:

Anonymous said...

i have seen your web page its interesting and informative.
I really like the content you provide in the web page.
But you can do more with your web page spice up your page, don't stop providing the simple page you can provide more features like forums, polls, CMS,contact forms and many more features.
Convert your blog "yourname.blogspot.com" to www.yourname.com completely free.
free Blog services provide only simple blogs but we can provide free website for you where you can provide multiple services or features rather than only simple blog.
Become proud owner of the own site and have your presence in the cyber space.
we provide you free website+ free web hosting + list of your choice of scripts like(blog scripts,CMS scripts, forums scripts and may scripts) all the above services are absolutely free.
The list of services we provide are

1. Complete free services no hidden cost
2. Free websites like www.YourName.com
3. Multiple free websites also provided
4. Free webspace of1000 Mb / 1 Gb
5. Unlimited email ids for your website like (info@yoursite.com, contact@yoursite.com)
6. PHP 4.x
7. MYSQL (Unlimited databases)
8. Unlimited Bandwidth
9. Hundreds of Free scripts to install in your website (like Blog scripts, Forum scripts and many CMS scripts)
10. We install extra scripts on request
11. Hundreds of free templates to select
12. Technical support by email

Please visit our website for more details www.HyperWebEnable.com and www.HyperWebEnable.com/freewebsite.php

Please contact us for more information.


Sincerely,

HyperWebEnable team
info@HyperWebEnable.com