Wednesday, December 26, 2007

ದುರ್ಗದಲ್ಲಿ ನಾಗರಹಾವು


ನಾಗರಹಾವು ಕನ್ನಡ ಚಿತ್ರರಂಗದ ಅಪರೂಪದ ಚಿತ್ರಗಳಲ್ಲಿ ಒಂದು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರ ವಿವಿಧ ಕಾರಣಗಳಿಗಾಗಿ ಗಮನಾರ್ಹ ಎನಿಸುವಂಥದ್ದು.
ಕಾರಣ...
ಪುಟ್ಟಣ್ಣನವರಿಗೆ ವೃತ್ತಿ ಜೀವನದಲ್ಲಿ ಮತ್ತೊಂದು ಬದುಕು ಕೊಟ್ಟ ಚಿತ್ರ. ಐತಿಹಾಸಿಕ ಚಿತ್ರದುರ್ಗವನ್ನು ಬೆಳ್ಳಿತೆರೆಗೆ ತಂದ ಚಿತ್ರ. ಚಿತ್ರದುರ್ಗದವರೇ ಆದ ತ.ರಾ.ಸುಬ್ಬರಾಯರ ‘ಸರ್ಪಮತ್ಸರ’, ‘ಎರಡು ಹೆಣ್ಣು, ಒಂದು ಗಂಡು’ ಮತ್ತು ‘ನಾಗರಹಾವು’ ಕಾದಂಬರಿಗಳನ್ನು ಆಧರಿಸಿದ ಚಿತ್ರ.
ಅಷ್ಟೇ ಅಲ್ಲ, ಸಾಹಸಸಿಂಹ ಖ್ಯಾತಿಯ ನಟರಿಗೆ ಬ್ರೇಕ್ ಕೊಟ್ಟು, ವಿಷ್ಣುವರ್ಧನ ಎನ್ನುವ ಹೆಸರು ಕೊಟ್ಟ ಚಿತ್ರ.
‘ಸಾಕ್ಷಾತ್ಕಾರ’ ಚಿತ್ರದ ಸೋಲಿನ ನಂತರ ಪುಟ್ಟಣ್ಣ ಹೈರಾಣಾಗಿದ್ದರು. ಕಥೆ, ಕಾದಂಬರಿ ಆಧರಿಸಿ ಚಿತ್ರಗಳನ್ನು ನಿರ್ಮಿಸುತ್ತಾ, ನಿರ್ದೇಶಿಸುತ್ತಾ ಬಂದ ಪುಟ್ಟಣ್ಣರಿಗೆ ಸಾಕ್ಷಾತ್ಕಾರದ ಸೋಲು ಪೆಟ್ಟುಕೊಟ್ಟಿತು.
ಅಷ್ಟಕ್ಕೇ ಅವರಿಗೆ ತಮ್ಮ ನಿಲುವನ್ನು ಬದಲಿಸಿಕೊಳ್ಳಲು ಇಷ್ಟವಿರಲಿಲ್ಲ. ಸದಭಿರುಚಿಯ ಚಿತ್ರಗಳನ್ನು ಕೊಡುವುದಕ್ಕೆ ಅವರು ಬದ್ಧರಾಗಿದ್ದರು.
ಆ ಹೊತ್ತಿಗಾಗಲೇ ಅವರ ತಲೆಯಲ್ಲಿ ತರಾಸು ಅವರ ‘ನಾಗರಹಾವು’ ಕಾದಂಬರಿಯನ್ನು ಚಿತ್ರವಾಗಿಸುವ ಆಸೆ ಮೊಳೆತಿತ್ತು.
ಇದೇ ಚಿತ್ರವನ್ನು ನಿರ್ಮಿಸಲು ಹಂಬಲಿಸಿದ್ದವರು ಅಂದಿನ ಯಶಸ್ವಿ ನಿರ್ಮಾಪಕ ವೀರಾಸ್ವಾಮಿ. ಚಿತ್ರವನ್ನು ನಿರ್ದೇಶಿಸುವಂತೆ ವೀರಾಸ್ವಾಮಿ ಪುಟ್ಟಣ್ಣನವರನ್ನು ಕೇಳಿಕೊಂಡರು.
ಪುಟ್ಟಣ್ಣ, ತರಾಸು ಅವರ ಇನ್ನೆರಡು ಕಾದಂಬರಿಗಳಾದ ‘ಸರ್ಪ ಮತ್ಸರ’ ಮತ್ತು ‘ಎರಡು ಹೆಣ್ಣು ಒಂದು ಗಂಡು’ ಕಾದಂಬರಿಗಳನ್ನಿಟ್ಟುಕೊಂಡು ನಾಗರಹಾವು ಚಿತ್ರಕಥೆಯನ್ನು ಸಿದ್ಧ ಮಾಡಿದರು.
ನಾಯಕನಾಗಿ ವಿಷ್ಣುವರ್ಧನ್, ನಾಯಕಿಯಾಗಿ ಆರತಿ, ಮೇಷ್ಟ್ರ ಪಾತ್ರದಲ್ಲಿ ಅಶ್ವಥ್, ಅಲ್ಲದೆ ಶಿವರಾಂ, ಶುಭ ಮುಖ್ಯ ಪಾತ್ರಗಳಿಗೆ ಆಯ್ಕೆಯಾಗಿದ್ದರು.
ಚಿತ್ರದ ಚಿತ್ರೀಕರಣಕ್ಕೆ ಅವರು ಆರಿಸಿಕೊಂಡ ಸ್ಥಳ ಐತಿಹಾಸಿಕ ಕೋಟೆ. ಚಿತ್ರೀಕರಣಕ್ಕೂ ಮುನ್ನ ಕೋಟೆ ಬಹುಭಾಗ ಸುತ್ತಿ ನೋಡಿದ್ದ ಪುಟ್ಟಣ್ಣ ಅದಿಷ್ಟನ್ನೂ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕು. ನಾಡಿನ ಜನತೆಗೆ ತೋರಿಸಬೇಕು ಎಂದು ನಿರ್ಧರಿಸಿದ್ದರು.
ಸುಲ್ತಾನ್ ಬತೇರಿ, ಕೋಟೆ ಸುತ್ತಲಿರುವ ಬೆಟ್ಟ ಗುಡ್ಡಗಳನ್ನು, ಬಂಡೆಗಳು, ಕೊಳಗಳು, ಗರಡಿ ಮನೆ, ಮಾರಿ ಕಣಿವೆಯನ್ನು ಚಿತ್ರಿಸಿದರು. ಜೊತೆಗೆ ವೀರ ವನಿತೆ ಓಬವ್ವಳ ಕಥೆಯನ್ನು ಚಿತ್ರದ ಒಂದು ಗೀತೆಯಾಗಿ ಚಿತ್ರಿಸಿ ಇಂದಿಗೂ ಓಬವ್ವ ಜನಮಾನಸದಲ್ಲಿ ನೆಲೆಸುವಂತೆ ಮಾಡಿದರು.
೧೯೭೨ರಲ್ಲಿ ಈ ಚಿತ್ರ ತೆರೆ ಕಂಡಿತು. ಪುಟ್ಟಣ್ಣ ಮುಖದಲ್ಲಿ ಹೊಸ ಉಲ್ಲಾಸ ತುಂಬಿತು. ನಾಡಿನಾದ್ಯಂತ ಚಿತ್ರಕ್ಕೆ ಜಯಭೇರಿ. ರೋಷದ ರಾಮಾಚಾರಿಯನ್ನು, ಆತ ಸುತ್ತಾಡಿದ ಕೋಟೆಯ ಭಾಗಗಳನ್ನು, ಒನಕೆ ಓಬವ್ವಳನ್ನು ಜನ ನೋಡಿ ಆನಂದಿಸಿದರು. ತರಾಸು ಅವರ ಕಥೆಯನ್ನು ಜನ ಕೊಂಡಾಡಿದರು.
ಅದೇ ವರ್ಷ ಚಿತ್ರಕ್ಕೆ ಅತ್ಯುತ್ತಮ ಚಿತ್ರ ನಾಟಕ ಕರ್ತೃ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ಕಥಾಲೇಖಕ, ಅತ್ಯುತ್ತಮ ಸಂಭಾಷಣಕಾರಾ ಪ್ರಶಸ್ತಿಗಳನ್ನಾ ಬಾಚಿಕೊಂಡಿತು.
ಪುಟ್ಟಣ್ಣ ನಾಗರಹಾವು ಚಿತ್ರದ ಮೂಲಕ ಮತ್ತೆ ತಾವು ಶ್ರೇಷ್ಠ ನಿರ್ದೇಶಕ ಎಂದು ಸಾಬೀತು ಮಾಡಿದರು.
ನಾಗರಹಾವು ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪ್ರದರ್ಶನ ಕಂಡಿತು.
ಇದೆಲ್ಲಾ ಬೆಳವಣಿಗೆ ನಡುವೆ ಪುಟ್ಟಣ್ಣ ಕಟ್ಟಿ ಕೊಟ್ಟ ‘ನಾಗರಹಾವು’ ಚಿತ್ರವನ್ನು ‘ಕೇರೆ ಹಾವು’ ಎಂದು ಸಮಾರಂಭವೊಂದರಲ್ಲಿ ಖುದ್ದು ತರಾಸು ಪುಟ್ಟಣ್ಣನವರ ಉಪಸ್ಥಿತಿಯಲ್ಲಿ ಗರ್ಜಿಸಿದ್ದರು.
ಆದರೆ ಈ ಅಸಮಾಧಾನ ಕೆಲವೇ ದಿನಗಳಲ್ಲಿ ಕಡಮೆ ಆಯಿತು ಎಂದು ಪುಟ್ಟಣ್ಣನವರ ಜೀವನ ಚರಿತ್ರೆ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ ಡಿ.ಬಿ.ಬಸವೇಗೌಡ ಬರೆದಿದ್ದಾರೆ.
ವಂಶವೃಕ್ಷದಲ್ಲಿ ಸಣ್ಣಪಾತ್ರದಲ್ಲಿ ಕಾಣಿಸಿಕೊಂಡ ನಟ ಕುಮಾರ್ ಈ ಚಿತ್ರದ ಮೂಲಕ ವಿಷ್ಣುವರ್ಧನ್ ಆದರು. ಪುಟ್ಟಣ್ಣ ಮತ್ತೊಂದಿಷ್ಟು ಸದಭಿರುಚಿಯ ಚಿತ್ರಗಳನ್ನು ಮಾಡುವ ಉತ್ಸಾಹವನ್ನು ಕಂಡುಕೊಂಡರು. ತರಾಸು ಅವರಿಗೆ ಓದುಗ ಜೊತೆಗೆ ನೋಡುಗ ಅಭಿಮಾನಿಗಳು ಸಿಕ್ಕರು.
ಚಿತ್ರದುರ್ಗದ ಸಾಹಿತಿ ಮತ್ತು ಚಿತ್ರದುರ್ಗ ಚಿತ್ರರಂಗಕ್ಕೆ ಅಪರೂಪದ ಕಾಣಿಕೆ ನೀಡಿದರು.
ಇದಾದ ನಂತರ ಹಂಸಗೀತೆ, ಕಲ್ಲರಳಿ ಹೂವಾಗಿ ಮತ್ತೂ ಕೆಲ ಚಿತ್ರಗಳು ಕೋಟೆಯಲ್ಲಿ ಚಿತ್ರೀಕರಣಗೊಂಡವು.

No comments: