Thursday, December 20, 2007

ನೀರಿನ ಹೋರಾಟ ಇಂದಿನಿಂದಲ್ಲ...

ಚಿತ್ರದುರ್ಗವನ್ನು ಬರದ ನಾಡೆಂದೇ ಎಲ್ಲರೂ ಗುರುತಿಸುತ್ತಾರೆ. ಅಲ್ಲೇನಿದೆ ಬರೀ ಕಲ್ಲು ಎಂದೇ ಮಾತು ಆರಂಭಿಸುತ್ತಾರೆ. ಆದರೆ ಅದೆಷ್ಟು ಮಂದಿಗೆ ಈ ಬರದ ಹಿಂದಿನ ಬವಣೆ ಗೊತ್ತಿದೆಯೋ? ಜಿಲ್ಲೆಗೆ ಸಿಗಬೇಕಾದ ನೀರಿಗಾಗಿ ಸದಾ ಕಾಲ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಚಿತ್ರದುರ್ಗದ್ದು. ಹಾಗೆ ಹೋರಾಡಿದ್ದಕ್ಕೆ ಫಲವಾದರೂ ಸಿಕ್ಕಿದ್ದರೆ ಚಿತ್ರದುರ್ಗಕ್ಕೆ ಬರದ ಹಣೆ ಪಟ್ಟಿ ಇರುತ್ತಿರಲಿಲ್ಲವೇನೋ? ಭದ್ರಾ ವಿಷಯದಲ್ಲಿ ದಶಕಗಳಿಂದ ಚಿತ್ರದುರ್ಗ ಹೋರಾಡುತ್ತಲೇ ಇರುವುದು ಕಣ್ಣಮುಂದೆ ಇದೇ.
ನೀರಿನ ವಿಷಯದಲ್ಲಿ ಚಿತ್ರದುರ್ಗಕ್ಕೆ ಹೀಗೆ ತಿರಸ್ಕಾರಕ್ಕೆ, ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಇದೇ ಮೊದಲಲ್ಲ. ಹಾಗೆ ಮೊದಲ ಪೆಟ್ಟು ಅನುಭವಿಸಿದ್ದು ವಾಣಿ ವಿಲಾಸ ಸಾಗರ ನೀರಾವರಿ ಯೋಜನೆ. ಬ್ರಿಟಿಷ್ ಸರ್ಕಾರ ಈ ನೀರಾವರಿ ಯೋಜನೆಗೆ ಅಡ್ಡಿ ಮಾಡಿತ್ತು. ಇದು ೧೫೦ ವರ್ಷಗಳ ಹಿಂದಿನ ಜಲ ಪುರಾಣ.
ಜಿಲ್ಲೆಯ ರೈತರು ಆಗಲೇ ಬೇಸತ್ತಿದ್ದರು. ಬರದ ಬರದ ಮೇಲೆ ಬರೆ ಬಿದ್ದ ಹಾಗೆ ಬೀಳುತ್ತಲೇ ಇತ್ತು. ಅತ್ತ ಬ್ರಿಟಿಷ್ ಸರ್ಕಾರ ತೆರಿಗೆ ಕಂದಾಯದ ಹೊರೆ ಏರಿಸುತ್ತಿತ್ತು. ಆರ್ಥಿಕವಾಗಿ ಕುಗ್ಗಿ ಹೋಗಿದ್ದ ರೈತರು ಮೊದಲು ನಗರ ದಂಗೆ ಮಾಡಿದರು. ಅದರ ಬೆನ್ನ ಹಿಂದೆಯೇ ಚಿತ್ರದುರ್ಗದ ರೈತರೂ ದಂಗೆ ಎದ್ದರು. ಮೈಸೂರನ್ನು ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಬ್ರಿಟಿಷ್ ಸರ್ಕಾರ ಇಲ್ಲದ ಚೌಕಾಶಿ ವರ್ತನೆಯಿಂದಾಗಿ ಇಡೀ ಮೈಸೂರು ರಾಜ್ಯದಲ್ಲಿ ನೀರಾವರಿ ಕ್ಷೇತ್ರ ಸೊರಗಿ ಹೋಗಿತ್ತು. ಹಾಗಂತ ಮೈಸೂರು ಅರಸರೇನು ಕೈ ಕಟ್ಟಿ ಕೂರಲಿಲ್ಲ. ಅದು ಯಾವುದೇ ನೀರಾವರಿ ಯೋಜನೆ ಸಿದ್ಧ ಮಾಡಿದರೂ ಬ್ರಿಟಿಷ್ ಸರ್ಕಾರ ಅದರ ಕೈಕಟ್ಟಿ ಹಾಕುತ್ತಿತ್ತು. ಇಂಥ ಪರಿಸ್ಥಿತಿಯಲ್ಲೇ ವಾಣಿವಿಲಾಸಸಾಗರ ಯೋಜನೆಯನ್ನು ಸಿದ್ಧವಾಗಿತ್ತು.
ಚಿತ್ರದುರ್ಗದ ಹಿತಕ್ಕಾಗಿ ಮೈಸೂರು ಅರಸರು ವಾಣಿವಿಲಾಸಸಾಗರ ಯೋಜನೆಯನ್ನು ಸಿದ್ಧ ಮಾಡಿದರು. ಬ್ರಿಟಿಷ್ ಸರ್ಕಾರ ಅನುಷ್ಠಾನಕ್ಕೆ ಅವಕಾಶ ಕೊಡಲೇ ಇಲ್ಲ.
ಚಿತ್ರದುರ್ಗ ಕ್ಷಾಮದಿಂದ ತತ್ತರಿಸುತ್ತಿತ್ತು. ಜನ ಊರು ಮರುಭೂಮಿಯಾಗುತ್ತದೆ ಎಂದು ಆತಂಕವಾಗುವಷ್ಟು ಕ್ಷಾಮ ಆವರಿಸಿತ್ತು. ೧೮೫೫ರಲ್ಲಿ ಯೋಜನೆ ಅನುಷ್ಠಾನಕ್ಕೆ ಮೈಸೂರು ಸಿದ್ಧವಾಯಿತು. ಆದರೆ ಬ್ರಿಟಿಷ್ ಸರ್ಕಾರ ತಡೆಯಿತು. ಯೋಜನೆ ಎಷ್ಟು ಅಗತ್ಯವಿದೆ ಎಂಬುದು ಬ್ರಿಟಿಷ್ ಸರ್ಕಾರಕ್ಕೆ ಮನವರಿಕೆಯಾಗಿದ್ದರೂ ಅಡ್ಡಿ ಉಂಟು ಮಾಡಿತು. ೧೮೯೨ರಲ್ಲಿ ಮತ್ತೆ ಪ್ರಯತ್ನ. ಯಥಾ ಪ್ರಕಾರ ಬ್ರಿಟಿಷ್ ಸರ್ಕಾರದ ಅಡ್ಡಿ.
ಬ್ರಿಟಿಷರಿಗೇಕೆ ಚಿತ್ರದುರ್ಗದ ಮೇಲೆ ಸಿಟ್ಟು? ಅದು ಸಿಟ್ಟಿನ ಕಾರಣವಲ್ಲ, ಮದ್ರಾಸ್ ಪ್ರಾಂತ್ಯದ ನೀರಾವರಿ ಯೋಜನೆ ಎಲ್ಲ ಅಡ್ಡಿಗಳಿಗೆ ಕಾರಣವಾಗಿತ್ತು. ವಾಣಿ ವಿಲಾಸ ಸಾಗರ ಯೋಜನೆ ಅಸ್ತಿತ್ವಕ್ಕೆ ಬಂದರೆ ಮದ್ರಾಸಿನ ನೀರಾವರಿ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ವಾಣಿ ವಿಲಾಸ ಸಾಗರ ಯೋಜನೆಯನ್ನು ಬ್ರಿಟಿಷರು ತಡೆಯುತ್ತಲೇ ಬಂದರು.
ಯಾವ ರೀತಿಯಲ್ಲೂ ಇದನ್ನು ಪ್ರಶ್ನಿಸುವ ಹಾಗೆ ಮಾಡಿ ಬಿಟ್ಟರು. ಯಾಕೆಂದರೆ ಮೈಸೂರು ಆಗ ಮದ್ರಾಸ್ ಸರ್ಕಾರದ ಆಧೀನ. ಹಾಗಾಗಿ ಮೈಸೂರಿನಂಥ ಊಳಿಗ ಮಾನ್ಯ ಸರ್ಕಾರ ಸಂದರ್ಭದಲ್ಲಿ ಯಾವುದೇ ಅಂತಾರಾಷ್ಟ್ರೀಯ ಜಲ ಹಕ್ಕುಗಳು ಅನ್ವಯವಾಗುವುದಿಲ್ಲ. ಪರಮಾಧಿಕಾರ ಮತ್ತು ಮೈಸೂರಿನ ನಡುವೆ ಇರುವುದು ಊಳಿಗಮಾನ್ಯರೆಂಬ ಸಂಬಂಧ ಎಂದು ಕಡ್ಡಿ ಮುರಿದಂತೆ ಯೋಜನೆಯನ್ನು ತಡೆದು ಬಿಟ್ಟರು.
ಇದಾಗಿ ಐದಾರು ವರ್ಷಕ್ಕೆ ಅಂದರೆ ೧೮೯೮ರಲ್ಲಿ ಯೋಜನೆಗೆ ಹಸಿರು ನಿಶಾನೆ ಸಿಕ್ಕಿತು. ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಶೇಷಾದ್ರಿ ಅಯ್ಯರ್ ನೇತೃತ್ವದಲ್ಲಿ ಯೋಜನೆ ಅಸ್ತಿತ್ವಕ್ಕೆ ಬಂತು. ಆದರೆ ಇಷ್ಟಾಗುವ ಹೊತ್ತಿಗೆ ಜಿಲ್ಲೆಯ ಜನ ಬೇಸತ್ತಿದ್ದರು. ಸಿಡಿದಿದ್ದರು. ತಮ್ಮ ಆಕ್ರೋಶವನ್ನೆಲ್ಲಾ ಹೋರಾಟವಾಗಿಸಿದ್ದರು.
ಆದರೆ ಬೆಳೆಯುತ್ತಿರುವ ಜಿಲ್ಲೆಗೆ ವಾಣಿ ವಿಲಾಸವೊಂದೇ ಸಾಲುತ್ತದೆಯೇ? ಭದ್ರಾ ಮೇಲ್ದಂಡೆಗಾಗಿ ಹೋರಾಟ ಮುಂದುವರಿದೇ ಇದೆ. ಅಂದು ಬ್ರಿಟಿಷರು ನಮ್ಮ ಬಗ್ಗೆ ತೋರಿದ ನಿರ್ಲಕ್ಷ್ಯವನ್ನು ಇಂದು ನಮ್ಮವರೇ ತೋರುತ್ತಿದ್ದಾರೆ!

2 comments:

Anonymous said...

Durgada hudugarige bale annabeku annisuthide. Nanu nima pakkada taluku siradavanu. namagu mp kesthra durga. Jothege nama bhavanathmaka sambanda durgada jothe bahalla ide. nima blagge subashaya. p.manjunath,gomaradahalli.

Anonymous said...

neerina horata indinadalla... endiddare sari irtitteno annisitu. adirali. lekhanadalli neerina horatada itihasa kottiddu upyukta. heege nimma prayatna munduvariyali