Friday, February 29, 2008

ಲಾವಣಿಗಳಲ್ಲಿ ಚಿತ್ರದುರ್ಗ...

ಚಿತ್ರದುರ್ಗ ಎಂದರೆ ನೆನಪಾಗುವ ಅನೇಕ ಸಂಗತಿಗಳಲ್ಲಿ ಇಲ್ಲಿನ ಜಾನಪದವೂ ಒಂದು. ಸಿರಿಯಜ್ಜಿಯಂಥ ಅಚ್ಚರಿಗಳಿರುವ ಈ ಜಿಲ್ಲೆಯಲ್ಲಿ ನಿಮಗೆ ಅವರು ಹಾಡುವ ಲಾವಣಿಗಳಲ್ಲಿ ನೆಲದ ಸಂಸ್ಕೃತಿ ಮುಖಗಳು ಪರಿಚಯವಾಗುತ್ತವೆ. ಅಂಥವುಗಳಲ್ಲಿ ಲಾವಣಿಯೂ ಒಂದು.

ಲಾವಣಿ ವ್ಯಕ್ತಿಯೊಬ್ಬ ಬದುಕು, ಸಾಧನೆಯನ್ನು ಫ್ಯಾಂಟಸಿ ಮತ್ತು ಫ್ಯಾಕ್ಟ್ ಗಳಿಟ್ಟುಕೊಂಡು ಕಾವ್ಯ ಪ್ರಕಾರ ಎನ್ನಬಹುದು. ಲಾವಣಿ ಕಥನಾತ್ಮಕವಾದುದು. ಲಾವಣಿ ಹಾಡಿನ ರೂಪದಲ್ಲಿರುತ್ತದೆ. ವಸ್ತು, ಶೈಲಿ ಮತ್ತು ಸ್ವರೂಪಗಳಲ್ಲಿ ಲಾವಣಿ ಜನಪದ ಮೂಲಕ್ಕೆ ಸೇರಿದುದು. ಲಾವಣಿ ವಸ್ತು ನಿಷ್ಠವಾದುದು. ಕ್ರಿಯೆ, ಸಂಭಾಷಣೆ ಹಾಗೂ ಘಟನೆಗಳ ಮೂಲಕ ಅಂತ್ಯವನ್ನು ತೀವ್ರಗತಿಯಲ್ಲಿ ತಲುಪುವಂಥದು.

ಚಿತ್ರದುರ್ಗದಲ್ಲಿ ಇಂಥ ಲಾವಣಿಗಳಿಗೇನು ಕೊರತೆಯಿಲ್ಲ. ಸ್ಯಾಂಪಲ್ಲಿಗೆ

ಚಿತ್ರದುರ್ಗದ ಲಾವಣಿಗಳಲ್ಲಿ ಸಾಕಷ್ಟು ದೀರ್ಘವಾಗಿ ಮೂಡಿ ಬಂದಿರುವುದು ನಿಂಗಣ್ಣನ ಕಥೆ. ಇದನ್ನು ಖಂಡಕಾವ್ಯವೆಂದೇ ಕರೆಯಬಹುದು. ಸುಮಾರು ಏಳುನೂರು ತ್ರಿಪದಿಗಳಲ್ಲಿ ಈ ಕಾವ್ಯ ಅನಾವರಣಗೊಂಡಿದೆ. ಚಳ್ಳಕೆರೆ ತಾಲ್ಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಲಾವಣಿ ಪ್ರಸಿದ್ಧವಾಗಿದೆ. ನಿಂಗಣ್ಣ ಗೊಲ್ಲರದೇವತೆ, ಬೊಮ್ಮಣ್ಣನೆಂಬುವನು ಅತ್ತಿಗೆಯಾಡಿದ ಮಾತಿಗೆ ಸಿಟ್ಟು ಮಾಡಿಕೊಂಡು ಹೋಗಿ ಹೇಮರೆಡ್ಡಿಗಳ ಪಟ್ಟಣ ಸೇರಿದ. ಅಲ್ಲಿ ಬಾವಿ ನೀರಿಗೆಂದು ಬಂದ ಅತ್ತೆಮನೆ ಸೊಸೆಯರು ಊರ ಹೊರಗೆ ಅವನ್ನು ನೆಡಿ ಕೂಲಿಗೆ ಕರೆದರು. ಇದಕ್ಕೆ ಒಪ್ಪಿ ಬೊಮ್ಮಣ್ಣ ದನಕರುಗಳನ್ನು ಕಾಯಲು ನಿಂತ. ಅಲ್ಲಿ ನಿಂಗಣ್ಣ ದೇವರು ಬೊಮ್ಮಣ್ಣನ ಹತ್ತಿರ ಬಂದು ನಿನ್ನ ಹಿಂದೆ ನಾನೂ ಬರುತ್ತೇನೆ ಎಂದನು. ಅವನನ್ನು ಹೊತ್ತುಕೊಡು ಊರು ಸೇರಬೇಕೆಂದುಕೊಂಡಾಗ ನಿಂಗಣ್ಣ ದಾರಿಯೊಳಗೆ ಬಾವಿ ಪಾಲಾದನು. ಸಿರಿಯಮ್ಮ ಎಂಬುವಳು ನೀರಿಗಾಗಿ ಬಾವಿಗೆ ಬಂದಾಗ ನಿಂಗಣ್ಣ ಕೊಡದಲ್ಲಿ ಸೇರಿಕೊಂಡ. ಹಾಗೆ ಬಂದ ನಿಂಗಣ್ಣನನ್ನು ಸಿರಿಯಣ್ಣ ಎಂಬವನು ತನ್ನ ಊರಿಗೆ ಒಯ್ದು ಕಂಬಳಿ ಗದ್ದಿಗೆ ಹಾಸಿ ಕೂರಿಸಿದನು. ಹೀಗೆ ನಿಂಗಣ್ಣ ದೇವರಾದನು.

ದುರ್ಗದ ಕಡೆಯಿಂದ ಭರಮಣ್ಣನಾಯಕನ ದಂಡು ಗೊಲ್ಲರ ಹಟ್ಟಿಗೆ ಬಂದಿತು. ನಿಂಗಣ್ಣ ಗೊಲ್ಲರ ಹಿರಿಯರಿಗೆಲ್ಲ ಕನಸಿನಲ್ಲಿ ಬಂದು ಧೈರ್ಯ ಕೊಟ್ಟ. ಕರಿಯಣ್ಣ ಯುದ್ಧಕ್ಕೆ ಹೋದ ದಾರಿಯಲ್ಲಿ ಬೇಡರು, ತುರುಕರು ಇದಿರಾದರು. ಕರಿಯಣ್ಣ ಯುದ್ಧದಲ್ಲಿ ತೀರಿಕೊಂಡ. ಮುಸಲ್ಮಾನರು ನಿಂಗಣ್ಣನನ್ನು ಹೊತ್ತುಕೊಂಡು ದುರ್ಗದ ಕಡೆಗೆ ಹೊರಟರು. ಈಶ್ವರನ ಮಗಳಾದ ಗೌರಸಂದ್ರದ ಮಾರಮ್ಮ ಉರಿಗಣ್ಣು ಬಿಟ್ಟು ಮೇಲುದುರ್ಗಕ್ಕೆ ಬಂದಳು. ಮತ್ತೆ ನಿಂಗಣ್ಣನನ್ನು ಸಕಲ ಮರ್ಯಾದೆಗಳಿಂದ ಹೊತ್ತು ತಂದರು.

ಈ ಕಾವ್ಯದಲ್ಲಿ ಐತಿಹ್ಯಾಂಶಗಳಿಗಿಂತ, ಪೌರಾಣಿಕಾಂಶಗಳೇ ಹೆಚ್ಚಾಗಿದ್ದರೂ, ಐತಿಹಾಸಿಕ ಅಂಶಗಳು ಕೂಡ ಸೂಚ್ಯವಾಗಿವೆ. ಮುಸ್ಲಿಮರು ಗೊಲ್ಲರ ಹಟ್ಟಿಯನ್ನು ಲೂಟಿ ಮಾಡಿದ ಸನ್ನಿವೇಶವಿದೆ. ಚಿತ್ರದುರ್ಗ ಪಟ್ಟಣವನ್ನು ವಶಪಡಿಸಿಕೊಳ್ಳಲು ಹೈದರಾಲಿ ತನ್ನ ಸೈನ್ಯ ಸಮೇತ ಬಂದು ದುರ್ಗದ ಕೋಟೆಯ ಮುಂದೆ ಆರು ತಿಂಗಳು ಬೀಡು ಬಿಟ್ಟನೆಂದೂ ಆಗ ಸಿಪಾಯಿಗಳು ಆಹಾರಕ್ಕಾಗಿ ಸುತ್ತಮುತ್ತಲ ಗ್ರಾಮಗಳ ಮೇಲೆ ದಾಳಿಮಾಡಿದರೆಂದೂ ಊಹಿಸಲಾಗಿದೆ. ಚಿತ್ರದುರ್ಗದ ಪಾಳೆಯಗಾರ ಭರಮಣ್ಣನಾಯಕ ಮುಸ್ಲಿಮರ ದೊರೆಯೆಂದು ಕಾವ್ಯದಲ್ಲಿ ಹೇಳಿದೆ. ದುರ್ಗದ ಕಡೆಯಿಂದ ಬಂದ ಮುಸ್ಲಿಮರನ್ನು ಭರಮಣ್ಣನ ಕಡೆಯವರೇ ಎಂದು ತಿಳಿದಿದ್ದರಿಂದ ಹೀಗೆ ಲಾವಣಿಕಾರ ಭಾವಿಸಿರಬಹುದು

ರಣಸಾಗರ ಗೌಡ:

ಸುಮಾರು ತೊಂಬತ್ತು ವರ್ಷಗಳ ಹಿಂದೆ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕು ಕೋನಸಾಗರ ಗ್ರಾಮದಲ್ಲಿ ನಡೆದ ಘಟನೆ ಜನಪದ ಗೀತರೂಪ ಪಡೆದಿದೆ. ಅದನ್ನು ಕೋಲುಪದದ ಧಾಟಿಯಲ್ಲಿ ಜನ ಹಾಡುತ್ತಾರೆ. ಪಾಪನಾಯಕನೆಂಬುವನು ಕೋನಸಾಗರದ ಪಟೇಲನಾಗಿದ್ದ. ಯಾರ ಮನೆಯಲ್ಲಿ ಲಗ್ನವಾದರೂ ಗೌಡನ ಮನೆಗೆ ಎಡೆಕೊಟ್ಟು ಮುಂದಿನ ಕಾರ್ಯ ನೆರವೇರಿಸಬೇಕಿತ್ತು. ಒಮ್ಮೆ ಊರಿನ ಇತರ ಪಂಗಡದವರು ಎಡೆಕೊಡದೆ ಲಗ್ನದ ದಿಬ್ಬಣವನ್ನು ಬೀದಿಯಲ್ಲಿ ತೆಗೆದುಕೊಂಡು ಬರುತ್ತಿದ್ದರು. ಪಟೇಲ ದಿಬ್ಬಣದ ಮುಂದೆ ಬಂದು ಅಗಸರಿಂದ ಪಂಜು ಕಿತ್ತುಕೊಂಡು ನೆಲಕ್ಕೆ ಹಾಕಿ ಮೆಟ್ಟಿನಿಂದ ಉಜ್ಜಿಬಿಟ್ಟ. ಈ ಅವಮಾನ ಸಹಿಸಲಾರದೆ ದಿಬ್ಬಣದ ಹಿರಿಯರು ಪಟೇಲನನ್ನು ಕೋರ್ಟಿಗೆ ಎಳೆದರು. ಚಿತ್ರದುರ್ಗದ ಕೋರ್ಟಿನಲ್ಲಿ ಮೊಕದ್ದಮೆ ಗೆದ್ದ ಪಾಪನಾಯಕ ಕೊರಳಿಗೆ ಹಾರ ಹಾಕಿಸಿಕೊಂಡು ಊರಲ್ಲೆಲ್ಲ ಮೆರವಣಿಗೆ ಮಾಡಿಸಿಕೊಂಡ. ಅವನ ದಬ್ಬಾಳಿಕೆಯನ್ನು ಸಹಿಸಲಾರದ ಕೆಲವರು ಅವನನ್ನು ಕೊಲ್ಲಲು ಸಂಚು ಹೂಡಿದರು.
ಒಂದು ದಿನ ಗೌಡ ಕೋನಸಾಗರಕ್ಕೆ ಬರುತ್ತಿದ್ದಾಗ ಆಳೊಬ್ಬ ಬಂದು ಆತನನ್ನು ನಾಟಕದ ಮನೆಗೆ ಬರುವಂತೆ ಕರೆದ. ನಾಯಕನ ಹೆಂಡತಿ ಹಾಗೂ ಮಕ್ಕಳು ಹೋಗಬೇಡವೆಂದು, ಉಂಡು ಮಲಗು ಎಂದು ಬೇಡಿಕೊಂಡರು. ಆದರೆ ಪಾಪನಾಯಕ ಅವರ ಮಾತನ್ನು ಲೆಕ್ಕಿಸಲಿಲ್ಲ. ನಾಟಕ ಶಾಲೆಯಲ್ಲಿ ಯಾರೂ ಇರಲಿಲ್ಲ. ಕತ್ತಲೆಯೊಳಗೆ ಆವಿತಿದ್ದವನೊಬ್ಬ ನಾಯಕನ ಮೇಲೆ ಕತ್ತಿ ಬೀಸಿದ. ನಾಯಕ ಕೈ ಒಡ್ಡಿದಾಗ ಕೈಬೆರಳು ಕತ್ತರಿಸಿಕೊಂಡು ಹೋಯಿತು. ಗೌಡ ಸರ್ಪದಂತೆ ಬುಸುಗುಟ್ಟಿದ. ಸಂಚು ಹೂಡಿದವರಿಗೆ ಹಾವನ್ನು ಅರ್ಧಕೆಣಕಿ ಬಿಟ್ಟಂತೆ ಭಯವಾಯಿತು. ಮತ್ತೆ ಸೇರಿ ಉಪಾಯ ಮಾಡಿದರು. ಆಸ್ಪತ್ರೆಯ ವೈದ್ಯರ ಹೆಂಡತಿಗೆ ಆಸೆ ತೋರಿಸಿದರು. ಪರಿಣಾಮವಾಗಿ ಪಾಪನಾಯಕನ ಕೈಯ ಗಾಯಕ್ಕೆ ಹಚ್ಚುತ್ತಿದ್ದ ಮುಲಾಮಿಗೆ ವಿಷ ಸೇರಿಸಲಾಯಿತು. ವಿಷ ದೇಹಕ್ಕೆಲ್ಲಾ ವ್ಯಾಪಿಸಿತು. ಗೌಡನನ್ನು ಚಿತ್ರದುರ್ಗಕ್ಕೆ ಕರೆತಂದರು. ಆದರೂ ಗುಣಮುಖವಾಗದೆ ಗೌಡ ತೀರಿಕೊಂಡ. ಗೀತೆಯಲ್ಲಿ ಬರುವಂತೆ ನಾಯಕನ ಕೊಲೆಗೆ, ಮದುವೆ ದಿಬ್ಬಣದ ಪಂಜು ತುಳಿದದ್ದೊಂದೇ ಕಾರಣವಲ್ಲವೆಂದೂ, ಇನ್ನೂ ಬೇರೆ ಬೇರೆ ಕಾರಣಗಳಿದ್ದುವೆಂದೂ ಊರಿನವರು ಹೇಳುತ್ತಾರೆ.

ಮತ್ತಿ ತಿಮ್ಮಣ್ಣ: ಚಿತ್ರದುರ್ಗ ಸಂಸ್ಥಾನದ ನಾಯಕರಲ್ಲಿ ಮೊದಲನೆಯವನಾದ ಮತ್ತಿ ತಿಮ್ಮಣ್ಮ ನಾಯಕನನ್ನು ಕುರಿತ ಅನೇಕ ಲಾವಣಿಗಳಿವೆ. ತಿಮ್ಮಣ್ಣ ಕಲ್ಬುರ್ಗಿಯ ಮೇಲೆ ಏರಿ ಹೋಗಿ ಅಲ್ಲಿಯ ನವಾಬನನ್ನು ಗೆದ್ದು ವಿಜಯನಗರದ ಪತಾಕೆಯನ್ನು ಅಲ್ಲಿಯ ಕೋಟೆಯ ಮೇಲೆ ಹಾರಿಸಿದನೆಂದು ಹೇಳಲಾದ ಸಂದರ್ಭವನ್ನು ಜನಪದ ಕವಿಗಳು ಹಾಡಿನಲ್ಲಿ ಸೆರೆಹಿಡಿದಿದ್ದಾರೆ. ‘ಗಾದ್ರಿಮಲೆ ಹೆಬ್ಬುಲಿ’ ಹಾಡನ್ನು ಇಲ್ಲಿ ಹೆಸರಿಸಬಹುದು.

‘ಕಲ್ಬುರ್ಗಿ ಕೋಟೆಯ ಹತ್ತಿ

ಮೆದಕೇರಿ ಕಿತ್ತಾನು ಫೀರಂಗಿ ಕತ್ತಿ

ಸುತ್ತಾಲು ಹತ್ತಾವು ಬತ್ತಿ

ಮೆದಕೇರಿ ಕಿತ್ತೀದ ವಿಜಯಾದ ಕತ್ತಿ.’

ಮುಂತಾದವುಗಳಲ್ಲಿ ಮದಕರಿನಾಯಕ ಎಂದು ಮಾತ್ರ ಬರುತ್ತದೆ. ವಿಜಯನಗರದ ಅರಸರು ತಿಮ್ಮಣ್ಣನಾಯಕನಿಗೆ ನೀಡಿದರೆನ್ನಲಾದ ‘ಹಗಲು ಕಗ್ಗೊಲೆಯ ಮಾನ್ಯ’ ಎಂಬ ಬಿರುದಿನ ವಿಷಯ ಈ ನಾಯಕನನ್ನು ಕುರಿತ ‘ವಂಶಾವಳಿ’ಯಲ್ಲಿ ಉಲ್ಲೇಖಗೊಂಡಿದೆಯೇ ಹೊರತು ಶಾಸನಗಳಲ್ಲಿ ಕಂಡುಬರುವುದಿಲ್ಲ. ಕ್ರಿ.ಶ.1653ರಲ್ಲಿ ‘ಯಿಂದಡಿ ಮದಕರಿ ನಾಯಕನು’ ನೀಡಿರುವ ಹಾಗೂ ಕ್ಯಾಸಾಪುರದಲ್ಲಿ ದೊರೆತ ತಾಮ್ರ ಪಟದಲ್ಲಿ ಈ ಬಿರುದು ಮೊತ್ತ ಮೊದಲ ಬಾರಿಗೆ ಉಲ್ಲೇಖಗೊಂಡಿರುವಂತೆ ಕಾಣುತ್ತದೆ. ಆದ್ದರಿಂದ ತಿಮ್ಮಣ್ಣನಾಯಕನನ್ನು ಕುರಿತ ಗೀತೆಗಳು “ಅವನಿಗೇ ನೇರವಾಗಿ ಸಂಬಂಧಿಸಿದುವೆಂದು ತಿಳಿಯುವಲ್ಲಿ ಪುನರಾಲೋಚಿಸುವುದು ಸೂಕ್ತ” ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.


ಚಿತ್ರದುರ್ಗಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಗೀತೆಗಳು ಪ್ರಚಲಿತದಲ್ಲಿವೆ. ಚಿತ್ರದುರ್ಗದ ಮದಕರಿನಾಯಕನ ಬಗ್ಗೆ ದೀರ್ಘಕಾವ್ಯಗಳೇ ಇರುವುದರಿಂದ ಅವುಗಳನ್ನು ವಿಶೇಷವಾಗಿ ಪರಿಶೀಲಿಸಬೇಕಾಗಿದೆ. ಇತರ ಗೀತೆಗಳಲ್ಲಿ ಜನಪದ ಗೀತೆಗಳಿಂದ ಹಿಡಿದು ಲಾವಣಿಗಳವರೆಗೆ ಅನೇಕ ತರಹದ ಸಾಹಿತ್ಯ ಚಿತ್ರದುರ್ಗ ಜಿಲ್ಲೆಯಲ್ಲಿ ಲಭಿಸುತ್ತದೆ. “ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಚಾರದಲ್ಲಿರುವಷ್ಟು ಚಾರಿತ್ರಿಕ ಗೀತೆಗಳು ಬೇರೆ ಯಾವ ಜಿಲ್ಲೆಯಲ್ಲೂ ಕಂಡುಬರುತ್ತಿಲ್ಲ. ಚಿತ್ರದುರ್ಗ ಪಾಳೆಯಗಾರರಿಗೆ ಸಂಬಂಧಿಸಿದ ಹಲವು ಗೀತೆಗಳನ್ನು ಆ ಜಿಲ್ಲೆಯ ಕೋಲಾಟಗಾರರು ಇಂದಿಗೂ ಉಳಿಸಿಕೊಂಡು ಬಂದಿರುವುದು ಒಂದು ಭಾಗ್ಯ. ಹಳೆಯ ಮೈಸೂರು ಪ್ರದೇಶದಲ್ಲಿ ಚಾರಿತ್ರಿಕ ಜನಪದ ಗೀತೆಗಳಿಗೆ ಚಿತ್ರದುರ್ಗ ಜಿಲ್ಲೆ ಪ್ರಖ್ಯಾತವಾಗಿದೆ” ಎಂಬ ಮಾತುಗಳಿಂದ ಈ ಜಿಲ್ಲೆಯ ವೀರ ಸಾಹಿತ್ಯದ ಸಮೃದ್ಧಿ ತಿಳಿಯುತ್ತದೆ. ‘ಜನಪದ ಸಾಹಿತ್ಯದಲ್ಲಿ ಚಿತ್ರದುರ್ಗ’ ಎಂಬ ತಮ್ಮ ಲೇಖನದ ಮೂಲಕ ಕೃಷ್ಣಮೂರ್ತಿ ಹನೂರು ಚಿತ್ರದುರ್ಗದ ಐತಿಹಾಸಿಕ ಕಡೆ ಗಮನ ಸೆಳೆದಿದ್ದಾರೆ .
(ಈ ಮಾಹಿತಿಯನ್ನು ಜಯಲಕ್ಷ್ಮಿ ಅವರ ಕನ್ನಡದಲ್ಲಿ ಐತಿಹಾಸಿಕ ಜನಪದ ಕಾವ್ಯಗಳು ಪ್ರಬಂಧದಿಂದ ತೆಗೆದುಕೊಂಡಿದ್ದೇವೆ.)

Wednesday, February 6, 2008

ಮನಮೋಹಕ ಮರಗಾಲು ಕುಣಿತ-ಮಟ್ಟಿ ಪೂಜೆ



ಒಂದೊಂದು ಭೂಪ್ರದೇಶದಲ್ಲಿ ಒಂದೊಂದು ಕಲಾಪ್ರಕಾರ ಜನಪ್ರಿಯವಾಗಿರುತ್ತದೆ. ನಮ್ಮ ಜನಪದೊಂದಿಗೆ ಬೆರೆತ ಈ ಕಲಾ ಪ್ರಕಾರಗಳು ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿವೆ ಅನ್ನು ಮಾತುಗಳಂತು ಕೇಳಿ ಬರುತ್ತಲೇ ಇವೆ. ಹಾಗೆ ನಮ್ಮ ಜಿಲ್ಲೆಯನ್ನ ಪ್ರತಿನಿಧಿಸುವ, ಈಗ ಕಣ್ಮರೆಯಾಗುತ್ತಿದೆ ಎನ್ನುವಂಥ ಒಂದು ಕಲಾ ಪ್ರಕಾರ ಮರಗಾಲು ಕುಣಿತ... ವಿಶಿಷ್ಟ ಕುಣಿತದ ಬಗ್ಗೆ ಸಿ.ಎಲ್. ಏಕನಾಥ್ ಒಂದು ಲೇಖನ ನಮಗೆ ಕಳಿಸಿದ್ದಾರೆ.....
ಶ್ರಾವಣ ಮಾಸದಲ್ಲಿ ಭೂತಾಯಿ ಹಸಿರುಟ್ಟು ಹಸನ್ಮುಖಿಯಾಗಿರುತ್ತಾಳೆ. ಜಿನುಗುಟ್ಟುವ ಜಡಿ ಮಳೆ, ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತ. ಮನೆಮನೆಗಳಲ್ಲಿ ಪುರಾಣ. ಕಥೆಗಳ ಪಠಣ ನಡೆಯುತ್ತಿರುತ್ತದೆ. ನೂಲಿನುಣ್ಣಿಮೆಯ ಸಮಯದಲ್ಲಿ ಹೆಂಗಳೆಯರಿಗೆ ತಮ್ಮ ಸಹೋದರರಿಗೆ ರಾಕಿ ಕಟ್ಟುವ ಸಂಭ್ರಮ ಇಂತಹ ಸಂವೃದ್ದಿಯ ಸುಸಂದರ್ಭದಲ್ಲಿ ಚಿತ್ರದುರ್ಗ ನಗರದ ಪ್ರಮುಖ ಗರಡಿಗಳಾದ ದೊಡ್ಡಗರಡಿ, ಸಣ್ಣಗರಡಿ, ಬುರುಜನಹಟ್ಟಿ ಗರಡಿ ಮತ್ತು ಹಗಲು ದಿವಟಿಗೆ ಗರಡಿಗಳಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಮರಗಾಲು ಕುಣಿತ ಮತ್ತು ಮಟ್ಟಿ ಪೂಜೆಯನ್ನು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಮರಗಾಲು ಕುಣಿತದ ಹಿನ್ನಲೆ: ಮರಗಾಲು ಕುಣಿತ ಅನಾದಿಕಾಲದಿಂದಲೂ ಬಂದಂತಹ ಜನಪದ ಕಲೆ. ದೇಶದ ವಿವಿಧ ಭಾಗಗಳಲ್ಲಿ ಈ ಮರಗಾಲು ಕುಣಿತ ಆಯಾಯ ಪ್ರದೇಶಗಳಿಗೆ ತಕ್ಕಂತೆ ವಿಭಿನ್ನವಾಗಿದೆ. ರಾಜರ ಕಾಲದಲ್ಲಿ ಜಟ್ಟಿಗಳಿಗೆ ಪ್ರಮುಖ ಪ್ರಾತಿನಿಧ್ಯವಿತ್ತು. ವಿಶೇಷವಾಗಿ ಯುದ್ದ ಸಮಯದಲ್ಲಿ ಕೋಟೆ ಕೊತ್ತಲಗಳ ಬಳಿ ಹೋದಾಗ ಹಂದರಗಳನ್ನು ದಾಟಿ ಶತ್ರುಕೋಟೆಯನ್ನೇರಲು ಮರಗಾಲುಗಳನ್ನು ಬಳಸುತ್ತಿದ್ದರು. ಹಾಗೆಯೇ ಮರಗಾಲು ಕಟ್ಟಿ ಕುಣಿಯುವುದರಿಂದ ಊರಿಗೆ ಉತ್ತಮ ಮಳೆಬೆಳೆಯಾಗುತ್ತದೆ ಎಂಬ ನಂಬಿಕೆಯು ಉಂಟು. ಹಿಂದೆ ಪೈಲ್ವಾನರು ಮಾತ್ರ ಮರಗಾಲು ಕಟ್ಟುತ್ತಿದ್ದರು. ಆದರೆ ಇಂದು ಪೈಲ್ವಾನರೊಂದಿಗೆ ಯುವಕರು ಈ ಕಲೆಯನ್ನು ಪ್ರೋತ್ಸಾಹಿಸಲು ಮರಗಾಲನ್ನು ಕಟ್ಟುತ್ತಾರೆ.
ಮರಗಾಲು ಕುಣಿತದ ಪ್ರಾರಂಭದ ವಿಧಾನ: ಶ್ರಾವಣ ಮಾಸದಲ್ಲಿ ನಡೆಯುವ ಈ ಮರಗಾಲು ಕುಣಿತಕ್ಕೆ ವಿಶೇಷತೆ ಇದೆ. ಗರಡಿಯ ಚೌಕಾಕೃತಿಯ ಕಣದಲ್ಲಿನ ಕೆಮ್ಮಣ್ಣಿಗೆ ಹತ್ತು ಮೂಟೆ ಜೇಕಿನ ಗಡ್ಡೆ ಹಿಟ್ಟು, ಸುಮಾರು 9 ಕೆ.ಜಿ. ಕಪರ್ೂರ ಮತ್ತು ಕುಂಕುಮ, 21ಕೆ.ಜಿ ಟಿಂಚರ್, 9ಕೆ.ಜಿ ದೇವದಾರು ಎಣ್ಣೆ, 9ಕೆ.ಜಿ. ಶ್ರೀಗಂಧದ ಪುಡಿ, 230 ಗ್ರಾಂ ಸುಗಂಧ ದ್ರವ್ಯ ಪ್ರತಿ ನೂರು ಮೂಟೆ ಮಣ್ಣಿಗೆ 20ಕೆ.ಜಿ ಎಳ್ಳೆಣ್ಣೆ ಮತ್ತು ಬೇವಿನ ಎಣ್ಣೆ ಮಿಶ್ರಣ ಮಾಡಿ ಕಣಕ್ಕೆ ತುಂಬುತ್ತಾರೆ. ಈ ಸಾಮಗ್ರಿಗಳ ಮಣ್ಣು ತೇವಾಂಶವನ್ನು ಕಳೆದುಕೊಳ್ಳುವುದಿಲ್ಲ ಮತ್ತು ರೋಗಾಣು ನಾಶಕ ಗುಣವನ್ನು ಹೊಂದಿರುತ್ತದೆ. ಇಂತಹ ಮಣ್ಣನ್ನು ಐದು ಅಡಿಗೆ ಏರಿಸುತ್ತಾರೆ. ಮಟ್ಟಿ ಏರಿಸುವಾಗ ನೀರನ್ನು ಚಿಮುಕಿಸುತ್ತಾ ಮರದ ದಿಮ್ಮೆಯಿಂದ ಬಡಿದು ಗಟ್ಟಿ ಮಾಡುತ್ತಾರೆ. ಉಸ್ತಾದರು(ಪೈಲ್ವಾನರ ಗುರು) ಮಟ್ಟಿಯೊಳಗೆ ಗೌಪ್ಯವಾಗಿ ಒಣ ತೆಂಗಿನಕಾಯಿ ಮುಚ್ಚಿಡುತ್ತಾರೆ. ಮುಂದೆ ಮಟ್ಟಿಯನ್ನು ಇಳಿಸುವಾಗ ಆ ಕಾಯಿಯನ್ನು ಪೈಲ್ವಾನರು ಹುಡುಕಬೇಕು. ಮಟ್ಟಿಯನ್ನು ಏರಿಸಿದ ಮೇಲೆ ಅದರ ಮೇಲೆ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ತಂದ ಬೀಟೆ ಸೊಪ್ಪಿನಿಂದ ಅಲಂಕರಿಸುತ್ತಾರೆ. ಈ ವಿಧಿ-ವಿಧಾನಗಳನ್ನು ಶುಕ್ರವಾರದಂದು ಮಾಡುತ್ತಾರೆ.
ಶನಿವಾರ ಬೆಳಗ್ಗೆ ಗಂಗಾ ಪೂಜೆಯನ್ನು ಮಾಡಿಸಿಕೊಂಡು ಬಂದು ಏರಿಸಿರುವ ಮಟ್ಟಿಗೆ ಪೂಜೆ ಸಲ್ಲಿಸಿ ಮಟ್ಟಿಯ ಮೇಲೆ ಕಳಶ ಸ್ಥಾಪಿಸುತ್ತಾರೆ. ನಂತರ ಮರಗಾಲನ್ನು ಪೂಜೆಗೆ ಇಡುತ್ತಾರೆ. ಮಧ್ಯಾಹ್ನ 2-30ರ ಸಮಯದಲ್ಲಿ ಪಲ್ಲಕ್ಕಿಯನ್ನು ಅಲಂಕರಿಸಿ ಅದರಲ್ಲಿ ಶಕ್ತಿ ಸಂಕೇತಗಳಾದ ಮಾರುತಿ ಮತ್ತು ಆದಿ ಶಕ್ತಿಯ ಪೋಟೋಗಳನ್ನು ಇಡುತ್ತಾರೆ. ಆ ಪಲ್ಲಕ್ಕಿಯ ಮುಂದೆ ಯುವಕರಿಂದ ಹಿರಿಯರವರೆಗೆ ನಾಲ್ಕು ಅಡಿಯಿಂದ ಹನ್ನೆರಡು ಅಡಿಯವರೆಗಿನ ಮರಗಾಲನ್ನು ಕಟ್ಟುತ್ತಾರೆ. ಮರಗಾಲುಗಳನ್ನು ಪಾಲಾವಣ, ಎಸಳಿ ಮುಂತಾದ ಹಗುರವಾಗಿದ್ದು ಗಟ್ಟಿಯಾಗಿರುವ ಮರದಿಂದ ಮಾಡಿರುತ್ತಾರೆ. ಅವು ಐದಾರು ಇಂಚು ಸುತ್ತಳತೆಯನ್ನು ಹೊಂದಿರುತ್ತವೆ. ಪಾದವನ್ನು ಊರಲು ಅನುಕೂಲವಾಗುವಂತೆ ಮೆಟ್ಟಿಲಿನ ಆಕಾರದಲ್ಲಿ 'ಕಂಡು'ಮಾಡಿ ಮರವನ್ನು ನಯಗೊಳಿಸಿರುತ್ತಾರೆ.
ಮರಗಾಲನ್ನು ಕಟ್ಟಿದವರು ವಿಶೇಷವಾದ ವೇಷಭೂಷಣಗಳಿಂದ ಅಲಂಕೃತರಾಗಿರುತ್ತಾರೆ. ಕಚ್ಚೆ ಪಂಚೆ, ಜುಬ್ಬ, ಜುಬ್ಬದ ಮೇಲೆ ವ್ಯಾಸ್ ಕೋಟ್, ತಲೆಗೆ ಮಹಾರಾಜರ ಪೇಟ ಅಥವಾ ರುಮಾಲು ಕೈಯಲ್ಲಿ ಗರಡಿಯ ನಿಶಾನಿಯಾದ ಕಲ್ಕಿ ತುರಾಯಿ ಹಿಡಿದಿರುತ್ತಾರೆ. ವಾದ್ಯಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ 'ರಾಮ್, ರಾಮ್ ಗೋವಿಂದ' ಎಂದು ದೇವರ ನಾಮ ಸ್ಮರಿಸುತ್ತಿರುತ್ತಾರೆ. ಅವರ ಮುಂದೆ ಗರಡಿಯ ಪೈಲ್ವಾನರಲ್ಲಿ ದಷ್ಠಪುಷ್ಠನಾದ ಜಟ್ಟಿಗೆ ಕೆಂಪು ಮಣ್ಣನ್ನು ಬಳಿದಿರುತ್ತಾರೆ. ಅವನು ಕೈ, ಕೊರಳು ಮತ್ತು ರಟ್ಟಿಗಳಿಗೆ ಕುರಿಯ ಉಣ್ಣೆಯಿಂದ ಮಾಡಿದ ದಂಡೆಯನ್ನು ಕಟ್ಟಿರುತ್ತಾನೆ. ಬಾಯಲ್ಲಿ ನಿಂಬೆಹಣ್ಣನ್ನು ಇಟ್ಟುಕೊಂದು 40-50 ಕೆ.ಜಿ. ತೂಕದದುಂಡು ಮರದ, ಗದೆಯ ರೂಪದ ದಿಂಡನ್ನು ಹೆಗಲ ಮೇಲೇರಿಸಿ ವಾದ್ಯಗಳ ಮೇಳಕ್ಕೆ ತಕ್ಕಂತೆ ನತರ್ಿಸುತ್ತಾನೆ. ಈ ಮರಗಾಲು ಮೆರವಣಿಗೆಯೂ ಚಿತ್ರದುರ್ಗದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತದೆ.
ಮಟ್ಟಿ ಪೂಜೆ ಕಾರ್ಯಕ್ರಮ: ಮರಗಾಲು ಮೆರವಣಿಗೆ ಮುಗಿದು ನಂತರ ಬರುವ ಶನಿವಾರ ಗರಡಿ ಮನೆಯಲ್ಲಿ 'ಮಟ್ಟಿಪೂಜೆ'. ಇದನ್ನು 'ಹೂಗಂಧ' ಪೂಜೆಯಂತಲೂ ಕರೆಯುತ್ತಾರೆ. ಅಂದು ಮಟ್ಟಿಯ ಮೇಲೆ ಆದಿಶಕ್ತಿ ಮತ್ತು ಮಾರುತಿಯ ಪೋಟೋ ಇಟ್ಟು ಹೂವಿನಿಂದ ಅಲಂಕರಿಸಿರುತ್ತಾರೆ. ಪೈಲ್ವಾನರು ವ್ಯಾಯಾಮಕ್ಕೆ ಬಳಸುವ ಎಲ್ಲ ಸಾಮಾಗ್ರಿಗಳನ್ನು ಶೃಂಗರಿಸುತ್ತಾರೆ. ಈ ಪೂಜೆಯ ಸಮಯದಲ್ಲಿ ಪೂಜೆ ನೆರವೇರಿಸುವ ಗರಡಿಯವರು ಇತರೆ ಗರಡಿಯ ಕುಸ್ತಿಪಟುಗಳನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಕುಸ್ತಿಯಲ್ಲಿ ಸಂಫರ್ಷ ಸಹಜ ಅಂತಹ ಸಂಘದಿಂದುಂಟಾದ ವೈಷಮ್ಯ ಮರೆತು ಸಹೋದರತೆಯನ್ನು ಸಾರಲು ಇದೊಂದು ಸುಸಂದರ್ಭ. ಈ ಪೂಜಾ ಕಾರ್ಯಕ್ರಮಕ್ಕೆ ನಾಡಿನ ಹಿರಿಯರು ಮತ್ತು ಗಣ್ಯರನ್ನು ಸ್ವಾಗತಿಸಲಾಗುತ್ತದೆ. ಆ ಸಮಾರಂಭದಲ್ಲಿ ಆ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಪೈಲ್ವಾನರಿಗೆ ಬಹುಮಾನ ನೀಡಿ ಸನ್ಮಾನಿಸಲಾಗುವುದು. ಪೈಲ್ವಾನರಿಗೆ ಇದೊಂದು ಶಾಲಾ ವಾಪರ್ಿಕೋತ್ಸವ ಇದ್ದ ಹಾಗೆ.
ಮರುದಿನ ಗರಡಿ ಮನೆಗೆ ಮಹಿಳೆಯರಿಗೆ ಪ್ರವೇಶ. ರೈತರಿಗೆ ಭೂಮಿತಾಯಿ ಹೇಗೋ ಹಾಗೇ ಮಟ್ಟಿ ಪೈಲ್ವಾನರಿಗೆ ಭೂಮಿತಾಯಿ. ಈ ಮಟ್ಟಿ ಪೂಜೆಯ ಸಮಯದಲ್ಲಿ ಮಹಿಳೆಯರಿಗೆ ವರ್ಷಕ್ಕೊಂದು ಬಾರಿ ಮಾತ್ರ ಪ್ರವೇಶ. ಅಂದು ಮಹಿಳೆಯರಿಗೆ ಆರಿಶಿನ ಕುಂಕುಮ ಫಲಪುಷ್ಪ ನೀಡಿ ಸತ್ಕರಿಸುತ್ತಾರೆ. ಮಹಿಳೆಯರು ಗರಡಿ ಮನೆಗೆ ಬಂದು ಹೋದರೆ ಶಾಂತಿ ನೆಮ್ಮದಿಯಿರುತ್ತದೆಂಬ ನಂಬಿಕೆ.
ಮಟ್ಟಿ ಪೂಜೆಯ ನಂತರ ಬರುವ ಶನಿವಾರದಂದು ಮಟ್ಟಿಯೊಡೆಯುವ ದಿನ ಪೈಲ್ವಾನರು ತಮ್ಮ ಮುಷ್ಠಿ, ಮೊಣಕೈ ಮತ್ತು ಭುಜದಿಂದ ಮಟಿಯನ್ನು ಅಗೆದು ಮಟ್ಟಿಯಲ್ಲಿ ಗೌಪ್ಯವಾಗಿಟ್ಟ ಕಾಯಿ ಹುಡುಕುತ್ತಾರೆ. ಯಾವ ಪೈಲ್ವಾನನಿಗೆ ಕಾಯಿ ಸಿಗುತ್ತದೋ ಆ ಪೈಲ್ವಾನನಿಗೆ ಆ ವರ್ಷ ಕುಸ್ತಿಯಲ್ಲಿ ವಿಜಯಮಾಲೆ ಖಂಡಿತ ಎಂಬ ಭಾವನೆಯಿದೆ. ನಂತರ ಪೂಜೆ ಮಾಡಿ, ಮೊಸರನ್ನ ನೈವೇದ್ಯ ಮಾಡುತ್ತಾರೆ. ಚಿತ್ರದುರ್ಗದ ಗರಡಿಯವರು ವಿಶೇಷವಾಗಿ ದೊಡ್ಡ ಗರಡಿ ಯುವಕ ಸಂಘದವರು ಆಗಾಗ ಕಾರ್ಯಕ್ರಮ ನೀಡುತ್ತಿರುತ್ತಾರೆ. ಈ ಕಲೆಯ ರಕ್ಷಣೆ ನಮ್ಮೆಲ್ಲರದಲ್ಲವೇ?

ಏಕನಾಥೇಶ್ವರಿ ಜಾತ್ರಾ ಮಹೋತ್ಸವ ಭಕ್ತಿ ಭಾವದ ಸಂಕೇತ


ತಿಹಾಸಿಕ ಚಿತ್ರದುರ್ಗ ಕೋಟೆಯೂ ತನ್ನಲ್ಲಿ ಧರ್ಮ ಮತ್ತು ಸಂಸ್ಕೃತಿಯ ಖಜಾನೆಯನ್ನು ಅಂತರ್ಗತ ಮಾಡಿಕೊಂಡಿದೆ. ಏಳು ಸುತ್ತಿನ ಕೋಟೆಯಲ್ಲಿ ದೇವಾಲಯಗಳು, ಬುರುಜುಗಳು, ಹೊಂಡಗಳು, ಬತ್ತೇರಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ತಮ್ಮ ಐತಿಹ್ಯವನ್ನು ಬಿಚ್ಚಿ ಹೇಳುತ್ತಿವೆ. ಅದರಲ್ಲಿಯೂ ದೇವಾಲಯಗಳು ಧರ್ಮ ಮತ್ತು ಸಂಸ್ಕೃತಿಯ ಪೋಷಣೆ ಮಾಡುವ ಕೇಂದ್ರಗಳಾಗಿ ರಾಜರಿಂದ ಪೋಷಿಸಲ್ಪಡುತ್ತಿದ್ದವು. ಮದಕರಿ ನಾಯಕರ ಆರಾಧ್ಯ ದೇವಿಯಾಗಿ ಇಂದು ಸರ್ವರಿಂದ ಪೊಜಿಸಲ್ಪಡುತ್ತಿರುವ ದೇವಿ ಶ್ರೀ ಏಕನಾಥೇಶ್ವರಿ ಅವುಗಳಲ್ಲಿ ಒಂದು. ಚಿತ್ರದುರ್ಗದ ಮೇಲುದುರ್ಗವು ಒಂದಾನೊಂದು ಕಾಲದಲ್ಲಿ ಕೈಲಾಸ ಪರ್ವತವಾಗಿತ್ತಂತೆ. ಪಾರ್ವತಿ ಪರಮೇಶ್ವರರು ಈ ಸ್ಥಳದಲ್ಲೆ ವಾಸಿಸುತ್ತಿದ್ದರಂತೆ ಎಂಬ ಪ್ರತೀತಿ ಇದೆ. ವಿಫ್ನೇಶ್ವರ ಗಜಾನನಾದುದು ಇಲ್ಲಿಯೇ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆ ಪುಷ್ಠಿ ನೀಡುವ ಸಂಪಿಗೆ ಸಿದ್ದೇಶ್ವರ ಮತ್ತು ಗಣಪತಿಯ ದೇವಸ್ಥಾನಗಳು ಮೇಲುದುರ್ಗದಲ್ಲಿವೆ.
ಈ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷ ವಸಂತ ಮಾಸದ ಆರಂಭದಲ್ಲಿ ನಡೆಯುತ್ತದೆ. ಹಿಂದೂಗಳ ಹೊಸ ವರ್ಷ ಯುಗಾದಿಯ ಚಂದ್ರ ದರ್ಶನವು ಮಂಗಳವಾರ ಬಂದರೆ ಆ ದಿನವೇ ಈ ದೇವಿಯ ಜಾತ್ರೆಯ 'ಸಾರು' ಹಾಕಲಾಗುತ್ತದೆ. (ಸಾರು ಎಂದರೆ ತಿಳಿಸು ಎಂದರ್ಥ) ಒಂದು ವೇಳೆ ಚಂದ್ರ ದರ್ಶನವು ಬೇರೆ ಇನ್ನಾವುದೇ ದಿನದಂದು ಬಂದರೆ ಮಂಗಳವಾರ ಬರುವವರೆಗೆ ಕಾಯಲಾಗುತ್ತದೆ. ಸಾರುವ ಸಮಯದಲ್ಲಿ ದೇವಿಯ ಜಾತ್ರೆಯನ್ನು ನೆರವೇರಿಸುವ ಕೈವಾಡದ ಹನ್ನೆರಡು ಜನಾಂಗಗಳ ಪ್ರಮುಖರಿರುತ್ತಾರೆ. ಈ ಹನ್ನೆರಡು ಜನ ಕೈವಾಡದವರಿಗೆ ಜಾತ್ರೆಯ ಸಮಯದಲ್ಲಿ ನಿರ್ದಿಷ್ಟ ಕರ್ತವ್ಯಗಳಿರುತ್ತವೆ.
ಈ ದೇವಿಯ ಸಾರಿನ ವಿಶೇಷತೆ ಎಂದರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಸುಮಾರು 66 ದೇವತೆಗಳ ಜಾತ್ರಾ ಮಹೋತ್ಸವಗಳು ಈ ದೇವಿಯ ಜಾತ್ರೆಯ ಸಾರಿನಡಿಯಲ್ಲಿಯೇ ನಡೆಯುತ್ತವೆ. ಜಾತ್ರೆಯ ಸಾರು ಹಾಕಿದ ನಂತರ ಎರಡು ದಿನಗಳು ದೇವಸ್ಥಾನದ ಸ್ವಚ್ಚತೆಗೆ ಮೀಸಲು. ಮೂರನೆಯ ದಿನ ರಾತ್ರಿ ಅಂದರೆ ಶುಕ್ರವಾರ ದೇವಿಗೆ ಭಂಡಾರ ಪೂಜೆ ಮಾಡುತ್ತಾರೆ. (ಭಂಡಾರ ಪೂಜೆ ಎಂದರೆ ಆರಿಶಿನ ಕೊಂಬನ್ನು ಬಹಳ ಶ್ರದ್ದೆ ಮತ್ತು ಭಕ್ತಿಗಳಿಂದ ಕುಟ್ಟಿ ದೇವಿಯ ಮುಖಕ್ಕೆ ಲೇಪನ ಮಾಡುತ್ತಾರೆ.) ಜಾತ್ರೆಯಲ್ಲಿ ಭಂಢಾರ ಪೂಜೆಯನ್ನು ಮೂರು ಬಾರಿ ನೆರವೇರಿಸಲಾಗುವುದು. ಮೊದಲ ಭಂಢಾರ ಪೂಜೆಯಲ್ಲಿ ದೇವಿಯೂ ಶಾಂತ ಸ್ವರೂಪಿಣಿಯಾಗಿರುತ್ತಾಳೆಂಬ ನಂಬಿಕೆ. ಈ ಪೂಜೆಯ ವಿಸರ್ಜನೆಯ ನಂತರ ಅದನ್ನು ಕಟ್ಲೆ ಭಂಢಾರವೆಂದು ಸೇವನೆಗೆ ಬಳಸುತ್ತಾರೆ. ಹಾಗೆಯೇ ಬಿತ್ತನೆಯ ಸಮಯದಲ್ಲಿ ಬೆಳೆಯೂ ಹುಲುಸಾಗಿ ಬೆಳೆದು ಅಧಿಕ ಉತ್ಪಾದನೆ ನೀಡಲು ಇದನ್ನು ಬಳಸುತ್ತಾರೆ.
ಮಾರನೆಯ ದಿನ ಶನಿವಾರದಂದು ದೇವಿಗೆ 'ಮದುವಣ ಗಿತ್ತಿ' ಪೂಜೆಯನ್ನು ಮಾಡಲಾಗುವುದು. ಅಂದು ಉದ್ಭವ ಮೂರ್ತಿ ಮತ್ತು ಉತ್ಸವ ಮೂರ್ತಿಗಳೆರಡನ್ನು ಶೃಂಗರಿಸಿ ಕಂಕಣಧಾರಣೆ ಮಾಡುತ್ತಾರೆ. ಅಂದು ದೇವಿಯೂ 'ಸಿಂಹವಾಹಿನಿ'ಯಾಗಿರುತ್ತಾಳೆ. ಮರುದಿನ ಭಾನುವಾರ ರಾತ್ರಿ ದೇವಿಯೂ 'ಸರ್ಪ ವಾಹಿನಿ'ಯಾಗಿಯೂ ಮತ್ತು ಸೋಮವಾರ ರಾತ್ರಿ 'ಮಯೂರವಾಹಿನಿ'ಯಾಗಿರುತ್ತಾಳೆ. ಈ ಮೂರು ದಿನಗಳ ಸೇವೆಯನ್ನು ಚಿತ್ರದುರ್ಗ ನಗರದ ಬುರುಜನ ಹಟ್ಟಿ ಭಕ್ತಾಧಿಗಳು ನೆರವೇರಿಸುತ್ತಾರೆ.
ಪ್ರತಿದಿನ ದೇವಿಗೆ ಬುರುಜನ ಹಟ್ಟಿಯಲ್ಲಿರುವ ಸಿಹಿನೀರು ಹೊಂಡದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಲಾಗುವುದು. ಭಕ್ತಾಧಿಗಳು ದೇವಿಯನ್ನು ಹೊತ್ತ ಸೇವಾಕರ್ತರಿಗೆ ಪಾನಕ-ಫಲಹಾರದ ಏರ್ಪಾಡು ಮಾಡುವರು.
ಮಂಗಳವಾರ ಅಶ್ವವನ್ನೊಳಗೊಂಡ ಉಚ್ಚಾಯವನ್ನು ಕಟ್ಟಲಾಗುವುದು. ಬುಧವಾರ ದೇವಿಯ ಜಾತ್ರೆಯ ಪ್ರಮುಖ ಫಟ್ಟ. ಅಂದು ದೇವಿಗೆ ಮತ್ತೊಮ್ಮೆ ಭಂಢಾರ ಪೂಜೆಯನ್ನು ನೆರವೇರಿಸಲಾಗುವುದು. ಅಂದು ದೇವಿಯೂ ಭಂಢಾರ ಪೂಜೆಯಲ್ಲಿ ರೌದ್ರವತಾರದಲ್ಲಿ ಕಾಣುತ್ತಾಳೆ ಎಂಬ ನಂಬಿಕೆ. ಅರುಣೆ-ಕುಂಭಗಳನ್ನು ಹೂಡಿ ದೇವಿಯನ್ನು ವಿಜೃಂಭಣೆಯಿಂದ ಶೃಂಗಾರಿಸಲಾಗುವುದು. ಎಲ್ಲಿ ನೋಡಿದರಲ್ಲಿ ಸಡಗರವೋ ಸಡಗರ. ಅಂದು ದೇವಿಯೂ ತನ್ನ ಗಂಡನ ಮನೆಯನ್ನು ಬಿಟ್ಟು ತವರು ಮನೆಗೆ ಬರುವಳೆಂಬ ವಾಡಿಕೆ. ಗರ್ಭಗುಡಿಯಿಂದ ದೇವಿಯನ್ನು ಅಶ್ವದಿಂದ ಸುಸಜ್ಜಿತವಾದ ಉಚ್ಚಾಯದಲ್ಲಿ ಕುಳ್ಳಿರಿಸಲು ಮಡಿ ಹಾಸಿನ ಮೇಲೆ ಮಂಗಳ ವಾದ್ಯಗಳ ಫೋಷಣೆಯೊಂದಿಗೆ ಕರೆತರಲಾಗುವುದು.
ಅಂದು ಪೋತೆದಾರ ಚಾಟಿಯಿಂದ ತನ್ನ ಮೈಗೆ ಸೆಳೆದುಕೊಳ್ಳತ್ತಾನೆ. 'ಫಟಬಾಯಿ' ಪೂಜೆಯನ್ನು ನೆರವೇರಿಸಲಾಗುವುದು. ಈ ದೇವಿಯೂ ಶಕ್ತಿ ದೇವಿಯಾಗಿರುವುದರಿಂದ ಸುರಪಾನವನ್ನು ಹೋಲುವ ಈ ರೀತಿಯ ಪೂಜೆಯನ್ನು ನೆರವೇರಿಸಲಾಗುವುದು. ಮೇಲುದುರ್ಗದ ದೇವಸ್ಥಾನದಿಂದ ದೇವಿಯೂ ಕೆಳಗಿಳಿದು ಬರುವ ದಾರಿಯಲ್ಲಿ ನೀರನ್ನು ಹಾಕಿ ತಳಿರು ತೋರಣ ಕಟ್ಟಿ ಸ್ವಾಗತಿಸುತ್ತಾರೆ. ದೇವಿಯನ್ನು ಚಂದ್ರಮಾಸ್ತಮ್ಮನ ಹೊಂಡದ ಹತ್ತಿರ ಕರೆದುಕೊಂಡು ಹೋಗಿ ಗಂಗಾ ಪೂಜೆಯನ್ನು ಮಾಡುತ್ತಾರೆ. ದೊಡ್ಡಗರಡಿ, ಕರುವಿನ ಕಟ್ಟೆ, ಸುಣ್ಣಗಾರ ಬೀದಿ ಮತ್ತು ಜೋಗಿಮಟ್ಟಿ ರಸ್ತೆಯಲ್ಲಿರುವ ಭಕ್ತಾಧಿಗಳು ವಿಜೃಂಭಣೆಯಿಂದ ದೇವಿಯನ್ನು ಸ್ವಾಗತಿಸಿ ದೇವಿಯನ್ನು ಹೊತ್ತು ತಂದವರಿಗೆ ಪಾನಕ-ಫಲಹಾರಗಳನ್ನು ನೀಡುತ್ತಾರೆ. ಎಲ್ಲೆಲ್ಲೂ ಲವಲವಿಕೆ, ಉತ್ಸಾಹ. ಪ್ರಮುಖ ಬೀದಿಗಳ ಮೆರಗಣಿಗೆಯ ನಂತರ ದೇವಿಯನ್ನು ಫಿಲ್ಟರ್ ಹೌಸ್ ಎದುರಿನಲ್ಲಿರುವ ಪಾದಗುಡಿಯಲ್ಲಿ ಕುಳ್ಳಿರಿಸಲಾಗುವುದು.
ದೇವಿಯ ಜಾತ್ರೆಯ ಪ್ರಮುಖ ಆಕರ್ಷಣೀಯ ದಿನಗಳೆಂದರೆ ಶುಕ್ರವಾರ ಮತ್ತು ಶನಿವಾರ. ಶುಕ್ರವಾರ ದಿನವನ್ನು ಬೇವು-ಬೇಟೆಯ ದಿನವೆಂದು ಕರೆಯುವರು. ಶನಿವಾರ 'ಸಿಡಿ' ಉತ್ಸವ. ಶಕ್ತಿ ದೇವತೆಗಳಿಗೆ ಭಕ್ತಾಧಿಗಳು ಸಲ್ಲಿಸುವ ಹರಕೆಗಳಲ್ಲಿ ಸಿಡಿ ಆಡುವ ಹರಕೆಯೂ ಒಂದು. ಹರಕೆ ಹೊತ್ತ ಭಕ್ತಾಧಿಗಳು ಅಂದು ಉಪವಾಸವಿದ್ದು, ಎಣ್ಣೆ ನೀರಿನ ಸ್ನಾನ ಮಾಡಿ ದೇಹಕ್ಕೆಲ್ಲ ಗಂಧ ಲೇಪನ ಮಾಡಿಕೊಂಡು ಕಚ್ಚೆ ಪಂಚೆ, ಪೇಟ ಧರಿಸಿ ನಿಂಬೆ ಹಣ್ಣನ್ನು ಸಿಕ್ಕಿಸಿಕೊಂಡ ಕತ್ತಿಯನ್ನಿಡಿದು ಯುದ್ದಕ್ಕೆ ಹೊರಡುವ ಯೋಧರಂತೆ ಸಿಡಿ ಉತ್ಸವದಲ್ಲಿ ಪಾಲ್ಗೊಳ್ಳತ್ತಾರೆ. ನೆಲಗಂಬದ ಮೇಲೆ ನಿಲ್ಲಿಸಿದ ಸುಮಾರು 40 ಅಡಿ ಉದ್ದದ ಮರದ ಮುಂಭಾಗಕ್ಕೆ ಸಿಡಿ ಆಡುವವರನ್ನು ಕಟ್ಟಿ ಮೂರು ಸುತ್ತು ಸುತ್ತಿಸಲಾಗುವುದು. ಮೊದಲು ಕೈವಾಡದವರಲ್ಲಿ ಒಬ್ಬರಾದ 'ಮಾತಂಗಿ' ಸಿಡಿ ಆಡುವರು. ನಂತರ ಇತರರು. ಈ ಕಾರ್ಯವನ್ನು ಕೊಂಡಿಕಾರ ನೆರವೇರಿಸುತ್ತಾನೆ. ಹಿಂದೆ ಸಿಡಿ ಆಡುವವರಿಗೆ ಕಬ್ಬಿಣದ ಕೊಕ್ಕೆಯನ್ನು ಬೆನ್ನು ಮೂಳೆಗೆ ಸಿಕ್ಕಿಸಿ ತಿರುಗಿ ಸುತ್ತಿಸುತ್ತಿದ್ದರಂತೆ ಸ್ವಲ್ಪವೂ ರಕ್ತ ಬರುತ್ತಿರಲಿಲ್ಲವಂತೆ.
- ಸಿ.ಎಲ್.ಏಕನಾಥ್.
(ಏಕನಾಥ್ ಚಿತ್ರದುರ್ಗ ಸಮೀಪದ ಐನಳ್ಳಿ ಕುರುಬರಹಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಬೋಧಿಸುತ್ತಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರು.)

Wednesday, January 30, 2008

ಬಂಡಾಯದ ಬಲ್ಲಾಳರು ಇನ್ನಿಲ್ಲ...


'ಕನ್ನಡದ ಕೆಲ್ಸಕ್ಕೆ ಎಲ್ರೂ ಒಂದಾಗ್ತಾರೆ ಅನ್ನೋ ಭರವಸೆ ಇದೆ'

ಚಿತ್ರದುರ್ಗ ಸಾಹಿತ್ಯ ಸಮ್ಮೇಳನದ ಕುರಿತು ಹಿರಿಯ ಸಾಹಿತಿಯಾದ ಬಿ.ಎಲ್.ವೇಣು ಅವರು ದುರ್ಗದ ಹುಡುಗರೊಂದಿಗೆ ಹಂಚಿಕೊಂಡ ಮಾತುಗಳು...

ಸಮ್ಮೇಳನ ನಡೆಯುವುದು ಸಂತೋಷದ ಸಂಗತಿ. ಆದರೆ ಜಿಲ್ಲಾ ಸಮ್ಮೇಳನವನ್ನೂ ಮಾಡಲಾಗದಿರುವವರು ಇಷ್ಟು ದೊಡ್ಡ ಸಮ್ಮೇಳನ ಹೇಗೆ ಮಾಡ್ತಾರೆ ಅನ್ನೋದು ನಮ್ಮ ಮುಂದಿನ ಸವಾಲು. ನಮ್ಮಲ್ಲಿ ಸಂಘಟನೆ ಕಡಮೆ. ಜಿಲ್ಲೆಯಲ್ಲಿ ಹೃದಯವಂತರಿದ್ದಾರೆ. ಆದರೆ ಹಣವಂತರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿರುವ ಎರಡು ದೊಡ್ಡ ಮಠಗಳು ಕೈಜೋಡಿಸಬೇಕು. ಅವರಿಬ್ಬರು ಜೊತೆಯಾಗುವುದರ ಮೇಲೆ ಸಮ್ಮೇಳನದ ಯಶಸ್ಸು ನಿಂತಿದೆ. ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮಗಳಾದ ತರಳಬಾಳು ಹುಣ್ಣಿಮೆ, ಶರಣ ಸಂಸ್ಕೃತಿ ಉತ್ಸವಗಳು ನಡೆಯುತ್ತವೆ. ಆದರೆ ಅಲ್ಲಿ ಸೇರುವ ಜನ ೨೫-೩೦ ಸಾವಿರ. ಆದರೆ ಸಾಹಿತ್ಯ ಸಮ್ಮೇಳನಕ್ಕೆ ಲಕ್ಷಕ್ಕೂ ಹೆಚ್ಚು ಜನಸೇರ್‍ತಾರೆ. ಅದಕ್ಕೆ ತಕ್ಕ ಸಿದ್ಧತೆಯಾಗಬೇಕು. ಸಮರ್ಥ ಸಂಘಟನೆಯಾಗಬೇಕು. ಇದು ಕನ್ನಡದ ಕೆಲಸವಾದ್ದರಿಂದ ಎಲ್ಲೂ ಸಾಧ್ಯವಾಗುತ್ತದೆ ಎಂಬ ಭರವಸೆ ಇದೆ. ಇದು ಪ್ರತಿಯೊಬ್ಬರ ಮೇಲಿರುವ ಜವಾಬ್ದಾರಿಯಾದ್ದರಿಂದ ಎಲ್ಲರೂ ಒಂದಾಗುತ್ತಾರೆ ಎಂಬ ವಿಶ್ವಾಸವೂ ಇದೆ.

ಮತ್ತೊಂದು ವಿಷಯ

ಬಿಎಲ್ ವೇಣು ಅವರ ಜನಪ್ರಿಯತೆ ರಾಜ್ಯದೆಲ್ಲೆಡೆ ಹಬ್ಬಿದ. ತಮ್ಮ ಕಾದಂಬರಿಗಳ ಮೂಲಕ ಓದುಗ ವರ್ಗವನ್ನು ಮುಟ್ಟಿದ ಇವರು ಅವುಗಳಲ್ಲಿ ಕೆಲವನ್ನು ಚಲನಚಿತ್ರವಾಗುವ ಮೂಲಕ ಮತ್ತೊಂದು ವರ್ಗವನ್ನು ತಲುಪಿದವರು ವೇಣು.
ವೇಣು ಎಂದರೆ ನೆನಪಾಗುವುದೇ ನೇರ, ನಿಷ್ಠುರ ಮಾತುಗಳು. ನಿಜ ಪ್ರತಿಪಾದನೆಯಲ್ಲದೇ ಮತ್ತಾವುದೋ ಓಲೈಕೆಗೆ ಅವಕಾಶವಾಗುವುದನ್ನು ವೇಣು ಯಾವತ್ತೂ ಇಷ್ಟಪಟ್ಟವರಲ್ಲ. ಕಂಡು ಸಹಿಸಿಕೊಂಡವರೂ ಅಲ್ಲ. ಹಾದಿ ತಪ್ಪಿದ ರಾಜಕಾರಣಿಗಳನ್ನು, ಮಠಾಧೀಶರು ಎಲ್ಲರನ್ನೂ ಟೀಕಿಸಿದವರು. ಇದು ವೇಣು ವ್ಯಕ್ತಿತ್ವದ ಒಂದು ಝಲಕ್ ಅಷ್ಟೇ.
ಅವರ ಕಥೆ, ಕಾದಂಬರಿ, ಬಿಡಿ ಬರಹಗಳಲ್ಲೂ ನಿರ್ದಾಕ್ಷಿಣ್ಯವಾದ, ನೇರವಾದ ಟೀಕೆ ಎದ್ದು ಕಾಣುತ್ತದೆ. ಬಂಡಾಯದ ಸ್ವರೂಪ, ಅಸಹನೆಯೊಂದು ಆಕ್ರೋಶವಾಗಿ ಸಿಡಿಯುವ ಗುಣಗಳು ಅವರ ಬರಹದಲ್ಲಿ ವ್ಯಕ್ತವಾಗಿದೆ.
ಮೂರು ಕಥಾಸಂಕಲನಗಳನ್ನು, ೧೫ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿರುವ ವೇಣು ಫೆಬ್ರವರಿ ೩ರಂದು ಇನ್ನೂ ಎರಡು ಕೃತಿಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಒಂದು ೧೫ ಕತೆಗಳಿರುವ ‘ಬಣ್ಣದ ಬೊಂಬಿ’ ಕಥಾಸಂಕಲನ. ಇನ್ನೊಂದು ‘ಚುನಾವಣೆಗೆ ನಿಂತ ಮಠಾಧೀಶರು ಮತ್ತು ಇತರ ಅಣಕಗಳು’ಅಂಕಣ ಬರಹಗಳ ಸಂಗ್ರಹ. ಇದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಅಣಕಗಳ ಅಂಕಣಗಳ ಸಂಕಲನ.
ನೇರ ನಿಷ್ಠುರಿಯಾಗಿರುವ ವೇಣು ಜಿಲ್ಲೆಯ ಸಾಹಿತ್ಯಕ ವಲಯದಲ್ಲಿ ಐಸೋಲೇಟ್ ಆಗಿದ್ದರೂ ತಮ್ಮ ಮತ್ತು ಓದುಗನ ನಡುವಿನ ಸೇತುವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ.


Tuesday, January 29, 2008

ಒಂದು ಪ್ರತಿಕ್ರಿಯೆ..

ದು ಬೇಸರದ ಸಂಗತಿ. 2008 ಡಿಸೆಂಬರ್ ಹೊತ್ತಿಗಾದರೂ 75ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆಡಯಬೇಕಿದೆ. ಆದರೆ ಇನ್ನೂ ತಯಾರಿಯ ಮಾತಿಲ್ಲ. ತಯಾರಿ ಮಾತಿರಲಿ, ನಡೆಯುತ್ತದಾ ಎಂಬುದರ ಬಗ್ಗೆ ಸಂಶಯದ ಮಾತುಗಳು ದುರ್ಗದ ಗಲ್ಲಿಗಲ್ಲಿಗಳಲ್ಲಿ ಕೇಳಿಬರುತ್ತಿರುವುದು ಬೇಸರದ ಸಂಗತಿ. ಚಿತ್ರದುರ್ಗದ ಜನತೆಗೆ ನೆನಪಿರಬಹುದು. ಕೇವಲ ಎರಡು ವರ್ಷಗಳ ಹಿಂದೆ ಚಿತ್ರದುರ್ಗ ಸಿರಿಗೆರೆ ಶ್ರೀಗಳ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆದಿತ್ತು. ಅದ್ಧೂರಿ ಕಾರ್ಯಕ್ರಮ. ನೂರಾರು ಗಣ್ಯರು ದೂರದ ಊರುಗಳಿಂದ ಭಾಗವಹಿಸಿದರು.
ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆದಾಗ ಭೀಮಸಮುದ್ರದ ಮೂವರು 'ರಾಜಕಾರಣಿ ಕಂ ಅಡಿಕೆ ಧಣಿಗಳು' ತಲಾ ಒಂದೊಂದು ಕೋಟಿ ರೂಗಳನ್ನು ಹುಣ್ಣಿಮೆ ಕಾರ್ಯಕ್ರಮಕ್ಕಾಗಿ ಹೊಂದಿಸುವ ಆಶ್ವಾಸನೆಯನ್ನು ಸಿರಿಗೆರೆ ಶ್ರೀಗಳಿಗೆ ನೀಡಿದ್ದರು. ಅಂತೆಯೇ ನಡೆದುಕೊಂಡರು. ಆದರೆ ಚಿತ್ರದುರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವುದು ಖಾತ್ರಿಯಾಗಿ ತಿಂಗಳಾದರೂ ಯಾವ ರಾಜಕಾರಣಿಯೂ, ಹಣ ಹೊಂದಿಸುವುದಿರಲಿ, ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ಉತ್ಸಾಹ ತೋರುತ್ತಿಲ್ಲ.ಇದು ದೌರ್ಭಾಗ್ಯದ ಸಂಗತಿ. ಮಠದ ಕಾರ್ಯಕ್ರಮಕ್ಕೆ ಹಣ ಹೊಂದಿಸಿದರೆ ಶ್ರೀಗಳ ಆಶೀರ್ವಾದ ಆ ಮೂಲಕ ಜನರ ಮತ ಕಟ್ಟಿಟ್ಟಬುತ್ತಿ. ಸಾಹಿತ್ಯ ಸಮ್ಮೇಳನದಿಂದ ತಮಗೇನೂ ದಕ್ಕುವುದಿಲ್ಲ ಎಂಬ ಅಭಿಪ್ರಾಯ ಅವರದಿರಬಹುದು.
ಸಾಹಿತ್ಯ ಸಮ್ಮೇಳನದಿಂದ ಚಿತ್ರದುರ್ಗ ಪ್ರವಾಸೋದ್ಯಮ ತಾಣವಾಗಿ ಗಮನ ಸೆಳೆಯುತ್ತದೆ. ಪ್ರವಾಸಿಗಳು ಹೆಚ್ಚಾದರೆ ದುರ್ಗದ ಸಣ್ಣ ವ್ಯಾಪಾರಿಗಳಿಗೆ ಆದಾಯ ದೊರಕುತ್ತೆ. ಆದರೆ ಇದಾವುದೂ ಇವರಿಗೇಕೆ ಅರ್ಥವಾಗುತ್ತಿಲ್ಲ.ರಾಜಕಾರಣಿಗಳು ಸಮ್ಮೇಳನಕ್ಕಾಗಿ ತಮ್ಮ ಕಿಸೆಯಿಂದ ರೊಕ್ಕ ನೀಡಬೇಕಿಲ್ಲ. ರಾಜ್ಯ ಸರಕಾರ, ಜಿಲ್ಲಾ ಪಂಚಾಯತ್, ನೌಕರರ ಸಂಘ ಹಾಗೂ ಇತರೆ ಸಂಥ ಸಂಸ್ಥೆಗಳಿಂದ ಹಣ ಹೊಂದಿಸುವ ಕೆಲಸ ಮಾಡಬೇಕಿದೆ. ಹಣಕ್ಕಿಂತ ಮುಖ್ಯವಾಗಿ ಸಮರ್ಥ ನೇತೃತ್ವ ವಹಿಸಿ ಸಮ್ಮೇಳನ ಯಶಸ್ವಿ ಮಾಡಬೇಕಾಗಿದೆ.
ಈಗ ಎಂಎಲ್ಎಗಳೆಲ್ಲ ಮಾಜಿ. ಹಾಲಿ ಇದ್ದಾಗಲೂ ಮಾಡಿದ್ದೆಷ್ಟು ಎನ್ನುವುದು ಚರ್ಚೆ ಮಾಡಬೇಕಾದ್ದೇ. ಅದಿರಲಿ, ಇನ್ನೂ ತಮ್ಮ ಸ್ಥಾನ ಭದ್ರವಾಗಿಟ್ಟುಕೊಂಡಿರುವ ಎಂಪಿ ಹಾಗೂ ಎಂಎಲ್ಸಿಗಳು ಮಾಡುತ್ತಿರುವುದೇನು?-
ಸತ್ಯ, ಬಾಪುದೇವರ ಹಟಿ

Monday, January 28, 2008

ಸದ್ಯ ಚಿತ್ರದುರ್ಗ ನಿರ್ಲಿಪ್ತವಾಗಿದೆ...

ಸಮ್ಮೇಳನದ ಸದ್ದಿಲ್ಲ... ಎಲ್ಲೂ ಮಾತಿಲ್ಲ...
ಳೆದ ೧೫ ದಿನಗಳಲ್ಲಿ ನಮ್ಮ ಕೆಲಸಗಳ ನಡುವೆ ನಾವೊಂದಿಷ್ಟು ಸಂಗತಿಗಳನ್ನು ಚರ್ಚಿಸುತ್ತಾ ಕೂತಿದ್ದೆವು. ಅದರ ಜೊತೆಗೆ ನಿಮ್ಮ ಓದಿಗೆ ಹೊಸ ಹೊಸ ಲೇಖನಗಳನ್ನು ಹೊಂಚುವುದಕ್ಕಾಗಿ ಸ್ನೇಹಿತರು, ಹಿರಿಯರನ್ನು ಭೇಟಿ ಮಾಡಿ ಅವರಿಗೊಂದು ಪ್ರೀತಿ ಪೂರ್ವಕ ವಿನಂತಿಯನ್ನು ಸಲ್ಲಿಸಿದೆವು.ಈ ನಡುವೆ ನಾವು ಗಮನಿಸಿದ ಅಂಶಗಳು ಕೊಂಚ ಮಟ್ಟಿಗೆ ನಿರಾಶೆ ಹುಟ್ಟಿಸಿವೆ. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಸಮ್ಮೇಳನದ ಬಗ್ಗೆ ಚಿತ್ರದುರ್ಗದಲ್ಲಿ ಸದ್ಯ ಯಾವುದೇ ಸುದ್ದಿಯಿಲ್ಲ. ಲೇಖಕರು, ಸಾಹಿತಿಗಳು ನೆಮ್ಮದಿಯಿಂದಿದ್ದಾರೆ. ಸಾಹಿತ್ಯಕ ಸಂಘಟನೆಗಳು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಒಟ್ಟಾರೆಯಾಗಿ ಸಮ್ಮೇಳನಕ್ಕೂ ಚಿತ್ರದುರ್ಗಕ್ಕೂ ಸಂಬಂಧವಿಲ್ಲ ಎನ್ನುವ ಹಾಗೇ ಇದೆ.ಇದು ತೀರಾ ಅಸಹನೆಯ ಮಾತು ಎನಿಸಬಹುದು. ಆದರೆ ಇದು ನಿಜ. ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿಯೊಬ್ಬರು ಸಾಹಿತ್ಯ ಸಮ್ಮೇಳನ ಘೋಷಣೆಯಾದ ಕೆಲ ದಿನಗಳಲ್ಲೇ ನೇತ್ಯಾತ್ಮಕವಾಗಿಯೇ ಮಾತನಾಡಿದ್ದರು.ಅಷ್ಟಾದರೂ ಆಯಿತು. ಆಮೇಲೆ ಮತ್ತೇನು ಸುದ್ದಿಯಾಗಲಿಲ್ಲ. ಈ ಮಟ್ಟಿನ ನಿರ್ಲಿಪ್ತತೆ ಯಾಕಿರಬಹುದು? ಚಿತ್ರದುರ್ಗ ನೆಲದ ಗುಣವೂ ಕಾರವೆನ್ನಿಸುತ್ತದೆ. ಇಲ್ಲಿ ಅನಗತ್ಯ ಭಾವೋದ್ವೇಗ ಕಾಣಸಿಗುವುದಿಲ್ಲ. ಉತ್ಸಾಹವಿರುತ್ತದೆ. ಅತಿರೇಕದ ಉತ್ಸಾಹ ಕಾಣಿಸುವುದಿಲ್ಲ. ಇದೇ ಕಾರಣವೇ ಸಮ್ಮೇಳನದ ಬಗ್ಗೆ ಸುಮ್ಮನಿರುವುದಕ್ಕೆ?ಇರಲಿಕ್ಕಿಲ್ಲ. ಇನ್ನೂ ಕೆಲವೊಂದು ಅಂಶಗಳು ಇವೆ. ಈಗ ಅಸ್ತಿತ್ವದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮಿತಿ ತನ್ನ ಅವಧಿ ಪೂರ್ಣಗೊಳಿಸಿದೆ. ಸದ್ಯ ಅದರದ್ದು ಎಕ್ಸ್ ಟೆಂಡೆಡ್ ಅವಧಿ. ಬಹುಶಃ ಇನ್ನೂ ಮೂರ್‍ನಾಲ್ಕು ತಿಂಗಳಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ಏಪ್ರಿಲ್ -ಮೇ ಹೊತ್ತಿಗೆ ಮುಗಿದು ಕೇಂದ್ರ ಸಮಿತಿ ರಚನೆಯಾಗಬಹುದು. ನಂತರ ಜಿಲ್ಲಾವಾರು ಸಮಿತಿಗಳ ರಚನೆಯಾಗಬೇಕು. ಆ ಹೊತ್ತಿಗಾಗಲೇ ಅರ್ಧವರ್ಷವೇ ಕಳೆದು ಹೋಗಿರುತ್ತದೆ. ನವೆಂಬರ್ ಹೊತ್ತಿಗೆ ಸಮ್ಮೇಳನ ನಡೆಸುವುದು ತೀರಾ ಆತುರದ ಕೆಲಸವಾಗುತ್ತದೆ. ಹಾಗಾಗಿ ಸಮ್ಮೇಳನ ಮುಂದೂಡುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲ ಪತ್ರಕರ್ತರು, ಜಿಲ್ಲೆ ಕೆಲ ಹಿರಿಯರು. ಹೌದು ಎನ್ನಿಸುತ್ತದೆ. ಮತ್ತೆರಡು ಅಂಶ ಜಿಲ್ಲೆಯಲ್ಲಿ ಸದ್ಯದ ಅವಧಿಯಲ್ಲಿ ಆದ ಸಾಹಿತ್ಯ ಚಟುವಟಿಕೆಗಳು ಮತ್ತು ಮುಂದೆ ಆಯ್ಕೆಯಾಗಿ ಬರಲಿರುವ ಅಭ್ಯರ್ಥಿ ನಿಭಾಯಿಸಬಲ್ಲ ಜವಾಬ್ದಾರಿ. ಹಾಲಿ ಅಧ್ಯಕ್ಷ ಕೆ.ಎಂ.ವೀರೇಶ್ ಅವರ ಅವಧಿಯಲ್ಲಿ ಆದ ಸಾಹಿತ್ಯಕ ಕಾರ್‍ಯಕ್ರಮಗಳು ಅತ್ಯಲ್ಪ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ತಾಲೂಕಿನ ಗಡಿ ಭಾಗಗಳಲ್ಲೂ ಕಾರ್‍ಯಕ್ರಮಗಳು ಆಗಿದ್ದವು. ಆದರೆ ವೀರೇಶ್ ಅವರ ಕಾರ್‍ಯಕ್ರಮಗಳೆಲ್ಲಾ ಸಹಯೋಗದಲ್ಲೇ ಮುಗಿದವು ಎಂಬ ಆರೋಪವಿದೆ.ತೀರಾ ಅಚ್ಚರಿ ಉಂಟು ಮಾಡುವ ಸಂಗತಿಯೆಂದರೆ ಇಲ್ಲಿಯವರೆಗೆ ಜಿಲ್ಲಾಮಟ್ಟದ ಸಮಿತಿ ರಚನೆಯಾಗಿಲ್ಲ ಎನ್ನುವುದು!!ಸಾಹಿತ್ಯಕವಾಗಿ ಹೆಚ್ಚೇನು ಆಸ್ಥೆಯಿಂದ ಕ್ರಿಯಾಶೀಲರಾಗದೇ ಇರುವ ವೀರೇಶ್ ಅವರೇ ಮುಂದಿನ ಚುನಾವಣೆಯ ಅಭ್ಯರ್ಥಿ. ಇವರಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುವ ಅಭ್ಯರ್ಥಿಗಳ ಸಂಖ್ಯೆ ತೀರಾ ವಿರಳ. ಕಳೆದ ಬಾರಿ ಸೋತ ಪತ್ರಕರ್ತ, ಮಾಜಿ ಅಧ್ಯಕ್ಷ ಶ. ಮಂಜುನಾಥ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.ಮತ್ತೊಂದೆಡೆ ಕವಿ, ವಿಮರ್ಶಕ ಹಾಗೂ ಪ್ರಾಧ್ಯಾಪಕ ಡಾ.ಲೋಕೇಶ್ ಅಗಸನಕಟ್ಟೆಯವರಿಗೆ ಮಠಾಧೀಶರು, ಗಣ್ಯರು ಬೆಂಬಲ ವ್ಯಕ್ತಪಡಿಸಿ ಸ್ಪರ್ಧಿಸುವುದಕ್ಕೆ ಹೇಳಿದ್ದರೂ ಎಂಬ ಸಂಗತಿಯೂ ತಿಳಿದು ಬಂದಿದೆ. ಬೆನ್ನ ಹಿಂದೆಯೇ ಸಮ್ಮೇಳನದಂಥ ಜವಾಬ್ದಾರಿ ಎದುರುಗಿರುವಾಗ ಅದನ್ನು ಸಮರ್ಥವಾಗಿ ನಿಭಾಯಿಸಬಲ್ಲ ವ್ಯಕ್ತಿಯೇ ಸ್ಪರ್ಧಿಸುವುದು ಸರಿ ಎನ್ನುವ ಕಾರಣ ನೀಡಿ ಅವರ ಸಲಹೆಯನ್ನು ನಮ್ರರಾಗಿಯೇ ತಳ್ಳಿ ಹಾಕಿದ್ದಾರೆಂಬ ವರ್ತಮಾನವೂ ದೊರೆತಿದೆ.ಇವರನ್ನು ಬಿಟ್ಟರೆ, ಆಸಕ್ತಿಯಿಂದ ಮಾಡಬಲ್ಲ, ಮತ್ತೊಬ್ಬ ವ್ಯಕ್ತಿ ಚಳ್ಳಕೆರೆ ಪ್ರಾಧ್ಯಾಪಕರಾಗಿರುವ, ಅಭಿರುಚಿ ಸಾಹಿತ್ಯಕ ವೇದಿಕೆ ನಡೆಸಿಕೊಂಡು ಬರುತ್ತಿರುವ ಬಿ.ಪಿ.ವೀರೇಂದ್ರಕುಮಾರ್. ಇವರ ಹೆಸರು ಅಲ್ಲಲ್ಲೇ ಪ್ರಸ್ತಾಪವಾಗಿದೆಯಾದರೂ ವೀರೇಂದ್ರಕುಮಾರ್ ಅವರ ನಿಲುವು ಎಲ್ಲೂ ಪ್ರಕಟವಾಗಿಲ್ಲ.ಚಿತ್ರದುರ್ಗದಲ್ಲಿ ಸಮ್ಮೇಳನವಾಗುವುದು ಎಷ್ಟು ವಿಶಿಷ್ಟವೋ ಅಷ್ಟೇ, ಸಂಕಷ್ಟ, ಸಂದಿಗ್ದ ಸಂಗತಿಗಳಿವೆ.ದುರ್ಗದಲ್ಲಿ ಉದ್ಯಮಿಗಳಿಲ್ಲ. ಆದರೆ ಅಂಥ ಆರ್ಥಿಕವಾಗಿ ಸಬಲರಾಗಿರುವವರನ್ನು ಮುಂದೆ ನಿಲ್ಲಿಸುವ ನಾಲ್ಕು ಮಠಗಳಿವೆ. ಮುರುಘರಾಜೇಂದ್ರ ಮಠ, ಸಿರಿಗೆರೆ ಮಠ, ಸಾಣೆಹಳ್ಳಿ ಮಠ ಮತ್ತು ಕಬೀರಾನಂದ ಮಠ.ಏನೇ ಭಿನ್ನಾಭಿಪ್ರಾಯವಿದ್ದರೂ ಈ ನಾಲ್ಕು ಮಠಾಧೀಶರನ್ನು ವಿಶ್ವಾಸದೊಂದಿಗೆ ಅವರನ್ನು ಒಳಗೊಂಡಂತೆ ಸಮ್ಮೇಳನದ ರೂಪುರೇಷೆಗಳನ್ನು, ಈ ಕುರಿತ ಚರ್ಚೆಗಳನ್ನು ನಡೆಸುತ್ತಾ ಹೋಗುವ, ಆರ್ಥಿಕವಾಗಿ ಸಮ್ಮೇಳನದ ಅಗತ್ಯತೆಗಳನ್ನು ಪೂರೈಸುವ, ಸಂಘಟನೆಯ ಜವಾಬ್ದಾರಿಯನ್ನು ಹೊರಬಲ್ಲ ಸಮರ್ಥ ವ್ಯಕ್ತಿಯ ಅಗತ್ಯವಿದೆ.ಇದೆಲ್ಲಾ ಹೇಗೆ ಸರಿಹೋಗುತ್ತದೆ? ಎಂಬ ಆತಂಕದ ಪ್ರಶ್ನೆ ನಮ್ಮ ಮುಂದೆ. ಅದನ್ನುನಿಮ್ಮಮುಂದಿಟ್ಟಿದ್ದೇವೆ.
ಒಳ್ಳೆಯ ಕೆಲಸಕ್ಕೆ ನೂರೆಂಟು ವಿಘ್ನಗಳಂತೆ..ಮುಂದಿನ ಬೆಳವಣಿಗೆಯನ್ನು ಕಾತರದಿಂದ ಎದುರು ನೋಡುತ್ತಿದ್ದೇವೆ.